ಆರ್ಯನ್ ಪ್ರಕರಣ: ಎನ್ಸಿಬಿ ಜೊತೆಗಿದ್ದ ಬಿಜೆಪಿ ಕಾರ್ಯಕರ್ತ ಯಾರು?
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಬಹುವಾಗಿ ಚರ್ಚೆಯಾಗುತ್ತಿದೆ. ಆರ್ಯನ್ ಅನ್ನು ಎನ್ಸಿಬಿ ಬಂಧಿಸಿದ ಪಾರ್ಟಿಯಲ್ಲಿ 1500 ಕ್ಕೂ ಹೆಚ್ಚು ವ್ಯಕ್ತಿಗಳಿದ್ದರಾದರೂ ಶಾರುಖ್ ಪುತ್ರ ಹಾಗೂ ಇನ್ನಿಬ್ಬರನ್ನು ಮಾತ್ರವೇ ಬಂಧಿಸಿದ್ದರ ಬಗ್ಗೆ (ಆರಂಭದಲ್ಲಿ) ಹಲವರು ಪ್ರಶ್ನೆ ಮಾಡಿದ್ದಾರೆ.
ಆರ್ಯನ್ ಖಾನ್ ಹಾಗೂ ಇತರರನ್ನು ಬಂಧಿಸಿದ ಎನ್ಸಿಬಿ ಕಾರ್ಯಾಚರಣೆಯಲ್ಲಿ ಎನ್ಸಿಬಿ ಸಿಬ್ಬಂದಿಯಲ್ಲದವರು, ಅದರಲ್ಲಿಯೂ ಬಿಜೆಪಿ ಮುಖಂಡನೊಬ್ಬ ಪಾಲ್ಗೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಕ್ಟೋಬರ್ 02ರಂದು ಎನ್ಸಿಬಿಯು ಮುಂಬೈನಲ್ಲಿ ಕ್ರೂಸ್ ಶಿಪ್ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ಮಾಡಿ ಆರ್ಯನ್ ಖಾನ್ ಸೇರಿ ಎಂಟು ಮಂದಿಯನ್ನು ವಶಕ್ಕೆ ಪಡೆದಿತ್ತು. ವಶಕ್ಕೆ ಪಡೆದವರನ್ನು ಎನ್ಸಿಬಿ ಕಚೇರಿಗೆ ಕರೆದು ತರುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಅಂದು ಆರ್ಯನ್ ಜೊತೆ ಬಂಧನಕ್ಕೆ ಒಳಗಾಗಿದ್ದ ಅರ್ಬಾಜ್ ಸೇಠ್ ಅನ್ನು ವ್ಯಕ್ತಿಯೊಬ್ಬರು ಹಿಡಿದುಕೊಂಡು ಎನ್ಸಿಬಿ ಕಚೇರಿ ಒಳಕ್ಕೆ ಹೋದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ಆತ ಎನ್ಸಿಬಿ ಸಿಬ್ಬಂದಿ ಆಗಿರಲಿಲ್ಲ ಬದಲಿಗೆ ಬಿಜೆಪಿ ಮುಖಂಡನಾಗಿದ್ದ!
ವಿಡಿಯೋದಲ್ಲಿ ಅರ್ಬಾಜ್ ಸೇಠ್ ಅನ್ನು ಹಿಡಿದುಕೊಂಡು ಹೋಗುತ್ತಿರುವ ವ್ಯಕ್ತಿಯ ಹೆಸರು ಮನೀಶ್ ಭಾನುಶಾಲಿ ಎಂದಿದ್ದು, ತಾವು ಬಿಜೆಪಿ ಕಾರ್ಯಕರ್ತ ಎಂದು ಭಾನುಶಾಲಿ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ. ''ಶಿಪ್ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಡ್ರಗ್ಸ್ ಇರಲಿದೆ ಎಂಬ ವಿಷಯ ನನ್ನ ಗೆಳೆಯನಿಂದ ನನಗೆ ಗೊತ್ತಾಯಿತು. ಹಾಗಾಗಿ ನಾನು ಅಲ್ಲಿಗೆ ಹೋಗಿದ್ದೆ'' ಎಂದು ಭಾನುಶಾಲಿ ಹೇಳಿದ್ದಾರೆ.

