ಯಶ್ ಕಾರಣಕ್ಕೆ 'ರಾಮಾಯಣ' ಚಿತ್ರದಲ್ಲಿ ನಾನು ವಿಭೀಷಣ ಪಾತ್ರ ಮಾಡ್ತಿಲ್ಲ ಎಂದ ಬಾಲಿವುಡ್ ನಟ
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿ ಬರ್ತಿದೆ. ರಾವಣನ ಪಾತ್ರದಲ್ಲಿ ಈಗಾಗಲೇ ಯಶ್ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ಹಾಲಿವುಡ್ ಸಂಸ್ಥೆ ಕೂಡ ಚಿತ್ರ ನಿರ್ಮಾಣ, ವಿತರಣೆಗೆ ಕೈ ಜೋಡಿಸಿದೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ನಿರ್ಮಾಪಕ ಚಾರ್ಲ್ಸ್ ರೊವೆನ್ ಕೂಡ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಚಿತ್ರದ ಪ್ರತಿ ಪಾತ್ರವನ್ನು ಘಟಾನುಘಟಿ ಕಲಾವಿದರು ನಿಭಾಯಿಸುತ್ತಿದ್ದಾರೆ.

ರಾಮಾಯಣ ಕಥೆಯಲ್ಲಿ ರಾವಣನ ಸಹೋದರ ವಿಭೀಷಣ ಪಾತ್ರಕ್ಕೂ ಬಹಳ ಮಹತ್ವ ಇದೆ. ಮೊದಲಿನಿಂದಲೂ ರಾವಣನ ದುಷ್ಕೃತ್ಯಗಳನ್ನು ವಿರೋಧಿಸಿದನು ಸಹೋದರ ವಿಭೀಷಣ. ರಾವಣ ಸೀತೆಯನ್ನು ಅಪಹರಿಸಿದಾಗಲೂ ಅದು ತಪ್ಪು ಎಂದು ಅಣ್ಣನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದ. ರಾವಣ ಒಪ್ಪದಿದ್ದಾಗ ರಾಮನ ಪಕ್ಷ ಸೇರಿದ್ದ. ರಾವಣ ಸಂಹಾರದ ನಂತರ, ರಾಮನು ವಿಭೀಷಣನನ್ನು ಲಂಕೆಯ ರಾಜನಾಗಿ ಪಟ್ಟಾಭಿಷೇಕ ಮಾಡುತ್ತಾನೆ.
ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ವಿಭೀಷಣ ಪಾತ್ರಕ್ಕೆ ನಟ ಜೈದೀಪ್ ಅಹ್ಲಾವತ್ ಆಯ್ಕೆ ಆಗಿದ್ದಾರೆ ಎಂದು ಗುಲ್ಲಾಗಿತ್ತು. ಈ ಬಗ್ಗೆ ದಿ ಲಾಲಂಟಾಪ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸ್ವತಃ ಜೈದೀಪ್ ಅಹ್ಲಾವತ್ ಮಾತನಾಡಿದ್ದಾರೆ. ನನಗೆ ಅವಕಾಶ ಬಂದಿದ್ದು ನಿಜ. ಆದರೆ ನಾನು ನಟಿಸೋಕೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಯಶ್ ಡೇಟ್ಸ್ ಎಂದು ಅವರು ಹೇಳಿದ್ದಾರೆ.

"ವಿಭೀಷಣನ ಪಾತ್ರ ಮಾಡುವಂತೆ ನನ್ನನ್ನು ಸಂಪರ್ಕಿಸಿದ್ದರು, ಆದರೆ ಸಮಯ ಹೊಂದಿಕೆಯಾಗಲಿಲ್ಲ. ವಿಭೀಷಣನ ದೃಶ್ಯಗಳು ರಾವಣನೊಂದಿಗೆ ಇರಬೇಕಾಗಿರುವುದರಿಂದ ಅದಕ್ಕೆ ನಿರ್ದಿಷ್ಟ ವೇಳಾಪಟ್ಟಿ ಅಗತ್ಯವಾಗಿತ್ತು. ನನ್ನ ಡೇಟ್ಸ್ಗಿಂತ ರಾವಣನ ಡೇಟ್ಸ್(ಯಶ್) ಹೆಚ್ಚು ಮುಖ್ಯವಾಗಿತ್ತು ಎನಿಸುತ್ತದೆ. 'KGF' ಚಿತ್ರದ ನಟ ಯಶ್ ರಾವಣನ ಪಾತ್ರ ನಿರ್ವಹಿಸುತ್ತಿದ್ದಾರೆ ಅನಿಸುತ್ತಿದೆ" ಎಂದು ನಟ ಜೈದೀಪ್ ಅಹ್ಲಾವತ್ ಹೇಳಿದ್ದಾರೆ.
ಹರ್ಯಾಣ ಮೂಲದ ನಟ ಜೈದೀಪ್ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 15 ವರ್ಷಗಳ ಹಿಂದೆ 'ಆಕ್ರೋಶ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಬಳಿಕ 'ಕಟ್ಟಾ ಮೀಟಾ' ಚಿತ್ರದಲ್ಲಿ ನಟಿಸಿ ಗಮನ ಸೆಳೆದರು. 'ರಾಕ್ಸ್ಟರ್', 'ಗ್ಯಾಂಗ್ಸ್ ವಸ್ಸೇಪೂರ್', 'ವಿಶ್ವರೂಪಂ', 'ರಯೀಸ್', 'ರಾಜಿ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ರಾವಣನ ಪತ್ನಿ ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ತೆರೆಗೆ ತರುವ ಪ್ರಯತ್ನ ನಡೀತಿದೆ. ಮುಂಬೈನಲ್ಲೇ ಸೆಟ್ ಹಾಕಿ ಬಹುತೇಕ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ.
ಇತ್ತೀಚೆಗೆ ಯಶ್ ರಾವಣನಾಗಿ ನಟಿಸುತ್ತಿರುವ ಕೆಲ ಮೇಕಿಂಗ್ ಸ್ಟಿಲ್ಸ್ ರಿವೀಲ್ ಆಗಿತ್ತು. 'ಮ್ಯಾಡ್ ಮ್ಯಾಕ್ಸ್' ಸ್ಟಂಟ್ ನಿರ್ದೇಶಕ ಗೈ ನೋರಿಸ್ ಈ ಚಿತ್ರಕ್ಕೂ ಆಕ್ಷನ್ ಕಂಪೋಸ್ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಫೋಟೊಸ್ ವೈರಲ್ ಆಗಿತ್ತು. ಇನ್ನು ಚಿತ್ರಕ್ಕೆ ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗ್ತಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡಲಿದ್ದಾರೆ. ಶೀಘ್ರದಲ್ಲೇ ಚಿತ್ರದ ಅನೌನ್ಸ್ಮೆಂಟ್ ಟೀಸರ್ ಹೊರ ಬರಲಿದೆ.


Click it and Unblock the Notifications











