ಅಮೀರ್ ಖಾನ್ ಜಾಹೀರಾತನ್ನು ಹಿಂದು ವಿರೋಧಿ ಎಂದ ಅನಂತ್ಕುಮಾರ್ ಹೆಗಡೆ
ಹಿಂದುತ್ವ ಪ್ರತಿಪಾದಕರು ಆಗಾಗ್ಗೆ ನಟ ಅಮೀರ್ ಖಾನ್ ಮೇಲೆ ವಾಗ್ದಾಳಿ ನಡೆಸುವುದು, ಪೋಸ್ಟ್ಗಳನ್ನು ಹಾಕುವುದು, ದೇಶದ್ರೋಹಿ ಎನ್ನುವುದು ಸಾಮಾನ್ಯ. ಇದೀಗ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಅಮೀರ್ ಖಾನ್ ವಿರುದ್ಧ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಅಮೀರ್ ಖಾನ್ ಇತ್ತೀಚೆಗೆ ನೀಡಿರುವ ಜಾಹೀರಾತೊಂದು ಸಂಸದರನ್ನು ಕೆರಳಿಸಿದೆ. ಅಮೀರ್ ಖಾನ್ ನೀಡಿರುವ ಟೈರ್ನ ಎರಡು ನಿಮಿಷ ಮೀರದ ಸಣ್ಣ ಜಾಹೀರಾತು ಹಿಂದು ಧರ್ಮದ ಆಚರಣೆಗೆ ಧಕ್ಕೆ ತರುತ್ತಿದೆ ಎಂದು ಕೆರಳಿ ಕೆಂಡವಾಗಿದ್ದಾರೆ.
ಅಮೀರ್ ಖಾನ್ ಸಿಯೆಟ್ ಟೈರ್ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಜಾಹೀರಾತಿನಲ್ಲಿ ''ನಮ್ಮ ಕ್ರಿಕೆಟ್ ಟೀಮ್ ಇಂದು ಗೆದ್ದರೆ ನಾವು ಜೋರಾಗಿ ಪಟಾಕಿ ಹೊಡೆಯೋಣ ಆದರೆ ನಮ್ಮ ಅಪಾರ್ಟ್ಮೆಂಟ್ ಕಾಂಪೌಂಡ್ನ ಒಳಗೆ, ರಸ್ತೆಯಲ್ಲ'' ಎನ್ನುತ್ತಾರೆ. ಆ ನಂತರದ ದೃಶ್ಯದಲ್ಲಿ ಸ್ವತಃ ಅಮೀರ್ ಖಾನ್ ಮತ್ತು ತಂಡ ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಿರುತ್ತಾರೆ. ಇದರಿಂದ ರಸ್ತೆಯಲ್ಲಿ ಗಾಡಿ ಓಡಿಸುವವರು ತೊಂದರೆ ಪಡಬೇಕಾಗುತ್ತದೆ.

ರಸ್ತೆ ಸುರಕ್ಷತೆ, ರಸ್ತೆಯ ಬಳಕೆ ಬಗ್ಗೆ ಜಾಗೃತಿಯನ್ನು ಹಾಸ್ಯದ ಮೂಲಕ ತಲುಪಿಸಲು ಯತ್ನಿಸುತ್ತಿರು ಈ ಜಾಹೀರಾತನ್ನು ಅನಂತ್ಕುಮಾರ್ ಹೆಗಡೆ, ಹಿಂದು ವಿರೋಧಿ ಜಾಹೀರಾತೆಂದು ಆರೋಪಿಸಿದ್ದು, ಸಿಯೆಟ್ ಮಾಲೀಕ ಆನಂದ್ ವರದನಾತ್ ಗೋಯೆಂಕಾಗೆ ಪತ್ರವನ್ನು ಬರೆದಿದ್ದಾರೆ. ಪತ್ರದ ಪ್ರತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
''ರಸ್ತೆಯಲ್ಲಿ ಪಟಾಕಿ ಸಿಡಿಸಬೇಡಿ ಎಂದಿರುವ ನಿಮ್ಮ ಜಾಹೀರಾತಿಗೆ ನನ್ನ ಮೆಚ್ಚುಗೆ ಇದೆ ಆದರೆ ರಸ್ತೆಯಲ್ಲಿ ಜನರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಬಗ್ಗೆಯೂ ಗಮನ ವಹಿಸಿ. ಪ್ರತಿ ಶುಕ್ರವಾರ ಪ್ರಾರ್ಥನೆ ಹೆಸರಿನಲ್ಲಿ ರಸ್ತೆ ಬಂದ್ ಮಾಡುವುದು. ಹಬ್ಬ, ಉರುಸ್ ಆಚರಣೆಗೆ ರಸ್ತೆ ಬಂದ್ ಮಾಡುವ ಬಗ್ಗೆಯೂ ನಿಮ್ಮ ಜಾಹಿರಾತುಗಳು ಗಮನ ವಹಿಸಲಿ. ಅಲ್ಲದೆ ಶಬ್ದ ಮಾಲಿನ್ಯದ ಬಗ್ಗೆಯೂ ನಿಮ್ಮ ಸಂಸ್ಥೆ ಗಮನ ವಹಿಸಲಿ, ಲೌಡ್ ಸ್ಪೀಕರ್ ಬಳಕೆ ಇನ್ನಿತರೆ ಮುಸ್ಲಿಮರ ಆಚರಣೆಯ ವಿಷಯಗಳನ್ನು ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ತಮ್ಮ ಹಿಂದು ಪ್ರೇಮ, ಮುಸ್ಲಿಂ ದ್ವೇಷವನ್ನು ಪತ್ರದಲ್ಲಿ ಢಾಳಾಗಿ ಹೊರಹಾಕಿದ್ದಾರೆ.
