ಆರ್ಯನ್ ಖಾನ್ ಬಂಧನದ ಹಿಂದೆ ಬಿಜೆಪಿ ಸಂಚು: ಎನ್ಸಿಪಿ ಆರೋಪ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರ್ಯನ್ ಖಾನ್ ಬಂಧನದ ಹಿಂದೆ ರಾಜಕೀಯ ಷಡ್ಯಂತ್ಯ ಅಡಗಿದೆ ಎಂದಯ ಆರೋಪ ಮಾಡಲಾಗುತ್ತಿದೆ.
ಇಂದು ಸುದ್ದಿಗೋಷ್ಠಿ ನಡೆಸಿದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಆರ್ಯನ್ ಖಾನ್ ಬಂಧನದ ಬಗ್ಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಆರ್ಯನ್ ಅನ್ನು ಬಂಧಿಸಿರುವ ಎನ್ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೊ) ರಾಜಕೀಯ ಪ್ರಭಾವಕ್ಕೆ ಸಿಲುಕಿ ಆರ್ಯನ್ ಅನ್ನು ಬಂಧಿಸಿದೆ ಎಂದು ಆರೋಪಿಸಿದೆ.
ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ದಿನ (ಅಕ್ಟೋಬರ್ 02) ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಆರ್ಯನ್ ಖಾನ್ ಚೇರ್ ಮೇಲೆ ಕುಳಿತಿರುವಾಗ ಅವರೊಟ್ಟಿಗೆ ವ್ಯಕ್ತಿಯೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಆರ್ಯನ್ ಎನ್ಸಿಬಿ ಕಚೇರಿಯಲ್ಲಿದ್ದಾಗ ತೆಗೆಸಿಕೊಂಡ ಚಿತ್ರ ಅದಾಗಿತ್ತು ಎನ್ನಲಾಗಿತ್ತು. ಎನ್ಸಿಬಿ ಸಿಬ್ಬಂದಿಯೇ ಆರ್ಯನ್ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಸುದ್ದಿ ಹರಿದಾಡಿತು. ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ಪಡೆದ ಎಂಟು ಮಂದಿಯನ್ನು ಎನ್ಸಿಬಿ ಸಿಬ್ಬಂದಿ ಕೈಹಿಡಿದುಕೊಂಡು ಎನ್ಸಿಬಿ ಕಚೇರಿ ಒಳಕ್ಕೆ ಕರೆತರುತ್ತಿರುವ ವಿಡಿಯೋಗಳು ಸಹ ಅಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಆರ್ಯನ್ ಖಾನ್ ಜೊತೆಗೆ ಸೆಲ್ಫಿ ತೆಗೆಸಿಕೊಂಡಿರುವ ವ್ಯಕ್ತಿ ನಮ್ಮ ಸಿಬ್ಬಂದಿಯಲ್ಲ ಎಂದು ಎನ್ಸಿಬಿ ಹೇಳಿಕೆ ಬಿಡುಗಡೆ ಮಾಡಿತ್ತು. ಹಾಗಿದ್ದರೆ ಸೆಲ್ಫಿ ತೆಗೆದುಕೊಂಡಿರುವ ವ್ಯಕ್ತಿ ಯಾರು ಎಂದು ಎನ್ಸಿಪಿ ಪ್ರಶ್ನೆ ಮಾಡಿದೆ.
ಅಲ್ಲದೆ, ಅಂದು ವೈರಲ್ ಆಗಿದ್ದ ವಿಡಿಯೋದಲ್ಲಿ ಮತ್ತೊಬ್ಬ ಆರೋಪಿ ಅರ್ಬಾಜ್ ಸೇಠ್ ಕೈಹಿಡಿದು ಎನ್ಸಿಬಿ ಕಚೇರಿ ಒಳಕ್ಕೆ ಕರೆದುಕೊಂಡು ಬರುತ್ತಿರುವ ವ್ಯಕ್ತಿ ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿ ಎಂದು ಎನ್ಸಿಪಿ ಆರೋಪ ಮಾಡಿದೆ. ಅರ್ಬಾಜ್ ಸೇಠ್ ಅನ್ನು ಕರೆದು ತರುತ್ತಿರುವ ವ್ಯಕ್ತಿಯ ಹೆಸರು ಮನೀಷ್ ಭಾನುಶಾಲಿ ಎಂದಾಗಿದ್ದು, ಆತ ಬಿಜೆಪಿಯ ವಿಭಾಗವೊಂದರ ಅಧ್ಯಕ್ಷನಾಗಿದ್ದು, ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಹಲವು ರಾಜಕೀಯ ಮುಖಂಡರೊಂದಿಗೆ ಅವರ ಚಿತ್ರಗಳಿವೆ. ಎನ್ಸಿಬಿಗೂ ಬಿಜೆಪಿ ಮುಖಂಡನಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದೆ.
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಎನ್ಸಿಬಿಯು, ರಾಜಕೀಯ ಪಕ್ಷ ಎನ್ಸಿಪಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು, ಎನ್ಸಿಬಿಯು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಮದಿಲ್ಲ, ಯಾವುದೇ ಒತ್ತಡಕ್ಕೆ ಸಿಲುಕಿ ಕೆಲಸ ಮಾಡುತ್ತಿಲ್ಲ. ಈ ಹಿಂದೆಯೂ ರಾಜಕೀಯ ಒತ್ತಡಕ್ಕೆ ಸಿಲುಕಿ ಕೆಲಸ ಮಾಡಿಲ್ಲ ಎಂದಿದೆ.


Click it and Unblock the Notifications











