ಆರ್ಯನ್ ಖಾನ್ ಪ್ರಕರಣ: ಕೋರ್ಟ್ ರೂಂ ಬಿಸಿ ಏರಿಸಿದ ವಾದ
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಸೇರಿದಂತೆ ಮೂರು ಬಾರಿ ಜಾಮೀನು ನಿರಾಕರಿಸಲ್ಪಟ್ಟ ಮೇಲೆ ಬಾಂಬೆ ಹೈಕೋರ್ಟ್ಗೆ ಆರ್ಯನ್ ಖಾನ್ ಜಾಮೀನು ಅರ್ಜಿ ಹಾಕಿದ್ದು ಕಳೆದ ಎರಡು ದಿನದಿಂದ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.
ನಿನ್ನೆ (ಮಂಗಳವಾರ) ಆರ್ಯನ್ ಖಾನ್ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೊಹ್ಟಗಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಮತ್ತೆ ವಿಚಾರಣೆ ನಡೆಯಿತಾದರೂ ಇಂದು ಸಹ ಆರೋಪಿಗಳ ಪರ ವಕೀಲರ ವಾದ ಮುಗಿಯದ ಕಾರಣ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಆರ್ಯನ್ ಖಾನ್ ಜೊತೆಗೆ ಬಂಧನಕ್ಕೆ ಒಳಗಾಗಿರುವ ಅವರ ಸ್ನೇಹಿತನೂ ಆಗಿರುವ ಅರ್ಬಾಜ್ ಸೇಠ್ ಮರ್ಚೆಂಟ್ ಪರ ವಕೀಲರು ಬಹುಕಾಲ ವಾದ ಮಂಡಿಸಿದರು. ಇವರಿಬ್ಬರೊಂದಿಗೆ ಬಂಧನಕ್ಕೆ ಒಳಗಾದ ಮುನ್ಮುನ್ ಧಮೇಚಾ ಪರ ವಕೀಲರು ಸಹ ವಾದ ಮಂಡನೆ ಮಾಡಿದರು.
ಮುನ್ಮುನ್ ಧಮೇಚಾ ಪರವಾಗಿ ವಾದ ಮಂಡಿಸಿದ ವಕೀಲ ಅಲಿ ಖಾಶಿಫ್ ಖಾನ್ ದೇಶ್ಮುಖ್, ತಮ್ಮ ಕಕ್ಷೀದಾರರು ಈವರೆಗೆ ಮಾದಕ ವಸ್ತು ಸೇವಿಸಿಯೇ ಇಲ್ಲ. ಎನ್ಸಿಬಿಯು ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಿದರೆ ಆಕೆಯ ವಿರುದ್ಧ ಯಾವುದೇ ಸಾಕ್ಷ್ಯ ದೊರಕುವುದಿಲ್ಲ. ಮುನ್ಮುನ್ ಧಮೇಚಾ ಅನ್ನು ತೋರಿಕೆಗಾಗಿ ಬಂಧಿಸಲಾಗಿದೆ. ಇದೇ ಪ್ರಕರಣದ ಇತರ ಆರೋಪಿಗಳ ದಾಖಲೆಗಳನ್ನೇ ಮುನ್ಮುನ್ ಧಮೇಚಾಗೆ ಕಾಪಿ-ಪೇಸ್ಟ್ ಮಾಡಲಾಗಿದೆ ಎಂದರು.

