ಅಫ್ಘಾನಿಸ್ತಾನದಲ್ಲಿ ಕಂಡಿದ್ದ ಕತೆಗಳ ಹೇಳಿದ ಅಮಿತಾಬ್ ಬಚ್ಚನ್-ಹೇಮಾ ಮಾಲಿನಿ
ಮಾನವೀಯತೆಗೆ, ಸ್ವಾತಂತ್ರ್ಯಕ್ಕೆ, ಲಿಂಗ ಸಮಾನತೆಗೆ ಗೌರವ ಕೊಡುವ ಎಲ್ಲರೂ ಅಫ್ಘಾನಿಸ್ತಾನದ ಜನರ ಬಗ್ಗೆ ಪ್ರಾರ್ಥಿಸುತ್ತಿದ್ದಾರೆ. ಅಲ್ಲಿನ ಜನಗಳಿಗೆ ಒದಗಿ ಬಂದಿರುವ ಕಷ್ಟದ ಬಗ್ಗೆ ಮರುಕಪಡುತ್ತಿದ್ದಾರೆ.
ಸಾಕಷ್ಟು ಮಂದಿ ಬಾಲಿವುಡ್ ನಟರೂ ಸಹ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆ, ಅಲ್ಲಿನ ಜನರು ಜೀವ ಉಳಿಸಿಕೊಳ್ಳಲು ಪಡುತ್ತಿರುವ ಪಾಟಲುಗಳ ಬಗ್ಗೆ ತೀವ್ರ ಮರುಕವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ಸುಂದರ, ಭೀಕರ, ನಯನ ಮನೋಹರ ಕಣಿವೆಗಳಲ್ಲಿ ಕೆಲವು ಭಾರತೀಯ ಸಿನಿಮಾಗಳನ್ನು ಚಿತ್ರೀಕರಿಸಲಾಗಿತ್ತು. ಅಮಿತಾಬ್ ಬಚ್ಚನ್, ಶ್ರೀದೇವಿ, ಹೇಮಾಮಾಲಿನಿ ಇನ್ನೂ ಕೆಲವರ ಸಿನಿಮಾಗಳನ್ನು ಅಫ್ಘಾನಿಸ್ತಾನದಲ್ಲಿ ಚಿತ್ರೀಕರೀಸಲಾಗಿತ್ತು ಆಗಿನ ಅನುಭವಗಳನ್ನು ನಟ ಅಮಿತಾಬ್ ಬಚ್ಚನ್ ಹಾಗೂ ನಟಿ ಹೇಮಾ ಮಾಲಿನಿ ಹಂಚಿಕೊಂಡಿದ್ದಾರೆ. ಇಬ್ಬರ ಅನುಭವಗಳು ಬಹಳ ಭಿನ್ನವಾಗಿರುವುದು ವಿಶೇಷ.
ಅಮಿತಾಬ್ ಬಚ್ಚನ್ ಶ್ರೀದೇವಿ ನಟಿಸಿದ್ದ 'ಖುದಾ ಗವಾ' ಸಿನಿಮಾದ ಹಾಡು ಕೆಲವು ಆಕ್ಷ್ಯನ್ ದೃಶ್ಯಗಳ ಚಿತ್ರೀಕರಣ ಅಫ್ಘಾನಿಸ್ತಾನದಲ್ಲಿ ಆಗಿತ್ತು. ಅದರಲ್ಲೂ ವಿಶೇಷವಾಗಿ ಅಫ್ಘಾನಿಸ್ತಾನದ ಜನಪ್ರಿಯ ಕ್ರೀಡೆ 'ಬುಜ್ಕಾಶಿ' (ಕುದುರೆ ಓಡಿಸುತ್ತಾ ಆಡುವ ಆಟ)ಗಳನ್ನು ಚಿತ್ರೀಕರಿಸಲಾಗಿತ್ತು. 'ಖುದಾ ಗವಾ' ಸಿನಿಮಾದ ಚಿತ್ರೀಕರಣ ಬಹುತೇಕ ಮಜರ್-ಇ-ಷರೀಫ್ ಎಂಬಲ್ಲಿ ನಡೆಯಿತು. ಆಗ ಅಫ್ಘಾನಿಸ್ತಾನದಲ್ಲಿ ಬಹಳ ಸಂಕಷ್ಟದ ಸಮಯವಾಗಿತ್ತು.

