ಪದಕ ಗೆದ್ದರೆ ಮಾತ್ರ ಈಶಾನ್ಯ ಭಾರತದವರು ಭಾರತೀಯರಾಗುತ್ತಾರೆ: ನಟ ಮಿಲಿಂದ್ ಪತ್ನಿ ಅಂಕಿತಾ
ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ, ಫಿಟ್ನೆಸ್ ಉತ್ಸಾಹಿ ಅಂಕಿತಾ ಕೊನ್ವಾರ್ ಈಶಾನ್ಯ ಭಾರತೀಯರ ಬಗ್ಗೆ ಮಾಡಿರುವ ಟ್ವೀಟ್ ಈಗ ಚರ್ಚೆಗೆ ಕಾರಣವಾಗಿದೆ. ಅಸ್ಸಾಂ ಮೂಲದ ಅಂಕಿತಾ ಈಶಾನ್ಯ ಭಾರತದವರು ಭಾರತಕ್ಕೆ ಮೆಡಲ್ ತಂದಾಗ ಮಾತ್ರ ಭಾರತೀಯರಾಗುತ್ತಾರೆ, ಎಲ್ಲರೂ ಸಂಭ್ರಮಿಸುತ್ತೀರಿ. ಆದರೆ ಉಳಿದ ಸಮಯದಲ್ಲಿ ವರ್ಣಭೇದ ಮತ್ತು ಕಿರುಕುಳಕ್ಕೆ ಒಳಪಾಡಿಸುತ್ತೀರಿ. ಅಲ್ಲದೆ ಬೇರೆ ದೇಶಕ್ಕೆ ಹೋಗುವಂತೆ ಸೂಚಿಸುತ್ತೀರಿ ಎಂದು ಅಂಕಿತಾ ಅಸಮಾಧಾನ ಹೊರಹಾಕಿದ್ದಾರೆ.
ಅಂಕಿತಾ ಈ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟೋಕಿಯೊ ಒಲಂಪಿಕ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಮಿರಾಬಾಯಿ ಚಾನುಗೆ ದೇಶದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಜಕಾರಣಿಗಳು, ಗಣ್ಯರು ಸೇರಿದಂತೆ ಪ್ರತಿಯೊಬ್ಬರು ಮೀರಾಬಾಯಿ ಸಾಧನೆಯನ್ನು ಶ್ಲಾಘಿಸುತ್ತಿದ್ದಾರೆ. ಇಡೀ ದೇಶವೇ ಮೀರಾಬಾಯಿ ಗೆಲುವಿನ ಸಂಭ್ರಮದಲ್ಲಿದೆ.
ಈ ಸಮಯದಲ್ಲಿ ಮಿಲಿಂದ್ ಪತ್ನಿ ಅಂಕಿತಾ, ಗೆಲುವು, ಸಂಭ್ರಮ ಮತ್ತು ವರ್ಣಭೇದ ನೀತಿ ಬಗ್ಗೆ ಮಾಡಿರುವ ಟ್ವೀಟ್ ಅಚ್ಚರಿ ಮೂಡಿಸಿದೆ. ಮೀರಾಬಾಯಿ ಗೆಲುವನ್ನು ಸಂಭ್ರಮಿಸುತ್ತಿರುವ ಭಾರತೀಯರಿಗೆ ಅಂಕಿತಾ, "ದೇಶಕ್ಕಾಗಿ ಮೆಡಲ್ ತಂದು ಕೊಟ್ಟರೆ ಮಾತ್ರ ಈಶಾನ್ಯ ಭಾರತದವರು ಭಾರತೀಯರಾಗುತ್ತಾರೆ. ಇಲ್ಲದಿದ್ದರೆ ನಮ್ಮನ್ನು ಚಿಂಕಿ, ಚೈನೀಸ್, ನೇಪಾಳಿ ಇದೀಗ ಹೊಸ ಸೇರ್ಪಡೆ ಕೊರೊನಾ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕೇವಲ ಜಾತಿ ಮಾತ್ರವಲ್ಲ ವರ್ಣಭೇತಿ ನೀತಿ ಕೂಡ ಇದೆ. ನನ್ನ ಅನುಭವದಿಂದ ಮಾತನಾಡುತ್ತಿದ್ದೀನಿ" ಎಂದು ಟ್ವೀಟ್ ಮಾಡಿದ್ದಾರೆ.

ದೇಶಕ್ಕಾಗಿ ಪದಕ ಗೆದ್ದ ಈಶಾನ್ಯ ಭಾರತದ ಮೀರಾಬಾಯಿಗೆ ಸಿಗುತ್ತಿರುವ ಬೆಂಬಲ, ಗೌರವ ಈಶಾನ್ಯ ಭಾರತದ ಎಲ್ಲಾ ಜನರಿಗೂ ಸಿಗಬೇಕು ಎನ್ನುವ ಅಭಿಪ್ರಾಯವನ್ನು ಅಂಕಿತಾ ವ್ಯಕ್ತಪಡಿಸಿದ್ದಾರೆ. ಅಂಕಿತಾ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ನೆಟ್ಟಿಗರು ಕಾಮೆಂಟ್ ನಲ್ಲಿ ಮಿಲಿಂದ್ ಪತ್ನಿ ಎಂದು ಉಲ್ಲೇಖ ಮಾಡಿ ಟ್ವೀಟ್ ಮಾಡುವರಿಗೆ ಅಂಕಿತಾ "ನಾನು ಅಂಕಿತಾ ಕೊನ್ವಾರ್" ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ವರ್ಣಭೇದ ಮತ್ತು ಜಾತಿ ಸಮಸ್ಯೆ ಎದುರಿಸಿದ ಈಶಾನ್ಯ ಭಾರತದ ಅನೇಕರು ಕಾಮೆಂಟ್ ಮಾಡಿ ತಮಗೂ ಇಂಥ ಅನುಭವವಾಗಿದೆ ಎಂದು ಹೇಳುತ್ತಿದ್ದಾರೆ.


Click it and Unblock the Notifications











