ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಖ್ಯಾತ ಕ್ರಿಕೆಟಿಗನ ಬಯೋಪಿಕ್ ಘೋಷಣೆ
ಬಾಲಿವುಡ್ನಲ್ಲಿ ಮತ್ತೊಂದು ಬಯೋಪಿಕ್ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕಾಗಿ ಬಹಳ ದಿನಗಳಿಂದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದರು. ಈಗಾಗಲೇ ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಹಾಗೂ ಅಜರುದ್ದೀನ್ ಸೇರಿದಂತೆ ಕೆಲ ಭಾರತ ಕ್ರಿಕೆಟ್ ತಂಡ ಆಟಗಾರರ ಜೀವನಗಾಥೆ ತೆರೆಗೆ ಬಂದಿದೆ. ಇದೀಗ ಯುವರಾಜ್ಸಿಂಗ್ ಬಯೋಪಿಕ್ ಸರದಿ.
ಭಾರತೀಯ ಕ್ರಿಕೆಟ್ಗೆ ಚಂಢೀಗರ್ ಮೂಲದ ಎಡಗೈ ಬ್ಯಾಟ್ಸಮನ್ ಯುವರಾಜ್ಸಿಂಗ್ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ತಮ್ಮ ಅದ್ಧುತ ಆಟದಿಂದ ಕ್ರಿಕೆಟ್ ಪ್ರೇಮಿಗಳನ್ನು ಯುವರಾಜ್ ರಂಜಿಸಿದ್ದರು. ಇದೀಗ ಆತನ ಜೀವನಾಧರಿತ ಕಥೆ ತೆರೆಮೇಲೆ ಬರಲಿದೆ. ಒಮ್ಮೆ ಕ್ಯಾನ್ಸರ್ಗೆ ತುತ್ತಾಗಿದ್ದ ಯುವರಾಜ್ ಅದನ್ನು ಮೆಟ್ಟಿನಿಂತು ಮತ್ತೆ ಕ್ರಿಕೆಟ್ಗೆ ಕಂಬ್ಯಾಕ್ ಮಾಡಿ ಮೈದಾನದಲ್ಲಿ ರನ್ ಹೊಳೆ ಹರಿಸಿದ್ದರು.

ಯುವರಾಜ್ ಸಿಂಗ್ ಹೋರಾಟದ ಬದುಕು ನಿಜಕ್ಕೂ ಪ್ರೇರಣೆದಾಯಕ. ಆತನ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ರೋಚಕ ಕ್ಷಣಗಳಿವೆ. ಅವೆಲ್ಲವೂ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಅಂಶಗಳು. ಅದೇ ಕಾರಣಕ್ಕೆ ಯುವರಾಜ್ ಸಿಂಗ್ ಬಯೋಪಿಕ್ ತೆರೆಗೆ ತರುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಟೀ- ಸೀರಿಸ್ ಸಂಸ್ಥೆ ಇದೀಗ ಆ ಜವಾಬ್ದಾರಿ ವಹಿಸಿಕೊಂಡಿದೆ.