ಹತ್ತು ವರ್ಷದಿಂದ ಬಿಜೆಪಿ ಕಾರ್ಯಕರ್ತ
''ನಾನು ಬಿಜೆಪಿ ಮುಖಂಡನಲ್ಲ, ನನಗೆ ಬಿಜೆಪಿಯಲ್ಲಿ ಯಾವ ಹುದ್ದೆಯೂ ಇಲ್ಲ, ಆದರೆ ನಾನು ಕಳೆದ ಹತ್ತು ವರ್ಷದಿಂದ ಬಿಜೆಪಿಯ ಕಾರ್ಯಕರ್ತ. ಯುವಕರು ಡ್ರಗ್ಸ್ನಂಥಹಾ ಮಾರಕ ವಸ್ತುಗಳಿಂದ ಹಾಳಾಗಬಾರದು ಎಂಬ ಸದುದ್ದೇಶದಿಂದ ನಾನು ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡೆ. ನಾನೇ ಮಾಹಿತಿಯನ್ನು ಎನ್ಸಿಬಿಗೆ ಹೇಳಿದ್ದೆ'' ಎಂದಿದ್ದಾರೆ ಭಾನುಶಾಲಿ. ''ನಾನು ಮುಖಂಡ ಅಲ್ಲ'' ಎಂದು ಭಾನುಶಾಲಿ ಹೇಳಿದ್ದಾರಾದರೂ ಅವರು ಪ್ರಧಾನಿ ಮೋದಿ ಜೊತೆ ಕೈಕುಲುಕುತ್ತಿರುವ, ಅಮಿತ್ ಶಾ ಜೊತೆ ಮಾತನಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶಾರುಖ್ ಪುತ್ರ ಇರುವುದು ಗೊತ್ತಿರಲಿಲ್ಲ: ಭಾನುಶಾಲಿ
''ಕಾರ್ಯಾಚರಣೆಗೆ ಹೋದಾಗ ಅಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇರುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಆ ಪಾರ್ಟಿಗೆ ಹೊರಗಿನ ನಗರಗಳಿಂದ ಬರುವ ಬಹುತೇಕರ ಹೆಸರು ನನಗೆ ನನ್ನ ಗೆಳೆಯನಿಂದ ಗೊತ್ತಾಗಿತ್ತು. ಆದರೆ ಮುಂಬೈನಿಂದ ಯಾರ್ಯಾರು ಬರುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಶಾರುಖ್ ಖಾನ್ ಪುತ್ರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗಲೇ ನನಗೆ ಮಾಹಿತಿ ಗೊತ್ತಾಗಿದ್ದು'' ಎಂದಿದ್ದಾರೆ ಭಾನುಶಾಲಿ.

ಆರ್ಯನ್ ಜೊತೆ ಸೆಲ್ಫಿ ತೆಗೆದುಕೊಂಡ ವ್ಯಕ್ತಿ ಯಾರು?
