ಆರ್ಯನ್ ಖಾನ್ ವರ್ಷಗಳಿಂದ ಡ್ರಗ್ಸ್ ಸೇವಿಸುತ್ತಿದ್ದಾನೆ: ಎನ್ಸಿಬಿ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಡೆದಿದ್ದು, ಇಂದು ಸಹ ಆರ್ಯನ್ ಖಾನ್ಗೆ ಜಾಮೀನು ದೊರೆತಿಲ್ಲ. ಬದಲಿಗೆ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಲಾಗಿದೆ.
ಇಂದು ವಿಚಾರಣೆ ವೇಳೆ ವಾದ ಮಂಡಿಸಿದ ಎನ್ಸಿಬಿ ಪರ ವಕೀಲ ಅನಿಲ್ ಸಿಂಗ್, ''ಆರ್ಯನ್ ಖಾನ್ ಬಹಳ ವರ್ಷಗಳಿಂದಲೂ ಡ್ರಗ್ಸ್ ಖರೀದಿ ಮತ್ತು ಸೇವನೆ ಮಾಡುತ್ತಿದ್ದಾನೆ ಎಂಬುದು ವಾಟ್ಸ್ಆಪ್ ಚಾಟ್ನಿಂದ ಬಹಿರಂಗವಾಗಿದೆ'' ಎಂದು ಹೇಳಿ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ನೀಡಿದರು.
''ಆರ್ಯನ್ ಖಾನ್ ಹಲವು ವರ್ಷಗಳಿಂದ ಡ್ರಗ್ಸ್ ಸೇವಿಸುತ್ತಿದ್ದು, ಆರ್ಯನ್ ಖಾನ್ಗೆ ಡ್ರಗ್ಸ್ ಪೆಡ್ಲರ್ಗಳ ಪರಿಚಯ ಇದೆ. ವಿಚಾರಣೆಯಲ್ಲಿ ಸ್ವತಃ ಆರ್ಯನ್ ಖಾನ್ ಈ ವಿಷಯ ಒಪ್ಪಿಕೊಂಡಿದ್ದಾರೆ. ಅರ್ಬಾಜ್ ಸೇಠ್ ಮರ್ಚೆಂಟ್ ಬಳಿ ಚರಸ್ ಇದ್ದು ಅದನ್ನು ನಾವು ಕ್ರೂಸ್ನಲ್ಲಿ ಸೇವಿಸಲಿದ್ದೆವು ಎಂದು ಸಹ ಆರ್ಯನ್ ವಿಚಾರಣೆ ವೇಳೆ ಹೇಳಿದ್ದಾರೆ'' ಎಂದು ಎನ್ಸಿಬಿ ಪರ ವಕೀಲರು ಹೇಳಿದರು.

''ಆರ್ಯನ್ ಖಾನ್ ಮತ್ತು ಅರ್ಬಾಜ್ ಸೇಠ್ ಇಬ್ಬರೂ ಡ್ರಗ್ಸ್ ಸೇವಿಸುತ್ತಿದ್ದು, ಅವರಿಗೆ ಡ್ರಗ್ ಪೆಡ್ಲರ್ಗಳಾದ ಅಚಿತ್ ಕುಮಾರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೆ ವಿದೇಶಿ ಪ್ರಜೆಗಳೊಂದಿಗೂ ಸಂಪರ್ಕದಲ್ಲಿದ್ದು, ಅಲ್ಲಿಂದ ದೊಡ್ಡ ಮೊತ್ತದ ಮಾದಕ ವಸ್ತುಗಳನ್ನು ತರಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗಾಗಿ ಎನ್ಸಿಬಿಯು ಈ ಪ್ರಕರಣದ ತನಿಖೆ ನಡೆಸಲು ವಿದೇಶಾಂಗ ಸಚಿವಾಲಯದ ಸಹಕಾರ ಕೋರಿದ್ದು, ದೆಹಲಿಯ ನಮ್ಮ ಮುಖ್ಯ ಕಾರ್ಯಾಲಯಕ್ಕೂ ಅರ್ಜಿ ಸಲ್ಲಿಸಿದ್ದೇವೆ'' ಎಂದು ವಾದಿಸಿದರು ಅನಿಲ್ ಸಿಂಗ್.
''ವ್ಯಕ್ತಿಯೊಬ್ಬನ ಬಳಿ ಡ್ರಗ್ಸ್ ದೊರೆತಿಲ್ಲ ಆದರೆ ಆತನ ಗೆಳೆಯನ ಬಳಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ದೊರೆತಿದೆ ಎಂದರೆ ವ್ಯಕ್ತಿಯನ್ನು ಬಂಧಿಸಲು ಇಷ್ಟು ಸಾಕಾಗುತ್ತದೆ. ಈ ಪ್ರಕರಣದಲ್ಲಿ ಆರ್ಯನ್ ಬಳಿ ಡ್ರಗ್ಸ್ ಇರಲಿಲ್ಲ ಆದರೆ ಆತನ ಗೆಳೆಯ ಅರ್ಬಾಜ್ ಬಳಿ ಡ್ರಗ್ಸ್ ದೊರೆತಿದೆ. ವಾಟ್ಸ್ಆಪ್ ಚಾಟ್ನಿಂದ ಇಬ್ಬರೂ ಒಟ್ಟಿಗೆ ಪರಸ್ಪರರನ್ನು ಸಂಪರ್ಕ ಮಾಡಿಕೊಂಡೆ ಪಾರ್ಟಿಗೆ ಬಂದಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಬಂಧಿತರಿಗೆ ಜಾಮೀನು ನೀಡಬಾರದು'' ಎಂದು ಎನ್ಸಿಬಿ ಪರ ವಕೀಲರು ಮನವಿ ಮಾಡಿದರು.
