ಬಾಯ್ಕಾಟ್ ಟ್ರೆಂಡ್ ಅತಿಯಾಯ್ತು, ಇದನ್ನು ಮೊದಲೇ ಹೊಸಕಬೇಕಿತ್ತು: ಅರ್ಜುನ್ ಕಪೂರ್
ಬಾಲಿವುಡ್ಗೆ ಇದು ಅತೀವ ಕಷ್ಟದ ಸಮಯ. ಹಿಂದಿಯ ಸಿನಿಮಾಗಳು ಒಂದರ ಹಿಂದೊಂದು ಸೋಲುತ್ತಿದೆ. ಇದೇ ಸಮಯದಲ್ಲಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಮೊದಲೇ ತಮ್ಮ ಸಿನಿಮಾಗಳು ಓಡುತ್ತಿಲ್ಲವೆಂದು ಒತ್ತಡದಲ್ಲಿರುವ ಬಾಲಿವುಡ್ಡಿಗರಿಗೆ 'ಬಾಯ್ಕಾಟ್ ಟ್ರೆಂಡ್' ಗಾಯದ ಮೇಲೆ ಉಪ್ಪು ಸವರುತ್ತಿದೆ. ಬಾಲಿವುಡ್ನ ಬಹುತೇಕ ಸಿನಿಮಾಗಳಿಗೆ ಬಾಯ್ಕಾಟ್ ಟ್ರೆಂಡ್ ಕಾಟ ಕೊಡುತ್ತಿದೆ.
ಅದರಲ್ಲಿಯೂ ದೊಡ್ಡ ನಟರ ಸಿನಿಮಾಗಳು ಬಿಡುಗಡೆ ಆಗಲು ಬಂದರೆ ಬಾಯ್ಕಾಟ್ ಟ್ರೆಂಡ್ ಪ್ರಾರಂಭವಾಗುತ್ತಿದೆ. ಇತ್ತೀಚೆಗೆ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಹಾಗೂ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಿನಿಮಾಗಳಿಗೆ ಬಾಯ್ಕಾಟ್ ಟ್ರೆಂಡ್ ಆಗಿತ್ತು. ಅದರ ಫಲಿತವೆಂಬಂತೆ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧಾರುಣ ಸೋಲು ಕಂಡವು.

ಅದಾದ ಬಳಿಕ ಈಗ ಶಾರುಖ್ ಖಾನ್ ಸಿನಿಮಾಕ್ಕೆ, ಹೃತಿಕ್ ರೋಷನ್, ಫರ್ಹಾನ್ ಅಖ್ತರ್ ಸಿನಿಮಾಗಳಿಗೆ ಬಾಯ್ಕಾಟ್ ಟ್ರೆಂಡ್ ಆಗುತ್ತಿದೆ. ಈ ಬಗ್ಗೆ ಬಾಲಿವುಡ್ಡಿಗರು ತಲೆ ಕೆಡಿಸಿಕೊಳ್ಳುವಂತಾಗಿದೆ. ಈ ಮೊದಲೂ ಸಹ ಕೇವಲ ಆಮಿರ್ ಖಾನ್, ಶಾರುಖ್ ಖಾನ್ ನಟನೆಯ ಸಿನಿಮಾಗಳಿಗಷ್ಟೆ ಬಾಯ್ಕಾಟ್ ಟ್ರೆಂಡ್ ಆಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲ ನಟರ ಸಿನಿಮಾಗಳಿಗೂ ಬಾಯ್ಕಾಟ್ ಟ್ರೆಂಡ್ ಆಗಲು ಆರಂಭವಾಗಿದೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಿವುಡ್ ನಟ ಅರ್ಜುನ್ ಕಪೂರ್, ''ನಾವು (ಬಾಲಿವುಡ್ನ ಜನ) ತಪ್ಪು ಮಾಡಿದೆವು ಅನಿಸುತ್ತದೆ. ಬಾಯ್ಕಾಟ್ ಟ್ರೆಂಡ್ ಬಗ್ಗೆ ನಾವು ಆರಂಭದಲ್ಲಿಯೇ ಮಾತನಾಡಬೇಕಿತ್ತು. ಆಗ ಸೈಲೆಂಟ್ ಆಗಿ ಇದ್ದೆವು. ಈಗದು ಹೆಚ್ಚಾಗಿ ಬಿಟ್ಟಿದೆ'' ಎಂದಿದ್ದಾರೆ.
''ನಾವು ಬಾಯ್ಕಾಟ್ ಟ್ರೆಂಡ್ ಬಗ್ಗೆ ಮಾತನಾಡದೇ ಇದ್ದಿದ್ದು ನಮ್ಮ ಘನತೆ ತೋರಿಸುತ್ತದೆ. ಆದರೆ ಆದರೆ ಜನ ಅದನ್ನು ಅಡ್ವಾಂಟೇಜ್ ಆಗಿ ತಗೊಂಡರು. ನಮ್ಮ ಕೆಲಸವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದುಕೊಂಡು ನಾವು ತಪ್ಪು ಮಾಡಿದೆವು ಎನಿಸುತ್ತದೆ. ನಾವು ಸಾಕಷ್ಟು ಸಮಯದಿಂದ ಇದನ್ನು ಸಹಿಸಿಕೊಳ್ಳುತ್ತಿದ್ದೇವೆ. ಈಗ ಜನ ಅದನ್ನೇ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ'' ಎಂದಿದ್ದಾರೆ ಅರ್ಜುನ್ ಕಪೂರ್.
''ನಮ್ಮ ಉದ್ಯಮದ ಪ್ರಮುಖರು ಒಟ್ಟಾಗಿ ಬರಬೇಕು. ಏನಾದರೂ ಮಾಡಬೇಕು, ಏಕೆಂದರೆ ಉದ್ಯಮದ ಪ್ರಮುಖರ ಬಗ್ಗೆ ಜನ ಬರೆಯುತ್ತಿರುವುದು ಅಥವಾ ಟ್ರೆಂಡ್ ಆಗುತ್ತಿರುವುದು ಸತ್ಯಕ್ಕೆ ಬಹಳ ದೂರವಾಗಿದೆ. ಯಾವುದೇ ಸಿನಿಮಾ ಯಶಸ್ವಿಯಾದಾಗ ಅವರ ಕುಟುಂಬದ ಹೆಸರಿನಿಂದ ಅದು ಹಿಟ್ ಆಗುವುದಿಲ್ಲ. ಕಂಟೆಂಟ್ ಕಾರಣಕ್ಕೆ ಹಿಟ್ ಆಗುತ್ತದೆ'' ಎಂದಿದ್ದಾರೆ.
''ಎಂಥಹಾ ಹೊಸ ಗಾಡಿಯ ಮೇಲೂ ಪದೇ ಪದೇ ಕೊಳಚೆ ಹಾಕುತ್ತಾ ಹೋದರೆ ಅದು ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹಾಗೆಯೇ ಬಾಲಿವುಡ್ ಮೇಲೆ ಸತತವಾಗಿ ಕೊಳಚೆ ಚೆಲ್ಲಲಾಗಿದೆ ಹಾಗಾಗಿಯೇ ಅದು ತನ್ನ ಹೊಳಪು ಕಳೆದುಕೊಂಡಿದೆ'' ಎಂದಿದ್ದಾರೆ ಅರ್ಜುನ್ ಕಪೂರ್.


Click it and Unblock the Notifications