ಎನ್ಸಿಬಿಯು ಅಕ್ಟೋಬರ್ 02ರಂದು ಆರ್ಯನ್ ಖಾನ್ ಅನ್ನು ವಶಪಡಿಸಿಕೊಂಡು ಕಚೇರಿಗೆ ಕರೆದುಕೊಂಡು ಬಂದಾಗ ಆರ್ಯನ್ ಖಾನ್ ಜೊತೆಗೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಂಡಿದ್ದ. ಆ ಸೆಲ್ಫಿ ಬಹಳ ವೈರಲ್ ಆಗಿತ್ತು. ''ಆ ವ್ಯಕ್ತಿ ನಮ್ಮ ಸಿಬ್ಬಂದಿ ಅಲ್ಲ'' ಎನ್ಸಿಬಿ ಹೇಳಿಕೆ ನೀಡಿತ್ತು. ಆರ್ಯನ್ ಜೊತೆ ಸೆಲ್ಫಿ ತೆಗೆಸಿಕೊಂಡ ವ್ಯಕ್ತಿ ಹೆಸರು ಕಿರಣ್ ಗೋಸಾವಿ ಎಂದಾಗಿದ್ದು ಈತ 'ಖಾಸಗಿ ಪತ್ತೆದಾರ' ಎನ್ನಲಾಗಿದೆ. ಆದರೆ ಎನ್ಸಿಬಿಯು 'ಕಿರಣ್ ಗೋಸಾವಿಯು ಪ್ರಕರಣದ ಸಾಕ್ಷಿಧಾರ' ಎಂದು ಹೇಳಿದೆ. ಒಟ್ಟು ಹತ್ತು ಮಂದಿ ಸಾಕ್ಷ್ಯಗಳನ್ನು ಎನ್ಸಿಬಿ ಹೆಸರಿಸಿದ್ದು, ಅವರಲ್ಲಿ ಒಬ್ಬ ಈ ಕಿರಣ್ ಗೋಸಾವಿ.

ಕಿರಣ್ ಗೋಸಾವಿ ವಿರುದ್ಧ ಹಲವು ಪ್ರಕರಣ
ಕಿರಣ್ ಗೋಸಾವಿ ಬಗ್ಗೆ ಇನ್ನಷ್ಟು ವಿಷಯಗಳು ಇದೀಗ ಹೊರಬಂದಿದ್ದು, ಕಿರಣ್ ಗೋಸಾವಿ ವಿರುದ್ಧ ಹಲವು ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಪುಣೆಯ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪುಣೆಯ ಪೊಲೀಸ್ ಆಯುಕ್ತರು ಖಾತ್ರಿ ಪಡಿಸಿದ್ದಾರೆ. ಇದರ ಹೊರತಾಗಿ 2007ರಲ್ಲಿ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ, 2015 ರಲ್ಲಿ ಥಾಣೆಯ ಪೊಲೀಸ್ ಠಾಣೆಯಲ್ಲಿ, 2016ರಲ್ಲಿ ಫಾರಕ್ಷನ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ, ಕಿರಣ್ ಗೋಸಾವಿ, ಬಂದೂಕು ಹಿಡಿದುಕೊಂಡಿರುವ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ತನಿಖಾ ಕಾರ್ಯಾಚರಣೆಯಲ್ಲಿ ನಾಗರೀಕರು ಪಾಲ್ಗೊಳ್ಳಬಹುದೆ?
ಎನ್ಸಿಬಿ ಕಾರ್ಯಾಚರಣೆ ಮತ್ತು ತನಿಖೆಯಲ್ಲಿ ಕಿರಣ್ ಗೋಸಾವಿ ಹಾಗೂ ಮನೀಶ್ ಭಾನುಶಾಲಿ ಭಾಗವಹಿಸಿರುವ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದಾರೆ. ನಾಗರೀಕರು ಕೇಂದ್ರ ತನಿಖಾ ಸಂಸ್ಥೆಯ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳಬಹುದೇ? ಎನ್ಸಿಬಿ ಇವರಿಬ್ಬರನ್ನು ಕಾರ್ಯಾಚರಣೆಯಲ್ಲಿ ಯಾಕಾಗಿ ಬಳಸಿಕೊಂಡಿದೆ. ಪ್ರಕರಣಕ್ಕೂ ಇವರಿಗೂ ಸಂಬಂಧವೇನು? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಬಾಲಿವುಡ್ ನಟಿ ರೀಚಾ ಚಡ್ಡಾ ಸಹ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.


Click it and Unblock the Notifications











