ದೈಹಿಕ ಹಿಂಸೆ, ಮಾನಸಿಕ ಆಘಾತ ; ಪ್ರೀತಿಸಿ ಮದುವೆಯಾದರೂ 2ವರ್ಷದಲ್ಲೇ ಮುರಿದು ಬಿತ್ತು ದಾಂಪತ್ಯ- ಕಣ್ಣೀರಾದ ನಟಿ
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ವ್ಯೆಯಕ್ತಿಕ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರಿಗೆ ನೆಮ್ಮದಿ ಸಿಗುವುದಿಲ್ಲ. ಹಲವು ರೀತಿಯಲ್ಲಿ ಹಲವರು ಇಲ್ಲಿ ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ. ಮತ್ತೂ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ.
ಇನ್ನೂ ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ವರ್ಷಗಳಲ್ಲಿ ಹಲವಾರು ತಾರೆಯರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಪರಸ್ಪರ ಪ್ರೀತಿ ವಿಶ್ವಾಸ.. ಗೌರವ.. ನಂಬಿಕೆ..ಬದ್ಧತೆಯ ಬದಲು ಸಾಂಸಾರಿಕ ಜೀವನದಲ್ಲಿ ಅನೈತಿಕ ಸಂಬಂಧ.. ಕೌಂಟಬಿಕ ಕಲಹ.. ವೈಮನಸ್ಸು.. ಸಂಶಯ.. ಮಾನಸಿಕ-ದೈಹಿಕ ಕಿರುಕುಳ.. ಇತ್ಯಾದಿ ವಿಚಾರಗಳು ಮನೆ ಮಾಡಿ ಮನಸುಗಳು ಒಡೆದು ಹೋಗಿವೆ. ಉದಾಹರಣೆಗೆ ''ಮಯೂರಿ ವಾಘ್''.
ಹೌದು. ಮಯೂರಿ ವಾಘ್. ಮರಾಠಿ ಕಿರುತೆರೆ ಚೆಲುವೆ. ''ವಚನ್ ದಿಲೇ ತು ಮಲಾ''.. ''ಲವ್, ಲಗ್ನ್, ಲೋಛಾ''.. ''ಹೀ ವಾಟ್ ದೂರ್ ಜಾತೇ''.. ಹೀಗೆ ಕಳೆದೊಂದುವರೆ ದಶಕದಲ್ಲಿ 07-08 ಧಾರಾವಾಹಿ ಮಾಡಿರುವ ಮಯೂರಿ ವಾಘ್ ಅವರಿಗೆ ''ಅಸ್ಮಿತಾ'' ಧಾರಾವಾಹಿ ಅಪಾರವಾದ ಹೆಸರು ತಂದು ಕೊಟ್ಟಿತ್ತು. ಆದರೆ ಇದೇ ಧಾರಾವಾಹಿ ಇವರನ್ನು ನರಕದ ಕೂಪಕ್ಕೆ ಕೂಡ ದೂಡಿತ್ತು.
''ಅಸ್ಮಿತಾ'' ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಸಹನಟ ಪಿಯೂಶ್ ರಾನಡೆ ಜೊತೆ ಮಯೂರಿ ಪ್ರೀತಿಯಲ್ಲಿ ಬಿದ್ದರು. ಫೆಬ್ರವರಿ 1-2017ರಲ್ಲಿ ಮದುವೆಯೂ ಆದರು. ಆದರೆ ಮಯೂರಿ ದೌರ್ಭಾಗ್ಯ. ಎರಡು ವರ್ಷ ಕೂಡ ಈ ಮದುವೆ ಉಳಿಯಲಿಲ್ಲ. ಮದುವೆಯಾದ ಆರೇ ತಿಂಗಳಿಗೆ ಪಶ್ಚಾತಾಪದ ಬೇಗೆಯಲ್ಲಿ ಬೇಯಲು ಮಯೂರಿ ಶುರು ಮಾಡಿದ್ದರು. ತಮ್ಮ ಬದುಕಿನ ಈ ಹಳೆಯ ಕರಾಳ ದಿನಗಳನ್ನು ಮಯೂರಿ ಈಗ ಮೆಲುಕು ಹಾಕಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ.
''ಮಿತ್ರ ಮ್ಹಣೆ'' ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮುರಿದು ಬಿದ್ದ ದಾಂಪತ್ಯ ಜೀವನದ ಕುರಿತು ಮಾತನಾಡಿರುವ ಮಯೂರಿ ವಾಘ್, ನನಗೆ ವಿಷಾದ ಇಲ್ಲ. ಆದರೆ ನನ್ನ ನಿರ್ಧಾರದ ಬಗ್ಗೆ ಪಶ್ಚಾತಾಪ ಇದೆ ಎಂದು ಹೇಳಿದ್ದಾರೆ.

