ಅಧಿಕಾರಿಗಳೇ ಡ್ರಗ್ಸ್ ಇಟ್ಟಿದ್ದಾರೆ, ಸಿಸಿಟಿವಿ ದೃಶ್ಯ ಪರಿಶೀಲಿಸಲಿ: ಆರ್ಯನ್ ಖಾನ್ ಗೆಳೆಯ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಎನ್ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಬಂಧಿಸಿರುವ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಈವರೆಗೆ ಹೊರ ಬಿದ್ದಿರುವ ಸತ್ಯಗಳ ಆಧಾರದಲ್ಲಿ ಗಮನಿಸುವುದಾದರೆ, ಆರ್ಯನ್ ಖಾನ್ ಹಾಗೂ ಆತನ ಗೆಳೆಯ ಅರ್ಬಾಜ್ ಸೇಠ್ ಅನ್ನು ವಿನಾ ಕಾರಣ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆಯೇ ಎಂಬ ಅನುಮಾನ ಗಟ್ಟಿಯಾಗುತ್ತಿದೆ.
ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾರ ಎನ್ಸಿಬಿ ಕಸ್ಟಡಿ ಇಂದಿಗೆ ಕೊನೆಯಾಗಿದ್ದು, ಇಂದು ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮತ್ತು ಆರೋಪಿಗಳನ್ನು ಇನ್ನಷ್ಟು ದಿನ ವಶಕ್ಕೆ ನೀಡುವಂತೆ ಎನ್ಸಿಬಿಯು ಈ ಸಂದರ್ಭದಲ್ಲಿ ಮನವಿ ಮಾಡಿತು.
ನ್ಯಾಯಾಲಯದಲ್ಲಿ ಮಾತನಾಡಿದ ಆರೋಪಿ ಅರ್ಬಾಜ್ ಸೇಠ್, ''ನಾವು ಡ್ರಗ್ಸ್ ಹೊಂದಿರಲಿಲ್ಲ. ಅಧಿಕಾರಿಗಳೇ ನಮ್ಮ ಬ್ಯಾಗ್ನಲ್ಲಿ ಡ್ರಗ್ಸ್ ಇಟ್ಟು ಅದನ್ನು ವಶಪಡಿಸಿಕೊಂಡಿದ್ದಾರೆ. ಬೇಕಿದ್ದರೆ ಆ ಕ್ರೂಸ್ ಶಿಪ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಿ'' ಎಂದು ಸವಾಲು ಹಾಕಿದ್ದಾರೆ.
ಅರ್ಬಾಜ್ ಸೇಠ್ ನ್ಯಾಯಾಧೀಶರ ಮುಂದೆ ಈ ರೀತಿ ಹೇಳಿದ್ದಾಗಿ ಲೈವ್ ಲಾ ವರದಿ ಮಾಡಿದೆ. ಲೈವ್ ಲಾ ನ್ಯಾಯಾಲಯದ ಒಳಗೆ ನಡೆವ ವಾದಗಳನ್ನು ಯಥಾವತ್ತು ಟ್ವಿಟ್ಟರ್ನಲ್ಲಿ ಪ್ರಕಟಿಸುತ್ತದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಶ್ವಾಸಾರ್ಹ ಸುದ್ದಿಗಳನ್ನು ಲೈವ್ ಲಾ ನೀಡುತ್ತದೆ ಎಂದು ನಂಬಲಾಗಿದೆ.

ಅನುಮಾನ ವ್ಯಕ್ತಪಡಿಸಿದ್ದ ಅರ್ಬಾಜ್ ಸೇಠ್ ತಂದೆ
ಅರ್ಬಾಜ್ ಸೇಠ್ ಮರ್ಚೆಂಟ್ ತಂದೆ ಹಿರಿಯ ವಕೀಲರಾಗಿದ್ದು, ಎರಡು ದಿನಗಳ ಹಿಂದೆ ಮಾತನಾಡಿದ್ದ ಅವರು, ''ನನ್ನ ಮಗ ಡ್ರಗ್ಸ್ ತೆಗೆದುಕೊಂಡಿರಲು ಸಾಧ್ಯವೇ ಇಲ್ಲ. ಪ್ರಕರಣದಲ್ಲಿ ಏನೋ ಗೊಂದಲ ಕಾಣುತ್ತಿದೆ'' ಎಂದು ಹೇಳಿದ್ದರು. ಈಗ ಅರ್ಬಾಜ್ ಸೇಠ್ ಸಹ ಹೀಗೆ ಹೇಳಿರುವುದು ಎನ್ಸಿಬಿ ಕಾರ್ಯಾಚರಣೆ ಮೇಲಿನ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ.

