'ಈ' ಸಿನಿಮಾ ನೋಡಿ ಕಣ್ಣೀರಿಟ್ಟ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ
ಹಿರಿಯ ರಾಜಕಾರಣಿ, ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ ಬಾಲಿವುಡ್ ಸಿನಿಮಾ ನೋಡಿ ಗಳಗಳನೆ ಅತ್ತಿದ್ದಾರೆ. ಹೌದು, ನಿನ್ನೆ ರಿಲೀಸ್ ಆದ ಹಿಂದಿಯ ಶಿಕಾರ ಸಿನಿಮಾ ವೀಕ್ಷಿಸಿದ ಎಲ್.ಕೆ ಅಡ್ವಾಣಿ ಭಾವುಕರಾಗಿದ್ದಾರೆ. ಸಿನಿಮಾ ವೀಕ್ಷಿಸುವಂತೆ ಚಿತ್ರತಂಡ ಎಲ್.ಕೆ ಅಡ್ವಾಣಿಗೆ ಆಹ್ವಾನ ನೀಡಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಸಿನಿಮಾ ನೋಡಲು ಅಡ್ವಾಣಿ ಮಗಳು ಪ್ರತಿಭ ಜೊತೆ ಆಗಮಿಸಿದ್ದರು.
ಶಿಕಾರ, 1990ರಲ್ಲಿ ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡಿದ ಕಾಶ್ಮೀರಿ ಪಂಡಿತರ ಕುರಿತು ಇರುವ ಸಿನಿಮಾ ಇದಾಗಿದೆ. ಕಾಶ್ಮೀರಿ ಪಂಡಿತರ ನೋವನ್ನು ಕಂಡು ಅಡ್ವಾಣಿ ಭಾವುಕರಾಗಿದ್ದಾರೆ. ಅಡ್ವಾಣಿ ಜೊತೆಯಲ್ಲಿದ್ದ ಮಗಳು ಪ್ರತಿಭಾ ಕಣ್ಣಂಚಲ್ಲು ನೀರು ತುಂಬಿಕೊಂಡಿತ್ತು. ಅಡ್ವಾಣಿಯ ಭಾವುಕ ಕ್ಷಣವನ್ನು ನಿರ್ದೇಶಕ ವಿಧು ವಿನೋದ್ ಚೋಪ್ರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೊ ಶೇರ್ ಮಾಡಿ "ವಿಶೇಷ ಪ್ರದರ್ಶನದಲ್ಲಿ ಎಲ್ ಕೆ ಅಡ್ವಾಣಿ ಸಿನಿಮಾ ನೋಡಿ ನಮಗೆ ಆಶೀರ್ವಾದ ಮಾಡಿದ್ದಾರೆ. ನಿಮ್ಮ ಮೆಚ್ಚುಗೆಗೆ ನಮ್ಮ ಕೃತಜ್ಞತೆ" ಎಂದು ಬರೆದು ಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಿಕಾರ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ.

ನಿರ್ದೇಶಕ ವಿಧು ವಿನೋದ್ ಚೋಪ್ರ ಸಾರಥ್ಯದಲ್ಲಿ ಮೂಡಿಬಂದ ಶಿಕಾರ ಸಿನಿಮಾದಲ್ಲಿ ಆದಿಲ್ ಖಾನ್ ಮತ್ತು ಸಾದಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಧು ವಿನೋದಿ ಚೋಪ್ರ ಅನೇಕ ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರದ ಬಗ್ಗೆ ನಟ ಆಮೀರ್ ಖಾನ್ ಕೂಡ ಟ್ವೀಟ್ ಮಾಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಸಾಕಷ್ಟು ವಿವಾದಗಳ ನಡುವೆ ಚಿತ್ರ ತೆರೆಗೆ ಬಂದಿದೆ. ರಿಲೀಸ್ ಗೂ ಮೊದಲು ಚಿತ್ರ ಸಾಕಷ್ಟು ಮಂದಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಸಿನಿಮಾ ರಿಲೀಸ್ ದಿನ ಕಾಶ್ಮೀರಿ ಪಂಡಿತ ಮಹಿಳೋಯೊಬ್ಬರು ಸಿನಿಮಾ ನೋಡುತ್ತಲೆ ಕೂಗಾಡಿದ್ದರು. ಜೋರಾಗಿ ಅಳುತ್ತ ತನ್ನ ನೋವನ್ನು ತೋಡಿಕೊಂಡಿದ್ದರು. ಚಿತ್ರದಲ್ಲಿ ವಾಸ್ತವತೆಯನ್ನೆ ತೋರಿಸಿಲ್ಲ ಎಂದು ನಿರ್ದೇಶಕರ ವಿರುದ್ಧ ಕೂಗಾಡಿದ್ದರು. ಈಗ ಅಡ್ವಾಣಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.


Click it and Unblock the Notifications











