ನೆಪೋಟಿಸಂ: ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ನಟಿ ಕಂಗನಾ ರಣಾವತ್ ಹೇಳಿದ್ದೇನು?
ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಬಹುನಿರೀಕ್ಷೆಯ ತಲೈವಿ ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಬಯೋಪಿಕ್ ಇದಾಗಿದ್ದು, ಜಯಲಲಿತಾ ಆಗಿ ಕಂಗನಾ ತೆರೆ ಮೇಲೆ ಮಿಂಚಿದ್ದಾರೆ.
ಅಂದಹಾಗೆ ನಿನ್ನೆ (ಮಾರ್ಚ್ 23) ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಕಂಗನಾ ದಕ್ಷಿಣ ಭಾರತದ ಸಿನಿಮಾರಂಗವನ್ನು ಹಾಡಿಹೊಗಳಿದ್ದಾರೆ. ದಕ್ಷಿಣದ ಸಿನಿರಂಗ ಬಾಲಿವುಡ್ ನವರಿಗಿಂತ ಹೊರಗಿನವರನ್ನು ಅದ್ಭುತವಾಗಿ ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಸಿನಿಮಾರಂಗದಲ್ಲಿ 'ಸ್ವಜನ ಪಕ್ಷಪಾತ' ಇರಬಹುದು ಆದರೆ ಹೊರಗಿನವರನ್ನು ಬೆದರಿಸುವುದಿಲ್ಲ ಎಂದಿದ್ದಾರೆ. 'ತಲೈವಿ ಅನೇಕ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ದಕ್ಷಿಣ ಚಿತ್ರೋದ್ಯಮದಲ್ಲಿ ನಾನು ಗಮನಿಸಿದ ಒಂದು ಪ್ರಮುಖ ಅಂಶವೆಂದರೆ ತಮಿಳು ಆಗಿರಲಿ ಅಥವಾ ತೆಲುಗು ಆಗಿರಲಿ, ಸ್ವಜನ ಪಕ್ಷಪಾತ ಇರಬಹುದು. ಆದರೆ ಯಾವುದೇ ಗುಂಪುಗಾರಿಕೆ, ಗ್ಯಾಂಗಿಸಂ ಇಲ್ಲ. ಹೊರಗಿನಿಂದ ಬಂದವರನ್ನು ಬೆದರಿಸುವುದಿಲ್ಲ' ಎಂದು ಹೇಳಿದ್ದಾರೆ.

'ದಕ್ಷಿಣ ಭಾರತದ ಸಿನಿಮಾರಂಗ ತುಂಬಾ ಬೆಂಬಲ ನೀಡಿದೆ. ಹೊರಗಿನಿಂದ ಬಂದವರಿಗೆ ತುಂಬಾ ಪ್ರೀತಿ ಮತ್ತು ಪ್ರೋತ್ಸಾಹ ನೀಡುತ್ತೀರಿ. ದಕ್ಷಿಣ ಭಾರತದಲ್ಲಿ ಇನ್ನೂ ಅನೇಕ ಚಿತ್ರಗಳನ್ನು ಮಾಡಬೇಕೆಂದುಕೊಂಡಿದ್ದೀನಿ' ಎಂದು ಕಂಗನಾ ತಲೈವಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ನಟಿ ಕಂಗನಾ ರಣಾವತ್ ಹುಟ್ಟುಹಬ್ಬದ ಪ್ರಯುಕ್ತ ತಲೈವಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಜಯಲಲಿತಾ ಆಗಿ ತೆರೆಮೇಲೆ ಮಿಂಚಿರುವ ಕಂಗನಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಕ್ಕೆ ಎ ಎಲ್ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಏಪ್ರಿಲ್ನಲ್ಲಿ ತೆರೆಗೆ ಬರುತ್ತಿದೆ.


Click it and Unblock the Notifications











