ಶಾರುಖ್, ಅಕ್ಷಯ್ ಕಾಲೆಳೆದರೇ ಬಿಗ್ ಬಿ ಅಮಿತಾಬ್?
ಬಾಲಿವುಡ್ ಮೆಗಾಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ಚಿತ್ರರಂಗದ ಇತ್ತೀಚಿನ ಬೆಳವಣಿಗೆ ಹಾಗೂ ಚಿತ್ರಗಳ ಮಾರ್ಕೆಟಿಂಗ್ ವ್ಯವಹಾರ ನನಗೆ ತುಂಬಾ ಸೋಜಿಗವೆನಿಸುತ್ತಿದೆ. ನನಗೆ ನನ್ನ ಚಿತ್ರವನ್ನು ಸೇಲ್ ಮಾಡುವ ತಂತ್ರವೇ ಇನ್ನೂ ತನಕ ಗೊತ್ತಿಲ್ಲ. ಆದರೆ ಈ ಜನರೇಷನ್ನಿನ ಘಟಾನುಗಟಿ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ತಮ್ಮ ತಮ್ಮ ಚಿತ್ರಗಳನ್ನು ತುಂಬಾ ಚೆನ್ನಾಗಿ ಮಾರ್ಕೆಟಿಂಗ್ ಮಾಡುತ್ತಾರೆ."
ನನಗೆ ಈಗಿರುವ ಹೊಸ ತಂತ್ರಜ್ಚಾನವನ್ನು ಉಪಯೋಗಿಸಿಕೊಂಡು ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡಲು ಬರುವುದಿಲ್ಲ. ಈಗ ಅಂತಲ್ಲ, ಆಗಲೂ ಅಷ್ಟೇ. ನನಗೆ ನಟನೆ ಬಿಟ್ಟು ಬೇರೆ ಯಾವುದೇ ವ್ಯವಹಾರದಲ್ಲಿ ಜಾಣ್ಮೆ ಬೆಳೆಸಿಕೊಳ್ಳಲು ಆಗಲಿಲ್ಲ. ಚಿತ್ರಕ್ಕೆ ಹಾಕಿರುವ ದುಡ್ಡು, ಅದನ್ನು ವಾಪಸ್ ಪಡೆದುಕೊಳ್ಳುವ ಕಲೆ ಯಾವುದನ್ನೂ ನಾನು ತಿಳಿದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಲಿಲ್ಲ.
ನಟರಾದ ಶಾರುಖ್ ಹಾಗೂ ಅಕ್ಷಯ್ ಕುಮಾರ್ ಆ ದಿಸೆಯಲ್ಲಿ ತುಂಬಾ ಮುಂದಿದ್ದಾರೆ. ಅವರಿಗೆ ತಮ್ಮ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಹಾಕಿದ ದುಡ್ಡು ವಾಪಸ್ ಬರುವಂತೆ ಪ್ರಚಾರ ಮಾಡುವುದು ಗೊತ್ತು. ಮೊದಲ ವಾರ ಚಿತ್ರಮಂದಿರವನ್ನು ತಮ್ಮ ಅಭಿಮಾನಿಗಳಿಂದ ತುಂಬಿಸಿಕೊಳ್ಳುವುದು ಗೊತ್ತು.
ನಂತರವೂ ಅಷ್ಟೇ, ಚಿತ್ರದ ಬಗ್ಗೆ ನಿಂತರವಾಗಿ ಪ್ರಚಾರ ಮಾಡುತ್ತಾ, ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುವುದು ಗೊತ್ತು. ಅದು ನನ್ನಿಂದ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ತಮ್ಮ ಮಗ ಅಭಿಷೇಕ್ ಗೆ ಕೂಡ ಗೊತ್ತಿಲ್ಲ. ಆದರೆ, ಅದನ್ನು ತಿಳಿದುಕೊಳ್ಳವ ಅವಕಾಶವನ್ನು ಮಾತ್ರ ತಾವು ಒಂದೆರಡು ಬಾರಿ ಪಡೆದುಕೊಂಡಿದ್ದಾಗಿ ಹೇಳಿದ್ದಾರೆ.
