ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ ; ಮದ್ವೆಯಾಗಿ ಮಾಡೆಲ್ಗೆ ನರಕ ದರ್ಶನ ಮಾಡಿಸಿದ ಕ್ರಿಕೆಟಿಗ ಅಮಿತ್ ಮಿಶ್ರಾ
ವರದಕ್ಷಿಣೆ ನಮ್ಮ ಸಮಾಜದಲ್ಲಿ ಬೇರೂರಿರುವ ಪಿಡುಗು. ಈ ಪಿಡುಗು ನಿರ್ಮೂಲನೆ ಮಾಡಲು ನಾನಾ ಪ್ರಯತ್ನಗಳನ್ನು ಮಾಡಿದರು ಕೂಡ ಇವತ್ತು ಕೂಡ ಚಾಲ್ತಿಯಲ್ಲಿರುವುದು ದುರದೃಷ್ಟಕರ. 1961ರಲ್ಲಿಯೇ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಬದಲಾದ ಈ ಕಾಲದಲ್ಲಿಯೂ ಕೂಡ ವರದಕ್ಷಿಣೆ ಕಿರುಕುಳ ಅದರಿಂದ ಆದ ಸಾವು-ನೋವು ಕುರಿತು ಸುದ್ದಿಗಳನ್ನು ನಾವು ನೀವು ನೋಡುತ್ತಲೇ ಇರುತ್ತೇವೆ. ದುರಂತ ಅಂದರೆ ಈ ಹಣದಾಸೆ ಹಣವಂತರಲ್ಲಿಯೂ ಇರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವು ಶ್ರೀಮಂತರ ವಿರುದ್ಧ , ಖ್ಯಾತನಾಮರ ವಿರುದ್ಧ, ಈ ಹಿಂದೆ ಹಲವು ಬಾರಿ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಿವೆ. ಉದಾಹರಣೆಗೆ ಅಮಿತ್ ಮಿಶ್ರಾ.

ಹೌದು, ಅಮಿತ್ ಮಿಶ್ರಾ .. ಉತ್ತರ ಪ್ರದೇಶದ ಕಾನ್ಪುರನ ಕುವರ. 2013-14ರ ರಣಜಿ ಸೀಸನ್ನಲ್ಲಿ ಉತ್ತರ ಪ್ರದೇಶ ತಂಡದ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದವರು ಇವರು. ತಮ್ಮ ಮೊದಲ ರಣಜಿ ಸೀಸನ್ನಲ್ಲೇ (2013-14) ಕೇವಲ 6 ಪಂದ್ಯಗಳಿಂದ 27 ವಿಕೆಟ್ ಪಡೆಯುವ ಮೂಲಕ ಉತ್ತರ ಪ್ರದೇಶ ತಂಡದ ಪರ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದರು.
ಇನ್ನೂ 2014ರ ಐಪಿಎಲ್ ಹರಾಜಿನಲ್ಲಿ ಹತ್ತು ಲಕ್ಷಕ್ಕೆ, ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರು ಅಮಿತ್ ಮಿಶ್ರಾ. ಆ ನಂತರ ಗುಜರಾತ್ ಲಯನ್ಸ್ ತಂಡದಲ್ಲಿ ಕೂಡ ಸ್ಥಾನ ಪಡೆದರು. ಈ ಎರಡು ಫ್ರಾಂಚೈಸಿಯಲ್ಲಿ ಸ್ಥಾನವನ್ನೇನೋ ಅಮಿತ್ ಮಿಶ್ರಾ ಪಡೆದಿದ್ದರು. ಆದರೆ ಕಣಕ್ಕಿಳಿದಿರಲಿಲ್ಲ ಎನ್ನುವುದು ಬೇರೆ ವಿಷಯ. 2018-19ರ ಅವಧಿಯವರೆಗೆ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದ ಅಮಿತ್ ಮಿಶ್ರಾ ಆ ನಂತರ ಕ್ರಿಕೆಟ್ಗೆ ಗುಡ್ ಬೈ ಹೇಳಿದರು. ಸದ್ಯ ಅಮಿತ್ ಮಿಶ್ರಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (RBI) ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂಥಾ ಅಮಿತ್ ಮಿಶ್ರಾ 2019ರಲ್ಲಿ ಗರಿಮಾ ತಿವಾರಿ ಅವರನ್ನು ಭೇಟಿಯಾಗಿದ್ದರು. ಇನ್ಸ್ಟಾಗ್ರಾಮ್ ಇವರ ಪರಿಚಯಕ್ಕೆ ವೇದಿಕೆಯಾಗಿತ್ತು. ಇನ್ನು ಈ ಗರಿಮಾ ಬೇರೆ ಯಾರು ಅಲ್ಲ. ಬದಲಿಗೆ ಕಾನ್ಪುರದ ಸೂಪರ್ ಮಾಡೆಲ್. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ ಹೌದು. ಇನ್ಸ್ಟಾಗ್ರಾಮ್ನಲ್ಲಿ ಸದ್ಯ ಇವರನ್ನು 429,298ಜನ ಹಿಂಬಾಲಿಸುತ್ತಿದ್ದಾರೆ.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಮೋಡಿ ಮಾಡಿರುವ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿರುವ ಗರಿಮಾ ಅವರನ್ನು ಅಮಿತ್ ಮಿಶ್ರಾ ಮೂರು ವರ್ಷ ಪ್ರೀತಿ ಮಾಡಿದರು. ಏಪ್ರಿಲ್ 26, 2021ರಂದು ಕಾನ್ಪುರದ ಕ್ಲಬ್ನಲ್ಲಿ ಅದ್ಧೂರಿಯಾಗಿ ಮದುವೆಯೂ ಆದರು.