ಎನ್ಸಿಬಿ ಕಾರ್ಯಾಚರಣೆ ವಿರುದ್ಧ ಅನುಮಾನ
ಆರ್ಯನ್ ಖಾನ್ ಪ್ರಕರಣದ ಬಗ್ಗೆ ಹಲವರು ಎನ್ಸಿಬಿ ವಿರುದ್ಧ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಸ್ವತಃ ಎನ್ಸಿಬಿ ನ್ಯಾಯಾಲಯಕ್ಕೆ ಹೇಳಿದೆ. ಅಲ್ಲದೆ, ಶಿಪ್ನಲ್ಲಿ ಪಾರ್ಟಿಯನ್ನು ಅರೆಂಜ್ ಮಾಡಿರುವ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಎನ್ಸಿಬಿ ಪ್ರಶ್ನೆಯೇ ಮಾಡಿರಲಿಲ್ಲ. ಅದಕ್ಕೆ ಮುನ್ನವೇ ಆರ್ಯನ್, ಅರ್ಬಾಜ್, ಮುನ್ಮುನ್ ಅವರುಗಳನ್ನು ಬಂಧಿಸಲಾಯಿತು. ಎನ್ಸಿಬಿ ಕಾರ್ಯಾಚರಣೆ ವಿರುದ್ಧ ಅನುಮಾನಗಳು ವ್ಯಕ್ತವಾದ ಬಳಿಕ ಪಾರ್ಟಿ ಅರೇಂಜ್ ಮಾಡಿದ್ದ ಸಂಸ್ಥೆಯ ನಾಲ್ಕು ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಈ ಮೊದಲು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಎನ್ಸಿಬಿ, ''ಪಾರ್ಟಿ ಆರ್ಗನೈಜ್ ಮಾಡಿದ್ದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದ್ದರು.

ಬಿಜೆಪಿ ಮುಖಂಡನಿಗೆ ಸಂಬಂಧವೇನು?
ಎನ್ಸಿಬಿ ಕಾರ್ಯಾಚರಣೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಭಾಗವಹಿಸಿದ್ದರು ಎಂಬುದು ಸಹ ದೊಡ್ಡದಾಗಿ ಸುದ್ದಿಯಾಗಿದೆ. ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆಸಿಕೊಂಡಿರುವ ವ್ಯಕ್ತಿ ಖಾಸಗಿ ಡಿಟೆಕ್ಟಿವ್ ಎನ್ನಲಾಗುತ್ತಿದೆ. ಆತ ಹೇಗೆ ಎನ್ಸಿಬಿ ಕಾರ್ಯಚಾರಣೆಯಲ್ಲಿ ಭಾಗಿಯಾದ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಅದರ ಜೊತೆಗೆ ಅರ್ಬಾಜ್ ಖಾನ್ನ ಕೈಹಿಡಿದು ಎನ್ಸಿಬಿ ಕಚೇರಿಗೆ ಕರೆದುಕೊಂಡು ಬಂದ ವ್ಯಕ್ತಿ ಎನ್ಸಿಬಿ ಸಿಬ್ಬಂದಿಯಲ್ಲ ಬದಲಿಗೆ ಬಿಜೆಪಿಯ ಪ್ರಮುಖ ಮುಖಂಡ ಆಗಿದ್ದಾನೆ ಎಂದು ಎನ್ಸಿಪಿ ಆರೋಪಿಸಿದ್ದು ಕೆಲವು ಚಿತ್ರಗಳನ್ನು ಸಹ ಮಾಧ್ಯಮಗಳಿಗೆ ನೀಡಿದೆ.

ಹಲವು ನಟ-ನಟಿಯರ ಬೆಂಬಲ
ಈ ನಡುವೆ ಆರ್ಯನ್ ಖಾನ್ಗೆ ಹಲವು ಬಾಲಿವುಡ್ ನಟ-ನಟಿಯರ ಬೆಂಬಲ ವ್ಯಕ್ತವಾಗಿದೆ. ಸುನಿಲ್ ಶೆಟ್ಟಿ, ಸುಸೇನ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಇನ್ನೂ ಹಲವರು ಶಾರುಖ್ ಖಾನ್ಗೆ ಹಾಗೂ ಆರ್ಯನ್ ಖಾನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ ನಟಿ ರಮ್ಯಾ ಸಹ ಆರ್ಯನ್ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎನ್ಸಿಬಿಯ ಕಾರ್ಯಾಚಾರಣೆ ಅನುಮಾನ ಮೂಡಿಸುತ್ತಿದೆ ಎಂದಿದ್ದಾರೆ. ''ಬಿಜೆಪಿ ಸಚಿವರ ಮಗ ಕಾರು ಹತ್ತಿಸಿ ಪ್ರತಿಭಟನಾ ನಿರತ ರೈತರನ್ನು ಕೊಂದಿದ್ದಾನೆ ಆತನನ್ನು ಈವರೆಗೆ ಬಂಧಿಸಲಾಗಿಲ್ಲ. ಆದರೆ ಡ್ರಗ್ಸ್ ದೊರೆಯದಿದ್ದರೂ, ಆರ್ಯನ್ ಖಾನ್ ದೇಹದಲ್ಲಿ ಡ್ರಗ್ಸ್ ಅಂಶ ಇಲ್ಲದಿದ್ದರೂ ಆರ್ಯನ್ ಅನ್ನು ಬಂಧಿಸಲಾಗಿದೆ'' ಎಂದಿದ್ದಾರೆ.


Click it and Unblock the Notifications