1991ರಲ್ಲಿ ಅಫ್ಘಾನ್ಗೆ ಹೋಗಿದ್ದ ಅಮಿತಾಬ್ ಬಚ್ಚನ್
1991ರ ಅಂತ್ಯದ ಸಮಯದಲ್ಲಿ ಅಮಿತಾಬ್ ಬಚ್ಚನ್, ಶ್ರೀದೇವಿ ಹಾಗೂ ಚಿತ್ರತಂಡ ಅಫ್ಘಾನಿಸ್ತಾನಕ್ಕೆ ಹೋಗಿ ಚಿತ್ರೀಕರಣ ಮಾಡಿದ್ದರು. ಆಗಷ್ಟೆ ಸೋವಿಯತ್ ರಷ್ಯಾದ ಸೈನ್ಯ ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿದ್ದರು. ಅಫ್ಘಾನ್ನ ಅಧ್ಯಕ್ಷರಾಗಿ ನಜೀಬುಲ್ಲಾ ಅಹ್ಮಜ್ದಾನಿ ನೇಮಕಗೊಂಡಿದ್ದರು. ಹಿಂದಿ ಸಿನಿಮಾಗಳ ವಿಶೇಷವಾಗಿ ಅಮಿತಾಬ್ ಬಚ್ಚನ್ರ ದೊಡ್ಡ ಅಭಿಮಾನಿ ಆಗಿದ್ದ ನಜೀಬುಲ್ಲಾ ಅಹ್ಮಜ್ದಾನಿ ಬಚ್ಚನ್ ಸಿನಿಮಾಕ್ಕೆ ಭಾರಿ ಭದ್ರತೆಯನ್ನು ಒದಗಿಸಿದ್ದರಂತೆ.

ಅರ್ಧ ಏರ್ಪೋರ್ಸ್ ನಮ್ಮ ಭದ್ರತೆಗೆ ನಿಯೋಜಿಸಲಾಗಿತ್ತು: ಬಚ್ಚನ್
ಅಫ್ಘಾನಿಸ್ತಾನದ ಅರ್ಧ ಏರ್ಫೋರ್ಸ್ ಅನ್ನು ನಮ್ಮ ಭದ್ರತೆಗೆ ನಿಯೋಜಿಸಿದ್ದರು ನಜೀಬುಲ್ಲಾ ಅಹ್ಮಜ್ದಾನಿ. ನಾವು ಎಲ್ಲಿಗೇ ಹೋದರು ವಿಮಾನಗಳಲ್ಲಿ, ಹೆಲಿಕಾಪ್ಟರ್ಗಳಲ್ಲಿ ಕಳಿಸುತ್ತಿದ್ದರು. ಗನ್ನುಗಳು, ಟ್ಯಾಂಕುಗಳ ಇದ್ದ ಭದ್ರತಾ ಹೆಲಿಕಾಪ್ಟರ್ಗಳು ನಮ್ಮ ಹಿಂದೆ, ಮುಂದೆ ಹಾರುತ್ತಿದ್ದವು. ನಮಗೆ ವಿವಿವಿಐಪಿ ಟ್ರೀಟ್ಮೆಂಟ್ ನೀಡಲಾಗುತ್ತಿತ್ತು. ನಮ್ಮನ್ನು ಯಾವುದೇ ಹೋಟೆಲ್ನಲ್ಲಿ ಉಳಿದುಕೊಳ್ಳಲು ಬಿಡಲಿಲ್ಲ, ಮನೆಯೊಂದನ್ನು ಖಾಲಿ ಮಾಡಿಸಿ ಆ ಮನೆಯಲ್ಲಿ ನಮ್ಮನ್ನು ಇರಿಸಿದ್ದರು'' ಎಂದು ನೆನಪಿಸಿಕೊಂಡಿದ್ದಾರೆ ಅಮಿತಾಬ್ ಬಚ್ಚನ್.

