ನಾನು ಕನ್ನಡದ ಕಂದ ಎಂದ ರಶ್ಮಿಕಾ ಮಂದಣ್ಣ, ಛೀಮಾರಿ ಹಾಕಿದ್ಮೇಲೆ ಆಯ್ತಾ ಜ್ಞಾನೋದಯ..?
ಹೆಚ್ಚೇನು ಇಲ್ಲ .. 09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು.
ಇವತ್ತು ರಶ್ಮಿಕಾ ಬಾಲಿವುಡ್ನಲ್ಲಿ ಬಿಡಾರ ಹೂಡಿದ್ದಾರೆ. ಅನಿಮಲ್, ಛಾವಾ, ಸಿಕಂದರ್, ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಮಹಾರಾಣಿ ಎಂದು ಕರೆಯಲ್ಪಡುತ್ತಿದ್ದಾರೆ. ಇಂಥಾ ರಶ್ಮಿಕಾ ಈಗ ಕೆಲ ದಿನಗಳ ಹಿಂದೆ ಕನ್ನಡಿಗರನ್ನು ಮತ್ತೊಮ್ಮೆ ಕೆರಳಿಸಿದ್ದರು. ನಾನು ಹೈದರಾಬಾದ್ನವಳು ಎಂದು ನುಲಿದಿದ್ದರು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ, ಆದರೆ ಈಗ ನಾನು ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದುಕೊಳ್ಳುತ್ತೇನೆ ಎಂದು ಹೇಳಿದ್ದರು.

ರಶ್ಮಿಕಾ ಮಂದಣ್ಣ ಅವರ ಈ ಮಾತುಗಳನ್ನು ಕೇಳಿ ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎಂದು ಕರೆಯುವ ರಶ್ಮಿಕಾ ಅವರ ಈ ಹುಚ್ಚು ಕಂಡು ಮರಗಿದ್ದರು. ಅವಕಾಶಕ್ಕಾಗಿ ಮಂಕು ಬುದ್ದಿಯ ಮಂದಣ್ಣ ತನ್ನ ಹುಟ್ಟೂರನ್ನೇ ಮರೆಯಬಾರದಿತ್ತು ಎಂದು ಹೇಳಿದ್ದರು.
ಇನ್ನು, ರಾಜಕಾರಣಿಗಳು ಕೂಡ ತಮ್ಮ ಬೆಳೆ ಬೇಯಿಸಿಕೊಳ್ಳೋಕೆ ಮುಂದೆ ಬಂಧರು. ರಶ್ಮಿಕಾ ಮಂದಣ್ಣ ಅವರ ವಿರುದ್ದ ಕಿಡಿ ಕಾರಿದರು. ಅನ್ನ ನೀಡಿದ ನೆಲ ಮರೆಯಬೇಡಿ ಎಂದರು. ರಶ್ಮಿಕಾ ಮಂದಣ್ಣಗೆ ಬುದ್ದಿ ಕಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜಕಾರಣಿಗಳ ಈ ಮಾತುಗಳನ್ನು ರಶ್ಮಿಕಾ ಮಂದಣ್ಣ ಗಂಭೀರವಾಗಿ ತೆಗೆದುಕೊಂಡಿದ್ದರಾ ಇಲ್ಲವಾ ಗೊತ್ತಿಲ್ಲ. ಆದರೆ ಕೊಡಗಿನವರಾದರೂ ನಾನು ಕೊಡಗಿನ ಕುವರಿ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುವ ರಶ್ಮಿಕಾ ಬೆನ್ನ ಹಿಂದೆ ಕೊಡವ ನ್ಯಾಷನಲ್ ಕೌನ್ಸಿಲ್ನಿಂತುಕೊಂಡಿತು. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಗೃಹ ಸಚಿವ ಪರಮೇಶ್ವರ ಅವರಿಗೆ ಪತ್ರವನ್ನು ಬರೆಯಿತು. ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯವನ್ನು ಮಾಡಿತು.
