ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ
ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ಅರ್ಜಿಯನ್ನು ವಜಾಗೊಳಿಸಲಾಗಿದೆ.
ಇದೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅರ್ಬಾಜ್ ಸೇಠ್, ಮುನ್ಮುನ್ ಧಮೇಚಾ ಹಾಗೂ ಇನ್ನೂ ಐದು ಮಂದಿಯ ಜಾಮೀನು ಅರ್ಜಿಗಳನ್ನು ಸಹ ವಜಾ ಗೊಳಿಸಲಾಗಿದೆ.
ಆರ್ಯನ್ ಖಾನ್ ಹಾಗೂ ಇತರ ಬಂಧಿತರಿಗೆ ಹದಿನಾಲ್ಕು ದಿನದ ನ್ಯಾಯಾಂಗ ಬಂಧನವನ್ನು ನ್ಯಾಯಾಲಯವು ನಿನ್ನೆಯೇ ವಿಧಿಸಿತ್ತು. ನಿನ್ನೆಯೇ ಜಾಮೀನು ಅರ್ಜಿ ವಿಚಾರಣೆ ಮಾಡಲು ಆರ್ಯನ್ ಖಾನ್ ಪರ ವಕೀಲರು ಮನವಿ ಮಾಡಿದ್ದರು. ಆದರೆ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.

ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು, ಆರ್ಯನ್ ಪರ ವಕೀಲರ ಹಾಗೂ ಎನ್ಸಿಬಿ ಪರ ವಕೀಲರ ಸುದೀರ್ಘ ವಾದಗಳನ್ನು ಆಲಿಸಿ, 'ನ್ಯಾಯಾಲಯವು ಕೇಳಿಸಿಕೊಂಡಿದೆ, ವಿಚಾರಣೆ ನಡೆಸಿದೆ, ಆದರೆ ಅರ್ಜಿಯು ಮೇಂಟೇನೆಬಲ್ ಅಲ್ಲ' ಎಂದು ನ್ಯಾಯಾಲಯವು ಅರ್ಜಿಯನ್ನು ವಜಾ ಮಾಡಿದೆ.
ಜಾಮೀನು ಅರ್ಜಿ ವಿಚಾರಣೆಗೆ ಮುನ್ನ ನ್ಯಾಯಾಲಯದಲ್ಲಿ ಆರ್ಯನ್ ಪರ ವಕೀಲ ಸತೀಶ್ ಮಾನೆಶಿಂಧೆ ಹಾಗೂ ಅಡಿಷನಲ್ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮಧ್ಯೆ ಬಿಸಿ-ಬಿಸಿ ವಾದ-ವಿವಾದಗಳು ನಡೆದವು. ಕೆಲವು ಹಂತಕ್ಕೆ ವೈಯಕ್ತಿಕ ವಾಗ್ದಾಳಿಗಳು ಸಹ ನಡೆದವು.
ವಿಚಾರಣೆ ವೇಳೆ ಆರ್ಯನ್ ಪರ ವಾದ ಮಂಡಿಸಿದ ವಕೀಲ ಸತೀಶ್ ಮಾನೆಶಿಂಧೆ, ''ನಾನು ಪ್ರಭಾವಿ ವ್ಯಕ್ತಿಯ ಮಗ, ಶ್ರೀಮಂತ ಕುಟುಂಬ ಎಂದೊಡನೆ ನಾನು ಸಾಕ್ಷ್ಯ ನಾಶ ಮಾಡುತ್ತೇನೆ ಎಂದು ಹೇಗೆ ನಿರೂಪಿಸುತ್ತೀರಿ. ಸಾಕ್ಷ್ಯ ನಾಶ ಮಾಡುವುದಾದರೆ ಅದಕ್ಕೊಂದು ಹಾದಿ ಬೇಕಲ್ಲವೆ, ಅದನ್ನಾದರೂ ಹೇಳಿ'' ಎಂದು ಆರ್ಯನ್ ಪರವಾಗಿ ಎನ್ಸಿಬಿ ಪರ ವಕೀಲರನ್ನು ಪ್ರಶ್ನೆ ಮಾಡಿದರು.
''ನೀವು ಯಾವ ಸೆಕ್ಷನ್ ಬೇಕಾದರೂ ನನ್ನ ಮೇಲೆ ಹೇರಿ. ಆದರೆ, ನನ್ನ ವಿರುದ್ಧ ಇರುವ ಸಾಕ್ಷ್ಯವನ್ನು ತೋರಿಸಿ. ಮೆಟಿರಿಯಲ್ ಸಾಕ್ಷ್ಯವೇ ಇಲ್ಲದೆ ನನ್ನ ಬಂಧನದಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲ'' ಎಂದು ಆರ್ಯನ್ ಪರವಾಗಿ ಸತೀಶ್ ಮಾನೆಶಿಂಧೆ ನ್ಯಾಯಾಲಯಕ್ಕೆ ಹೇಳಿದರು. ''ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರ್ಬಾಜ್ ಸೇಠ್ ಹಾಗೂ ನಾನು ಸ್ನೇಹಿತರಾದರೂ ನಾವಿಬ್ಬರು ಪ್ರತ್ಯೇಕವಾಗಿ ಪಾರ್ಟಿಗೆ ಬಂದಿದ್ದೇವೆ. ಪಾರ್ಟಿ ಆರ್ಗನೈಜ್ ಮಾಡಿರುವ ವ್ಯಕ್ತಿ ಅರ್ಬಾಜ್ ಸೇಠ್ಗೆ ಸ್ನೇಹಿತ ಹಾಗಾಗಿ ಅವನಿಗೂ ಆಹ್ವಾನ ಇತ್ತು'' ಎಂದು ಆರ್ಯನ್ ಪರ ವಕೀಲರು ವಾದಿಸಿದರು.
