Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಯನ್ ಖಾನ್ ವಿರುದ್ಧ ಸಾಕ್ಷ್ಯವೇ ಇಲ್ಲ! ಹಾಗಿದ್ದರೆ ಬಂಧಿಸಿದ್ದು ಏಕೆ?
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕಳೆದ ವರ್ಷ ಭಾರತದಲ್ಲಿ ಅತಿ ಹೆಚ್ಚು ಚರ್ಚಿತವಾದ ವಿಷಯಗಳಲ್ಲಿ ಒಂದು. ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಘಟನೆ, ವಿಷಯ, ಸುದ್ದಿಗಳಲ್ಲಿ ಒಂದಾಗಿತ್ತು ಈ ಪ್ರಕರಣ. ಸ್ವತಃ ಆರ್ಯನ್ ಖಾನ್ ಭಾರತದ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ಆಗಿದ್ದರು.
ಕಳೆದ ವರ್ಷ ಅಕ್ಟೋಬರ್ 02 ರ ರಾತ್ರಿ ಮುಂಬೈನಲ್ಲಿ ಕ್ರೂಸ್ ಶಿಪ್ನಲ್ಲಿ ಪಾರ್ಟಿಗೆಂದು ತೆರಳಿದ್ದ ಆರ್ಯನ್ ಖಾನ್ ಅನ್ನು ಶಿಪ್ ಹತ್ತುವ ಮುನ್ನವೇ ಎನ್ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ) ಅಧಿಕಾರಿಗಳು ತಡೆದು ವಶಕ್ಕೆ ಪಡೆದಿದ್ದರು. ಮತ್ತೊಂದು ಕಾರಿನಲ್ಲಿ ಬಂದಿದ್ದ ಆರ್ಯನ್ ಖಾನ್ರ ಗೆಳೆಯ ಅರ್ಬಾಜ್ ಮರ್ಚೆಂಟ್ ಅನ್ನು ಸಹ ಎನ್ಸಿಬಿ ವಶಕ್ಕೆ ಪಡೆದಿತ್ತು. ಬಳಿಕ ಅಕ್ಟೋಬರ್ 03 ರಂದು ಆರ್ಯನ್, ಅರ್ಬಾಜ್ ಹಾಗೂ ಮಾಡೆಲ್ ಮುನ್ ಮುನ್ ಧಮೇಚಾರನ್ನು ಎನ್ಸಿಬಿ ಬಂಧಿಸಿತು.
ಬಳಿಕ ಈ ಪ್ರಕರಣ ಹಲವು ಸುತ್ತುಗಳ ವಿವಾದಕ್ಕೆ ಕಾರಣವಾಯ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಎರಡು ಬಣಗಳ ಸೃಷ್ಟಿಯಾಯಿತು. ಆರ್ಯನ್ ಖಾನ್ ತಪ್ಪಿತಸ್ಥನೆಂದು, ನಿರಪರಾಧಿಯೆಂದು ಚರ್ಚೆಗಳು ಪ್ರಾರಂಭವಾದವು. ಬಳಿಕ ಆರ್ಯನ್ ಖಾನ್ ಬಂಧನದ ಹಿಂದೆ ಖಾಸಗಿ ವ್ಯಕ್ತಿಗಳ ಕೈವಾಡ ಇರುವುದು ಗೊತ್ತಾಯಿತು. ಎನ್ಸಿಬಿಯು ಹಣಕ್ಕಾಗಿ ಆರ್ಯನ್ ಅನ್ನು ಬಂಧಿಸಿದೆ ಎಂದು ಸಾಕ್ಷೀದಾರರೊಬ್ಬರು ಆರೋಪ ಮಾಡಿದರು. ಇದರಿಂದ ಎನ್ಸಿಬಿಯ ಅಧಿಕಾರಿ ಸಮೀರ್ ವಾಂಖೆಡೆಯ ವರ್ಗಾವಣೆ ಆಗಿ ಆ ಜಾಗಕ್ಕೆ ಎನ್ಸಿಬಿಯ ವಿಶೇಷ ದಳ ಬಂದು ಪ್ರಕರಣದ ತನಿಖೆ ಮುಂದುವರೆಸಿತು.
