ಗಾಯಗೊಂಡ ತನ್ನನ್ನು ಆಸ್ಪತ್ರೆ ತಲುಪಿಸಿದ ಆಟೋ ಡ್ರೈವರ್ಗೆ ಅಂದು ರಾತ್ರಿ ಸೈಫ್ ಕೊಟ್ಟ ಹಣ ಎಷ್ಟು?
ಬಾಲಿವುಡ್ ನಟ ಸೈಫ್ ಅಲಿಖಾನ್ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಕಳೆದ ಬುಧವಾರ ತಡರಾತ್ರಿ ದಾಳಿಕೋರನೊಬ್ಬ ನಟನ ಮನೆಗೆ ನುಗಿದ್ದ. ಕಳ್ಳತನ ಮಾಡಲು ಯತ್ನಿಸಿದ್ದ ದುಷ್ಕರ್ಮಿ ಹಿಡಿದುಕೊಳ್ಳಲು ಬಂದಿದ್ದ ಸೈಫ್ ಅಲಿಖಾನ್ರನ್ನು ಮನಸೋಇಚ್ಛೆ ಚಾಕುವಿನಿಂದ ಚುಚ್ಚಿ ಪರಾರಿ ಆಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಟ ಸೈಫ್ ಅಲಿಖಾನ್ ಕತ್ತು, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ದಾಳಿಕೋರ ಇರಿದಿದ್ದ. ಆ ರಭಸಕ್ಕೆ ಚಾಕುವಿನ ತುಂಡು ಮುರಿದು ನಟನ ಬೆನ್ನಿಗೆ ಚುಚ್ಚಿಕೊಂಡಿತ್ತು. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಅದನ್ನು ಹೊರತೆಗೆದಿದ್ದರು. ಅಂದು ರಾತ್ರಿ ದಿಢೀರನೆ ನಡೆದ ಈ ಘಟನೆಯಿಂದ ಸೈಫ್ ಕುಟುಂಬಸ್ಥರು ಆಘಾತಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ತಂದೆಯನ್ನು ಪುತ್ರ ಇಬ್ರಾಹಿಂ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಐಷಾರಾಮಿ ಕಾರುಗಳು ಇದ್ದರೂ ಆಟೋ ರಿಕ್ಷಾದಲ್ಲಿ ತಂದೆಯೊಂದಿಗೆ ಆಸ್ಪತ್ರೆಗೆ ತೆರಳಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ತಂದೆಯನ್ನು ತತ್ಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಬೇಕಿತ್ತು. ಅಲ್ಲದೇ ಆ ಸಮಯದಲ್ಲಿ ತಮ್ಮ ಮನೆಯ ಕಾರುಗಳನ್ನು ಚಲಾಯಿಸಲು ಯಾವುದೇ ಡ್ರೈವರ್ಗಳು ಇರಲಿಲ್ಲ. ಡ್ರೈವರ್ಗಳು ರಾತ್ರಿ ಮನೆಗೆ ತೆರಳಿದ್ದರು. ಅಲ್ಲದೇ ಮುಂಬೈ ಟ್ರಾಫಿಕ್ನಲ್ಲಿ ದೊಡ್ಡ ವಾಹನಗಳನ್ನು ತೆಗೆದುಕೊಂಡು ಹೋದರೆ ಆಸ್ಪತ್ರೆ ತಲುಪುವುದು ಕಷ್ಟವಾಗಬಹುದು ಎಂದು ಆಟೋ ರಿಕ್ಷಾದಲ್ಲಿ ಅಪಾರ್ಟ್ಮೆಂಟ್ನಿಂದ 2 ಕಿ. ಮೀ ದೂರದ ಆಸ್ಪತ್ರೆಗೆ ಹೋಗಲು ನಿರ್ಧರಿಸಿದ್ದರು.
ಬಿಳಿ ಕುರ್ತಾ ಧರಿಸಿದ್ದ ಸೈಫ್ ಅಲಿಖಾನ್ ದೇಹದಿಂದ ರಕ್ತ ಸೋರುತ್ತಿತ್ತು. ಆಟೋ ಇಳಿಯುವವರೆಗೂ ಅದು ಸೈಫ್ ಅಲಿಖಾನ್ ಎನ್ನುವುದು ಆಟೋ ಡ್ರೈವರ್ ಭಜನ್ ಸಿಂಗ್ಗೂ ಗೊತ್ತಿರಲಿಲ್ಲ. ಯಾರೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕು ಎನ್ನುವುದಷ್ಟೆ ತನ್ನ ಮನಸ್ಸಿನಲ್ಲಿ ಇತ್ತು. ಹಾಗಾಗಿ ನಾನು ಹಿಂದೆ ಕುಳಿತ ಇಬ್ಬರು ವ್ಯಕ್ತಿಗಳನ್ನು (ಸೈಫ್ ಹಾಗೂ ಅವರ ಮಗ) ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡೆ ಎಂದು ಆಟೋ ಡ್ರೈವರ್ ಸಿಂಗ್ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.
