ಆರ್ಯನ್ ಖಾನ್ ಪ್ರಕರಣ: ತನಿಖಾಧಿಕಾರಿ ಬದಲು
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಘಟನೆಯೊಂದು ನಡೆದಿದೆ. ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆಯನ್ನು ಆರ್ಯನ್ ಖಾನ್ ಪ್ರಕರಣದಿಂದ ಹೊರಗೆ ಇಡಲಾಗಿದೆ. ಇನ್ನು ಮುಂದೆ ಆರ್ಯನ್ ಖಾನ್ ಪ್ರಕರಣದ ತನಿಖೆಯನ್ನು ಬೇರೊಬ್ಬ ಅಧಿಕಾರಿ ನಡೆಸಲಿದ್ದಾರೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಸಮೀರ್ ವಾಂಖೆಡೆ ಎಂಟು ಕೋಟಿ ರುಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಸಹ ಬಹುವಾಗಿ ಚರ್ಚೆಗೆ ಕಾರಣವಾಗಿತ್ತು. ಅದು ಮಾತ್ರವೇ ಅಲ್ಲದೆ ಆರ್ಯನ್ ಪ್ರಕರಣದಲ್ಲಿ ಹಲವು ಕರ್ತವ್ಯ ಲೋಪ ಮಾಡಿರುವುದು ಸಹ ಮೇಲ್ನೋಟಕ್ಕೆ ಕಂಡು ಬಂದಿದೆ.
ಸಮೀರ್ ವಾಂಖೆಡೆ ಮೇಲೆ ಲಂಚ, ಕರ್ತವ್ಯ ಲೋಪದ ಆರೋಪಗಳು ಕೇಳಿ ಬರುತ್ತಿದ್ದಂತೆ ಎನ್ಸಿಬಿ ಕೇಂದ್ರ ಕಚೆರಿಯು ಸಮಿತಿಯೊಂದನ್ನು ರಚಿಸಿ ಅವರ ತನಿಖೆ ಆರಂಭಿಸಿತ್ತು. ಇದೀಗ ಸಮೀರ್ ವಾಂಖೆಡೆಯನ್ನು ಆರ್ಯನ್ ಪ್ರಕರಣದ ತನಿಖೆಯಿಂದ ಹೊರಹಾಕಲಾಗಿದ್ದು, ಬೇರೆ ಪ್ರಕರಣಗಳ ಜವಾಬ್ದಾರಿ ನೀಡಲಾಗಿದೆ.

ಆರ್ಯನ್ ಖಾನ್ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಮುಂಬೈ ಎನ್ಸಿಬಿ ಕಚೇರಿಯಿಂದ ದೆಹಲಿ ಕಚೇರಿಗೆ ವರ್ಗಾಯಿಸಲ್ಪಟ್ಟಿದೆ. ಈ ವರ್ಗಾಯಿಸಲ್ಪಟ್ಟ ಪ್ರಕರಣಗಳಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ರ ಅಳಿಯನ ಪ್ರಕರಣವೂ ಇದೆ. ಆರ್ಯನ್ ಖಾನ್ ಬಂಧನ ಆದಾಗಿನಿಂದಲೂ ಸಚಿವ ನವಾಬ್ ಮಲ್ಲಿಕ್ ಹಲವು ಆರೋಪಗಳನ್ನು ಸಮೀರ್ ವಾಂಖೆಡೆ ವಿರುದ್ಧ ಮಾಡುತ್ತಲೇ ಬಂದಿದ್ದಾರೆ. ವರ್ಗಾವಣೆ ಆಗಿರುವ ಪ್ರಕರಣಗಳನ್ನು ಸಂಜಯ್ ಸಿಂಗ್ ಎಂಬುವರು ತನಿಖೆ ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಮೀರ್ ವಾಂಖೆಡೆ ''ನನ್ನನ್ನು ತನಿಖೆಯಿಂದ ಹೊರಗೆ ಹಾಕಿಲ್ಲ, ನನ್ನ ಈಗಿರುವ ಸ್ಥಾನದಲ್ಲಿ ಯಾವ ಬದಲಾವಣೆಯೂ ಇಲ್ಲ ಆದರೆ ಕೆಲವು ಕೇಸುಗಳು ಇನ್ನಷ್ಟು ತನಿಖೆಯ ಅಗತ್ಯ ಇರುವ ಕಾರಣ ವರ್ಗಾವಣೆ ಆಗಿವೆಯಷ್ಟೆ'' ಎಂದಿದ್ದಾರೆ. ಎನ್ಸಿಬಿ ಕೇಂದ್ರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿಯೂ ಹೀಗೆಯೇ ಹೇಳಿದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಸ್ವತಂತ್ರ್ಯ ಸಾಕ್ಷ್ಯವಾಗಿರುವ ಪ್ರಭಾಕರ್ ಸಾಯಿಲ್ ಎಂಬಾತ, ತಾನು ಕೆಪಿ ಗೋಸಾವಿ (ಎನ್ಸಿಬಿ ಕಚೇರಿಯಲ್ಲಿ ಆರ್ಯನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾತ)ಯ ಡ್ರೈವರ್ ಆಗಿದ್ದು, ಆರ್ಯನ್ ಖಾನ್ ವಶಕ್ಕೆ ಪಡೆದ ಮಾರನೇಯ ದಿನ ನಾನು ಮುಂಬೈಗೆ ಬಂದೆ. ಅಂದು ನನ್ನಿಂದ ಎನ್ಸಿಬಿಯ ಅಧಿಕಾರಿಯೊಬ್ಬರು ಹಲವು ಪತ್ರಗಳಿಗೆ ಸಹಿ ಮಾಡಿಸಿಕೊಂಡರು. ಅದೇ ದಿನ ಕೆಪಿ ಗೋಸಾವಿ ಹಾಗೂ ಸ್ಯಾಮ್ ಡಿ ಸೋಜಾ ಇಬ್ಬರೂ ಶಾರುಖ್ ಮ್ಯಾನೇಜರ್ ಅನ್ನು ಭೇಟಿಯಾಗಿ 50 ಲಕ್ಷ ಹಣ ಪಡೆದರು ಎಂದಿದ್ದಾರೆ. ಅಷ್ಟು ಮಾತ್ರವೇ ಅಲ್ಲದೆ, ಗೋಸಾವಿಯು ಸ್ಯಾಮ್ ಡಿ ಸೊಜಾ ಜೊತೆ ಫೋನಿನಲ್ಲಿ ಮಾತನಾಡುತ್ತಾ 25 ಕೋಟಿಗೆ ಬೇಡಿಕೆ ಇಡುವಂತೆಯೇ ಅದರಲ್ಲಿ 8 ಕೋಟಿಯನ್ನು ಎನ್ಸಿಬಿಗೆ ನೀಡಬೇಕೆಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಪ್ರಭಾಕರ್ ಸಾಯಿಲ್ ಹೇಳಿಕೆ ಬಳಿಕ ಸಮೀರ್ ವಾಂಖೆಡೆ ವಿರುದ್ಧ ಹಲವು ಅನುಮಾನಗಳು ಎದ್ದಿದ್ದು, ಕೇಂದ್ರ ಕಚೇರಿಯು ತನಿಖೆಗೆ ವಿಶೇಷ ತಂಡವೊಂದನ್ನು ರಚಿಸಿದೆ. ವಿಶೇಷ ತಂಡವು, ಕೆಪಿ ಗೋಸಾವಿ, ಸ್ಯಾಮ್ ಡಿಸೋಜಾ, ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ, ಪ್ರಭಾಕರ್ ಸಾಯಿಲ್, ಸಮೀರ್ ವಾಂಖೆಡೆ ಹಾಗೂ ಇನ್ನೂ ಕೆಲವರನ್ನು ವಿಚಾರಣೆ ನಡೆಸಲಿದೆ.
ಶಾರುಖ್ ಪುತ್ರ ಆರ್ಯನ್ ಖಾನ್ ಅನ್ನು ಅಕ್ಟೋಬರ್ 02ರಂದು ಎನ್ಸಿಬಿಯು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿತ್ತು. ವಿಚಾರಣೆ ಬಳಿಕ ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್-ಮುನ್ ಧಮೇಚಾ ಅವರುಗಳನ್ನು ಬಂಧಿಸಲಾಗಿತ್ತು. ಹಲವು ಪ್ರಯತ್ನಗಳ ಬಳಿಕ ಬಾಂಬೆ ಹೈಕೋರ್ಟ್ನಲ್ಲಿ ಆರ್ಯನ್ ಖಾನ್ಗೆ ಜಾಮೀನು ದೊರೆತು ಅಕ್ಟೋಬರ್ 31 ರಂದು ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆಯ ಜೈಲಿನಿಂದ ಬಿಡುಗಡೆ ಹೊಂದಿದರು.


Click it and Unblock the Notifications











