ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ಗೆ ದೊಡ್ಡ ರಿಲೀಫ್ ನೀಡಿದ ನ್ಯಾಯಾಲಯ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಇದೀಗ ಜಾಮೀನಿನ ಮೇಲೆ ಹೊರಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ನ್ಯಾಯಾಲಯವು ದೊಡ್ಡ ರಿಲೀಫ್ ನೀಡಿದೆ.
ಆರ್ಯನ್ ಖಾನ್ ಜಾಮೀನು ಆದೇಶ ಪ್ರತಿ ಇಂದು ಹೊರ ಬಂದಿದ್ದು, ಆರ್ಯನ್ ಖಾನ್ ಯಾವುದೇ ಸಂಚು ಮಾಡಿರಲಿಲ್ಲವೆಂದು ಸ್ವತಃ ನ್ಯಾಯಾಲಯ ಹೇಳಿದೆ.
ಆರ್ಯನ್ ಖಾನ್, ಸಹ ಆರೋಪಿ ಅರ್ಬಾಜ್ ಸೇಠ್ ಜೊತೆಗೆ ಸೇರಿ ಶಿಪ್ನಲ್ಲಿ ಡ್ರಗ್ಸ್ ತೆಗೆದುಕೊಳ್ಳಲಿದ್ದ. ಡ್ರಗ್ಸ್ ಸೇವಿಸಲೆಂದೇ ಆರ್ಯನ್ ಖಾನ್ ಹಾಗೂ ಅರ್ಬಾಜ್ ಸೇಠ್ ಕ್ರೂಸ್ ಶಿಪ್ನ ಪಾರ್ಟಿಗೆ ಆಗಮಿಸಿದ್ದರು ಎಂದು ಅವರನ್ನು ಬಂಧಿಸಿದ್ದ ಎನ್ಸಿಬಿ ಆರೋಪ ಮಾಡಿತ್ತು. ಆದರೆ ಈಗ ಬಾಂಬೆ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಆರ್ಯನ್ ಖಾನ್ ಯಾವುದೇ ಸಂಚು ಮಾಡಿರಲಿಲ್ಲವೆಂದು, ಸಂಚು ಮಾಡುವ ಉದ್ದೇಶ ಆರ್ಯನ್ಗೆ ಇರಲಿಲ್ಲವೆಂದು ಹೇಳಿದೆ.

ಇದಷ್ಟೇ ಅಲ್ಲದೆ, ''ಆರ್ಯನ್ ಖಾನ್ ವಾಟ್ಸ್ಆಪ್ ಚಾಟ್ನಲ್ಲಿ ಸಹ ಯಾವುದೇ ಅನುಮಾನಕರ ಸಂಗತಿಗಳು ತಿಳಿದು ಬಂದಿಲ್ಲ'' ಎಂದಿದೆ. ಮುಂದುವರೆದು, ''ಆರ್ಯನ್ ಹಾಗೂ ಇತರ ಆರೋಪಿಗಳು ಸಂಚಿನ ಅಥವಾ ಅಪರಾಧದ ಭಾಗವಾಗಿದ್ದರು ಎಂದು ನಿರೂಪಿಸಲು ಯಾವುದೇ ಸಶಕ್ತ ಆಧಾರವಿಲ್ಲ, ಆ ಮೂವರು ಒಂದೇ ಕ್ರೂಸ್ ಶಿಪ್ನಲ್ಲಿ ಹೋಗುವವರಿದ್ದರು ಎಂಬುದನ್ನು ಬಿಟ್ಟು ಆ ಮೂವರು ಸಂಚೊಂದರ ಭಾಗವಾಗಿದ್ದರು ಎಂಬುದಕ್ಕೆ ಬೇರೆ ಏನೂ ಆಧಾರಗಳು ಇಲ್ಲ'' ಎಂದಿದೆ ನ್ಯಾಯಾಲಯ.
