ಆರ್ಯನ್ ಕೇಸ್: ಶಾರೂಖ್ ಖಾನ್ ಕ್ಷಮೆ ಕೇಳುವಂತೆ ಆಗ್ರಹಿಸಿದ ಕಂಗನಾ
ಮುಂಬೈನಲ್ಲಿ ನಡೆದ ಕ್ರೂಸ್ ಡ್ರಗ್ ಪಾರ್ಟಿಗೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಆಗಿದೆ. ಡ್ರಗ್ ಪಾರ್ಟಿ ಮೇಲೆ ಎನ್ಸಿಬಿ ಪೊಲೀಸರು ದಾಳಿ ನಡೆಸಿದ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು. ಪ್ರಸ್ತುತ ಆರ್ಯನ್ ಖಾನ್ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ನ್ಯಾಯಾಲಯ.
ಈ ನಡುವೆ ಶಾರೂಖ್ ಖಾನ್ ಕುಟುಂಬದ ಪರ ಬಾಲಿವುಡ್ನ ಹಲವು ನಟ-ನಟಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್ಯನ್ ಖಾನ್ ತಪ್ಪು ಮಾಡಿಲ್ಲ, ಆತ ಒಳ್ಳೆಯ ಹುಡುಗ, ಉದ್ದೇಶಪೂರ್ವಕವಾಗಿ ಡ್ರಗ್ ಕೇಸ್ನಲ್ಲಿ ಆತನನ್ನು ಸಿಲುಕಿಸಲಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಅದಕ್ಕೆ ಪರ್ಯಾಯವಾಗಿ ಮಗ ಮತ್ತು ಅಪ್ಪನ ವಿರುದ್ಧ ಟೀಕೆಯೂ ಎದುರಾಗಿದೆ. ಮಗನಿಗೆ ಸರಿಯಾದ ಬುದ್ದಿ ಹೇಳಿಕೊಟ್ಟಿಲ್ಲ ಎಂದು ಶಾರೂಖ್ ವಿರುದ್ಧ ಮಾತನಾಡುವವರು ಇದ್ದಾರೆ.
ಇದೆಲ್ಲದರ ನಡುವೆ ಮಗನ ಪ್ರಕರಣದಲ್ಲಿ ಶಾರೂಖ್ ಖಾನ್ ಕ್ಷಮೆ ಕೇಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಸಹ ಪರೋಕ್ಷವಾಗಿ ಶಾರೂಖ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿರುವಂತೆ ಪೋಸ್ಟ್ ಹಾಕಿದ್ದಾರೆ.
ವಿಶ್ವ ಖ್ಯಾತಿ ಜಾಕಿ ಚಾನ್ ಮಗ ಈ ಹಿಂದೆ ಇದೇ ರೀತಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಾಗ, ತಂದೆಯಾಗಿ ಜಾಕಿ ಚಾನ್ ಅಭಿಮಾನಿಗಳನ್ನು ಕ್ಷಮೆಯಾಚಿಸಿದ್ದರು. ಇದನ್ನು ಉದಾಹರಣೆಯಾಗಿ ನೀಡಿರುವ ಕಂಗನಾ ರಣಾವತ್, ಪರೋಕ್ಷವಾಗಿ ಶಾರೂಖ್ ಖಾನ್ ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ. ಮುಂದೆ ಓದಿ...

ಕಂಗನಾ ರಣಾವತ್ ಪೋಸ್ಟ್ನಲ್ಲಿ ಏನಿದೆ?
2014ರಲ್ಲಿ ಜಾಕಿ ಚಾನ್ ಮಗ ಡ್ರಗ್ಸ್ ಪ್ರಕರಣದಲ್ಲಿ ಬಂಧನ ಆದಾಗ ಅಧಿಕೃತವಾಗಿ ಕ್ಷಮೆಯಾಚಿಸಿದ್ದರು. 'ನನಗೆ ಈ ಘಟನೆ ನಾಚಿಕೆ ಪಡುವಂತೆ ಮಾಡಿದೆ. ಇದು ನನ್ನ ಸೋಲು. ನಾನು ಯಾವುದೇ ಕಾರಣಕ್ಕೂ ನನ್ನ ಮಗನನ್ನು ಇದರಿಂದ ರಕ್ಷಿಸಲು ಪ್ರಯತ್ನಿಸುವುದಿಲ್ಲ. ನಂತರ ಆರು ತಿಂಗಳು ಕಾಲ ಜಾಕಿ ಚಾನ್ ಮಗ ಜೈಲಿನಲ್ಲಿದ್ದರು. ಅದಾದ ನಂತರವೂ ಜಾಕಿ ಚಾನ್ ಕ್ಷಮೆಯಾಚಿಸಿದ್ದರು'' ಎಂದು ನಟಿ ಕಂಗನಾ ತಮ್ಮ ಪೋಸ್ಟ್ನಲ್ಲಿ ಹಾಕಿದ್ದು, #ಜಸ್ಟ್ ಸೇಯಿಂಗ್ ಎಂದಿದ್ದಾರೆ. ಈ ಮೂಲಕ ಮಗನ ವಿಚಾರದಲ್ಲಿ ಶಾರೂಖ್ ಖಾನ್ ಸಹ ಇದೇ ಕ್ರಮವನ್ನು ಅನುಸರಿಸಬೇಕು ಎನ್ನುವಂತೆ ಸುಳಿವು ಕೊಟ್ಟಿದ್ದಾರೆ.