ಅಂದು ರಾತ್ರಿ 2-3 ಗಂಟೆ ಸುಮಾರಿಗೆ ನಾನು ಆಟೋದಲ್ಲಿ ಅತ್ತ ಹೋಗುತ್ತಿದ್ದೆ. ಮಹಿಳೆಯೊಬ್ಬರು ಆಟೋ ಎಂದು ಕೂಗಿದರು. ಗೇಟ್ ಒಳಗಿನಿಂದಲೂ ಯಾರೋ ಆಟೋಗಾಗಿ ಕರೆದಂತೆ ಆಯಿತು. ಕೂಡಲೇ ನಾನು ಆಟೋ ಯೂಟರ್ನ್ ತಗೊಂಡು ಗೇಟ್ ಮುಂದೆ ನಿಲ್ಲಿಸಿದೆ. ಆಗ ವ್ಯಕ್ತಿಯೊಬ್ಬರಿಗೆ ದೇಹದಿಂದ ರಕ್ತ ಸೋರುತ್ತಿತ್ತು. ಮೂರ್ನಾಲ್ಕು ಜನ ಅವರನ್ನಿ ಹಿಡಿದು ಆಟೋ ಹತ್ತಿಸಿದರು. ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ನಾನು ಅವರನ್ನು ಆಸ್ಪತ್ರೆ ಬಳಿ ಡ್ರಾಪ್ ಮಾಡಿದೆ ಬಳಿಕ ನನಗೆ ಅದು ಸೈಫ್ ಅಲಿಖಾನ್ ಎನ್ನುವುದು ಗೊತ್ತಾಯಿತು ಎಂದು ಭಜನ್ ಸಿಂಗ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆಟೋ ಹತ್ತಿದ್ದಾಗ ಸೈಫ್ ಪ್ರಜ್ಞಾವಸ್ಥೆಯಲ್ಲೇ ಇದ್ದರು. ಆಸ್ಪತ್ರೆಗೆ ತಲುಪಲು ಇನ್ನು ಎಷ್ಟು ಸಮಯ ಬೇಕು ಎಂದು ಕೇಳಿದ್ದರು. ನಾನು 2 ನಿಮಿಷ ಅಷ್ಟೇ ಎಂದು ಕರೆದುಕೊಂಡೆ ಹೋದೆ. ಆಸ್ಪತ್ರೆ ಬಳಿಕ ಇಳಿದ ಕೂಡಲೇ "ಬೇಗ ಸ್ಟ್ರೆಚರ್ ತೆಗೆದುಕೊಂಡು ಬನ್ನಿ, ನಾನು ಸೈಫ್ ಅಲಿಖಾನ್" ಎಂದು ಆ ವ್ಯಕ್ತಿ ಹೇಳಿದರು. ಆಗ ನನಗೆ ಗೊತ್ತಾಯಿತು ಅದು ಸೈಫ್ ಅಲಿಖಾನ್ ಎಂದು. ನನಗೆ ಆಗ ಅವರನ್ನು ಆಸ್ಪತ್ರೆಗೆ ಸೇರಿಸುವುದಷ್ಟೆ ಗುರಿಯಾಗಿತ್ತು. ಯಾವುದೇ ಹಣವನ್ನು ಆ ಸಮಯದಲ್ಲಿ ನಾನು ತೆಗೆದುಕೊಂಡಿಲ್ಲ" ಎಂದು ಭಜನ್ ಸಿಂಗ್ ಹೇಳಿಕೊಂಡಿದ್ದಾರೆ.
ಅಂತಹ ಸಮಯದಲ್ಲಿ ಸೈಫ್ ಅಲಿಖಾನ್ ಅವರನ್ನು ಆಸ್ಪತ್ರೆಗೆ ತಲುಪಿಸಿದ ಆಟೋ ಡ್ರೈವರ್ಗೆ ಯಾವುದೇ ಹಣವನ್ನು ಆಗ ಕೊಟ್ಟಿರಲಿಲ್ಲ. ಇದೀಗ ಅವರ ಸಹಾಯಕ್ಕೆ ಖಾಸಗಿ ಸಂಸ್ಥೆಯೊಂದು 11 ಸಾವಿರ ರೂಪಾಯಿ ರಿವಾರ್ಡ್ ನೀಡಿದೆ. ಸಾರ್ವಜನಿಕರಿಂದಲೂ ಆಟೋ ಡ್ರೈವರ್ ಭಜನ್ ಸಿಂಗ್ ಸಹಾಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











