ಬಂಡೀಪುರ ಅಭಯಾರಣ್ಯದಲ್ಲಿ ಅಕ್ಷಯ್ ಸಾಹಸ: ಖಿಲಾಡಿಗೆ ಆನೆ ಲದ್ದಿ ಚಹಾ ಕುಡಿಸಿದ ಬೇರ್ ಗ್ರಿಲ್ಸ್
ನಟ ಅಕ್ಷಯ್ ಕುಮಾರ್ 'ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಕಾರ್ಯಕ್ರಮದ ರೋಚಕ ಸಾಹಸದ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಕಾರ್ಯಕ್ರಮವನ್ನು ಕರ್ನಾಟಕದ ಬಂಡೀಪುರ ಅಭಯಾರಣ್ಯದಲ್ಲಿ ಸೆರೆ ಹಿಡಿಯಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಭಾಗಿಯಾಗಿದ್ದ ಈ ಕಾರ್ಯಕ್ರಮವನ್ನು ಚಿತ್ರೀಕರಣ ಮಾಡಲಾಗಿದೆ.
Recommended Video
ರಜನಿಕಾಂತ್ ಭಾಗಿಯಾಗಿದ್ದ ಈ ಕಾರ್ಯಕ್ರಮ ಈಗಾಗಲೆ ಪ್ರಸಾರವಾಗಿದೆ. ಇದೀಗ ಅಕ್ಷಯ್ ಕುಮಾರ್ ಅವರ ಸಾಹಸದ ಹೊಸ ಪ್ರೋಮೋ ರಿಲೀಸ್ ಆಗಿದ್ದು ಕುತೂಹಲ ಹುಟ್ಟಿಸಿದೆ. ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಮಿಲಿಟರಿ ಬಟ್ಟೆ ಧರಿಸಿ, ವೈಲ್ಡ್ ಲೈಫ್ ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಜೊತೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ರಿಲೀಸ್ ಆಗಿರುವ ಹೊಸ ಪ್ರೋಮೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಂದು ಪುಟ್ಟ ಪ್ರೋಮೋನೇ ಇಷ್ಟು ರೋಚಕವಾಗಿದೆ ಅಂದ್ಮೇಲೆ, ಸಂಪೂರ್ಣ ಕಾರ್ಯಕ್ರಮ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಬೇರ್ ಗ್ರಿಲ್ಸ್ ಜೊತೆಗಿನ ಶೂಟಿಂಗ್ ಅನುಭವದ ಬಗ್ಗೆ ನಟ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ನಾನು ಅಲ್ಲಿಗೆ ಹೋಗುವ ಮೊದಲು ಕಠಿಣವಾದ ಸವಾಲುಗಳು ಇರುತ್ತೆ ಎಂದುಕೊಂಡಿದ್ದೆ. ಆದರೆ ಬೇರ್ ಗ್ರಿಲ್ಸ್ ಆನೆ ಲದ್ದಿಯ ಚಹಾ ನೀಡಿ ಅಚ್ಚರಿ ಪಡಿಸಿದರು. ಎಂತಹ ದಿನ" ಎಂದಿದ್ದಾರೆ.
ಇನ್ನೂ ನಟ ಅಕ್ಷಯ್ ಕುಮಾರ್ ಬಗ್ಗೆಯೂ ಬೇರ್ ಗ್ರಿಲ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗುವ ಮೊದಲು ಹೋಮ್ ವರ್ಕ್ ಮಾಡಿಕೊಂಡು ಹೋಗಿದ್ದೆ. ಅವರು ಸೂಪರ್ ಸ್ಟಾರ್ ಎನ್ನುವುದು ಗೊತ್ತಿತ್ತು. ಆದರೆ ಅವರ ನಮ್ರತೆ, ಸಹೃದಯಿ ಹಾಗೂ ಪಕ್ಕದ ಮನೆ ಹುಡುಗನ ಹಾಗೆ ಇರುವ ಅವರ ವ್ಯಕ್ತಿತ್ವ ಗಮನಿಸಿದೆ. ಫಿಟ್ ನೆಸ್ ಬಗ್ಗೆ ಉತ್ಸಾಹ, ಕುಟುಂಬದ ಬಗ್ಗೆ ಕಾಳಜಿ ಸೇರಿದಂತೆ ನಮ್ಮಿಬ್ಬರ ನಡುವೆ ಸಾಕಷ್ಟು ಸಾಮ್ಯತೆ ಇದೆ. ಅಕ್ಷಯ್ ಜೊತೆ ಇದ್ದ ಕ್ಷಣವನ್ನು ನಿಜಕ್ಕು ತುಂಬಾ ಎಂಜಾಯ್ ಮಾಡಿದೆ" ಎಂದು ಹೇಳಿದ್ದಾರೆ.

ಅಕ್ಷಯ್ ಕುಮಾರ್ ಅವರಿಗಿಂತ ಮೊದಲು ಪ್ರಧಾನಿ ನರೇಂದ್ರ ಮೋದಿ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಅತೀ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿತ್ತು. ಬಳಿಕ ಪ್ರಸಾರವಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಕಾರ್ಯಕ್ರಮವೂ ಸಹ ಹೆಚ್ಚು ವೀಕ್ಷಣೆ ಕಂಡಿತ್ತು. ಇದೀಗ ಅಕ್ಷಯ್ ಕುಮಾರ್ ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 'ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಸೆಪ್ಟಂಬರ್ 14ರಂದು ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