ಆದರೆ ಎನ್ಸಿಬಿ ಪರ ವಾದ ಮಂಡಿಸಿದ ಅನಿಲ್ ಸಿಂಗ್, ''ಆರ್ಯನ್ ಹಾಗೂ ಅರ್ಬಾಜ್ ಪರಸ್ಪರ ಗೊತ್ತಿದ್ದೆ ಪಾರ್ಟಿಗೆ ಬಂದಿದ್ದಾರೆ. ಮನೆಗಳಿಂದ ಹೊರಡುವ ಮುನ್ನ ಸಹ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಅಲ್ಲದೆ ಅಚಿತ್ ಕುಮಾರ್ ಜೊತೆ ಡ್ರಗ್ಸ್ ಬಗ್ಗೆ ಆರ್ಯನ್ ಖಾನ್ ಹಲವು ಬಾರಿ ಮಾತನಾಡಿದ್ದಾನೆ. ಅಂತರಾಷ್ಟ್ರೀಯ ವಿಷಯಗಳ ಉಲ್ಲೇಖವೂ ಆಗಿದೆ'' ಎಂದು ಅನಿಲ್ ಸಿಂಗ್ ಹೇಳಿದರು.
ರಿಯಾ ಚಕ್ರವರ್ತಿ ಪ್ರಕರಣದ ಬಗ್ಗೆ ಹಲವು ಬಾರಿ ಇಂದು ನ್ಯಾಯಾಲಯದಲ್ಲಿ ಉಲ್ಲೇಖವಾಯಿತು. ''ರಿಯಾ ಚಕ್ರವರ್ತಿ ಪ್ರಕರಣದಲ್ಲಿ ಒಂದೇ ಅಪರಾಧದಲ್ಲಿ 17 ಮಂದಿ ಭಾಗಿಯಾಗಿದ್ದರು. ಆದರೆ ಈ ಪ್ರಕರಣ ಅಂಥಹುದ್ದಲ್ಲ ಎಂದರು. ವಿಚಾರಣೆಯ ಆರಂಭದಲ್ಲಿಯೇ ಅನಿಲ್ ಸಿಂಗ್ ಜಾಮೀನು ಅರ್ಜಿಯ 'ಮೇಂಟೆನೆಬಿಲಿಟಿ' ಕುರಿತು ಪ್ರಶ್ನೆ ಮಾಡಿದರು. ಇದನ್ನು ಆರ್ಯನ್ ಪರ ವಕೀಲ ಸತೀಶ್ ಮಾನೆಶಿಂಧೆ ತೀವ್ರವಾಗಿ ವಿರೋಧಿಸಿದರು. ಅಂತಿಮವಾಗಿ ಮೇಂಟೇನೆಬಿಲಿಟಿ ಅಲ್ಲದ ಕಾರಣ ನೀಡಿಯೇ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ಆರ್ಯನ್ ಖಾನ್ ಇಂದು ಮುಂಬೈನ ಆರ್ಥರ್ ರಸ್ತೆಯ ಜೈಲು ಸೇರಿದ್ದು ಇನ್ನೂ ಹದಿಮೂರು ದಿನಗಳ ಕಾಲ ಅಲ್ಲಿಯೇ ಇರಬೇಕಿದೆ. ಈ ಅವಧಿಯಲ್ಲಿ ಪೋಷಕರು ಆರ್ಯನ್ ಅನ್ನು ಭೇಟಿ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ಈ ವರೆಗೆ ಶಾರುಖ್ ಖಾನ್ ಆಗಲಿ ಅಥವಾ ತಾಯಿ ಗೌರಿ ಖಾನ್ ಆಗಲಿ ಆರ್ಯನ್ ಅನ್ನು ಭೇಟಿಯಾಗಿಲ್ಲ. ಆದರೆ ಶಾರುಖ್ ಖಾನ್ ಮನೆಯ ವ್ಯವಸ್ಥಾಪಕಿ ಪೂಜಾ ದದ್ಲಾನಿ ಎರಡು ದಿನಗಳ ಹಿಂದೆಯಷ್ಟೆ ಎನ್ಸಿಬಿ ಕಚೇರಿಗೆ ಭೇಟಿ ನೀಡಿ ಆರ್ಯನ್ ಜೊತೆ ಮಾತುಕತೆ ನಡೆಸಿದ್ದರು. ಆರ್ಯನ್ಗೆ ಅಗತ್ಯವಾಗಿದ್ದ ಬಟ್ಟೆ, ಇನ್ನಿತರೆ ವಸ್ತುಗಳನ್ನು ಕೊಟ್ಟಿದ್ದರು.


Click it and Unblock the Notifications