ಎಲ್ಲಾ ಪಪ್ಪುಗಳು ರಕ್ಷಣೆಗೆ ನಿಂತಿದ್ದಾರೆ
ಇದಕ್ಕೂ ಮುಂಚೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಸುನಿಲ್ ಶೆಟ್ಟಿ, ಸುಸೇನ್ ಖಾನ್, ರವೀನಾ ಟಂಡನ್ ಸೇರಿದಂತೆ ಹಲವರು ಆರ್ಯನ್ ಖಾನ್ ಹಾಗೂ ಶಾರೂಖ್ ಖಾನ್ ಪರವಾಗಿ ನಿಲುವು ವ್ಯಕ್ತಪಡಿಸಿದ್ದರು. ಇವರ ಬಗ್ಗೆ ತೀವ್ರವಾಗಿ ಖಂಡಿಸಿದ ಕಂಗನಾ ರಣಾವತ್, ''ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್ ಖಾನ್ ಅವರ ರಕ್ಷಣೆಗೆ ಬಂದಿದ್ದಾರೆ'' ಎಂದು ಟೀಕಿಸಿದ್ದರು.

ಸ್ಟಾರ್ಗಳನ್ನು ಕುಟುಕಿದ ಕಂಗನಾ
"ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್ಖಾನ್ಅವರ ರಕ್ಷಣೆಗೆ ಬಂದಿದ್ದಾರೆ. ನಾವು ತಪ್ಪುಗಳನ್ನು ಮಾಡುತ್ತೇವೆ, ಆದರೆ ಅದನ್ನು ವೈಭವೀಕರಿಸಬಾರದು. ಈ ಘಟನೆ ಆರ್ಯನ್ಗೆ ಹೊಸ ದೃಷ್ಟಿಕೋನ ನೀಡಲಿದೆ ಮತ್ತು ಇದರ ಪರಿಣಾಮಗಳ ಬಗ್ಗೆ ಅರಿವಾಗುವಂತೆ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಈ ಘಟನೆ ಆರ್ಯನ್ಅವರನ್ನು ಮತ್ತಷ್ಟು ವಿಕಸನಗೊಳಿಸಲಿದೆ. ಯಾರಾದರೂ ದುರ್ಬಲರಾದಾಗ ಅವರ ಬಗ್ಗೆ ಗಾಸಿಪ್ ಮಾಡಬಾರದು. ಆದರೆ ಅವರು ತಪ್ಪೇ ಮಾಡಿಲ್ಲ ಎಂದು ಭಾವಿಸುವುದು ಅಪರಾಧ" ಎಂದು ಕಂಗನಾ ಕುಟುಕಿದ್ದರು.

ಅಕ್ಟೋಬರ್ 2 ರಂದು ಬಂಧನ
ಅಂದ್ಹಾಗೆ, ದೆಹಲಿ ಮೂಲದ ನಾಮಸ್ಕ್ರೇ (Namas'cray) ಎಕ್ಸ್ಪೀರಿಯನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯು ಅಕ್ಟೋಬರ್ 2 ರಂದು ಮುಂಬೈನಲ್ಲಿ ಕೋರ್ಡೇಲಿಯಾ ಕ್ರೂಸ್ ಶಿಪ್ನಲ್ಲಿ ಪಾರ್ಟಿ ಅರೇಂಜ್ ಮಾಡಿತ್ತು. ಆ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಎಂಟು ಜನರನ್ನು ವಶಕ್ಕೆ ಪಡೆದಿದ್ದರು, ಡ್ರಗ್ಸ್ ಅನ್ನೂ ಸಹ ವಶಪಡಿಸಿಕೊಳ್ಳಲಾಗಿತ್ತು. ನಂತರ ಶಾರುಖ್ ಪುತ್ರ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾ ಅನ್ನು ಬಂಧಿಸಲಾಗಿತ್ತು.


Click it and Unblock the Notifications











