ಆರ್ಯನ್ ಖಾನ್ ಜಾಮೀನು ವಿಚಾರಕ್ಕೆ "ಫೈನಲಿ" ಎಂದಿದ್ದು ಯಾಕೆ ರಮ್ಯಾ
ಸತತ ಪ್ರಯತ್ನಗಳನ್ನು ಮಾಡಿ ಕೊನೆಗೂ ಶಾರುಖ್ ಪುತ್ರ ಆರ್ಯನ್ ಖಾನ್ಗೆ ಜಾಮೀನು ದೊರಕಿದೆ. ಡ್ರಗ್ ಕೇಸ್ನಲ್ಲಿ ಸಿಲುಕಿಕೊಂಡು ಸುಮಾರು 25 ಕ್ಕೂ ಹೆಚ್ಚು ದಿನ ಬಂಧನಕೊಳಗಾಗಿದ್ದ ಆರ್ಯನ್ ಖಾನ್ಗೆ ಅ.28ಕ್ಕೆ ಬಾಂಬೆ ಹೈ ಕೋರ್ಟ್ ಜಾಮೀನು ನೀಡಿದೆ. ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದ್ದು, ಶಾರುಖ್ ಕುಟುಂಬ ಮಗನನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದಾರೆ. ಆರ್ಯನ್ಖಾನ್ಗೆ ಜಾಮೀನು ಸಿಕ್ಕಿರುವುದಕ್ಕೆ ಹಲವು ಸೆಲೆಬ್ರೇಟಿಸ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದು, ನಟಿ ರಮ್ಯಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆರ್ಯನ್ ಖಾನ್ ಬಂಧನ ಆದಾಗಿನಿಂದಲೂ ರಮ್ಯಾ ಟ್ವೀಟ್ ಮಾಡುತ್ತಲೇ ತಮ್ಮ ಅನಿಸಿಕೆಯನ್ನು ಹೊರಹಾಕುತ್ತಿದ್ದರು. ಇದೀಗ ಆರ್ಯನ್ ಖಾನ್ ಹೊರಬಂದಿರುವುದಕ್ಕೆ ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೈನಲಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆರ್ಯನ್ ಖಾನ್ ಫೈನಲಿ ಹೊರಬಂದಿದ್ದಾರೆ ಎಂಬರ್ಥದಲ್ಲಿ ನಿಟ್ಟುಸಿರು ಬಿಟ್ಟಂತಿದೆ ರಮ್ಯಾ. ಈ ಹಿಂದೆ ಕೂಡ ಆರ್ಯನ್ ಖಾನ್ನನ್ನು ಎನ್ಸಿಬಿ ಬಂಧಿಸಿದ ಸಂದರ್ಭದಲ್ಲೂ ಧ್ವನಿ ಎತ್ತಿದ್ದ ರಮ್ಯಾ, ನಾಲ್ಕು ಮಂದಿ ರೈತರನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಸಚಿವರ ಪುತ್ರ ಆರಾಮಾಗಿ ಹೊರಗೆ ತಿರುಗುತ್ತಿದ್ದಾನೆ, ಡ್ರಗ್ ಕೇಸ್ ನಲ್ಲಿ ಆರ್ಯನ್ ಖಾನ್ ಬಂಧನ ವಾಗಿದೆ. ಮೃತ ರೈತ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೊರಟಿದ್ದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸುತ್ತಾರೆ. ಇದೇನಾ ನವ ಭಾರತ ಎಂದು ಕಟುವಾಗಿ ಟೀಕಿಸಿದ್ದರು.
ಅಷ್ಟೇ ಅಲ್ಲದೆ ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್ ಇರಲಿಲ್ಲ ಹಾಗೂ ಆರ್ಯನ್ ಡ್ರಗ್ಸ್ ಸೇವಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲಾ. ಹೀಗಿದ್ದರೂ ವಶಕ್ಕೆ ಪಡೆಯಲಾಗಿದೆ. ನ್ಯಾಯಲಯದಲ್ಲಿ ಅವರ ವಾಟ್ಸ್ಆಪ್ ಚಾಟ್ಗಳನ್ನು ಪುರಾವೆಯಾಗಿ ಸ್ವೀಕರಿಸುವುದಿಲ್ಲ. ಹಾಗೇ ವಿಚಾರಣೆ ವೇಳೆ ಆರ್ಯನ್ ಖಾನ್ ಹೇಳಿಕೆಯನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ತಿಳಿಸಿದರೂ, ಈ ಮಾಹಿತಿಗಳು ಮಾಧ್ಯಮಕ್ಕೆ ಹೇಗೆ ಸಿಗುತ್ತಿದೆ ಎಂದು ಪ್ರಶ್ನೆ ಕೂಡ ಮಾಡಿದ್ದರು.. ಈಗ ಆರ್ಯನ್ಖಾನ್ಗೆ ಜಾಮೀನು ಸಿಕ್ಕಿರುವುದಕ್ಕೆ ರಮ್ಯಾ ಖುಷಿಯಾದಂತಿದೆ.

