"ಇಂಡಿಯಾ ಗ್ರೇಟ್ ಎಂದ ಮಾತ್ರಕ್ಕೆ ದೇಶಭಕ್ತಿಯಾಗಲ್ಲ"; ರಿಷಬ್ ಹೇಳಿಕೆ ಬೆನ್ನಲ್ಲೇ ಬಾಲಿವುಡ್ ಹೀರೊ ಹೇಳಿಕೆ ವೈರಲ್
ಹಿಂದಿ ಸಿನಿಮಾಗಳಲ್ಲಿ ಭಾರತ ದೇಶವನ್ನು ಕೆಟ್ಟದಾಗಿ ತೋರಿಸಿ ಪ್ರಶಸ್ತಿಗಳನ್ನು ಪಡೆಯಲಾಗಿದೆ ಎಂದು ನಟ ರಿಷಬ್ ಶೆಟ್ಟಿ ಇತ್ತೀಚೆಗೆ ಹೇಳಿದ್ದರು. 'ಕಾಂತಾರ' ನಟನ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ದೇಶಪ್ರೇಮದ ಬಗ್ಗೆ ಬಾಲಿವುಡ್ ನಟ ಜಾನ್ ಅಬ್ರಹಾಂ ಹೇಳಿಕೆ ವೈರಲ್ ಆಗುತ್ತಿದೆ.
ರಿಷಬ್ ಶೆಟ್ಟಿಗೆ ಮೊನ್ನೆ ಮೊನ್ನೆ 'ಕಾಂತಾರ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಜನಪ್ರಿಯ ಸಿನಿಮಾ ವಿಭಾಗದಲ್ಲಿ ಕೂಡ ಆ ಚಿತ್ರ ಪ್ರಶಸ್ತಿ ಭಾಜನವಾಗಿದೆ. ಇದೆಲ್ಲದರ ನಡುವೆ ತಮ್ಮ ಸಿನಿಮಾಗಳಲ್ಲಿ ದೇಶದ ಆಗುಹೋಗುಗಳ ಬಗ್ಗೆ ಚರ್ಚಿಸುವುದು. ಕೆಲವು ಸಾಮಾಜಿಕ ವಿಚಾರಗಳ ಕುರಿತು ಸೂಕ್ಷ್ಮವಾಗಿ ಬೆಳಕು ಚೆಲ್ಲುವ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

ಸಾಕಷ್ಟು ಜನ ರಿಷಬ್ ಶೆಟ್ಟಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ಮಾತ್ರ ಈ ಬಗ್ಗೆ ಚಕಾರ ಎತ್ತುತ್ತಿದ್ದಾರೆ. ಇನ್ನು 'ಮೇಯರ್ ಮುತ್ತಣ್ಣ' ಚಿತ್ರದ ಸನ್ನಿವೇಶವೊಂದರಲ್ಲಿ ಡಾ. ರಾಜ್ಕುಮಾರ್ ಯಥಾವತ್ ಇದೇ ವಿಚಾರವನ್ನು ಹೇಳಿದ್ದರು. ಆ ವೀಡಿಯೋ ಸಹ ಈಗ ವೈರಲ್ ಆಗುತ್ತಿದೆ. ಇದೆಲ್ಲದರ ನಡುವೆ ಜಾನ್ ಅಬ್ರಹಾಂ ವಾರದ ಹಿಂದಿನ ಸಂದರ್ಶನದ ತುಣುಕು ಹರಿದಾಡ್ತಿದೆ.
ಮೊದಲಿಗೆ ರಿಷಬ್ ಶೆಟ್ಟಿ ಏನು ಹೇಳಿದ್ದರು ಎನ್ನುವುದನ್ನು ನೋಡಿದ್ರೆ "ಬಾಲಿವುಡ್ ಚಿತ್ರಗಳಲ್ಲಿ ಭಾರತದ ಬಗ್ಗೆ ಕೆಟ್ಟದಾಗಿ ತೋರಿಸಿ ವಿದೇಶದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುವುದು ನೋಡಿದ್ದೇನೆ. ಆದರೆ ನಮ್ಮ ದೇಶ ನಮ್ಮ ಹೆಮ್ಮೆ. ಹಾಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು. ನಮ್ಮಲ್ಲಿರುವ ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ ಎಂದುಕೊಳ್ಳುತ್ತೇನೆ" ಎಂದು ಹೇಳಿದ್ದರು.