ಆರ್ಯನ್ ಖಾನ್ ಪರ ವಾದ ಮಂಡಿಸಿದ ಅಮಿತ್ ದೇಸಾಯಿ, ''ಆರ್ಯನ್ ಬಳಿ ಡ್ರಗ್ಸ್ ಖರೀದಿಗೆ ಹಣ ಇರಲಿಲ್ಲ. ಆತನ ಬ್ಯಾಂಕ್ ದಾಖಲೆ ಪರಿಶೀಲಿಸಬಹುದು. ಆರ್ಯನ್ ಬಳಿ ಡ್ರಗ್ಸ್ ಸಹ ದೊರೆತಿಲ್ಲ. ಅಲ್ಲದೆ ಎನ್ಸಿಬಿ ಕ್ರೂಸ್ ಶಿಪ್ ಮೇಲೆ ದಾಳಿ ನಡೆಸಿದಾಗ ಕ್ರೂಸ್ ಶಿಪ್ನಲ್ಲಿ ಆರ್ಯನ್ ಖಾನ್ ಇರಲಿಲ್ಲ'' ಎಂದರು.
''ಈಗಿನ ಜನರೇಷನ್ನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಭಿನ್ನ ರೀತಿಯಲ್ಲಿ ಕಮ್ಯುನಿಕೇಷನ್ ಮಾಡುತ್ತಾರೆ. ಇಂಗ್ಲೆಂಡ್ ಇಂಗ್ಲೀಷ್ ಅಲ್ಲ ಬದಲಿಗೆ ಏನೇನೋ ಸಂಜ್ಞೆಗಳನ್ನು, ಇಮೋಜಿಗಳನ್ನು, ಅಲ್ಫಾಬೆಟ್ಗಳನ್ನು ಬಳಸುತ್ತಾರೆ. ಅವಕ್ಕೆಲ್ಲ ನಿಮ್ಮದೇ ಆದ ಅರ್ಥ ಕಲ್ಪಿಸಿಕೊಂಡು ಅದು ಡ್ರಗ್ಸ್ ಬಗ್ಗೆ ಮಾಡಿರುವ ಚರ್ಚೆ ಎನ್ನಲು ಸಾಧ್ಯವಿಲ್ಲ'' ಎಂದು ಎನ್ಸಿಬಿ ನೀಡಿದ ವಾಟ್ಸ್ಆಪ್ ಚಾಟ್ ಸಾಕ್ಷ್ಯಕ್ಕೆ ತಕರಾರು ಸಲ್ಲಿಸಿದರು ವಕೀಲ ಅಮಿತ್ ದೇಸಾಯಿ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿತು.
ಅಕ್ಟೋಬರ್ 02 ರಂದು ಮುಂಬೈನ ಕ್ರೂಸ್ ಶಿಪ್ ಒಂದರಲ್ಲಿ ಆಯೋಜಿಸಿದ್ದ ಪಾರ್ಟಿಗೆ ಅತಿಥಿಯಾಗಿ ಆರ್ಯನ್ ಖಾನ್ ಹಾಜರಾಗಿದ್ದರು ಆಗ ಎನ್ಸಿಬಿಯು ಶಿಪ್ ಮೇಲೆ ರೇಡ್ ಮಾಡಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆಯಿತು. ದಾಳಿ ವೇಳೆ ಆರ್ಯನ್ ಖಾನ್ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಬಳಿ ಡ್ರಗ್ಸ್ ಸಹ ಪತ್ತೆಯಾಗಿತ್ತು. ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಮತ್ತು ಮುನ್-ಮುನ್ ಧಮೇಚಾ ಅವರುಗಳನ್ನು ಎನ್ಸಿಬಿ ಬಂಧಿಸಿತು.
ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ಸಿಬಿ ಕಾರ್ಯಾಚರಣೆ ಬಗ್ಗೆಯೂ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಎನ್ಸಿಬಿ ದಾಳಿಯಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಮುಖ್ಯವಾಗಿ ಬಿಜೆಪಿ ಮುಖಂಡರೊಬ್ಬರು ಪಾಲ್ಗೊಂಡಿದ್ದು ಖಾತ್ರಿಯಾಗಿದೆ. ಅಲ್ಲದೆ, ಸಾವಿರಾರು ಮಂದಿ ಭಾಗವಹಿಸಿದ್ದ ಪಾರ್ಟಿಯಲ್ಲಿ ಕೇವಲ ಮೂವರನ್ನು ಮಾತ್ರವೇ ಏಕೆ ಬಂಧಿಸಲಾಯ್ತು ಎಂದೂ ಸಹ ಪ್ರಶ್ನಿಸಲಾಗಿದೆ. ಆರ್ಯನ್ ಬಳಿ ಡ್ರಗ್ಸ್ ಇರದಿದ್ದರೂ ಆತನನ್ನು ಯಾವ ಆಧಾರದಲ್ಲಿ ವಶಕ್ಕೆ ಪಡೆಯಲಾಯಿತು ಎಂಬುದು ಸಹ ಅನುಮಾನಕ್ಕೆ ಕಾರಣವಾಗಿದೆ.


Click it and Unblock the Notifications