ಆದರೆ, ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಪ್ರೀತಿ ಮತ್ತು ಮದುವೆ ಎರಡು ಅರ್ಥವನ್ನು ಕೂಡ ಕಳೆದುಕೊಳ್ಳುತ್ತಿವೆ. ಇದಕ್ಕೆ ಪುರಾವೆ ಎನ್ನುವಂತೆ ಮದುವೆ ಮುನ್ನ ಹಾಲು-ಜೇನಿನಂತೆ ಇದ್ದ ಇಬ್ಬರು ಮದುವೆಯಾದ ನಂತರ ಹಾವು ಮುಂಗುಸಿಯಂತಾದರು. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯ್ತು.
ಮದುವೆಯ ಸಮಯದಲ್ಲಿ ₹2.5 ಲಕ್ಷವನ್ನು ಗರಿಮಾ ಹೆತ್ತವರು ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ ಕೂಡ, ಮದುವೆಯಾದ ನಂತರ ಹತ್ತು ಲಕ್ಷ ಹಣಕ್ಕೆ ಅಮಿತ್ ಮಿಶ್ರಾ ಮತ್ತು ಅವರ ಮನೆಯವರು ಬೇಡಿಕೆ ಇಟ್ಟರು. ಸಾಲದಕ್ಕೆ ಹೋಂಡಾ ಸಿಟಿ ಕಾರು ಬೇಕೆಂದು ಪೀಡಿಸಲು ಕೂಡ ಶುರು ಮಾಡಿದರು. ಹಾಗೂ ಹೀಗೂ ₹2.5 ಲಕ್ಷ ಹಣವನ್ನು ಗರಿಮಾ ಪೋಷಕರು ಹೊಂದಿಸಿ ನೀಡಿದರೂ ಕೂಡ ಕಿರುಕುಳ ಕಡಿಮೆಯಾಗಲಿಲ್ಲ. ಬದಲಿಗೆ ಹೆಚ್ಚಾಗುತ್ತಲೇ ಹೋಯ್ತು.
ಅಮಿತ್ ಮಿಶ್ರಾ ಅವರ ಜೊತೆ ಅವರ ತಾಯಿ ಬೀನಾ ಮಿಶ್ರಾ, ತಂದೆ ಶಶಿಕಾಂತ್ ಮಿಶ್ರಾ, ಅಣ್ಣ ಅಮರ್ ಮಿಶ್ರಾ, ಅತ್ತಿಗೆ ರಿತು ಮಿಶ್ರಾ ಮತ್ತು ಸಹೋದರಿ ಸ್ವಾತಿ ಮಿಶ್ರಾ ವರದಕ್ಷಿಣೆ ಆಸೆಯಿಂದ ಸಣ್ಣಸಣ್ಣ ವಿಷಯಗಳಿಗೂ ಪ್ರತಿದಿನ ಗರಿಮಾ ಅವರನ್ನು ನಿಂದಿಸಲು ಶುರು ಮಾಡಿದರು.
ಇನ್ನೂ ಇದರ ನಡುವೆ ಅಮಿತ್ ಮಿಶ್ರಾ ಕಂಠಪೂರ್ತಿ ಕುಡಿದುಕೊಂಡು ಬಂದು ಗರಿಮಾ ಅವರ ಮೇಲೆ ಹಲ್ಲೆ ಮಾಡಲು ಶುರು ಮಾಡಿದರು. ಒಪ್ಪತ್ತಿನ ಊಟವನ್ನೂ ನೀಡದೇ ಹಸಿವಿನಿಂದ ಬಳಲುವಂತೆ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ದೈಹಿಕ ಸಂಬಂಧಕ್ಕೆ ಒತ್ತಾಯ ಮಾಡುತ್ತಿದ್ದ ಅಮಿತ್ ಮಿಶ್ರಾ ಗರಿಮಾ ವಿರೋಧ ಮಾಡಿದಾಗ ಹಲ್ಲೆ ಮಾಡಿದರು. ಅಮಿತ್ ಮಿಶ್ರಾಗೆ ಅನೈತಿಕ ಸಂಬಂಧವೂ ಇತ್ತು. ಹಲವು ಮಹಿಳೆಯರ ಜೊತೆ ಸರಸವಾಡುತ್ತಿದ್ದ ಅಮಿತ್ ಮಿಶ್ರಾ ತಮ್ಮ ಪತ್ನಿ ಗರಿಮಾ ಎದುರೇ ಬೇರೆ ಹುಡುಗಿಯರ ಜೊತೆ ಮಾತನಾಡುತ್ತಿದ್ದರು.

