ದೆಹಲಿ ಸಿಎಂ ಕೇಜ್ರಿವಾಲ್ ಜೊತೆ ಸೋನು ಸೂದ್ ಸುದ್ದಿಗೋಷ್ಠಿ
ಕೋವಿಡ್ ಕಾಲದಲ್ಲಿ ತಮ್ಮ ಸಮಾಜ ಸೇವೆಯಿಂದ ದೇಶದ ಜನರ ಮನ ಗೆದ್ದಿರುವ ನಟ ಸೋನು ಸೂದ್ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದಾರೆ. ಕೇಜ್ರಿವಾಲ್ರನ್ನು ಭೇಟಿಯಾಗಿದ್ದಾರೆ ಎಂದೊಡನೆ ಸೋನು ಸೋದ್ ಎಎಪಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರು ಭೇಟಿಯಾಗಿರುವುದು ಒಂದೊಳ್ಳೆ ಉದ್ದೇಶಕ್ಕೆ.
ದೆಹಲಿ ಸರ್ಕಾರವು ಸರ್ಕಾರಿ ಶಾಲೆಗಳನ್ನು ಅದ್ಭುತವಾಗಿ ಅಭಿವೃದ್ಧಿ ಪಡಿಸಿರುವುದನ್ನು ದೇಶವೇ ಗುರುತಿಸಿದೆ. ಭ್ರಷ್ಟಾಚಾರ ನಿಯಂತ್ರಣ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದಾಗಿಯೇ ಅರವಿಂದ ಕೇಜ್ರಿವಾಲ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ.
ಕಳೆದ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಸರ್ಕಾರಿ ಶಾಲೆಗಳನ್ನು ಇಂಟರ್ನ್ಯಾಷನಲ್ ಶಾಲೆಗಳಂತೆ ಮಾಡಿರುವ ಕೇಜ್ರಿವಾಲ್ ಸರ್ಕಾರ ಈ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಕಾರ್ಯಕ್ರಮಗಳ ರಾಯಭಾರಿಯಾಗಿ ಸೋನು ಸೂದ್ ಕಾಣಿಸಿಕೊಳ್ಳಲಿದ್ದಾರೆ. ಇದೇ ಕಾರಣಕ್ಕೆ ಕೇಜ್ರಿವಾಲ್ ಹಾಗೂ ಸೋನು ಸೂದ್ ಪರಸ್ಪರ ಭೇಟಿಯಾಗಿದ್ದಾರೆ.

ಕೇಜ್ರಿವಾಲ್ ಹೇಳಿದ್ದು ಹೀಗೆ
ದೆಹಲಿಯಲ್ಲಿ ಇಂದು ಸೋನು ಸೂದ್ ಮತ್ತು ಕೇಜ್ರಿವಾಲ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, ''ದೆಹಲಿ ಸರ್ಕಾರದ ಹೊಸ ಕಾರ್ಯಕ್ರಮ 'ದೇಶ್ ಕಿ ಮೆಂಟಾರ್'ನ ರಾಯಭಾರಿಯಾಗಿ ಸೋನು ಸೂದ್ ಇರಲಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಅವರು ಸೂಕ್ತ ವ್ಯಕ್ತಿ'' ಎಂದಿದ್ದಾರೆ.

ಮಕ್ಕಳಿಗೆ ಮಾರ್ಗದರ್ಶನ ಬಹಳ ಮುಖ್ಯ: ಸೋನು ಸೂದ್
ಇದೇ ಸಮಯದಲ್ಲಿ ಮಾತನಾಡಿದ ಸೋನು ಸೂದ್, ''ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾದರಿ ಆಗುವಂತಹಾ ಈ ಅವಕಾಶ ಬಹಳ ಮಹತ್ವದ್ದು. ಲಾಕ್ಡೌನ್ ಆರಂಭವಾದಾಗ ನಾವು ಹಲವರನ್ನು ಅವರ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದೆವು ಆ ನಂತರ ನಮಗೆ ಗೊತ್ತಾಯಿತು ಶಿಕ್ಷಣದ ಸಮಸ್ಯೆ ಬಹಳ ದೊಡ್ಡದಾಗಿ ಕಾಡಲಿದೆ ಎಂದು. ಆಗಲೇ ನಾವು ಶಿಕ್ಷಣದ ಬಗ್ಗೆಯೂ ಗಮನ ಹರಿಸಲು ಪ್ರಾರಂಭ ಮಾಡಿದೆವು. ಮಕ್ಕಳಿಗೆ ಓದುವುದು ಗೊತ್ತು ಆದರೆ ಮುಂದಿನ ಗುರಿ ಸ್ಪಷ್ಟವಿರುವುದಿಲ್ಲ. ಅವರಿಗೆ ಮಾರ್ಗದರ್ಶನದ ಅಗತ್ಯ ಬಹಳ ಇರುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವುದಷ್ಟೆ ಅಲ್ಲ ಮಾರ್ಗದರ್ಶನ ನೀಡುವುದು ಸಹ ಬಹಳ ಅವಶ್ಯಕ'' ಎಂದಿದ್ದಾರೆ ಸೋನು ಸೂದ್.