''ಶಿಫ್ಗೆ ಹೋದ ಎರಡೇ ನಿಮಿಷದಲ್ಲಿ ತಪಾಸಣೆ ಮಾಡಲಾಯ್ತು''
''ಮುನ್ಮುನ್ ಧಮೇಚಾ ಮಹಾರಾಷ್ಟ್ರದವರಲ್ಲ. ಆಕೆಗೆ ಇಲ್ಲಿ ಯಾರ ಪರಿಚಯವೂ ಇಲ್ಲ. ಆಕೆಯನ್ನು ಕ್ರೂಸ್ ಶಿಫ್ ಪಾರ್ಟಿಗೆ ಸಂಸ್ಥೆಯು ಆಹ್ವಾನಿಸಿತ್ತು, ಹಾಗಾಗಿ ಆಕೆ ಬಂದಿದ್ದಳು. ಇತರೆ ಆರೋಪಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಕೆಲವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ ಆದರೆ ಮುನ್ಮುನ್ ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ. ಮುನ್ಮುನ್ ಧಮೇಚಾ ಮಾಡೆಲ್ ಆಗಿದ್ದು ಅವರನ್ನು ಆಹ್ವಾನಿಸಲಾಗಿತ್ತು. ಅವರು ಶಿಫ್ ಪ್ರವೇಶ ಮಾಡಿದ ಎರಡು ನಿಮಿಷದಲ್ಲಿಯೇ ಅವರನ್ನು ತಡೆದು ತಪಾಸಣೆ ನಡೆಸಲಾಯಿತು. ಅನುಮಾನವಾಗಿ ಕಂಡಿದ್ದರಿಂದ ಮುನ್ಮುನ್ ಧಮೇಚಾರನ್ನು ಬಂಧಿಸಲಾಗಿದ್ದರೆ ಆ ಕ್ರೂಸ್ ಶಿಫ್ನಲ್ಲಿ 1200 ಮಂದಿ ಇದ್ದರೂ ಅಷ್ಟೂ ಜನರನ್ನು ಎನ್ಸಿಬಿ ಬಂಧಿಸಬೇಕಿತ್ತು'' ಎಂದು ಪ್ರಶ್ನೆ ಮಾಡಿದರು ದೇಶ್ಮುಖ್.

''ಮುನ್ಮುನ್ ಧಮೇಚಾ ಬಳಿ ಏನೂ ಸಿಕ್ಕಿರಲಿಲ್ಲ''
''ಮುನ್ಮುನ್ ಧಮೇಚಾರನ್ನು ತನಿಖೆ ಮಾಡಿದಾಗ ಅವರಿಗೆ ಏನೂ ಸಿಗಲಿಲ್ಲ. ಆದರೆ ಸೌಮ್ಯಾ ಸಿಂಗ್ ಅನ್ನು ತನಿಖೆ ಮಾಡಿದಾಗ ಅವರಿಗೆ ರೋಲಿಂಗ್ ಪೇಪರ್ ದೊರಕಿತು. ಎನ್ಸಿಬಿ ಪ್ರಕರಣ ಇರುವುದು ಸೌಮ್ಯಾ ಸಿಂಗ್ ವಿರುದ್ಧ ಆದರೆ ಅವರ ಬಂಧನ ಆಗಿಲ್ಲ'' ಎಂದು ವಾದಿಸಿದರು ದೇಶ್ಮುಖ್. ಈ ನಡುವೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ಸೌಮ್ಯಾ, ಮುನ್ಮುನ್ ಗೆಳೆಯರಲ್ಲವೇ? ಎಂದು ಪ್ರಶ್ನಿಸಿದಾಗ, ''ಸೌಮ್ಯಾ ಯಾರೆಂಬುದು ಸಹ ಮುನ್ಮುನ್ ಧಮೇಚಾಗೆ ಗೊತ್ತಿಲ್ಲ'' ಎಂದರು ವಕೀಲ.

''ದೊರೆತಿದ್ದು 6 ಗ್ರಾಂ, ಬರೆದಿದ್ದು 21 ಗ್ರಾಂ''
ಅರ್ಬಾಜ್ ಸೇಠ್ ಪರ ವಾದ ಮಂಡಿಸಿದ ಅಮಿತ್ ದೇಸಾಯಿ, ''ವಾಟ್ಸ್ಆಪ್ ಚಾಟ್ ಆಧರಿಸಿ ಎನ್ಸಿಬಿಯು ಕಸ್ಟಡಿ ವಿಸ್ತರಣೆ ಕೇಳುತ್ತಿದೆ. ಆರೋಪಿಗಳು ತಪ್ಪೆಸಿದ್ದಾರೆ ಎನ್ನುತ್ತಿದೆ. ಆದರೆ ಆರೋಪಿಗಳು ತಪ್ಪಿತಸ್ಥರು ಎಂದು ಸೂಚಿಸುವ ಅಂಶಗಳಾವುವು ಆ ವಾಟ್ಸ್ಆಪ್ ಚಾಟ್ನಲ್ಲಿ ಇಲ್ಲ. ಈ ವಾಟ್ಸ್ಆಪ್ ಚಾಟ್ಗಳು ನ್ಯಾಯಾಲಯಕ್ಕೆ ರೆಕಾರ್ಡ್ ಆಗುವ ಮೊದಲೇ ಮೀಡಿಯಾದಲ್ಲಿ ಹರಿದಾಡಿದವು. ಇಂಥಹಾ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ. ವಾಟ್ಸ್ಆಫ್ ಚಾಟ್ಗಳಲ್ಲಿ ಏನು ಕಂಡುಕೊಳ್ಳಲಾಗಿದೆ ಎಂಬುದನ್ನು ಬಹಿರಂಗ ಸಹ ಪಡಿಸುತ್ತಿಲ್ಲ. ಅದೂ ಅಲ್ಲದೆ ಅರ್ಬಾಜ್ ಬಳಿ ದೊರೆತಿದ್ದು 6 ಗ್ರಾಂ ಅದನ್ನು 21 ಗ್ರಾಂ ಎಂದು ನಮೂದಿಸಲಾಗಿದೆ'' ಎಂದರು.