ಆರ್ಯನ್ ಖಾನ್ ಅನ್ನು ಅಕ್ಟೋಬರ್ 02 ರಂದು ಎನ್ಸಿಬಿ ವಶಕ್ಕೆ ಪಡೆದಿತ್ತು. ಮುಂಬೈನ ಕ್ರೂಸ್ ಶಿಫ್ ಒಂದರಲ್ಲಿ ನಡೆದಿದ್ದ ಪಾರ್ಟಿಗೆ ಆರ್ಯನ್ ಖಾನ್ ಅತಿಥಿಯಾಗಿ ಪಾಲ್ಗೊಳ್ಳಲು ತೆರಳಿದ್ದಾಗ ಅವರನ್ನು ತಡೆದ ಎನ್ಸಿಬಿ ವಶಕ್ಕೆ ಪಡೆದಿತ್ತು. ನಂತರ ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮತ್ತು ಮಾಡೆಲ್ ಮುನ್-ಮುನ್ ಧಮೇಚಾ ಅವರನ್ನು ಬಂಧಿಸಿತ್ತು. ಅಕ್ಟೋಬರ್ 30 ರಂದು ಆರ್ಯನ್ ಖಾನ್ಗೆ ಜಾಮೀನು ಮಂಜೂರಾಯಿತು. ಆದರೆ ಆರ್ಯನ್ ಖಾನ್ ಪ್ರಕರಣ ಹಲವು ತಿರುವುಗಳನ್ನು ಪಡೆದು ಇಡೀ ದೇಶದ ಗಮನ ಸೆಳೆದಿದೆ.
ಇದೀಗ ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದಿದ್ದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧವೇ ಇಲಾಖಾ ತನಿಖೆ ನಡೆಯುತ್ತಿದೆ. ಎನ್ಸಿಬಿಯು 8 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿತ್ತು ಆರೋಪವೂ ಕೇಳಿಬರುತ್ತಿದ್ದು, ಎನ್ಸಿಬಿಯು ಆರ್ಯನ್ ಖಾನ್ ಪ್ರಕರಣದಲ್ಲಿ ಹಣ ವಸೂಲಿಗೆ ಇಳಿದಿತ್ತು ಎಂಬದುಕ್ಕೆ ಮೌಖಿಕ ಸಾಕ್ಷ್ಯವೂ ಲಭ್ಯವಾಗಿದೆ. ಆರ್ಯನ್ ಪ್ರಕರಣದಲ್ಲಿ ಸ್ವತಂತ್ರ್ಯ ಸಾಕ್ಷ್ಯವಾಗಿದ್ದ ಪ್ರಭಾಕರ್ ಸಾಯಿಲ್, ಎಂಬಾತ ಇದೇ ಪ್ರಕರಣದ ಮತ್ತೊಬ್ಬ ಸ್ವತಂತ್ರ್ಯ ಸಾಕ್ಷಿ ಹಾಗೂ ಸಮೀರ್ ವಾಂಖೆಡೆಯ ಆಪ್ತ ಕೆಪಿ ಗೋಸಾವಿ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿಯಿಂದ ಹಣ ಪಡೆದುದ್ದಾಗಿಯೂ ಅದನ್ನು ತಾನೇ ಅದನ್ನು ಮತ್ತೊಬ್ಬ ಮಧ್ಯವರ್ತಿ ಸ್ಯಾಮ್ ಡಿಸೋಜಾಗೆ ತಲುಪಿಸಿದ್ದಾಗಿ ಹೇಳಿದ್ದಾನೆ.
ಪ್ರಕರಣದಲ್ಲಿ ಎನ್ಸಿಬಿ ವಿರುದ್ಧವೇ ಆರೋಪಗಳು ಬಂದ ಬಳಿಕ ಎನ್ಸಿಬಿ ಕೇಂದ್ರ ಕಚೇರಿಯು ಹೊಸ ವಿಶೇಷ ತಂಡವೊಂದನ್ನು ರಚನೆ ಮಾಡಿ ತನಿಖೆ ನಡೆಸಿದೆ. ಆರ್ಯನ್ ಖಾನ್ ಪ್ರಕರಣದಿಂದ ಸಮೀರ್ ವಾಂಖೆಡೆಯನ್ನು ತೆಗೆದು ಹಾಕಲಾಗಿದ್ದು, ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲಾಗಿದೆ. ಇದರ ಜೊತೆಗೆ ಎನ್ಸಿಬಿಯು ಭ್ರಷ್ಟಾಚಾರ ನಡೆಸಿದೆ ಎಂತಲೂ, ಕರ್ತವ್ಯಲೋಪ ಹಾಗೂ ವಸೂಲಿಬಾಜಿ ನಡೆಸಿದೆಯೆಂತಲೂ ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲ್ಲಿಕ್ ಸತತ ವಾಗ್ದಾಳಿ ಮಾಡಿದ್ದಾರೆ. ಮಹಾರಾಷ್ಟ್ರದ ಇತರ ಕೆಲವು ಪ್ರಮುಖ ರಾಜಕಾರಣಿಗಳು ಸಹ ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ಸಿಬಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ಇನ್ನೂ ನಡೆಯುತ್ತಿದೆ.


Click it and Unblock the Notifications