ಬಹುತೇಕ ಒಂದು ತಿಂಗಳು ಜೈಲಿನಲ್ಲಿದ್ದ ಆರ್ಯನ್ ಖಾನ್ಗೆ ಅಕ್ಟೋಬರ್ 28 ರಂದು ಜಾಮೀನು ದೊರೆಯಿತು. ಇದೀಗ ಈ ಪ್ರಕರಣದಲ್ಲಿ ಬೆಳವಣಿಗೆ ನಡೆದಿದ್ದು, ಆರ್ಯನ್ ಖಾನ್ ವಿರುದ್ಧ ಯಾವುದೇ ಮಹತ್ವದ ಸಾಕ್ಷ್ಯಗಳು ಕಂಡು ಬಂದಿಲ್ಲವೆಂದು ಸ್ವತಃ ಎನ್ಸಿಬಿಯ ವಿಶೇಷ ತನಿಖಾ ದಳ ಹೇಳಿದೆ.
ಆರ್ಯನ್ ಖಾನ್ ಯಾವುದೇ ಮಾದಕ ವಸ್ತು ಜಾಲದಲ್ಲಿ ಭಾಗಿಯಾಗಿರಲಿಲ್ಲ ಅಥವಾ ಪ್ರಕರಣದ ನ್ಯಾಯಾಂಗ ವಾದದ ವೇಳೆ ಎನ್ಸಿಬಿ ಆರೋಪಿಸಿದ್ದಂತೆ ಅಂತರಾಷ್ಟ್ರೀಯ ಮಾದಕ ಜಾಲದ ಭಾಗವಾಗಿಯೂ ಇಲ್ಲ. ಈ ಆರೋಪಗಳನ್ನು ಋಜುವಾತು ಪಡಿಸುವ ಯಾವುದೇ ಸಾಕ್ಷ್ಯ ಆರ್ಯನ್ ಖಾನ್ ವಿರುದ್ಧ ಇಲ್ಲ ಎಂದು ಎನ್ಸಿಬಿ ವಿಶೇಷ ತನಿಖಾ ದಳ ಹೇಳಿರುವುದಾಗಿ 'ಹಿಂದುಸ್ಥಾನ್ ಟೈಮ್ಸ್' ವರದಿ ಮಾಡಿದೆ.
ಅದು ಮಾತ್ರವೇ ಅಲ್ಲದೆ, ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಅವರಿಂದ ಯಾವುದೇ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿರಲಿಲ್ಲ. ಅವರ ಮೊಬೈಲ್ ಅನ್ನು ವಶಪಡಿಸಿಕೊಂಡು ಸಂಭಾಷಣೆ ತನಿಖೆ ನಡೆಸುವ ಅಗತ್ಯವೂ ಇರಲಿಲ್ಲ ಎಂದು ಈ ಹಿಂದೆ ಆರ್ಯನ್ ಖಾನ್ ಪ್ರಕರಣದ ತನಿಖೆ ಮಾಡಿದ್ದ ತಂಡ ಎಸಗಿದ್ದ ಲೋಪದ ಬಗ್ಗೆಯೂ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೆ ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ಹಾಗೂ ಕ್ರೂಡೆಲಿಯಾ ಕ್ರೂಸ್ ಶಿಪ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೆಲವು ದುರುದ್ದೇಶಪೂರ್ವಕ ಕಾರ್ಯಗಳು ನಡೆದಿರುವುದಾಗಿಯೂ ಎಸ್ಐಟಿ ಅನುಮಾನ ವ್ಯಕ್ತಪಡಿಸಿದೆ. ಆ ಮೂಲಕ ಆರ್ಯನ್ ಅನ್ನು ಬಂಧಿಸಿದ್ದ ಸಮೀರ್ ವಾಂಖಡೆ ಕರ್ತವ್ಯ ಲೋಪ ಎಸಗಿರುವ ಸುಳಿವನ್ನು ಎಸ್ಐಟಿ ನೀಡಿದೆ. ಎನ್ಸಿಬಿಯ ಎಸ್ಐಟಿ ತನಿಖೆ ಇನ್ನು ಪೂರ್ಣವಾಗಿಲ್ಲ. ಹಾಗಾಗಿ ತನಿಖೆಯ ವರದಿಯನ್ನು ಮುಂದಿನ ತಿಂಗಳು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.