ವಾರದ ಹಿಂದೆ ಬಾಲಿವುಡ್ ನಟ ಜಾನ್ ಅಬ್ರಹಾಂ ಇತ್ತೀಚೆಗೆ ರಣವೀರ್ ಅಲ್ಲಾಬಾಡಿಯಾ ಪಾಡ್ಕ್ಯಾಸ್ಟ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಭಾರತದಲ್ಲಿ ಮಹಿಳೆಯರು, ಮಕ್ಕಳು ಮತ್ತು ಪ್ರಾಣಿಗಳಿಗೆ ಸುರಕ್ಷತೆಯ ಕೊರತೆಯ ಬಗ್ಗೆ ಮಾತನಾಡಿದರು. "ಭಾರತದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಾಣಿಗಳು ಸುರಕ್ಷಿತವಾಗಿಲ್ಲ. ಇದು ದುಃಖಕರವಾಗಿದೆ. ಭಾರತೀಯ ಪುರುಷರು ತಮ್ಮ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು"
"ಪುರುಷರು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಕಲಿಯುವುದು ಮುಖ್ಯ. ಅವರಿಗೆ ರಕ್ಷಕರಾಗಿ ನಿಲ್ಲಬೇಕು" ಎಂದಿದ್ದರು. ಮಾತು ಮುಂದುವರೆಸಿದ ಜಾನ್ ಅಬ್ರಹಾಂ ದೇಶಭಕ್ತಿ ಮತ್ತು ಜಿಂಗೋಯಿಸಂ(ತೀವ್ರವಾದ ಹೋರಾಟ) ನಡುವಿನ ವ್ಯತ್ಯಾಸದ ಬಗ್ಗೆಯೂ ಮಾತನಾಡಿದರು. ತನ್ನ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ತಪ್ಪುಗಳನ್ನು ಟೀಕಿಸುವುದು ಹೇಗೆ ಅಗತ್ಯ ಎಂದು ಹೇಳಿದ್ದರು.
"ನಾನು ಭಾರತವನ್ನು ಪ್ರೀತಿಸುತ್ತೇನೆ. ಅದನ್ನು ಟೀಕಿಸುವುದು ನನಗೆ ಅತ್ಯಗತ್ಯ. ದೇಶಭಕ್ತಿ ಹಾಗೂ ಜಿಂಗೋಯಿಸಂ ನಡುವೆ ವ್ಯತ್ಯಾಸವಿದೆ. 'ಭಾರತ ಶ್ರೇಷ್ಠ' ಎಂದು ಹೇಳುವುದರಿಂದ ನೀವು ದೇಶದ ನಿಜವಾದ ಪ್ರೇಮಿಯಾಗುವುದಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ನೀವು ಕೆಲಸ ಮಾಡಿದಾಗ ನೀವು ನಿಜವಾದ ದೇಶಭಕ್ತರಾಗುತ್ತೀರಿ. ನನ್ನ ಜೀವನದ ಏಕೈಕ ಗುರಿ ನನ್ನ ಚಿಕ್ಕ ಜಗತ್ತಿನಲ್ಲಿ ಸಮಾಜದಲ್ಲಿ ಬದಲಾವಣೆ ತರುವುದು" ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಏನಾದರೂ ತಪ್ಪುಗಳಿದ್ದರೆ ಅದನ್ನು ಹೇಳಬೇಕು, ಪ್ರಶ್ನಿಸಬೇಕು ಅದೇ ನಿಜವಾದ ದೇಶಭಕ್ತಿ ಎಂದು ಜಾನ್ ಅಬ್ರಹಾಂ ಹೇಳಿರುವುದನ್ನು ಕೆಲವರು ರಿಷಬ್ ಶೆಟ್ಟಿ ಹೇಳಿಕೆಗೆ ಜೊತೆ ಹೋಲಿಸಿ ಮಾತನಾಡುತ್ತಿದ್ದಾರೆ. ಸದ್ಯ ಜಾನ್ ಅಬ್ರಹಾಂ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











