ಕೊರೊನಾದಿಂದ ಕೆಲಸ ಹೋಯ್ತು: ರಸ್ತೆ ಬದಿ ಮೀನು ಮಾರುತ್ತಿರುವ ನಟ
ಬೆಂಗಾಳಿ ಕಿರುತೆರೆ ಲೋಕದಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿರುವ ಅರಿಂದಮ್ ಪ್ರಮಣಿಕ್ ಈಗ ರಸ್ತೆ ಬದಿ ಮೀನು ಮಾರಾಟ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಅನೇಕ ಜನರು ಕೆಲಸ ಕಳೆದುಕೊಂಡಿದ್ದಾರೆ. ಇದರಲ್ಲಿ ಸಿನಿಮಾ ಕಲಾವಿದರು, ತಂತ್ರಜ್ಞರು ಹೊರತಾಗಿಲ್ಲ.
ಒಂದು ಸಮಯದಲ್ಲಿ ಬೆಂಗಾಳಿ ಕಿರುತೆರೆ ಲೋಕದಲ್ಲಿ ಜನಪ್ರಿಯ ನಟ ಎನಿಸಿಕೊಂಡಿದ್ದ ಅರಿಂದಮ್ ಪ್ರಮಾಣಿಕ್ ಈಗ ಕೆಲಸವಿಲ್ಲದೇ ಬೀದಿ ಬದಿಯಲ್ಲಿ ಮೀನು ಮಾರುವ ಸ್ಥಿತಿಗೆ ಬಂದಿದ್ದಾರೆ. ನಟನ ಈ ಸ್ಥಿತಿ ನೋಡಿದ ಕಲಾಭಿಮಾನಿಗಳು ಮರುಗಿದ್ದಾರೆ.
ಕೊರೊನಾದಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ
'ನಾನು ನಟ ಆಗುವುದಕ್ಕೂ ಮುಂಚೆ ನನ್ನ ತಂದೆ ಪೂರ್ವ ಬುರ್ದ್ವಾನ್ ಜಿಲ್ಲೆಯ ಮೇಮರಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ನಾನು ಯಶಸ್ವಿ ನಟನಾಗಬೇಕೆಂದು ಕನಸು ಕಾಣ್ತಿದ್ದೆ. ನಟನೆ ಆರಂಭಿಸಿದ ನಂತರ ತಂದೆ ತರಕಾರಿ ಮಾರುವುದನ್ನು ನಿಲ್ಲಿಸಿದ್ದರು. ಆದ್ರೀಗ, ಕೊರೊನಾದಿಂದ ನನಗೂ ಕೆಲಸ ಸಿಗ್ತಿಲ್ಲ. ಕುಟುಂಬವೂ ಕಷ್ಟಕ್ಕೆ ಸಿಲುಕಿದೆ. ನನ್ನ ಕುಟುಂಬವನ್ನು ಪೋಷಿಸಲು ನಾನು ಮೀನು ಮಾರುತ್ತಿದ್ದೇನೆ' ಎಂದು ಪ್ರಮಣಿಕ್ ಹೇಳಿಕೊಂಡಿದ್ದಾರೆ.

ಮೇಮರಿ ರೈಲು ನಿಲ್ದಾಣದ ಮಾರುಕಟ್ಟೆಯಲ್ಲಿ ಮೀನು ಮಾರುತ್ತಿರುವ ಅರಿಂದಮ್ ತಮ್ಮ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, 'ಬೀದಿಯಲ್ಲಿ ಕುಳಿತು ಮೀನು ಮಾರುವುದು ಅಷ್ಟು ಸುಲಭವಲ್ಲ, ಆದರೆ ನಮ್ಮ ಜೀವನ ಸಾಗಿಸಲು ಇದು ಅವಶ್ಯಕ, ಬೇರೆ ಮಾರ್ಗವಿಲ್ಲ' ಎಂದಿದ್ದಾರೆ.
ಅನನ್ಯ ಚಟರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಸುಬರ್ನಲತಾ' ಧಾರಾವಾಹಿ ಸೇರಿದಂತೆ ಬೆಂಗಾಳಿಯ ಹಲವು ಧಾರಾವಾಹಿಗಳಲ್ಲಿ ಅರಿಂದಮ್ ಪ್ರಮಣಿಕ್ ನಟಿಸಿದ್ದಾರೆ.
11ನೇ ತರಗತಿ ಓದುತ್ತಿದ್ದಾಗಲೇ ನಟನೆ ಮೇಲಿನ ಆಸಕ್ತಿ ಬೆಳಸಿಕೊಂಡಿದ್ದರು. ನಾಟಕಕಾರ ಹಾಗೂ ನಿರ್ದೇಶಕ ಚಂದನ್ ಸೇನ್ ಅವರ ತಂಡ ಸೇರಿ ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ಅಲ್ಲಿಂದ ಧಾರಾವಾಹಿ ಲೋಕಕ್ಕೆ ಪ್ರವೇಶಿಸಿದರು. ಈಗ, ಕೋವಿಡ್ ಪರಿಸ್ಥಿತಿಯಿಂದ ಉದ್ಯಮ ಬಿಡುವಂತಾಗಿದೆ.


Click it and Unblock the Notifications











