ಹೊಸ ಮದು ಮಗಳು ಕೀರ್ತಿ ಸುರೇಶ್ಗೆ ಬಾಲಿವುಡ್ನಲ್ಲಿ ಇದೆಂಥ ಅವಮಾನ?
ಸೌತ್ ಬ್ಯೂಟಿ ಕೀರ್ತಿ ಸುರೇಶ್ ಸದ್ಯ ಬಾಲಿವುಡ್ ಪ್ರವೇಶಿಸಿದ್ದಾರೆ. ಹಿಂದಿಯಲ್ಲಿ ಆಕೆ ನಟಿಸಿದ ಚೊಚ್ಚಲ ಚಿತ್ರ 'ಬೇಬಿ ಜಾನ್' ತೆರೆಗೆ ಬಂದಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಕೊಂಚ ಹಿನ್ನಡೆಯಾಗಿದೆ. ಸದ್ಯ ಮುಂಬೈನಲ್ಲೇ ಬೀಡು ಬಿಟ್ಟಿರುವ ನಟ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ಸ್ನೇಹಿತನ ಜೊತೆ ಕೀರ್ತಿ ಸುರೇಶ್ ಹೊಸಬಾಳಿಗೆ ಕಾಲಿಟ್ಟರು. ಗೋವಾದಲ್ಲಿ ಕೀರ್ತಿ ಹಾಗೂ ಉದ್ಯಮಿ ಆಂಟೊನಿ ತಟ್ಟಿಲ್ ಮದುವೆ ನಡೆದಿತ್ತು. ಚಿತ್ರರಂಗದ ತಾರೆಯರು ಈ ವಿವಾಹ ಮಹೋತ್ಸವಕ್ಕೆ ಸಾಕ್ಷಿ ಆಗಿದ್ದರು. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯಗಳಂತೆ ಮದುವೆ ನಡೆದಿತ್ತು. ಮದುವೆ ಬೆನ್ನಲ್ಲೇ ಮಹಾನಟಿ 'ಬೇಬಿ ಜಾನ್' ಚಿತ್ರದ ಪ್ರಚಾರಕ್ಕೆ ಹೋಗಿದ್ದಾರೆ.

ಬಾಲಿವುಡ್ ಮಂದಿ ಇಂದಿಗೂ ದಕ್ಷಿಣದವರನ್ನು ನೋಡುವ ರೀತಿ ಬದಲಾಗಿಲ್ಲ. ಬೇಕಂತಲೇ ವಾರೆನೋಟ ಬೀರುತ್ತಾರೆ. ಕೆಲವೊಮ್ಮೆ ದಕ್ಷಿಣದ ಕಲಾವಿದರು, ತಂತ್ರಜ್ಞರಿಗೆ ಅವಮಾನ ಆಗಿರುವುದು ಇದೆ. ಆದರೆ ಈಗ ಹಿಂದಿ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ದಕ್ಷಿಣದ ಕಲಾವಿದರು, ತಂತ್ರಜ್ಞರು ಬಾಲಿವುಡ್ ಪ್ರವೇಶಿಸಿ ಕಮಾಲ್ ಮಾಡುತ್ತಿದ್ದಾರೆ.
ಸಾಲು ಸಾಲಾಗಿ ಸೌತ್ ನಟಿಯರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ನಯನತಾರ, ಸಮಂತಾ ಬಳಿಕ ಇದೀಗ ಕೀರ್ತಿ ಸುರೇಶ್ ಬಾಲಿವುಡ್ ಪ್ರಪಂಚಕ್ಕೆ ಅಡಿ ಇಟ್ಟಿದ್ದಾರೆ. ನಿಧಾನವಾಗಿ ಬಿಟೌನ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಕೀರ್ತಿಗೆ ಇತ್ತೀಚೆಗೆ ಕಹಿ ಅನುಭವ ಆಗಿದೆ. ಆಕೆ ಕೂಡ ಅಲ್ಲೇ ತಿರುಗೇಟು ಕೊಟ್ಟಿದ್ದಾರೆ.
ಮುಂಬೈನಲ್ಲಿ ಸೆಲೆಬ್ರೆಟಿಗಳು ಎಲ್ಲೇ ಹೋದರೂ ಬಂದರೂ ಪಾಪರಾಜಿ(ಛಾಯಾಗ್ರಾಹಕರು) ಮುತ್ತಿಕೊಳ್ಳುತ್ತಾರೆ. ಕ್ಯಾಮರಾ ಹಿಡಿದು ಪೋಸ್ ಕೊಡುವಂತೆ ತಾರೆಯರನ್ನು ಕೇಳುತ್ತಾರೆ. ಕೆಲವರು ದುಡ್ಡ ಕೊಟ್ಟು ಹೀಗೆ ಪಾಪರಾಜಿಗಳನ್ನು ಕರೆಸಿಕೊಳ್ಳುತ್ತಾರೆ. ಈ ಬಗ್ಗೆ ಪ್ರಿಯಾಮಣಿ ಸೇರಿ ಕೆಲವರು ಮಾತನಾಡಿದ್ದಾರೆ. ಅದನ್ನು ಪಕ್ಕಕ್ಕಿಟ್ಟರೆ ಸದ್ಯ ಪಾಪರಾಜಿಗಳು ಕೀರ್ತಿ ಸುರೇಶ್ ಹೆಸರನ್ನು ತಪ್ಪಾಗಿ ಕರೆದು ಕಸಿವಿಸಿ ಉಂಟು ಮಾಡಿದ್ದಾರೆ.