"ನಾನೊಮ್ಮೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವ ಸಂದರ್ಭದಲ್ಲಿ ತಮ್ಮ ಚಿತ್ರವೊಂದನ್ನು ಪ್ರಮೋಟ್ ಮಾಡಲು ಅಲ್ಲಿಗೆ ಅಕ್ಷಯ್ ಕುಮಾರ್ ಬಂದಿದ್ದರು. ಅದನ್ನು ಮುಗಿಸುತ್ತಿದ್ದಂತೆ ಅವರು ಮಂಬೈನ ಇನ್ನೊಂದು ಜಾಗಕ್ಕೆ ಅದೇ ಚಿತ್ರದ ಪ್ರಚಾರಕ್ಕೆ ಹೋಗಬೇಕಿತ್ತು. ಹಾಗೇ ಅವರು ಹೊರಟು ನಿಂತರು.
ಆಗ ನಾನು ಅವರನ್ನು ಯಾಕೆ ನೀವು ಹೀಗೆ ಓಡಾಡುತ್ತೀರಿ ಎಂದು ಕೇಳಿದೆ. ಅದಕ್ಕವರು "ಏನು ಮಾಡುವುದು, ಅನಿವಾರ್ಯ ಸರ್..."ಎಂದರು. ಅವರ ಕ್ಷಮಾಪಣಾ ಧಾಟಿಯಲ್ಲಿದ್ದ ಮಾತಿನ ಮರ್ಮವೂ ನನಗೆ ಅರ್ಥವಾಗಲಿಲ್ಲ. ಅವರ ಗಡಿಬಿಡಿ ನೋಡಿ ಹೆಚ್ಚು ಮಾತನಾಡಲೂ ಸಾಧ್ಯವಾಗಲಿಲ್ಲ.
ಅಷ್ಟೇ ಅಲ್ಲ, ಅದೊಮ್ಮೆ ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಶಾರುಖ್ ಖಾನ್, ನನ್ನ ಮಗ ಅಭಿಷೇಕ್ ಗೆ "ನನಗನ್ನಿಸುವ ಮಟ್ಟಿಗೆ ನಾನು ಚೆನ್ನಾಗಿ ಮಾರ್ಕೆಟಿಂಗ್ ಮಾಡುವ ಕಲೆ ಕಲಿತಿದ್ದೇನೆ. ಒಮ್ಮೆ ನಿಮಗೆ ಯಾವತ್ತಾದರೂ ನನ್ನ ಸಹಾಯದ ಅಗತ್ಯವಿದ್ದರೆ ಖಂಡಿತ ಕೇಳಿ" ಎಂದಿದ್ದರು. ಅಷ್ಟರಮಟ್ಟಿಗೆ ಶಾರುಖ್ ಸೇಲ್ಸ್ ಮಾಡುವುದರಲ್ಲಿ ನಿಸ್ಸೀಮರು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನೊಬ್ಬ ಯಶಸ್ವಿ ಸೇಲ್ಸ್ ಮನ್ ಅಲ್ಲ. ನನಗೆ ಇಷ್ಟಪಟ್ಟರೂ ಅದನ್ನು ಕಲಿಯುವುದು ಸಾಧ್ಯವಿಲ್ಲ. ಆದರೆ ನಮ್ಮ ನಮ್ಮ ವಿಭಾಗಗಳಲ್ಲಿ ನಾವು ಕೆಲಸಮಾಡುವುದರ ಜೊತೆಗೆ ಈ ಎಲ್ಲಾ ಕಲೆಗಳನ್ನೂ ಕಲಿಯಬೇಕು. ಚಿತ್ರರಂಗದ ಆಳಕ್ಕೆ ಇಳಿಯುವುದನ್ನು ತಿಳಿದಿರಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ ಬಿಗ್ ಬಿ ಅಮಿತಾಬ್.