ಮದುವೆ ಬದುಕಿನ ಮಹತ್ವದ ಘಟ್ಟ. ಈ ಹಿನ್ನೆಲೆ ಇಂದಿನ ಯುವಕ ಯುವತಿಯರು ಮದುವೆ ಮುನ್ನ ನೂರು ಬಾರಿ ಯೋಚನೆ ಮಾಡುತ್ತಾರೆ. ಅವರಿಗೆ ತಮ್ಮನ್ನು ಮದುವೆಯಾಗುವ ಸಂಗಾತಿ ಹೇಗೆ ಇರಬೇಕೆನ್ನುವ ಸ್ಪಷ್ಟವಾದ ಕಲ್ಪನೆ ಇದೆ ಎಂದು ಹೇಳಿರುವ ಮಯೂರಿ ಮದುವೆ ವಿಚಾರದಲ್ಲಿ ನಾನು ಎಡವಿದೆ. ಆತುರಾತುರವಾಗಿ ನಿರ್ಧಾರ ತೆಗೆದುಕೊಂಡೆ. ಆ ಸಮಯದಲ್ಲಿ ನಾನು ತಪ್ಪು ಮಾಡುತ್ತಿದ್ದೇನೆ ಎನ್ನುವ ಭಾವನೆ ನನ್ನ ಹೆತ್ತವರಲ್ಲಿತ್ತು. ಆದರೂ ಕೂಡ ನನ್ನ ಖುಷಿಗೆ ಅವರು ನನ್ನ ನಿರ್ಧಾರವನ್ನು ಬೆಂಬಲಿಸಿದರು ಎಂದು ಹೇಳಿದ್ದಾರೆ.
ಪ್ರೀತಿಸಿ ಮದುವೆಯಾದ ಆರೇ ತಿಂಗಳಿಗೆ ನಾನು ನನ್ನ ಬದುಕಿನಲ್ಲಿ ಎಡವಿದೆ ಎನ್ನುವುದು ನನಗೆ ಗೊತ್ತಾಯ್ತು, ಆದರೆ..ನನ್ನ ತಪ್ಪು ಒಪ್ಪಿಕೊಳ್ಳಲು ನನಗೆ ಸಮಯ ಬೇಕಾಯ್ತು ಎಂದು ಹೇಳಿರುವ ಮಯೂರಿ ಆ ಸಮಯದಲ್ಲಿ ನಾನು ''ತೀ ಫೂಲ್ರಾಣಿ'' ಧಾರಾವಾಹಿಯನ್ನು ಮಾಡುತ್ತಿದ್ದೆ. ನನ್ನ ವರ್ತನೆ ನನ್ನ ಹಾವ ಭಾವದಿಂದ ನನ್ನ ಸಹನಟರಿಗೆ ನನ್ನ ಬದುಕು ಹಳಿ ತಪ್ಪಿದೆ ಎನ್ನುವ ವಿಚಾರ ಗೊತ್ತಾಗುತ್ತಿತ್ತು. ಆದರೆ ಅವರ ಜೊತೆ ನನ್ನ ಸಮಸ್ಯೆಗಳನ್ನು ಹಂಚಿಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ ಎಂದು ಹೇಳಿದ್ದಾರೆ.