ಇವತ್ತು ಕೂಡ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶದ ಅಲೆ ಇದೆ. ನಾನು ಹೈದರಾಬಾದ್ನವಳು ಎಂಬ ರಶ್ಮಿಕಾ ಅವರ ಹೇಳಿಕೆಗೆ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಹೀಗಿರುವಾಗ ರಶ್ಮಿಕಾ ಮಂದಣ್ಣಗೆ ಸಡನ್ ಜ್ಞಾನೋದಯ ಆಗಿದೆ. ಕನ್ನಡ ಮತ್ತು ಕರ್ನಾಟಕದ ಮೇಲೆ ಪ್ರೀತಿ ಉಕ್ಕಿ ಉಕ್ಕಿ ಹರಿಯುತ್ತಿದೆ. ನಾನು ಹೈದರಾಬಾದ್ನವಳಲ್ಲ ಬದಲಿಗೆ ಕರ್ನಾಟಕದವಳು ಎಂದು ರಶ್ಮಿಕಾ ಮಂದಣ್ಣಗೆ ಜ್ಞಾನೋದಯ ಆಗಿದೆ.
ಹೌದು, ಅಸಲಿಗೆ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರ ಇಂದು ಬಿಡುಗಡೆಯಾಗಿದೆ. ಈ ಹಿನ್ನೆಲೆ ಕಳೆದ ಒಂದು ವಾರದಿಂದ ನಿರಂತರ ಪ್ರಚಾರವನ್ನು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಹಲವಾರು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದಾರೆ. ಹೀಗೆ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ತಮ್ಮ ಕನ್ನಡದ ಪ್ರೇಮಕ್ಕೆ ಕೈಗನ್ನಡಿ ಹಿಡಿದಿದ್ದಾರೆ. ತುಂಬಾನೇ ಜಾಗರೂಕರಾಗಿ ಮಾತನಾಡಿ ತಮ್ಮ ಭಾಷಾಭಿಮಾನ ಮೆರೆಯುವ ಪ್ರಯತ್ನ ಮಾಡಿದ್ದಾರೆ.
ಸಂದರ್ಶನದಲ್ಲಿ ಭಾಷೆಯ ಕಲಿಕೆಯ ಮಹತ್ವದ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ,ನನ್ನ ಪ್ರಕಾರ ನಾವು ಎಲ್ಲಿರುತ್ತೇವೆ ಅಲ್ಲಿಯ ಭಾಷೆಯನ್ನು ಕಲಿಯುವುದು ಮುಖ್ಯ ಎಂದು ಹೇಳಿದ್ದಾರೆ. ಸುಲಭ ಎಂದು ಹೇಳಿದ್ದಾರೆ. ನಾವು ಭಾಷೆ ಗೊತ್ತಿರದ ಜಾಗಕ್ಕೆ ಹೋದಾಗ ಅಲ್ಲಿ ನಮ್ಮ ಸುತ್ತ ಮುತ್ತ ಮಾತನಾಡುವ ಭಾಷೆಯನ್ನು ಬೇರೆಯವರಿಂದ ನೋಡಿ ತಿಳಿದು ಕಲಿತು ಸುಲಭವಾಗಿ ಮಾತನಾಡಬಹುದು ಎಂದಿರುವ ರಶ್ಮಿಕಾ ಇದೇ ವೇಳ ಉದಾಹರಣೆಯನ್ನು ನೀಡಿದ್ದಾರೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು, ಅಲ್ಲಿಯೇ ಬೆಳೆದವಳು, ಎಲ್ಲಕ್ಕಿಂತ ಹೆಚ್ಚಾಗಿ ನಾನು ಐಸಿಎಸ್ಸಿಯಲ್ಲಿ ಓದಿದವಳು ಹೀಗಾಗಿ ನನಗೆ ಕನ್ನಡ ಹೊರತು ಪಡಿಸಿದರೆ ಕೇವಲ ಇಂಗ್ಲೀಷ್ ಭಾಷೆ ಮಾತ್ರ ಬರುತ್ತಿತ್ತು ಎಂದು ಹೇಳಿದ್ದಾರೆ.