ರಾಜಕೀಯ ಆಫರ್ ಬರುತ್ತಲೇ ಇರುತ್ತವೆ: ಸೋನು
ರಾಜಕೀಯ ಸೇರುತ್ತೀರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನು ಸೂದ್, ''ನನಗೆ ಈ ಪ್ರಶ್ನೆ ಪ್ರತಿನಿತ್ಯ ಎದುರಾಗುತ್ತದೆ. ಒಳ್ಳೆಯ ಸಮಾಜ ಸೇವೆ ಮಾಡುತ್ತಿದ್ದೀರಿ ರಾಜಕೀಯ ಸೇರಿಕೊಳ್ಳಿ ಎಂದು. ಆದರೆ ನನಗೆ ಅದು ಇಷ್ಟವಿಲ್ಲ. ಒಳ್ಳೆಯ ಕೆಲಸ ಮಾಡಲು ರಾಜಕಾರಣಿಯೇ ಆಗಬೇಕು ಎಂದೇನೂ ಇಲ್ಲ. ಸಾಕಷ್ಟು ಆಫರ್ಗಳು ಸಹ ನನಗೆ ಬರುತ್ತಿರುತ್ತವೆ ಆದರೆ ಆ ಬಗ್ಗೆ ನಾನು ಯೋಚನೆ ಮಾಡಿಲ್ಲ. ಈಗಲೂ ಅಷ್ಟೆ ಕೇಜ್ರಿವಾಲ್ ಅವರ ಜೊತೆಗೆ ನಾನು ರಾಜಕೀಯ ಮಾತನಾಡಿಲ್ಲ'' ಎಂದಿದ್ದಾರೆ.

ಮೇಯರ್ ಸ್ಥಾನಕ್ಕೆ ಸೋನು ಸೂದ್ ಹೆಸರು
ಮುಂಬೈ ಮೇಯರ್ ಹುದ್ದೆಗೆ ಮೂವರು ಖ್ಯಾತ ನಟರ ಹೆಸರನ್ನು ಕಾಂಗ್ರೆಸ್ ಶಿಫಾರಸು ಮಾಡಿದೆ. ಅದರಲ್ಲಿ ಸೋನು ಸೂದ್ ಹೆಸರು ಸಹ ಒಂದು. ಮುಂಬೈ ಕಾಂಗ್ರೆಸ್ ಘಟಕದ ಕಾರ್ಯತಂತ್ರ ಸಮಿತಿಯು ಬಿಎಂಸಿ ಚುನಾವಣೆಗೆ ವರದಿಯನ್ನು ಸಿದ್ಧಪಡಿಸಿದ್ದು ಉನ್ನತ ನಾಯಕರ ಜೊತೆ ಚರ್ಚೆಗೆ ಕಳುಹಿಸಿದೆ. ಕಾರ್ಯತಂತ್ರ ಸಮಿತಿಯು 25 ಪುಟಗಳ ಕಾರ್ಯತಂತ್ರ ರಚಿಸಿದ್ದು, ಬಾಲಿವುಡ್ ನಟರಾದ ಸೋನು ಸೂದ್, ರಿತೇಶ್ ದೇಶಮುಖ್ ಮತ್ತು ಫಿಟ್ನೆಸ್ ಉತ್ಸಾಹಿ, ಮಾಡೆಲ್ ಮಿಲಿಂದ ಸೋಮನ್ ಹೆಸರನ್ನು ಮುಂಬೈ ಮೇಯರ್ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳಾಗಿ ಶಿಫಾರಸು ಮಾಡಿದೆ. ತನ್ನ ಕಮಿಟಿಯೂ ತನ್ನ ವರದಿಯಲ್ಲಿ, ಮೇಯರ್ ಅಭ್ಯರ್ಥಿಗಳು ಪ್ರಮುಖವಾಗಿ ಯುವಕರನ್ನು ಆಕರ್ಷಣೆ ಮಾಡಬೇಕು ಮತ್ತು ಸಾರ್ವಜನಿಕರು ತನ್ನ ಕಡೆ ಸೆಳೆಯುವಂತಿರಬೇಕು ಎಂದು ಹೇಳಿದೆ.


Click it and Unblock the Notifications











