ಬಾಲಿವುಡ್ ನಟಗೆ 4.36 ಲಕ್ಷ ರೂ ಪಂಗನಾಮ ಹಾಕಿದ ಸೈಬರ್ ವಂಚಕರು
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರಿಂದ ಸ್ಟಾರ್ ನಟವರೆಗೂ ಅನೇಕ ಮಂದಿ ಸೈಬರ್ ವಂಚಕರ ಮಾತಿಗೆ ಮರುಳಾಗಿ ತಮ್ಮ ಹಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಕೂಡ ಹೊರತಲ್ಲ ಎನ್ನುವುದು ಕಳೆದ ವಾರ ನಡೆದ ಘಟನೆಯಿಂದ ಸಾಬೀತಾಗಿದೆ.
ಬಾಲಿವುಡ್ ನಟ ಅನ್ನು ಕಪೂರ್ ಸೈಬರ್ ವಂಚನೆಗೊಳಗಾಗಿದ್ದು, ತಮಗಾದ ಮೋಸ ಹಾಗೂ ಪೊಲೀಸರ ನೆರವನ್ನು ಸ್ವತಃ ನಟ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಟ ಅನ್ನು ಕಪೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ಸುಧೀರ್ಘವಾಗಿ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.
ಕೆವೈಸಿ ವಿವವರಗಳನ್ನು ಪ್ರಮುಖ ಬ್ಯಾಂಕಿನೊಂದಿಗೆ ನವೀಕರಿಸುವ ನೆಪದಲ್ಲಿ ನಟ ಅನ್ನು ಕಪೂರ್ಗೆ ಕರೆ ಮಾಡಿರುವ ಸೈಬರ್ ವಂಚಕ ಬ್ಯಾಂಕ್ ಸಿಬ್ಬಂದಿಯಂತೆ ಮಾತನಾಡಿ, ನಟನನ್ನು ನಂಬಿಸಿ ಅವರ ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ಓಟಿಪಿಯನ್ನು ಸಹ ಪಡೆದ ವಂಚಕ ಅನ್ನು ಕಪೂರ್ ಖಾತೆಯಿಂದ ಸುಮಾರು 4.36 ಲಕ್ಷ ರೂಪಾಯಿಯನ್ನು ದೂಚಿದ್ದಾನೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವುದನ್ನು ಕಂಡ ನಟ ಅಚ್ಚರಿಗೊಂಡಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದು, ಅನ್ನು ಕಪೂರ್ ಅವರಿಗೆ 3.08 ಲಕ್ಷ ರೂಪಾಯಿಯನ್ನು ಮರಳಿಸಿದ್ದಾರೆ.
ಈ ಬಗ್ಗೆ ಅನ್ನು ಕಪೂರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಮೋಸ ಹೋಗುತ್ತಿರುವುದು ಅಥವಾ ವಂಚನೆಗೊಳಗಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೋ ನಾನು ಮೊಸ ಹೋಗಿದ್ದೇನೆ. ಜೂನ್ನಲ್ಲಿ ನಾನು ಯುರೋಪ್ ಪ್ರವಾಸದಲ್ಲಿದ್ದ ವೇಳೆ ದರೋಡೆ ನಡೆದಿದೆ. ಆ ಹಣ ಮರಳಿ ಬರುತ್ತದೆ ಎನ್ನುವ ಭರವಸೆ ಇಲ್ಲ. ಆ ಘಟನೆಗೂ ಮುಂಚೆ ನನ್ನ ಕಚೇರಿಯಲ್ಲಿದ್ದ ಯುವಕನೊಬ್ಬ ಹಣ ಕದ್ದು ಪರಾರಿಯಾಗಿದ್ದ. ಈ ಎಲ್ಲವೂ ಕಳೆದ ಕೆಲ ತಿಂಗಳ ಹಿಂದೆ ನಡೆದ ದುರಾದೃಷ್ಟಕರ ಘಟನೆಗಳು ಎಂದರು.
ಇನ್ನು ಗುರುವಾರ ಬೆಳಿಗ್ಗೆ ಸುಮಾರು 11:30 ರ ವೇಳೆಗೆ ಕರೆ ಮಾಡಿದ ವಂಚಕ ತಾನು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಕೆವೈಸಿ ವಿವವರಗಳನ್ನು ಪ್ರಮುಖ ಬ್ಯಾಂಕಿನೊಂದಿಗೆ ನವೀಕರಿಸುವಂತೆ ಹೇಳಿ ಕೆಲ ನಂಬರ್ಗಳನ್ನು ಕೊಟ್ಟನು. ಈ ವೇಳೆ ನನಗೆ ಓಟಿಪಿ ಹೇಳ ಬಾರದು ಎಂದು ಅವರಿವಾಗಲಿಲ್ಲ. ಆ ವ್ಯಕ್ತಿ ಕೇಳಿದ ಕೂಡಲೇ ಓಟಿಪಿ ಹೇಳಿದ್ದೇನೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ನನ್ನ ಬ್ಯಾಂಕ್ ಖಾತೆಯಿಂದ 4.36 ಲಕ್ಷ ರೂಪಾಯಿ ಡ್ರಾ ಆಯಿತು. ತಕ್ಷಣವೇ ನಾನು ಓಶಿವಾರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ ಎಂದು ಅನ್ನು ಕಪೂರ್ ಘಟನೆಯನ್ನು ವಿವರಿಸಿದರು.

ಮಾತು ಮುಂದುವರಿಸಿದ ಅವರು, ನನ್ನ ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ನನಗೆ ಬಂದ ಕರೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರು ವಂಚಕನ ಬ್ಯಾಂಕ್ ವಿವರ ಪಡೆದು 3.08 ಲಕ್ಷ ರೂಪಾಯಿಯನ್ನು ಮರಳಿ ಕೊಡಿಸಿದ್ದಾರೆ. ಅಲ್ಲದೇ ಆರೋಪಿ ಬಗ್ಗೆಯೂ ಸಹ ಮಾಹಿತಿ ಕಲೆ ಹಾಕಿದ್ದು, ಆತನನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸರಿಗೆ ನನ್ನ ಧನ್ಯವಾದಗಳು ಎಂದು ನಟ ಅನ್ನು ಕಪೂರ್ ತಿಳಿಸಿದ್ದಾರೆ.
ಇನ್ನು ತಮಗಾದ ವಂಚನೆಯ ಬಗ್ಗೆ ಸವಿವರವಾಗಿ ಹೇಳಿಕೊಂಡಿರುವ ಅನ್ನು ಕಪೂರ್, ಆಧಾರ್ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಹಾಗೂ ನಿಮ್ಮ ಮೊಬೈಲ್ಗೆ ಬರುವ ಓಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಅಲ್ಲದೇ ಹ್ಯಾಕರ್, ಸೈಬರ್ ವಂಚಕರ ಮಾತಿಗೆ ಬಲಿಯಾಗ ಬೇಡಿ ಎಂದು ನಟ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











