ಡ್ರಗ್ಸ್ ಪ್ರಕರಣ: ಎನ್ಸಿಬಿ ವಶಕ್ಕೆ ಶಾರುಖ್ ಪುತ್ರ, ನ್ಯಾಯಾಲಯದಲ್ಲಿ ನಡೆದಿದ್ದೇನು?
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದು, ಇಂದು ತಡ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಆರ್ಯನ್ ಖಾನ್ ಜೊತೆಗೆ ಇನ್ನೂ ಇಬ್ಬರನ್ನು ಎನ್ಸಿಬಿಯು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು, ಈ ಮೂವರನ್ನು ಒಂದು ದಿನದ ಮಟ್ಟಿಗೆ ಎನ್ಸಿಬಿ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ. ಮುಂದಿನ ವಿಚಾರಣೆಯು ಸೋಮವಾರ (ಅಕ್ಟೋಬರ್ 04)ರ ಮಧ್ಯಾಹ್ನ ನಡೆಯಲಿದೆ.
ಆರ್ಯನ್ ಖಾನ್ ವಿರುದ್ಧ ಮಾದಕ ವಸ್ತು ಸೇವನೆ, ಖರೀದಿ, ಮಾರಾಟದಲ್ಲಿ ಭಾಗಿ ಇನ್ನಿತರೆ ಆರೋಪಗಳನ್ನು ಎನ್ಸಿಬಿ ಹೊರಿಸಿದೆ. ಆರ್ಯನ್ ಜೊತೆ ಬಂಧನಕ್ಕೆ ಒಳಗಾಗಿರುವ ಅರ್ಬಾಜ್ ಖಾನ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾ ಮೇಲೆಯೂ ಎನ್ಡಿಪಿಎಸ್ ಕಾಯ್ದೆಯ ಹಲವು ಸೆಕ್ಷನ್ಗಳನ್ನು ಹೊರಿಸಲಾಗಿದೆ.
ಆರ್ಯನ್ ಖಾನ್ ಹಾಗೂ ಇತರ ಬಂಧಿತರನ್ನು ಅಡಿಷನಲ್ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಆರ್.ಕೆ.ರಾಜೇಭೋಸ್ಲೆ ಎದುರು ಹಾಜರುಪಡಿಸಲಾಯಿತು. ಬಂಧಿತರು ಹಾಗೂ ಡ್ರಗ್ಸ್ ಪೆಡ್ಲರ್ಗಳು, ಸಪ್ಲೈಯರ್ಸ್ಗಳ ನಡುವೆ ನಿಯಮಿತ ಸಂಭಾಷಣೆ ನಡೆದಿರುವುದು ವಾಟ್ಸ್ಆಪ್ ಚಾಟ್ನಿಂದ ಬಹಿರಂಗವಾಗಿದೆಯಾದ್ದರಿಂದ ಹೆಚ್ಚಿನ ತನಿಖೆ ಅವಶ್ಯಕತೆ ಇದೆ ಎಂದು ಎನ್ಸಿಬಿ ನ್ಯಾಯಾಲಯದಲ್ಲಿ ಹೇಳಿ ಅಕ್ಟೋಬರ್ 05ರವರೆಗೆ ಬಂಧಿತರನ್ನು ಎನ್ಸಿಬಿ ವಶಕ್ಕೆ ನೀಡಬೇಕೆಂದು ಮನವಿ ಮಾಡಿತು.

ಆರ್ಯನ್ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಸತೀಶ್ ಮಾನೆಶಿಂಧೆ ವಾದ ಆರಂಭಿಸಿ, ''ನನ್ನ ಕಕ್ಷೀಧಾರ ಆರ್ಯನ್ ಖಾನ್ ಅನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು ಹಾಗಾಗಿ ಅವರು ಹೋಗಿದ್ದರು. ಆರ್ಯನ್ ಬಳಿ ಯಾವುದೇ ಮಾದಕ ವಸ್ತುಗಳು ದೊರೆತಿಲ್ಲ'' ಎಂದರು.