ಮುಂದುವರೆದು ಈಗ ನಾನು ಪ್ರಸ್ತುತ ಹೈದರಾಬಾದ್ನಲ್ಲಿ ವಾಸ ಮಾಡುತ್ತಿದ್ದೇನೆ. ಸಹಜವಾಗಿ ನನ್ನ ಅಕ್ಕ ಪಕ್ಕದವರು ನನ್ನ ಜೊತೆ ಕೆಲಸ ಮಾಡುವರು, ನನ್ನ ಜೊತೆ ಕೆಲಸಕ್ಕೆ ಇರುವರು ಎಲ್ಲರು ತೆಲುಗು ಭಾಷೆಯನ್ನೇ ಮಾತನಾಡುತ್ತಾರೆ, ಹೀಗಾಗಿ ಅವರ ಜೊತೆ ನಾನು ಸಂವಹನ ನಡೆಸಬೇಕು ಎಂದರೆ ನಾನು ತೆಲುಗು ಭಾಷೆಯನ್ನು ಕಲಿಯಲೇಬೇಕು, ನಾನು ತೆಲುಗು ಮಾತನಾಡಲು ಶುರು ಮಾಡಿದ್ದು ಇದೇ ಕಾರಣಕ್ಕೆ ಎಂದು ಹೇಳಿದ್ದಾರೆ. ತೆಲುಗಿನಲ್ಲಿಯೇ ನನ್ನ ಟೀಮ್ ಜೊತೆ ನಾನು ಮಾತನಾಡುವುದು ಎಂದು ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ನನಗೆ ಹಿಂದಿ ಅಷ್ಟೊಂದು ಸುಲಲಿತವಾಗಿ ಮಾತನಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡಿರುವ ರಶ್ಮಿಕಾ, ಸದ್ಯ ನಾನು ಮುಂಬೈನಲ್ಲಿದ್ದೇನೆ, ಕೆಲಸ ಹುಡುಕಿಕೊಂಡು ಇಲ್ಲಿ ಬಂದಿದ್ದೇನೆ, ಆದರೆ ನನಗೆ ಹಿಂದಿ ಮಾತನಾಡುವುದು ಕಷ್ಟವಾಗುತ್ತೆ ಎಂದು ಹೇಳಿದ್ದಾರೆ. ಚಿತ್ರದ ಡೈಲಾಗ್ಗಳನ್ನು ನೀವು ನನಗೆ ನೀಡಿದರೆ ನಾನು ಹೇಗೂ ತಯಾರಾಗುತ್ತೇನೆ ಎಂದಿರುವ ರಶ್ಮಿಕಾ, ಚಿತ್ರೀಕರಣ ಹೊರತು ಪಡಿಸಿ ಹಿಂದಿ ಮಾತನಾಡುವಾಗ ನನಗೆ ತಪ್ಪಾಗಿ ಮಾತನಾಡಬಹುದು ಎನ್ನುವ ಭಯ ಕಾಡುತ್ತಿರುತ್ತೆ ಎಂದು ಹೇಳಿದ್ದಾರೆ.
ಹೀಗಾಗಿಯೇ ನಾನು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಲು ಹೋಗುತ್ತೇನೆ, ಆದರೆ ತಲೆಯಲ್ಲಿ ಗೊಂದಲ ಇರುವುದರಿಂದ ಕೆಲವೊಮ್ಮೆ ನಾನೇನೋ ಮಾತನಾಡಲು ಹೋಗಿ ಅದು ಇನ್ನೇನೋ ಅರ್ಥವನ್ನು ಕಲ್ಪಿಸುತ್ತೆ, ಹೆಚ್ಚೆಚ್ಚು ತಪ್ಪುಗಳಾಗುತ್ತಾವೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ನಾನು ಒಂದು ವೇಳೆ ಮುಂಬೈನಲ್ಲಿಯೇ ನೆಲೆಯೂರಬೇಕು ಎಂದು ಬಯಸಿದರೆ ಆಗ ನಾನು ಹಿಂದಿಯಲ್ಲಿ ಸರಿಯಾಗಿ ಮಾತನಾಡಬಲ್ಲೇ ಯಾಕೆಂಧರೆ ಆಗ ನನ್ನ ಅಕ್ಕ ಪಕ್ಕ ಸುತ್ತ ಮುತ್ತಲಿನ ಜನ ಎಲ್ಲರು ಹಿಂದಿಯಲ್ಲಿ ಮಾತನಾಡುತ್ತಿರುತ್ತಾರೆ, ಹೀಗಾಗಿ ಹಿಂದಿಯನ್ನು ನಾನು ಕಲಿಯಲೇಬೇಕಾಗುತ್ತೆ ಎಂದು ಹೇಳಿದ್ದಾರೆ.