ರಮ್ಯಾ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಶಾರುಖ್ ಪುತ್ರ ಆರ್ಯನ್ ಪರವಾಗಿ ಮಾತನಾಡಿದ್ದಾರೆ. ಹಾಗೆ ಆರ್ಯನ್ ಖಾನ್ಗೆ ಜಾಮೀನು ಸಿಕ್ಕಿರುವುದಕ್ಕೆ ಹಲವರು ಖುಷಿ ವ್ಯಕ್ತಪಡಿಸಿದ್ದಾರೆ. ಸೋನು ಸೂದ್, ಕರಣ್ ಜೋಹರ್ , ಮಾಧವನ್, ಸೋನಮ್ ಕಪೂರ್, ಮಿಕಾ ಸಿಂಗ್, ಹನ್ಸಲ್ ಮೆಹ್ತಾ, ಸಂಜಯ್ ಗುಪ್ತಾ, ಮಲೈಕಾ ಅರೋರಾ,ಸ್ವರಾ ಭಾಸ್ಕರ್, ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಆರ್ಯನ್ ಖಾನ್ ಸಹೋದರಿ ಸುಹಾನಾ ಖಾನ್ ಕೂಡ ಆರ್ಯನ್ಗೆ ಬೇಲ್ ಸಿಕ್ಕಿರೋದಕ್ಕೆ ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ "ಐ ಲವ್ ಯೂ" ಎಂದು ಬರೆದುಕೊಂಡಿದ್ದಾರೆ. ನಟಿ ಮಲೈಕಾ ಅರೋರ ಕೂಡ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ನಟ ಸೋನು ಸೂದ್ ಸಮಯ ಬಂದಾಗ ಎಲ್ಲವೂ ಸರಿ ಆಗುತ್ತೆ ಎಂದಿದ್ದಾರೆ. ತಮಿಳು ನಟ ಆರ್. ಮಾಧವನ್ ಕೂಡ ಒಬ್ಬ ತಂದೆಯಾಗಿ ನನಗೆ ಈಗ ಸಮಾಧಾನ ಎನಿಸುತ್ತಿದೆ. ಒಳ್ಳೆಯ ಸಂಗತಿಗಳೇ ನಡೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಹೀಗೆ ಸಾಲು ಸಾಲು ಮಂದಿ ಶಾರುಖ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿದೆ. ಆದರೆ ಶಾರುಖ್ ಕುಟುಂಬ ಮಾತ್ರ ಮಗ ಹೊರಬರುತ್ತಿರುವುದಕ್ಕೆ ಸಂತಸ ಗೊಂಡಿದೆ. ಜೈಲಿನಲ್ಲಿ ಒಂದಷ್ಟು ನಿಯಮಾವಳಿಗಳಿದ್ದು ಅದನೆಲ್ಲ ಮುಗಿಸಿಕೊಂಡು ಇಂದು ಸಂಜೆಯ ಒಳಗಾಗಿ ಆರ್ಯನ್ ಖಾನ್ ತನ್ನ ಮನೆ ಸೇರಿಕೊಳ್ಳಲಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳು ಕೂಡ ಸಂತಸಗೊಂಡಿದ್ದು, ಮುಂಬೈನಲ್ಲಿರೋ ಶಾರುಖ್ ನಿವಾಸ ಮನ್ನತ್ ಕಡೆ ಆಗಮಿಸುತ್ತಿದ್ದಾರೆ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ತಾಯಿ ಗೌರಿ ಖಾನ್ ಕೂಡ ಮಗನ ಆಗಮನಕ್ಕೆ ಕಾತುರರಾಗಿದ್ದಾರೆ.


Click it and Unblock the Notifications