ತಮ್ಮ 13 ನೇ ವಯಸ್ಸಿನಲ್ಲಿ ಪಂಜಾಬ್ ಅಂಡರ್-16 ಕ್ರಿಕೆಟ್ ತಂಡಕ್ಕೆ ಯುವರಾಜ್ ಸಿಂಗ್ ಪಾದಾರ್ಪಣೆ ಮಾಡಿದ್ದರು. ಇನ್ನು 2000ದ ಇಸವಿಯಲ್ಲಿ ನಡೆದ ಅಂಡರ್ 19 ಕ್ರಿಕೆಟ್ ವರ್ಲ್ಡ್ ಕಪ್ ಅನ್ನುವ ಭಾರತ ತಂಡ ಗೆದ್ದಿತ್ತು. ಆಗ ತಂಡದಲ್ಲಿ ಯುವರಾಜ್ ಸಿಂಗ್ ಆಡಿದ್ದರು. ಆತನ ಆಟ ನೋಡಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಬರೀ ಬ್ಯಾಟಿಂಗ್ ಮಾತ್ರವಲ್ಲ ತಮ್ಮ ಅದ್ಭುತ ಕ್ಷೇತ್ರ ರಕ್ಷಣೆಯಿಂದಲೂ ಯುವರಾಜ್ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಮಿಂಚು ಹರಿಸುತ್ತಿದ್ದರು. ತಮ್ಮ ಆಕ್ರಮಣಕಾರಿ ಎಡಗೈ ಬ್ಯಾಟಿಂಗ್ ಶೈಲಿಯಿಂದ ಅವರು ಗಮನ ಸೆಳೆಯುತ್ತಿದ್ದರು. 2007ರ ಟಿ-20 ವಿಶ್ವಕಪ್ ಅನ್ನು ಭಾರತ ತಂಡ ಗೆದ್ದು ಬೀಗಿತ್ತು. ಆ ಸಮಯದಲ್ಲಿ ಯುವರಾಜ್ ಕ್ರಿಕೆಟ್ ಜೀವನದ ಉತ್ತುಂಗದಲ್ಲಿದ್ದರು.
ಒಂದೇ ಓವರ್ನ 6 ಎಸೆತಗಳನ್ನು ಯುವರಾಜ್ ಸಿಂಗ್ ಸಿಕ್ಸರ್ ಗಡಿ ದಾಟಿಸಿದ್ದನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯುವುದಿಲ್ಲ. ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆದ ಆ ಓವರ್ನಲ್ಲಿ ಯುವರಾಜ್ ಸಿಂಗ್ ಆಟ ನೋಡಿ ಕ್ರಿಕೆಟ್ ಲೋಕ ಬೆರಗಾಗಿತ್ತು. 2011ರಲ್ಲಿ ಭಾರತ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದಿತ್ತು. ಅದಕ್ಕೂ ಈ ಚಂಢೀಗರ್ ಆಟಗಾರರ ಕೊಡುಗೆ ಬಹಳಷ್ಟಿದೆ.
ಟೀ-ಸೀರಿಸ್ ಬ್ಯಾನರ್ನಲ್ಲಿ ಭೂಷಣ್ ಕುಮಾರ್ ಮತ್ತು ರವಿ ಭಾಗಚಂಡ್ಕ ಸೇರಿ ಯುವರಾಜ್ ಸಿಂಗ್ ಬಯೋಪಿಕ್ ನಿರ್ಮಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಯುವರಾಜ್ ಸಿಂಗ್ ಜೊತೆ ಮಾತನಾಡಿ ಈ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದಾರೆ. ಚಿತ್ರದ ನಿರ್ದೇಶಕರು ಯಾರು? ಹೀರೊ ಆಗಿ ಯಾರು ನಟಿಸುತ್ತಾರೆ? ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಬಹಳ ಹಿಂದೆ ಕರಣ್ ಜೋಹರ್ ಇಂತಾದೊಂದು ಬಯೋಪಿಕ್ಗಾಗಿ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇನ್ನು ರಣ್ಬೀರ್ ಕಪೂರ್ ನನ್ನ ಜೀವನಾಧರಿತ ಕಥೆಯಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಸ್ವತಃ ಯುವರಾಜ್ ಸಿಂಗ್ ಹೇಳಿದ್ದರು. ಆದರೂ ನಿರ್ದೇಶಕ ತೀರ್ಮಾಣ ಅಂತಿಮ ಎಂದಿದ್ದರು. ಒಟ್ಟಾರೆ ಸೆಟ್ಟೇರುವುದಕ್ಕೂ ಮುನ್ನ ಈ ಬಯೋಪಿಕ್ ಬಹಳ ನಿರೀಕ್ಷೆ ಮೂಡಿಸಿದೆ.


Click it and Unblock the Notifications