ಪರ್ಫೆಕ್ಟ್ ಆಗಿ ಆಗ ನಾನು ಮಾತನಾಡಬಲ್ಲೆ ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ಮಾತುಗಳಿಗೆ ಅಲ್ಲಿಯೇ ಉತ್ತರವನ್ನು ನೀಡಿರುವ ಸಲ್ಮಾನ್ ಖಾನ್ ಹಿಂದಿ ಕಲಿಯಲು ನೀವು ಸಾಧ್ಯವೇ ಇಲ್ಲ, ಯಾಕೆಂದರೆ ನಿಮಗೆ ಆಗ ಅಕ್ಕ ಪಕ್ಕ ಇಂಗ್ಲಿಷ್ನಲ್ಲಿ ಮಾತನಾಡುವವರೇ ಸಿಗುತ್ತಾರೆ ಎಂದು ಹೇಳಿದ್ದಾರೆ.
ಸದ್ಯ ಕರ್ನಾಟಕ, ಕನ್ನಡದ ಬಗ್ಗೆ ರಶ್ಮಿಕಾ ಮಾತನಾಡಿರುವ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಹಲವರು ಮೊನ್ನೆಯ ವಿವಾದದಿಂದಾಗಿ ರಶ್ಮಿಕಾ ಮಂದಣ್ಣ ಡ್ಯಾಮೇಜ್ ಆದ ತಮ್ಮ ಇಮೇಜ್ನ ಸರಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ರಶ್ಮಿಕಾ ಮಂದಣ್ಣ ಅವರ ಕನ್ನಡಾಭಿಮಾನ ಎಂತಹದ್ದು ಎನ್ನುವುದು ಈಗಲಾದರೂ ಗೊತ್ತಾಯ್ತಾ ಎಂದು ರಶ್ಮಿಕಾ ಪರ ವಕಾಲತ್ತು ವಹಿಸುತ್ತಿದ್ದಾರೆ.
ಇಷ್ಟೆಲ್ಲ ಹೇಳಿದ ರಶ್ಮಿಕಾ ಮಂದಣ್ಣ ಕೊಡಗಿನವರು. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ಕರುನಾಡಿನಲ್ಲಿ ಜನ್ಮ ಪಡೆದು, ಹೆಸರು, ಹಣ, ಕೀರ್ತಿಯನ್ನು ಆರಂಭದ ದಿನಗಳಲ್ಲಿ ಇಲ್ಲಿ ಗಳಿಸಿದ ರಶ್ಮಿಕಾಗೆ ಕನ್ನಡ ಅಂದರೆ ಅಷ್ಟಕಷ್ಟೇ. ಸಡನ್ನಾಗಿ ಯಾರಾದರೂ ಕನ್ನಡದಲ್ಲಿ ಮಾತನಾಡಿ ಎಂಬ ಮನವಿಯನ್ನು ಮಾಡಿದರೆ ರಶ್ಮಿಕಾ ಮಂದಣ್ಣ ಹೌಹಾರಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣಗೆ ಕನ್ನಡ ಕಬ್ಬಿಣದ ಕಡಲೆಯಾಗಿ ಉಳಿದಿದೆ ಎನ್ನುವುದು ಬೇರೆ ವಿಚಾರ. ನೀವೇನಂತೀರಿ ?


Click it and Unblock the Notifications