''ಪ್ರಕರಣದ ವಿಚಾರಣೆಗಾಗಿ ನನ್ನನ್ನು ಒಂದು ದಿನದ ಮಟ್ಟಿಗೆ ರಿಮ್ಯಾಂಡ್ಗೆ ನೀಡಲು ನನ್ನ ಅಭ್ಯಂತರವಿಲ್ಲ. ನನ್ನ ಬಳಿ ಯಾವುದೇ ಮಾದಕ ವಸ್ತು ದೊರೆತಿಲ್ಲ. ನಾನು ಮಾದಕ ವಸ್ತು ಸೇವನೆ ಮಾಡಿದ್ದೇನೆ ಎಂಬ ಆರೋಪವೂ ನನ್ನ ಮೇಲೆ ಇಲ್ಲ. ಸೆಕ್ಷನ್ 27 ನನ್ನ ಮೇಲೆ ಲಾಘು ಆಗುವುದಿಲ್ಲ'' ಆರ್ಯನ್ ಪರವಾಗಿ ತಾವು ನ್ಯಾಯಾಲಯಕ್ಕೆ ಅರಿಕೆ ಮಾಡಿದರು ವಕೀಲ ಸತೀಶ್ ಮಾನೆಶಿಂಧೆ.
ಹಿರಿಯ ವಕೀಲ ಮಜೀದ್ ಮೆನನ್ ಪ್ರಕಾರ, ಆರ್ಯನ್ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಜಾಮೀನು ದೊರಕುವುದು ಸುಲಭ. ಆರ್ಯನ್ ಸೇವಿಸಿದ್ದಾನೆ ಎಂದು ಹೇಳಲಾಗುತ್ತಿರುವ ಮಾದಕ ವಸ್ತುವಿನ ಪ್ರಮಾಣ ದೊಡ್ಡದಲ್ಲ, ಅದು ಬಹಳ ಕಡಿಮೆಯದ್ದು ಹಾಗಾಗಿ ಆರ್ಯನ್ಗೆ ಸುಲಭವಾಗಿ ಜಾಮೀನು ದೊರಕಲಿದೆ. ಮತ್ತು ಪಾರ್ಟಿಯ ಆಯೋಜಕ ಆರ್ಯನ್ ಅಲ್ಲದ ಕಾರಣ ಡ್ರಗ್ಸ್ನ ಸಾಗಾಟದ ಆರೋಪದಿಂದ ಮುಕ್ತವಾಗಬಹುದಾಗಿದೆ'' ಎಂದಿದ್ದಾರೆ.
ಮತ್ತೊಬ್ಬ ಹಿರಿಯ ವಕೀಲ ರಿಜ್ವಾನ್ ಮರ್ಚೆಂಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಆರ್ಯನ್ಗೆ ಜಾಮೀನು ದೊರಕುವುದು ಸುಲಭವಲ್ಲ. ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 27, 20ಬಿ, ಸೆಕ್ಷನ್ 8(ಸಿ) ಇವುಗಳು ಲಘುವಾದ ಸೆಕ್ಷನ್ಗಳಲ್ಲ. 20(b) ಪ್ರಕಾರ ಮಾದಕ ವಸ್ತುವಿನ ಪ್ರಮಾಣ ಬಹಳ ಇಲ್ಲದೇ ಇರಬಹುದು ಆದರೆ ಕಡಿಮೆ ಅಲ್ಲ ಎಂದಿದ್ದಾರೆ. ಆರೋಪ ಸಾಬೀತಾದರೆ ಹತ್ತು ವರ್ಷ ಕಠಿಣ ಶಿಕ್ಷೆಯಾಗುತ್ತದೆ ಎಂದಿದ್ದಾರೆ.


Click it and Unblock the Notifications











