ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಅಜಯ್ ದೇವನ್: 'ಭುಜ್' ಸಿನಿಮಾದ ಬಗ್ಗೆ ಹೇಳಿದ್ದೇನು?
ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷೆಯ ಭುಜ್ ಪ್ರೈಡ್ ಆಫ್ ಇಂಡಿಯಾ ಸಿನಿಮಾ ಬಿಡುಗಡೆಯಾಗಿದೆ. ಆಗಸ್ಟ್ 13ರ ಸಂಜೆ ಡಿಸ್ನಿ ಹಾಟ್ಸ್ಟಾರ್ನಲ್ಲಿ ವರ್ಲ್ಡ್ ಪ್ರೀಮಿಯರ್ ಕಂಡಿದೆ. ಸೆಲೆಬ್ರಿಟಿಗಳಿಗಾಗಿ ಮುಂಬೈನ ಜುಹಾದಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು. ಈ ವೇಳೆ ನಟಿ ಕಾಜೋಲ್ ಹಾಗೂ ಮಗಳು ಭುಜ್ ಸಿನಿಮಾ ನೋಡಿ ಅಜಯ್ ದೇವಗನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಿನಿಮಾ ಬಿಡುಗಡೆಗೂ ಮೊದಲು ಅಜಯ್ ದೇವಗನ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾದ ಅಜಯ್ ದೇವಗನ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಇನ್ನು ಭುಜ್ ಸಿನಿಮಾ ನೋಡಿ ರಾಜನಾಥ್ ಸಿಂಗ್ ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಭುಜ್ ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿದ್ದ ವಿಂಗ್ ಕಮಾಂಡರ್ ವಿಜಯ್ ಕಾರ್ಣಿಕ್ ಬಗ್ಗೆ ಇರುವ ಸಿನಿಮಾ ಇದಾಗಿದೆ.

ವಿಜಯ್ ಕಾರ್ಣಿಕ್ ಪಾತ್ರದಲ್ಲಿ ನಟ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ.
ರಕ್ಷಣಾ ಸಚಿವರನ್ನು ಭೇಟಿಯಾಗಿ ಭುಜ್ ಚಿತ್ರದ ಕೆಲವು ದೃಶ್ಯಗಳನ್ನು ತೋರಿಸಿದ್ದಾರೆ. ಚಿತ್ರದ ಬಗ್ಗೆ ಮತ್ತು ನಟ ಅಜಯ್ ದೇವಗನ್ ಬಗ್ಗೆ ರಾಜನಾಥ್ ಸಿಂಗ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ರಾಜನಾಥ್ ಸಿಂಗ್, "ಹೆಸರಾಂತ ಹಿಂದಿ ಚಲನಚಿತ್ರ ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ತುಂಬಾ ಅದ್ಭುತ ನಟ ಮತ್ತು ಒಳ್ಳೆಯ ಮನುಷ್ಯ. ಅವರು 1971ರ ಯುದ್ಧ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ವಿರೋಚಿತ ಪ್ರಯತ್ನಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ನಾನು ಅವರ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.
ಇನ್ನು ಅಜಯ್ ದೇವಗನ್ ಸಹ ಟ್ವಿಟರ್ ಖಾತೆಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಫೋಟೋಗಳನ್ನು ಶೇರ್ ಮಾಡುವ ಜೊತೆಗೆ ಸಿನಿಮಾದ ಕೆಲವು ದೃಶ್ಯಗಳನ್ನು ವೀಕ್ಷಿಸಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. "ಗೌರವಾನ್ವಿತ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜಿ ಅವರನ್ನು ಭೇಟಿ ಮಾಡಿದೆ. ಅವರು ಭುಜ್ ಚಿತ್ರದ ಕೆಲವು ತುಣುಕುಗಳನ್ನು ವೀಕ್ಷಿಸಿದರು. 50 ವರ್ಷಗಳ ಹಿಂದೆ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಪ್ರದರ್ಶಿಸಲು ಇದು ಸೂಕ್ತ ವೇದಿಕೆಯಾಗಿದೆ. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಮೇಕಿಂಗ್ ತುಂಬಾ ಕಳಪೆಯಾಗಿದೆ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. "ಭುಜ್ ಪ್ರೈಡ್ ಆಫ್ ಇಂಡಿಯಾ ಸಿನಿಮಾ ನಮ್ಮ ನಿಜವಾದ ಹೀರೋಗಳ ಕಥೆಯನ್ನು ಹೇಳಲು ಪ್ರಯತ್ನಿಸಿದೆ. ಆದರೆ ನಟನೆ, ಸ್ಕ್ರಿಪ್ಟ್, ಕ್ರಿಯೇಟಿವಿಟಿಯ ಪ್ರತಿಯೊಂದು ವಿಭಾಗದಲ್ಲಿಯೂ ದಿಕ್ಕು ತಪ್ಪಿದೆ. ಕೊನೆ ಕ್ಷಣದವರೆಗೂ ಮಸಾಲ ಸೇರಿಸಿ ಕೊಂದುಬಿಟ್ಟಿದ್ದಾರೆ. ನೀವು ಮೊದಲು ಸಿನಿಮಾ ಮಾಡುವುದನ್ನು ಬಿಟ್ಟು ಯುದ್ಧದ ಬಗ್ಗೆ ಓದಿ ತಿಳಿಯಿರಿ'' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಈ ಸಿನಿಮಾ ತುಂಬಾ ನಿರಾಸೆ ಮೂಡಿಸಿದೆ ಎಂದು ಹೇಳುತ್ತಿದ್ದಾರೆ.
ಇನ್ನು ಸಿನಿಮಾ ವೀಕ್ಷಿಸಿದ ಅಜಯ್ ಪತ್ನಿ, ನಟಿ ಕಾಜೋಲ್ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಮರ್ಶಿಸಿರುವ ಕಾಜೋಲ್, ತನ್ನ ಗಂಡನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. ''ಬಹಳ ದಿನಗಳ ನಂತರ ಥಿಯೇಟರ್ನಲ್ಲಿ ಸಿನಿಮಾ ನೋಡಿದೆ. ಅಂತಹ ಅದ್ಭುತ ಸಮಯ ಇದು. ನಮ್ಮ ಜೀವನದಲ್ಲಿ ನಾವು ನಿಶ್ಚಿಂತೆಯಿಂದ ನಿರಾಳವಾಗಿ ಜೀವಿಸುತ್ತಿದ್ದೇವೆ ಅಂದ್ರೆ ಅದಕ್ಕೆ ಭದ್ರತೆ ಒದಗಿಸುತ್ತಿರುವುದು ಯಾರು ಎಂಬ ಕನಿಷ್ಠ ತಿಳುವಳಿಕೆಯನ್ನು ಮರೆತಿರುತ್ತೇವೆ. ಇಂತಹ ವಿಷಯಗಳನ್ನು ನಮಗೆ ನೆನಪು ಮಾಡಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ. ''ನಾವು ಸುರಕ್ಷಿತ ಜೀವನ ಸಾಗಿಸಲು ಕಾರಣರಾಗಿರುವ ಎಲ್ಲಾ ನಿಜವಾದ ಹೀರೋಗಳಿಗೆ ಹ್ಯಾಟ್ಸಪ್'' ಎಂದಿದ್ದಾರೆ. ಕಾಜೋಲ್ ಜೊತೆಗೆ ಮಗಳು ಸಹ ಭುಜ್ ವೀಕ್ಷಿಸಿ ಖುಷಿಯಾಗಿದ್ದಾರೆ.


Click it and Unblock the Notifications