''ನೀವು ಹಿಂದು ಸಮುದಾಯವರಾಗಿದ್ದು, ಹಿಂದು ಧರ್ಮೀಯರ ಮೇಲೆ ಶತಮಾನಗಳಿಂದ ಆಗುತ್ತ ಬಂದಿರುವ ಅನ್ಯಾಯದ ಬಗ್ಗೆ ನಿಮಗೂ ಅರಿವಿದೆ ಎಂದುಕೊಂಡಿದ್ದೇನೆ. ಕೆಲವು ಹಿಂದು ವಿರೋಧಿ ನಟರು ಸದಾ ಹಿಂದು ಸಂಪ್ರದಾಯಗಳನ್ನು ಟೀಕಿಸುವಲ್ಲಿ ನಿರತರಾಗಿರುತ್ತಾರೆ. ತಮ್ಮದೇ ಸಮುದಾಯದ ತಪ್ಪುಗಳನ್ನು ಎತ್ತಿ ತೋರಿಸುವುದಿಲ್ಲ'' ಎಂದು ಅನಂತ್ಕುಮಾರ್ ಹೆಗಡೆ ಪತ್ರದಲ್ಲಿ ಬರೆದಿದ್ದಾರೆ.
ಪತ್ರದ ಹೊರತಾಗಿ ಕನ್ನಡದಲ್ಲಿ ಪೋಸ್ಟ್ ಸಹ ಮಾಡಿರುವ ಅನಂತ್ಕುಮಾರ್ ಹೆಗಡೆ, ''ಪರಿಸರವಾದಿ, ಪ್ರಾಣಿಪ್ರೇಮಿ ಆಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದುಗಳಿಗೆ ಪಟಾಕಿ ಸಿಡಿಸದಂತೆ ಮನವಿಮಾಡಿದ್ದಾರೆ. ಅವರು ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಮೆಚ್ಚುಗೆ
ಅದರಂತೆ ಅನ್ಯಧರ್ಮಗಳಲ್ಲಿ (ತಾನು ಪ್ರತಿಪಾದಿಸುವ ಧರ್ಮವನ್ನು ಹಿಡಿದು) ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ?'' ಎಂದು ಪ್ರಶ್ನಿಸಿದ್ದಾರೆ.
''ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಅಂದಹಾಗೆ ಈ ರೀತಿಯ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲ್ಲಕ ಕುತಂತ್ರವಲ್ಲದೆ ಮತ್ತೇನೂ ಆಗಿರುವುದಿಲ್ಲ. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ಅಭಿನೇತರರಿಗೇನು ಕಮ್ಮಿಯಿಲ್ಲ'' ಎಂದು ಟೀಕಿಸಿದ್ದಾರೆ.
''ಈ ಜಾಹಿರಾತನ್ನು ಅನಂತ ವರಧಾನ್ ಗೋಯೆಂಕ ಮಾಲೀಕತ್ವದ ಸಿಯೆಟ್ ಸಂಸ್ಥೆಯು ಪ್ರಸ್ತುತ ಪಡೆಸಿದ್ದು, ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿ ಆಗ್ರಹ'' ಎಂದಿದ್ದಾರೆ ಅನಂತ್ಕುಮಾರ್ ಹೆಗಡೆ.
ನಟ ಅಮೀರ್ ಖಾನ್ರ ಸಿನಿಮಾ, ಜಾಹೀರಾತು ಏನನ್ನೇ ಆಗಲಿ ಹಿಂದು ವಿರೋಧಿ ಎನ್ನುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. 'ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ದೇಶಬಿಟ್ಟು ಹೋಗೋಣವೆಂದು ಪತ್ನಿ ಕಿರಣ್ ರಾವ್ ಸಲಹೆ ನೀಡಿದ್ದರು' ಎಂದು ಒಮ್ಮೆ ಅಮೀರ್ ಖಾನ್ ಹೇಳಿದ್ದರು. ಆ ನಂತರ 'ಪಿಕೆ' ಹೆಸರಿನ ಸಿನಿಮಾದಲ್ಲಿ ಮೂರು ಪ್ರಮುಖ ಧರ್ಮಗಳನ್ನು, ದೇವರುಗಳನ್ನು, ಭಕ್ತಿ ವ್ಯವಸ್ಥೆಯನ್ನು ವಿಮರ್ಶೆಗೆ ಒಳಪಡಿಸಿದ್ದರು ಹಾಗಾಗಿ ಅಮೀರ್ ಖಾನ್ ಅನ್ನು ಹಿಂದು ವಿರೋಧಿಯೆಂದು, ದೇಶದ್ರೋಹಿ ಎಂದು ಒಂದು ಬಣದ ಮಂದಿ ಕರೆಯುತ್ತಾ ಬಂದಿದ್ದಾರೆ.


Click it and Unblock the Notifications