''ಸೈನಿಕರು ನಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದರು''
''ಒಮ್ಮೆ ಹೆಲಿಕಾಪ್ಟರ್ನಲ್ಲಿ ಕೆಲ ಸೈನಿಕರೊಟ್ಟಿಗೆ ಬೆಟ್ಟಗಳನ್ನು ನೊಡಲು ಹೋದೆವು. ಅದೊಂದು ಅದ್ಭುತ ಅನುಭವ. ಅಲ್ಲಿ ಬೆಳೆಯುವ ಗಸ-ಗಸೆಗಳಿಂದ ಆ ಕಣಿವೆಗಳಿಗೆ, ಬೆಟ್ಟಗಳಿಗೆ ಭಿನ್ನವಾದ ಬಣ್ಣ ಬಂದಿತ್ತು. ನಮ್ಮ ಹೆಲಿಕಾಪ್ಟರ್ ಇಳಿದ ಜಾಗವಂತೂ ಸ್ವರ್ಗವೇ ಆಗಿತ್ತು ಎನಿಸುತ್ತದೆ. ನಮ್ಮೊಂದಿಗೆ ಬಂದಿದ್ದ ಸೈನಿಕರು ನಮ್ಮನ್ನು ಹೊತ್ತುಕೊಂಡು ಹೋದರು, ಅವರ ಪ್ರಕಾರ ಅತಿಥಿಯ ಕಾಲುಗಳು ಸಹ ನೆಲಕ್ಕೆ ತಾಗಬಾರದಂತೆ. ಅಲ್ಲಿ ನಮಗಾಗಿ 'ಬುಜ್ಕಾಶಿ' ಟೂರ್ನಮೆಂಟ್ ಆಯೋಜಿಸಿದ್ದರು. ನಾವು ಅಂದು ಸಾಕಷ್ಟು ತಿಂದೆವು, ಕುಡಿದೆವು, ನಾವು ಯಾವುದೋ ಕಿನ್ನರ ಲೋಕಕ್ಕೆ ಬಂದಿದ್ದೇವೆ ಎಂಬ ಭಾವನೆ ನಮಗೆ ಆಗುತ್ತಿತ್ತು'' ಎಂದು ಅಮಿತಾಬ್ ಬಚ್ಚನ್ ಬಣ್ಣಿಸಿದ್ದಾರೆ.

ನಮಗೆ ಹಲವು ಉಡುಗೊರೆಗಳನ್ನು ಕೊಟ್ಟು ಕಳಿಸಿದರು: ಬಚ್ಚನ್
''ನಾವು ಭಾರತಕ್ಕೆ ಹೊರಡುವ ಹಿಂದಿನ ದಿನ ನಮ್ಮನ್ನು ಆಗಿನ ಅಧ್ಯಕ್ಷ ನಜೀಬುಲ್ಲಾ ಅಹ್ಮಜ್ದಾನಿ ಅರಮನೆಗೆ ಆಹ್ವಾನ ನೀಡಿದರು. ನಮಗೆ ಅಫ್ಘಾನಿ ವೇಷಗಳನ್ನು ತೊಡಿಸಿ ಫೊಟೊಗಳನ್ನು ತೆಗೆಸಿಕೊಂಡೆವು. ಹಲವು ಉಡುಗೊರೆಗಳನ್ನು ನಮಗಾಗಿ ಅವರು ನೀಡಿದರು. ನಜೀಬುಲ್ಲಾ ಅಹ್ಮಜ್ದಾನಿಯ ಸಂಬಂಧಿಯೊಬ್ಬರು ಕೆಲವು ಹಿಂದಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಮ್ಮನ್ನು ಬಹಳ ಚೆನ್ನಾಗಿ ಬೀಳ್ಕೊಟ್ಟರು. ಆದರೆ ಅವರೆಲ್ಲ ಈಗ ಎಲ್ಲಿದ್ದಾರೊ, ಏನಾಗಿಬಿಟ್ಟಿದ್ದಾರೊ ಗೊತ್ತಿಲ್ಲ ಎಂದಿದ್ದಾರೆ ಅಮಿತಾಬ್ ಬಚ್ಚನ್.

ನಾನು ಹೋಗಿದ್ದಾಗ ಏನೂ ಸಮಸ್ಯೆ ಇರಲಿಲ್ಲ: ಹೇಮಾಮಾಲಿನಿ
ನಟಿ ಹೇಮಾ ಮಾಲಿನಿ 'ಧರ್ಮಾತ್ಮ' ಸಿನಿಮಾದ ಚಿತ್ರೀಕರಣಕ್ಕಾಗಿ 1975ರಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು. ಆದರೆ ಆ ಸಮಯ ಬಹಳ ಸುಂದರವಾಗಿತ್ತು. ನಾನು ನೋಡಿದ ಅತ್ಯಂತ ಸುಂದರ ನಗರ ಕಾಬೂಲ್. ಆಗ ರಷ್ಯಾದ ಸೈನಿಕರು ಅಫ್ಘಾನಿಸ್ತಾನದಲ್ಲಿದ್ದರು. ಆದರೆ ಆವಾಗ ಯಾವುದೇ ಸಮಸ್ಯೆ ಇರಲಿಲ್ಲ. ನಾವು ಬಹಳ ಆರಾಮವಾಗಿ ಚಿತ್ರೀಕರಣ ಮುಗಿಸಿ ವಾಪಸ್ ಬಂದಿದ್ದೆವು. ಅಲ್ಲದೆ ಹಲವು ಪ್ರವಾಸಿ ತಾಣಗಳನ್ನು ಸಹ ಆರಾಮವಾಗಿ ಸುತ್ತಾಡಿ ಬಂದಿದ್ದೆವು'' ಎಂದು ಹೇಮಾಮಾಲಿನಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











