'ಸರಣಿ ಅಪರಾಧಿ' ಎಂದ ಬಿಎಂಸಿ ವಿರುದ್ಧ ಸೋನು ಸೂದ್ ಹೋರಾಟ
ನಟ ಸೋನು ಸೂದ್ ಕೊರೊನಾ ಲಾಕ್ಡೌನ್ ಸಮಯದಲ್ಲಿ ನಿಜ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆದರೆ ಅವರ ಮೇಲೆ ಮುಂಬೈ ಮಹಾನಗರ ಪಾಲಿಕೆಯು 'ಸರಣಿ ಅಪರಾಧಿ' ಎಂಬ ಆರೋಪ ಹೊರಿಸಿದೆ.
ಸೋನು ಸೂದ್, ಮುಂಬೈನ ತಮ್ಮ ಹೋಟೆಲ್ ಅನ್ನು ನಿಯಮಬಾಹಿರವಾಗಿ ನಿರ್ಮಿಸಿದ್ದಾರೆ. ಅಷ್ಟೆ ಅಲ್ಲದೆ, ಈ ರೀತಿ ಹಲವು ಬಾರಿ ನಿಯಮಗಳನ್ನು ಉಲ್ಲಂಘಿಸಿ 'ಸರಣಿ ಅಪರಾಧಿ' ಎನಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ಸೂದ್, 'ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ, ನ್ಯಾಯಾಲಯ ಏನು ಹೇಳುತ್ತದೆ ನಾನು ಅದನ್ನು ಪಾಲಿಸುತ್ತೇನೆ' ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಸೋನು ಸೂದ್, ವಸತಿ ನಿಲಯವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಿಸಿದ್ದಾರೆ. ಹೋಟೆಲ್ ಮಾದರಿಯಲ್ಲಿ ಅನುಮತಿ ಇಲ್ಲದೆ ಬದಲಾವಣೆ ಮಾಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ.
ಬಿಎಂಸಿಯ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸೋನು ಸೂದ್, 'ನನಗೆ ಬಿಎಂಸಿ ಬಗ್ಗೆ ಬಹಳ ಗೌರವವಿದೆ, ನಾನು ನಿಯಮಕ್ಕೆ ಅನುಸಾರವಾಗಿಯೇ ನಡೆದುಕೊಂಡಿದ್ದೇನೆ. ಒಂದು ವೇಳೆ ತಪ್ಪಾಗಿದ್ದರೆ ತಿದ್ದಿಕೊಳ್ಳಲು ಸಹ ತಯಾರಿದ್ದೇನೆ. ಬಿಎಂಸಿಯ ನೊಟೀಸ್ ಗೆ ಎದುರಾಗಿ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶವನ್ನು ನಾನು ಪಾಲಿಸುತ್ತೇನೆ' ಎಂದಿದ್ದಾರೆ ಸೋನು ಸೂದ್.
ಕೆಲವು ದಿನಗಳ ಹಿಂದೆ, ಬಿಎಂಸಿಯು ಕಂಗನಾ ರಣೌತ್ ಗೂ ಸಹ ಅಕ್ರಮ ನಿರ್ಮಾಣದ ನೊಟೀಸ್ ನೀಡಿ, ಅವರ ಕಚೇರಿಯನ್ನು ಧ್ವಂಸ ಗೊಳಿಸಿತ್ತು. ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಜಾನ್ ಅಬ್ರಹಾಂ, ಕಪಿಲ್ ಶರ್ಮಾ ಅವರುಗಳ ನಿವಾಸದ ಕೆಲವು ಭಾಗಗಳನ್ನು ಸಹ ಅಕ್ರಮ ನಿರ್ಮಾಣ ಎಂದು ಆರೋಪಿಸಿ ಬಿಎಂಸಿ ಧ್ವಂಸಗೊಳಿಸಿತ್ತು.


Click it and Unblock the Notifications