ಹೀಗೆ ಮದುವೆಯಾದ ಕೆಲವೇ ದಿನಗಳಲ್ಲಿ ನರಕಯಾತನೆ ಅನುಭವಿಸಿದ ಗರಿಮಾ ಫಿನಾಯಲ್ ಕುಡಿದು ಈ ಹಿಂದೆ ಆತ್ಮ*ಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡಿದ್ದರು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ತಮ್ಮ ಬದುಕಿನ ಈ ಕರಾಳ ಕಥೆಯನ್ನೆಲ್ಲಾ ಏಪ್ರಿಲ್ 21-2025ರಂದು ನೀಡಿದ್ದ ದೂರಿನಲ್ಲಿ ಗರಿಮಾ ಉಲ್ಲೇಖ ಮಾಡಿದ್ದರು. ಮಾಧ್ಯಮದವರ ಎದುರು ತಮ್ಮ ಅಳಲು ತೋಡಿಕೊಂಡು ಏಪ್ರಿಲ್ 21, 2025 ರಂದು ಕೌಟುಂಬಿಕ ಹಿಂಸಾಚಾರ ಆರೋಪ ಮಾಡಿದ್ದರು. ಏಪ್ರಿಲ್ 23, 2025 ರಂದು ಜೀವನಾಂಶ ಕೋರಿ ಮತ್ತೊಂದು ದೂರು ಸಲ್ಲಿಸಿದ್ದರು.ಅಮಿತ್ ಮಿಶ್ರಾ ಅವರಿಂದ ಮಾಸಿಕ ₹50,000 ಜೀವನಾಂಶ ಮತ್ತು ₹1 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.
ಇನ್ನು ಇತ್ತೀಚೆಗೆ ಗರಿಮಾ ಫಿಲ್ಖಾನಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಆದರೆ, ಎಸಿಪಿ, ಡಿಸಿಪಿ ಮತ್ತು ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದ್ದರೂ, ಅಮಿತ್ ಮಿಶ್ರಾ ಪ್ರಭಾವದಿಂದ ಎಫ್ಐಆರ್ ದಾಖಲಾಗಲಿಲ್ಲ ಎಂದು ಗರಿಮಾ ಅವರ ವಕೀಲ ಕರೀಂ ಅಹ್ಮದ್
ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಸದ್ಯ ನ್ಯಾಯಕ್ಕಾಗಿ ಗರಿಮಾ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾರ್ಚ್ 9, 2026 ರಂದು ಪೊಲೀಸರು ವಿಚಾರಣೆ ನಡೆಸದೆ ಎಫ್ಐಆರ್ ದಾಖಲಿಸಲು ನಿರಾಕರಿಸಿದ ನಂತರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಅಮಿತ್ ಮಿಶ್ರಾ ವಿರುದ್ಧ ನಾನು ಪೊಲೀಸ್ ದೂರು ದಾಖಲಿಸಿದ್ದೆ, ಆದರೆ ಅವರ ಪ್ರಭಾವದಿಂದ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗರಿಮಾ ತಿವಾರಿ ಹೇಳಿದ್ದಾರೆ.
ಸದ್ಯ ಅಮಿತ್ ಮಿಶ್ರಾ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ಗರಿಮಾ ದಾಖಲಿಸಿದ ಹಿನ್ನೆಲೆ, ಮುಂಬರುವ ದಿನಗಳಲ್ಲಿ ಅಮಿತ್ ಮಿಶ್ರಾ ಅವರಿಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಂದ್ಹಾಗೇ ಈ ಅಮಿತ್ ಮಿಶ್ರಾ ಅವರಿಗೂ ಮತ್ತು ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಹಾಗೂ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಅಮಿತ್ ಮಿಶ್ರಾ ಅವರಿಗೆ ಯಾವುದೇ ಸಂಬಂಧ ಇಲ್ಲ. ಹೆಸರು ಒಂದೇ ಆದ ಹಿನ್ನೆಲೆ ಹಲವರು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾ ಪೇಜ್ಗಳು ಉತ್ತರ ಪ್ರದೇಶದ ವೇಗಿ ಅಮಿತ್ ಮಿಶ್ರಾ ಅವರ ಫೋಟೊ ಬದಲು ಹರಿಯಾಣಾದ ಸ್ಪಿನರ್ ಅಮಿತ್ ಮಿಶ್ರಾ ಅವರ ಫೋಟೊಗಳನ್ನು ಹಿಂದೆಯೂ ಬಳಸಿವೆ. ಈಗಲೂ ಬಳಸುತ್ತಿವೆ. ಇದರಿಂದ ಬೇಸತ್ತು ಈ ಹಿಂದೆ ಪ್ರಕರಣ ಮುನ್ನೆಲೆಗೆ ಬಂದಾಗ ಅಮಿತ್ ಮಿಶ್ರಾ ತಮಗೂ ಈ ವಿವಾದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ತಮ್ಮ ಫೋಟೊ ಬಳಸದಂತೆ ಮನವಿಯನ್ನು ಕುಡ ಮಾಡಿದ್ದರು.


Click it and Unblock the Notifications











