ಶಾರುಖ್ ಪುತ್ರನ ಮೊಬೈಲ್ ಚಾಟ್ನಿಂದ ಆಘಾತಕಾರಿ ಅಂಶ ಬಯಲಿಗೆ
ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮೊಬೈಲ್ ಚಾಟ್ನಿಂದ ಕೆಲವು ಆಘಾತಕಾರಿ ಅಂಶಗಳು ಬಯಲಿಗೆ ಬಂದಿದೆ ಎಂದು ಎನ್ಸಿಬಿ ಹೇಳಿದೆ.
ಅಕ್ಟೋಬರ್ 03ರಂದು ಆರ್ಯನ್ ಖಾನ್ ಹಾಗೂ ಇತರ ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದಾಗಲೇ ಎನ್ಸಿಬಿಯು ತನಿಖೆ ವೇಳೆ ಕೆಲವು ಆಘಾತಕಾರಿ ಅಂಶಗಳು ಬಯಲಾಗಿವೆ, ಹೆಚ್ಚುವರಿ ತನಿಖೆಯ ಅಗತ್ಯವಿದೆ ಎಂದು ಹೇಳಿತ್ತು.
ಅಂತೆಯೇ ಆರ್ಯನ್ ಖಾನ್ ಹಾಗೂ ಅರ್ಬಾಜ್ ಸೇಠ್ ಮರ್ಚೆಂಟ್ರ ವಿಚಾರಣೆ ವೇಳೆ ಅವರ ವಾಟ್ಸ್ಆಪ್ ಚಾಟ್ ಹಾಗೂ ಬ್ರೌಸರ್ ಹಿಸ್ಟರಿಯಿಂದ ಕೆಲವು ಆಘಾತಕಾರಿ ಅಂಶಗಳು ಎನ್ಸಿಬಿಯ ಗಮನಕ್ಕೆ ಬಂದಿವೆ.
ಡಾರ್ಕ್ ವೆಬ್ಗೆ ಸಂಬಂಧ ಹೊಂದಿದ್ದಾಗಿ ಹಾಗೂ ಬಿಟ್ಕಾಯಿನ್ ಕುರಿತಾಗಿಯೂ ಕೆಲವು ಅಂಶಗಳು ಪತ್ತೆಯಾಗಿವೆ ಎಂದು ಎನ್ಸಿಬಿ ಹೇಳಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
''ನಾನು ಈ ಪ್ರಕರಣದಲ್ಲಿ ಇನ್ನಷ್ಟು ತನಿಖೆ ಮಾಡಬೇಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಬಂಧನಗಳನ್ನು ಮಾಡಿದ್ದೇವೆ. ಇಬ್ಬರು ಮುಖ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದೇವೆ. ತನಿಖೆ ವೇಳೆ ಆರೋಪಿಗಳಿಗೆ ಡಾರ್ಕ್ ವೆಬ್ ಹಾಗೂ ಬಿಟ್ಕಾಯಿನ್ ಸಂಬಂಧ ಇರುವುದಾಗಿ ಗೊತ್ತಾಗಿದೆ. ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ'' ಎಂದು ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.

ಡಾರ್ಕ್ ವೆಬ್ ಮತ್ತು ಬಿಟ್ಕಾಯಿನ್
ಮಾದಕ ವಸ್ತು ಖರೀದಿ, ಮಾರಾಟಕ್ಕೆ ಡಾರ್ಕ್ ವೆಬ್ ಬಳಸಲಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಡ್ರಗ್ಸ್ ಖರೀದಿಸುವಾಗ ಬಿಟ್ಕಾಯಿನ್ ಮೂಲಕ ಹಣ ನೀಡುವ ವ್ಯವಸ್ಥೆ ಕೆಲ ವರ್ಷಗಳಿಂದ ಚಾಲ್ತಿಗೆ ಬಂದಿದೆ. ಹಾಗಾಗಿ ಈ ಎರಡು ವಿಷಯಗಳ ಬಗ್ಗೆ ಎನ್ಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ. ಆರ್ಯನ್ ಖಾನ್, ಅರ್ಬಾಜ್ ಖಾನ್ ಹಾಗೂ ಮುನ್ಮುನ್ ಧಮೇಚಾ ಅವರುಗಳನ್ನು ಅಕ್ಟೋಬರ್ 07ರವರೆಗೆ ಎನ್ಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ಐಶಾರಾಮಿ ಕ್ರೂಸ್ ಶಿಪ್ನಲ್ಲಿ ನಡೆದಿತ್ತು ಪಾರ್ಟಿ
ಮುಂಬೈ ತೀರಕ್ಕೆ ಸಮೀಪದಲ್ಲಿ ಸಮುದ್ರ ಮಧ್ಯೆ ಐಶಾರಾಮಿ ಕ್ರೂಸ್ ಶಿಪ್ ಮೇಲೆ ಎನ್ಸಿಬಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದರು. ಈ ಸಮಯ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು, ಅವರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು. ನಂತರ ಆರ್ಯನ್ ಖಾನ್, ಅರ್ಬಾಜ್ ಖಾನ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾ ಅವರುಗಳನ್ನು ಎನ್ಸಿಬಿ ಬಂಧಿಸಿತು.