ಆ ಧಾರಾವಾಹಿ ಸಂದರ್ಭದಲ್ಲಿ ನಾನು ತುಂಬಾ ವಿಚಲಿತಳಾಗಿರುತ್ತಿದ್ದೆ, ನನ್ನ ಭಾಗದ ಚಿತ್ರೀಕರಣ ಮುಗಿದ ನಂತರ ನಾನು ನನ್ನದೇ ಲೋಕದಲ್ಲಿ, ಚಿಂತೆಯಲ್ಲಿ ಮುಳುಗಿರುತ್ತಿದ್ದೆ.ನಿದ್ರೆಯೇ ನನಗೆ ಬರುತ್ತಿರಲಿಲ್ಲ ಎಂದಿರುವ ಮಯೂರಿ ಇದೆಲ್ಲ ಗಮನಿಸಿದ ನನ್ನ ಸಹನಟರು ಎರಡು ಮೂರು ಗಂಟೆ ನನಗಾಗಿ ಕಾಯುತ್ತಿದ್ದರು. ನನ್ನ ಸಮಸ್ಯೆಯನ್ನು ಅವರು ಅರ್ಥ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ನನ್ನ ದಾಂಪತ್ಯ ಜೀವನ ಹಳ್ಳ ಹಿಡಿದಿರುವ ವಿಚಾರ ನನ್ನ ತಂದೆ ತಾಯಿಗೆ ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಗೊತ್ತಾಯ್ತು, ಆದರೆ ಸರಿಪಡಿಸಲಾಗದಷ್ಟು ಹಾಳಾಗಿದೆ ಎಂದು ನನಗೆ ಮನವರಿಕೆಯಾಗಲು ಒಂದೂವರೆ ವರ್ಷ ಬೇಕಾಯ್ತು ಎಂದು ಹೇಳಿರುವ ಮಯೂರಿ ಆ ಸಮಯದಲ್ಲಿ ನಾನು ನಂಬಿದ ವ್ಯಕ್ತಿ ನನಗೆ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತಿತ್ತು. ಸಂಬಂಧವನ್ನು ಮುರಿದುಕೊಂಡು ಹೊರ ಬರಬೇಕಾ..? ಎಲ್ಲ ನೋವುಗಳನ್ನು ಸಹಿಸಿಕೊಂಡು ಒಂದೇ ಸೂರಿನಡಿ ಜೊತೆಯಲ್ಲಿ ಬದುಕಬೇಕಾ..? ಮುಂತಾದ ಪ್ರಶ್ನೆಗಳೆಲ್ಲ ನನ್ನನ್ನು ಕಾಡುತ್ತಿದ್ದವು ಎಂದು ಹೇಳಿದ್ದಾರೆ.
ನೋವನ್ನು ಮರೆಯುವುದಕ್ಕೆ ರಾತ್ರಿ ಶೂಟಿಂಗ್ ಮುಗಿಸಿಕೊಂಡು ಬಂದ ನಂತರ ರಾತ್ರಿ ಎರಡೂವರೆ ಗಂಟೆಯಲ್ಲಿ ಬಟ್ಟೆಯನ್ನು ವಾಷಿಂಗ್ ಮಷಿನ್ಗೆ ಹಾಕುತ್ತಿದ್ದೆ, ಇಡೀ ಅಡುಗೆ ಮನೆಗೆ ಸೋಪು ನೀರು ಹಾಕಿ ಉಜ್ಜಿ ತೊಳೆಯುತ್ತಿದ್ದೆ ಎಂದು ಹೇಳಿರುವ ಮಯೂರಿ ಸ್ನೇಹಿತರ ಎದುರು ನೋವು ಹಂಚಿಕೊಳ್ಳಲು ಸಾಧ್ಯವಾಗದ ಕಾರಣ, ಹೆತ್ತವರ ಮುಂದೆ ಕಣ್ಣೀರು ಹಾಕಲಾಗದ ಕಾರಣ, ಮನೆಯಲ್ಲಿ ನಾನು ಮೀನು ಸಾಕಿದ್ದೆ ಆ ಮೀನಿನ ಎದುರು ನನ್ನ ನೋವನ್ನು ಹಂಚಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

ನನಗಾದ ಈ ನೋವಿಂದ ನನಗೆ ಈಗ ಯಾರ ಮೇಲೂ ಕೂಡ ನಂಬಿಕೆ ಬರಲ್ಲ ಎಂದು ಹೇಳಿರುವ ಮಯೂರಿ ನನ್ನ ತಾಯಿಗೆ ಬೆಳಗ್ಗೆ 10ರ ಒಳಗೆ ಫೋನ್ ಮಾಡದಿದ್ದರೆ ಅವರು ಚಿಂತೆ ಮಾಡುತ್ತಿದ್ದರು. ಜಗಳವಾಯ್ತಾ ? ಎಲ್ಲ ಸರಿ ಇದೆಯಾ ? ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸಂಬಂಧ ಸರಿ ಮಾಡಲು ಸಾಕಷ್ಟು ಪ್ರಯತ್ನ ನಾನು ಮಾಡಿದೆ ಆದರೆ ಅದಾಗಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಇದೇ ಸಂದರ್ಶನದಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆಯಾ? ಎನ್ನುವ ಪ್ರಶ್ನೆಗೆ ಹೌದು ಎಂದು ಉತ್ತರ ನೀಡಿರುವ ಮಯೂರಿ ವಾಘ್, ಪಿಯೂಷ್ ತುಂಬಾ ಹಿಂಸೆಯನ್ನು ನನಗೆ ನೀಡಿದ್ದಾನೆ ಎಂದು ಭಾವುಕರಾಗಿದ್ದಾರೆ.


Click it and Unblock the Notifications