ಹಾಗೇ ಮುಂದುವರಿದ ಅಮಿತಾಬ್, "ನಾನೊಮ್ಮೆ ರಜನಿಕಾಂತ್ ಅವರಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಕೇಳಿದೆ. ಅವರು ನನಗೆ ತುಂಬಾ ಸರಳವಾಗಿ ಉತ್ತರ ಕೊಟ್ಟರು. ರಜನಿಕಾಂತ್ ಹೇಳಿದ್ದು "ನಾನೊಬ್ಬ ನಟ ಅಮಿತಾಬ್ ಜೀ, ಮಾರಾಟಗಾರನಲ್ಲ. ನಾನು ಹೋಗಿ ಚಿತ್ರದ ಬಗ್ಗೆ ಪ್ರಚಾರ ಮಾಡಿ ಸೇಲ್ಸ್ ಮಾಡುವ ಅಗತ್ಯವಾದರೂ ಏನು?
ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಬರುತ್ತಾರೆ, ಯಶಸ್ವಿ ಎನಿಸುತ್ತದೆ. ಚೆನ್ನಾಗಿಲ್ಲದಿದ್ದರೆ ಅದೆಷ್ಟೇ ಬಾಯಿಬಡಿದುಕೊಂಡರೂ ಚಿತ್ರ ಓಡುವುದಿಲ್ಲ. ದುಡ್ಡು ಕೊಟ್ಟು ನೋಡುವ ಪ್ರೇಕ್ಷಕ ನಮ್ಮ ಮಾರಾಟದ ತಂತ್ರದಿಂದ ಮೋಸ ಹೋಗುವುದಿಲ್ಲ." ಇಷ್ಟನ್ನು ತಮ್ಮ ಬ್ಲಾಗಿನಲ್ಲಿ ಬರೆದು ಫುಲ್ ಸ್ಟಾಪ್ ಇಟ್ಟಿದ್ದಾರೆ ಅಮಿತಾಬ್.
ಬಿಗ್ ಬಿ ಮಾತಿನಲ್ಲಿ ಸಾಕಷ್ಟು ಅರ್ಥಗಳು ಗೋಚರಿಸುತ್ತವೆ. ಬಹಳಷ್ಟು ದಿಕ್ಕಿನಲ್ಲಿ ಚಿಂತಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಷ್ಟೇ ಅಲ್ಲ, ಅವರ ಮಾತಿನಲ್ಲಿರುವ ಸತ್ಯತೆ ಹಾಗೂ ವ್ಯಂಗ್ಯಾರ್ಥಗಳನ್ನು ಗಣನೆಗೆ ತೆಗದುಕೊಳ್ಳುವುದು ಅನಿವಾರ್ಯವಾಗುತ್ತದೆ.
ಅಷ್ಟನ್ನೂ ಗಮನಿಸಿ ಆಳಕ್ಕಿಳಿದು ಚಿಂತಿಸಿದರೆ ಅಮಿತಾಬ್ ಮಾತಿನ ಅರ್ಥವೂ, ಬ್ಲಾಗಿನಲ್ಲಿ ಬರೆದ ಉದ್ದೇಶವೂ ಗೋಚರಿಸುತ್ತದೆ. ಎಲ್ಲವನ್ನೂ ಬಿಚ್ಚಿಟ್ಟು ಬೆತ್ತಲೆಯಾಗಿ ನಿಲ್ಲುವ ಸ್ವಭಾವ ಅಮಿತಾಬ್ ಅವರದಲ್ಲ. ಅವರದೇನಿದ್ದರೂ ಸಾಧನೆಯ ನಡೆ, ಬುದ್ಧಿವಂತಿಕೆಯ ನುಡಿ. ನೀವೇನಂತೀರಾ? ನಿಮ್ಮ ಅಭಿಪ್ರಾಯ ಸೂಚಿಸಿ... (ಏಜೆನ್ಸೀಸ್)


Click it and Unblock the Notifications











