7 ವರ್ಷಗಳ ನಂತರ ಆಯುಷ್ಮಾನ್ ಖುರಾನಾ ಬಾಳಲ್ಲಿ ಮತ್ತೆ ಬರಸಿಡಿಲು, 2ನೇ ಬಾರಿ ವಕ್ಕರಿಸಿದ ಕ್ಯಾನ್ಸರ್..!
ಆಶಯಗಳನ್ನು ಬಯಸುವ ಬದುಕಿನಲ್ಲಿ ನಿರಾಶೆಗಳು ಅನೀರಿಕ್ಷಿತ ಅತಿಥಿಗಳಾಗಿ ನೆಮ್ಮದಿಯ ಗೂಡನ್ನು ಕೆಡವಿ ಬಿಡುತ್ತವೆ. ಎಣಿಸಿದಂತೆ ಬದುಕು ಇರುವುದಿಲ್ಲ. ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನ ಬದುಕಿನಲ್ಲಿ ಮತ್ತೊಮ್ಮೆ 07 ವರ್ಷಗಳ ನಂತರ ಬರಸಿಡಿಲು ಬಡಿದಿದೆ. ಆಯುಷ್ಮಾನ್ ಪತ್ನಿ ತಾಹಿರಾ ಅವರನ್ನು ಕ್ಯಾನ್ಸರ್ ಹಿಂಡಿ ಹಿಪ್ಪೆ ಮಾಡುತ್ತಿದೆ.
ಹೌದು, 2018ರಲ್ಲಿ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಅವರು ಸ್ತನ ಕ್ಯಾನ್ಸರ್ಗೆ ತುತ್ತಾಗಿದ್ದರು. 2019ರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದ ತಾಹಿರಾ ಸ್ತನಛೇದನ ಪ್ರಕಿಯ್ರೆಗೆ ಒಳಗಾಗಿದ್ದರು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದರು. ಆಗ ತಾಹಿರಾಗೆ 35 ವರ್ಷ ವಯಸ್ಸಾಗಿತ್ತು. ಈಗ 7 ವರ್ಷದ ನಂತರ ಮತ್ತೊಮ್ಮೆ ತಾಹಿರಾ ಅವರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ.

ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ತಾಹಿರಾ ಕಶ್ಯಪ್ ಜೀವನ ನಿಂಬೆ ಹಣ್ಣುಗಳನ್ನು ನೀಡಿದಾಗ ನಿಂಬೆ ಪಾನಕ ತಯಾರಿಸಿ ಎಂದು ಹೇಳಿದ್ದಾರೆ. ಜೀವನವು ತುಂಬಾ ಉದಾರವಾದಾಗ ನೀವು ಮತ್ತೆ ನಿಂಬೆ ಹಣ್ಣನ್ನು ಪಡೆದಾಗ ನೀವು ಅದನ್ನು ನಿಮ್ಮ ಪಾನೀಯಕ್ಕೆ ಸೇರಿಸಬಹುದು ಸಕಾರಾತ್ಮಕತೆಯಿಂದ ಕುಡಿಯಬಹುದು ಎಂದಿರುವ ತಾಹಿರಾ ಮತ್ತೊಮ್ಮೆ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ. 07 ವರ್ಷಗಳ ಕಿರಿಕಿರಿ, ನೋವು ಅನುಭವಿಸಿದ ನಂತರ ಈಗ ಎರಡನೇ ಸುತ್ತು ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಎರಡು ಮಕ್ಕಳ ತಾಯಿಯಾಗಿರುವ ತಾಹಿರಾ ಕಶ್ಯಪ್ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಶರ್ಮಾಜೀ ಕೀ ಬೇಟಿ ಸೇರಿ ಅನೇಕ ಚಿತ್ರಗಳನ್ನು ಕೂಡ ತಾಹಿರಾ ನಿರ್ದೇಶಿಸಿದ್ಧಾರೆ. ಆರ್ ಜೆಯಾಗಿ ತಮ್ಮ ವೃತ್ತಿ ಬದುಕು ಶುರು ಮಾಡಿದ್ದ ತಾಹಿರಾಗೆ ರಂಗಭೂಮಿಯಲ್ಲಿ ಕೂಡ ಕೆಲಸ ಮಾಡಿದ ಅನುಭವ ಇದೆ. ಹೀಗೆ ತಮ್ಮ ಕೆಲಸದ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ತಾಹಿರಾ ಸಂಪಾದಿಸಿದ್ದಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ಧಾರೆ.
ಹೀಗಾಗಿಯೇ ತಾಹಿರಾ ಕಶ್ಯಪ್ ಅವರ ಈ ಪೋಸ್ಟ್ ನೋಡಿದ ಆಯುಷ್ಮಾನ್ ಖುರಾನಾ ಮತ್ತು ತಾಹಿರಾ ಅವರ ಅಭಿಮಾನಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಈ ಬಾರಿ ಕೂಡ ನೀವು ಗೆದ್ದು ಬರುತ್ತೀರಾ ಎಂದು ಧೈರ್ಯ ತುಂಬುತ್ತಿದ್ದಾರೆ. ಬೇಗ ಗುಣ ಮುಖರಾಗಿ ಬನ್ನಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.
ಪತ್ನಿಯ ಪೋಸ್ಟ್ಗೆ ಆಯುಶ್ಮಾನ್ ಖುರಾನಾ ಕೂಡ ಪ್ರತಿಕ್ರಿಯೆ ನೀಡಿದ್ದು, ಮೈ ಹೀರೋ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಮಿನಿ ಮಾಥುರ್, ನಿರ್ಮಾಪಕಿ ಗುನೀತ್ ಮೊಂಗಾ, ಟ್ವಿಂಕಲ್ ಖನ್ನಾ, ಹೀಗೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಕೂಡ ತಾಹಿರಾ ಕಶ್ಯಪ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.


Click it and Unblock the Notifications