ನ್ಯಾಯಾಲಯದ ದಿಕ್ಕು ತಪ್ಪಿಸಲಾಗಿದೆ: ಅರ್ಬಾಜ್ ಪರ ವಕೀಲ
''ಈ ಪ್ರಕರಣದಲ್ಲಿ ಈ ದಿನದ ವರೆಗೆ ನ್ಯಾಯಾಲಯವನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಮಾದಕ ವಸ್ತು ಸೇವಿಸಿದ್ದಕ್ಕೆ ಬಂಧನವಾಗಿದೆಯೇ ಹೊರತು ಸಂಚು ರೂಪಿಸಿದ್ದಕ್ಕಲ್ಲ. ಆದರೆ ಈಗ ವಾಟ್ಸ್ಆಪ್ ಚಾಟ್ ಮೂಲಕ ಸಂಚು ರೂಪಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಇಲ್ಲಿ ಸಂಚಿನ ಪ್ರಶ್ನೆಯೇ ಇಲ್ಲ. ಏಕೆಂದರೆ ಎನ್ಸಿಬಿಯೇ ಹೇಳಿರುವಂತೆ ಆರೋಪಿತರು ಪ್ರತ್ಯೇಕವಾಗಿ ಕ್ರೂಸ್ ಶಿಫ್ಗೆ ಹೋಗಿದ್ದರು. ಅಲ್ಲಿ ಮಾದಕ ವಸ್ತು ಸೇವಿಸುವುದು ಅವರ ಉದ್ದೇಶವಾಗಿತ್ತು (ಎನ್ಸಿಬಿ ವಾದ) ಹಾಗಿದ್ದ ಮೇಲೆ ಇದು ವೈಯಕ್ತಿಕ ಅಪರಾಧ ಆಗುತ್ತದೆಯೇ ಹೊರತು, ಸಂಚು ಆಗುವುದಿಲ್ಲ'' ಎಂದರು ವಕೀಲ್ ಅಮಿತ್.

ನಾಳೆ ಜಾಮೀನು ದೊರಕುವ ಸಾಧ್ಯತೆ
ಇನ್ನೂ ಹಲವು ಪ್ರಶ್ನೆಗಳನ್ನು ಅರ್ಬಾಜ್ ಸೇಠ್ ಪರ ವಕೀಲರು ಹೈಕೋರ್ಟ್ ನ್ಯಾಯಮೂರ್ತಿ ಮುಂದಿರಿಸಿದರು. ಆರ್ಯನ್ ಖಾನ್ ಪರ ವಕೀಲ ಮುಕುಲ್ ರೊಹ್ಟಗಿಗೆ ಹಾಗೂ ಎನ್ಸಿಬಿ ಪರ ವಕೀಲರಿಗೆ ಹೆಚ್ಚಿನ ಕಾಲಾವಕಾಶ ಇಂದು ದೊರೆಯಲಿಲ್ಲ. ಹಾಗಾಗಿ ಪ್ರಕರಣವನ್ನು ನಾಳೆಗೆ ಮುಂದೂಡಲಾಯಿತು. ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜಾಮೀನು ದೊರೆತಿದೆ. ನಾಳೆ ಆರ್ಯನ್ ಖಾನ್ಗೂ ಜಾಮೀನು ದೊರೆಯುವ ಸಂಭವ ಇದೆ.


Click it and Unblock the Notifications