'ಬೇಬಿ ಜಾನ್' ಪ್ರಚಾರಕ್ಕಾಗಿ ಮುಂಬೈಗೆ ಹೋಗಿರುವ ಕೀರ್ತಿ ಸುರೇಶ್ ಅವರನ್ನು ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಆಕೆಉ ಗಮನ ಸೆಳೆಯಲು ಕ್ರಿತಿ ಎಂದು ಕರೆದಿದ್ದಾರೆ. ಕೂಡಲೇ ಆಕೆ 'ಕ್ರಿತಿ ಅಲ್ಲ ಕೀರ್ತಿ' ಎಂದು ಹೇಳಿ ತಿದ್ದಿದ್ದಾರೆ. ಅದು ಅಲ್ಲಿಗೆ ಮುಗಿದಿದ್ದರೆ ಚೆನ್ನಾಗಿತ್ತು. ಮುಂದುವರೆದು ಕೆಲವರು 'ದೋಸಾ' ಎಂದು ಕರೆದಿದ್ದಾರೆ.
ಬೇಕಂತಲೇ ದಕ್ಷಿಣದ ಕಲಾವಿದರನ್ನು ಮುಂಬೈ ಪಾಪರಾಜಿಗಳು ಹೀಗೆ ಕೆಣಕುವ ಅಭ್ಯಾಸ ಇದೆ. ವ್ಯಂಗ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆ ಬಳಿಕ ಕೀರ್ತಿ ಪ್ರತಿಕ್ರಿಯಿಸಿ "ಕೀರ್ತಿ ದೋಸಾ ನಹೀ, ಕೀರ್ತಿ ಸುರೇಶ್. ಔರ್ ದೋಸೆ ಮುಜೆ ಪಸಂದ್ ಹೈ (ನಾನು ಕೀರ್ತಿ ದೋಸಾ ಅಲ್ಲ, ಕೀರ್ತಿ ಸುರೇಶ್. ಆದರೆ ನನಗೆ ದೋಸೆ ಅಂದರೆ ಇಷ್ಟ)" ಎಂದು ಉತ್ತರಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಇತ್ತೀಚೆಗೆ 'ಬೇಬಿ ಜಾನ್' ಸಿನಿಮಾ ಪ್ರೀಮಿಯರ್ ಶೋ ವೇಳೆ ಕೂಡ ಇಂತದ್ದೇ ಪ್ರಸಂಗ ಎದುರಾಗಿತ್ತು. ಶೋ ಮುಗಿಸಿ ಕೀರ್ತಿ ಕಾರ್ ಏರುತ್ತಿದ್ದರು. ಈ ವೇಳೆ ಪಾಪರಾಜಿಗಳು ಫೋಟೊ ಕ್ಲಿಕ್ಕಿಸಲು ಮುಂದಾಗಿದ್ದರು. ಕೂಡಲೇ ನಟಿಯ ಆಪ್ತ ಸಹಾಯಕಿ ಪಾಪರಾಜಿಗಳ ಮೇಲೆ ಬೇಸರ ಹೊರ ಹಾಕಿದ್ದರು. ಆ ರೀತಿ ಫೋಟೊ ಕ್ಲಿಕ್ಕಿಸಬೇಡಿ ಎಂದು ತಾಕೀತು ಮಾಡಿದ್ದರು. ಆ ವೀಡಿಯೋ ಸಹ ವೈರಲ್ ಆಗಿತ್ತು.
ತಮಿಳಿನ 'ತೇರಿ' ಸಿನಿಮಾ ರೀಮೆಕ್ 'ಬೇಬಿ ಜಾನ್' ಚಿತ್ರದಲ್ಲಿ ವರುಣ್ ಧವನ್ ಜೊತೆ ಕೀರ್ತಿ ನಟಿಸಿದ್ದಾರೆ. ಕಲೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲ ದಿನ ಭಾರೀ ಸದ್ದು ಮಾಡಿದ್ದ ಸಿನಿಮಾ ಬಳಿಕ ತಣ್ಣಗಾಗಿದೆ. ಭಾರೀ ಬಜೆಟ್ನಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ರಿಲೀಸ್ ಆಗಿದೆ.


Click it and Unblock the Notifications