ಪಾರ್ಟಿಯಲ್ಲಿ ಸಿಕ್ಕಿದ್ದು ಏನೇನು?
ಶಾರುಖ್ ಪುತ್ರ ಭಾಗವಹಿಸಿದ್ದ ಪಾರ್ಟಿಯಲ್ಲಿ 13 ಗ್ರಾಂ ಕೊಕೇನ್, ಐದು ಗ್ರಾಂ ಎಂಡಿ (ಮೆಫೆಡ್ರೋನ್), 21 ಗ್ರಾಂ ಚರಸ್, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ದೊರೆತಿವೆ. ಜೊತೆಗೆ 1.33 ಲಕ್ಷ ಹಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವನೆ ಪ್ರಕರಣ ದಾಖಲಿಸಿದ್ದರೆ ಅರ್ಬಾಜ್ ಖಾನ್ ಹಾಗೂ ಮುನ್ಮುನ್ ಧಮೇಚಾ ವಿರುದ್ಧ ಡ್ರಗ್ಸ್ ಸಾಗಾಟ, ಮಾರಾಟದ ಪ್ರಕರಣ ದಾಖಲಿಸಲಾಗಿದೆ. ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ದೊರೆತಿಲ್ಲ ಎಂದು ನ್ಯಾಯಾಲಯದಲ್ಲಿ ಆರ್ಯನ್ ಪರ ವಕೀಲರು ವಾದ ಮಾಡಿದ್ದಾರೆ.

ರಿಯಾ ಚಕ್ರವರ್ತಿ ಉದಾಹರಣೆ ನೀಡಿದ ವಕೀಲ ಸತೀಶ್
ವಾಟ್ಸ್ಆಪ್ ಚಾಟ್ ಆಧರಿಸಿ ಯಾವುದೇ ವ್ಯಕ್ತಿಯನ್ನು ಆರೋಪಿ ಎನ್ನಲಾಗುವುದಿಲ್ಲ ಎಂದು ಆರ್ಯನ್ ಪರ ವಕೀಲ ಸತೀಶ್ ನಿನ್ನೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಪೂರಕವಾಗಿ ರಿಯಾ ಚಕ್ರವರ್ತಿ ಪ್ರಕರಣದ ಆದೇಶವನ್ನು ಉಲ್ಲೇಖಿಸಿದ್ದರು. ಆದರೆ ಸತೀಶ್ ವಾದವನ್ನು ಪುರಸ್ಕರಿಸದ ನ್ಯಾಯಾಲವು, ಪ್ರಕರಣದಲ್ಲಿ ಸತ್ಯಾಂಶ ಹೊರಬರುವುದು ಆರೋಪಿಗೆ ಅವಶ್ಯಕ, ತನಿಖೆ ಮುಗಿವ ವರೆಗೆ ಆರೋಪಿಯ ಮುಗ್ಧನೆಂಬುದು ಗೊತ್ತಾಗುವುದಿಲ್ಲ ಆರೋಪಿ, ಆರೋಪಗಳಿಂದ ಮುಕ್ತನಾಗಲು ತನಿಖೆ ಆಗಬೇಕಿರುವುದು ಮುಖ್ಯ ಎಂದು ಹೇಳಿ ಆರ್ಯನ್ ಅನ್ನು ಎನ್ಸಿಬಿ ವಶಕ್ಕೆ ನೀಡಿತು ನ್ಯಾಯಾಲಯ.


Click it and Unblock the Notifications











