ನಿಮ್ಮಂಥ ದ್ವೇಷಿಯನ್ನು ನಾನು ನೋಡಿಲ್ಲ; ಧರ್ಮದ ಕಾರಣದಿಂದ ಕೆಲಸ ಸಿಕ್ತಿಲ್ಲ ಎಂದ ರೆಹಮಾನ್- ಕಂಗನಾ ಕೆಂಡಾಮಂಡಲ
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಹುಟ್ಟುಕೊಂಡಿದೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಭಾರತೀಯ ಚಿತ್ರರಂಗದ ಸೌಹಾರ್ದಯುತ ವಾತಾವರಣದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಈಗೀಗ ಎದ್ದುಕಾಣುತ್ತಿವೆ.
ಇದಕ್ಕೆ ಕೈಗನ್ನಡಿ ಎಂಬಂತೆ ಭಾರತದ ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಮಾತನಾಡಿದ ಮಾತುಗಳು ವಿವಾದಕ್ಕೆ ನಾಂದಿ ಹಾಡಿವೆ.

ಹೌದು,''ಬಿಬಿಸಿ ಏಷ್ಯನ್ ನೆಟವರ್ಕ್''ಗೆ ನೀಡಿದ ಸಂದರ್ಶನದಲ್ಲಿ ಕೆಲ ದಿನಗಳ ಹಿಂದೆ ಮಾತನಾಡಿದ್ದ ರೆಹಮಾನ್ ಹಿಂದಿ ಚಿತ್ರರಂಗದಲ್ಲಿ 8 ವರ್ಷಗಳಿಂದ ನನಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದರು. ಚಿತ್ರರಂಗದಲ್ಲಿ ಅಧಿಕಾರ ಬದಲಾವಣೆಯಾಗಿದ್ದು ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ ಎಂದು ಹೇಳಿದ್ದ ರೆಹಮಾನ್, ಕೋಮುವಾಧಿ ಧೋರಣೆಗೆ ಇದು ಕಾರಣವಾಗಿರಬಹುದು ಎಂದು ಹೇಳಿದ್ದರು.
ಇಷ್ಟೇ ಅಲ್ಲದೇ ವಿಕ್ಕಿ ಕೌಶಲ್ ಅಭಿನಯದ ''ಛಾವಾ'' ಚಿತ್ರವನ್ನು ಉದಾಹರಣೆಯನ್ನಾಗಿ ನೀಡಿದ್ದ ರೆಹಮಾನ್ ''ಛಾವಾ'' ಒಡೆದು ಆಳುವ ಅಂಶ ಹೊಂದಿದ್ದ ಚಿತ್ರ ಆದರೆ ಆ ಚಿತ್ರ ಗೆದ್ದಿತು ಎಂದು ಹೇಳಿದ್ದರು. ''ಛಾವಾ'' ಚಿತ್ರದ ಮೂಲ ಉದ್ದೇಶ ಶೌರ್ಯ ಪ್ರದರ್ಶನವೇ ಆಗಿರಬಹುದು ಆದರೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೋಮು ಅಶಾಂತಿಗೂ ಕೂಡ ಆ ಚಿತ್ರ ಕಾರಣವಾಯಿತು ಎಂದಿದ್ದರು.
ಎ.ಆರ್. ರೆಹಮಾನ್ ಅವರ ಈ ಮಾತುಗಳಿಗೆ ಈಗ ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕಂಗನಾ ರಣಾವತ್ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ರೆಹಮಾನ್ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಕಂಗನಾ ರಣಾವತ್ ನಾನು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂಬ ಕಾರಣಕ್ಕೆ ನನಗೆ ಚಿತ್ರರಂಗದಲ್ಲಿ ಪಕ್ಷಪಾತ ಆಗುತ್ತಿದೆ. ಆದರೂ ಕೂಡ ನಾನು ನಿಮ್ಮಷ್ಟು ಪೂರ್ವಾಗ್ರಹ ಪೀಡಿತ ಹಾಗೂ ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ತಮ್ಮ ನಿರ್ದೇಶನದ ''ಎಮರ್ಜೆನ್ಸಿ'' ಚಿತ್ರವನ್ನು ಕೂಡ ಪ್ರಸ್ತಾಪಿಸಿರುವ ಕಂಗನಾ ನಾನು ನನ್ನ ನಿರ್ದೇಶನದ ಮೊದಲ ಸಿನಿಮಾ ''ಎಮರ್ಜೆನ್ಸಿ'' ಕಥೆಯನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ, ಆದರೆ ನೀವು ಕಥೆ ಕೇಳುವುದು ಬಿಡಿ, ನನ್ನನ್ನು ಭೇಟಿ ಕೂಡ ಆಗಲಿಲ್ಲ ಎಂದು ಹೇಳಿದ್ದಾರೆ.
ಪ್ರೊಪಗಾಂಡ ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಅಂತ ನನಗೆ ಆ ನಂತರ ಯಾರೋ ಹೇಳಿದರು ಎಂದಿರುವ ಕಂಗನಾ ವಿಪರ್ಯಾಸ ಅಂದರೆ ಎಲ್ಲ ವಿಮರ್ಶಕರು ನನ್ನ ''ಎಮರ್ಜೆನ್ಸಿ'' ಸಿನಿಮಾವನ್ನು ಮಾಸ್ಟರ್ಪೀಸ್ ಎಂದು ಕೊಂಡಾಡಿದರು ಎಂದು ಹೇಳಿದ್ದಾರೆ.
ಮುಂದುವರೆದು ''ಎಮರ್ಜೆನ್ಸಿ'' ಚಿತ್ರ ನಿಷ್ಪಕ್ಷಪಾತವಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ಮುಖಂಡರು ಕೂಡ ನನ್ನ ಚಿತ್ರವನ್ನು ಹೊಗಳಿದರು ಎಂದು ಹೇಳಿರುವ ಕಂಗನಾ ನೀವು ನಿಮ್ಮ ದ್ವೇಷದಿಂದ ಕುರುಡಾಗಿದ್ದೀರಿ. ನಿಮ್ಮನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತದೆ ಎಂದು ಹೇಳಿದ್ದಾರೆ. ನಿಮ್ಮದು ''ಮೊಸಳೆ ಕಣ್ಣೀರು'' ಎಂದು ಟೀಕಿಸಿರುವ ಕಂಗನಾ ರಣಾವತ್ ಬೇರೆಯವರನ್ನು ದೂಷಿಸುವ ಮೊದಲು ನಿಮ್ಮೊಳಗೆ ಇರುವ ದ್ವೇಷ ಮತ್ತು ಪೂರ್ವಾಗ್ರಹಗಳ ಬಗ್ಗೆ ನೀವು ಏನು ಹೇಳಲು ಬಯಸುತ್ತೀರಾ..? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಕೇವಲ ಕಂಗನಾ ಮಾತ್ರ ಅಲ್ಲ ಜಾವೇದ್ ಅಖ್ತರ್ ಸೇರಿ ಹಲವರು ಎಆರ್ ರೆಹಮಾನ್ ನೀಡಿದ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.


Click it and Unblock the Notifications











