ಪಂಚಭೂತಗಳಲ್ಲಿ ಲೀನರಾದ 'ಅತಿಲೋಕ ಸುಂದರಿ' ಶ್ರೀದೇವಿ
'ಅತಿಲೋಕ ಸುಂದರಿ'.. 'ಚಾಂದಿನಿ'.. 'ಸೌಂದರ್ಯದ ಸಿರಿದೇವಿ'.. ನಿರ್ಮಾಪಕ ಬೋನಿ ಕಪೂರ್ ಎರಡನೇ ಪತ್ನಿ ಶ್ರೀದೇವಿ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ 5.55 ರ ಸುಮಾರಿಗೆ ಮುಂಬೈನ ವಿಲೆ ಪಾರ್ಲೆಯ ಸೇವಾ ಸಮಾಜ ಚಿತಾಗಾರದಲ್ಲಿ ನೆರವೇರಿತು.
ಕುಟುಂಬಸ್ಥರ ರೋಧನ, ಶೋಕತಪ್ತ ಸಾವಿರಾರು ಜನರ ಮಧ್ಯೆ ಹಿಂದು ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆಯಿತು.
ಅಂತಿಮ ವಿಧಿ ವಿಧಾನಗಳನ್ನು ಪತಿ ಬೋನಿ ಕಪೂರ್ ನೆರವೇರಿಸಿದರು. ಚಿತೆಗೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಿದರು.
ಸಂಬಂಧಿ ಮೋಹಿತ್ ಮಾರ್ವಾ ಮದುವೆಗೆಂದು ದುಬೈಗೆ ತೆರಳಿದ್ದ ನಟಿ ಶ್ರೀದೇವಿ, ಅಲ್ಲೇ ಕೊನೆಯುಸಿರೆಳೆದರು. ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದರು. ಮುಂದೆ ಓದಿರಿ...

ನಿನ್ನೆ ರಾತ್ರಿ ಮುಂಬೈ ತಲುಪಿದ ಶ್ರೀದೇವಿ ಪಾರ್ಥೀವ ಶರೀರ
ದುಬೈನಿಂದ ನಿನ್ನೆ ರಾತ್ರಿ 9.30 ರ ಸುಮಾರಿಗೆ ಶ್ರೀದೇವಿ ಪಾರ್ಥೀವ ಶರೀರ ಮುಂಬೈ ತಲುಪಿತು. ಇಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೂ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರಿಗಾಗಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅಂತಿಮ ನಮನ ಸಲ್ಲಿಸಿದ ಗಣ್ಯರು
ಜಯಾ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಸೋನಂ ಕಪೂರ್, ದೀಪಿಕಾ ಪಡುಕೋಣೆ, ಸುಶ್ಮಿತಾ ಸೇನ್, ರೇಖಾ, ಕಾಜೋಲ್, ಅಜಯ್ ದೇವ್ಗನ್, ಶಾಹೀದ್ ಕಪೂರ್ ಸೇರಿದಂತೆ ಬಾಲಿವುಡ್ ಲೋಕದ ದಿಗ್ಗಜರು, ಸಾವಿರಾರು ಜನರು ಶ್ರೀದೇವಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಪಾರ್ಥೀವ ಶರೀರಕ್ಕೆ ಸಿಂಗಾರ
ಶ್ರೀದೇವಿಯ ಇಚ್ಛಾನುಸಾರ ಅವರ ಪಾರ್ಥೀವ ಶರೀರಕ್ಕೆ ಗೋಲ್ಡನ್ ಬಾರ್ಡರ್ ಇರುವ ಕಾಂಚೀವರಂ ನ ಕೆಂಪು ಸೀರೆಯುಡಿಸಲಾಯಿತು. ಕರಿಮಣಿ ಮಾಂಗಲ್ಯ ಸರ ಜೊತೆಗೆ ಚಿನ್ನಾಭರಣ ಕೂಡ ತೊಡಿಸಲಾಯಿತು.

ಸರ್ಕಾರಿ ಗೌರವ
ಮಧ್ಯಾಹ್ನ 2.30ರ ಸುಮಾರಿಗೆ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಪದ್ಮಶ್ರೀ ಪುರಸ್ಕೃತ ನಟಿ ಶ್ರೀದೇವಿ ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಸರ್ಕಾರಿ ಗೌರವ ಸಮರ್ಪಿಸಲಾಯಿತು. (ಫೋಟೋ ಕೃಪೆ: ಎ.ಎನ್.ಐ)

ಬಿಳಿ ಹೂಗಳಿಂದ ಸಿಂಗಾರ
ನಟಿ ಶ್ರೀದೇವಿಗೆ ಬಿಳಿ ಹೂಗಳೆಂದರೆ ತುಂಬಾ ಇಷ್ಟ. ಹೀಗಾಗಿ, ಶ್ರೀದೇವಿ ಪಾರ್ಥೀವ ಶರೀರಕ್ಕೆ ಮಲ್ಲಿಗೆ ಹೂ ಮುಡಿಸಲಾಯಿತು. ಬಿಳಿ ಹೂಗಳಿಂದ ಸಿಂಗರಿಸಲಾದ ವಾಹನದಲ್ಲಿ ಅಂತಿಮ ಯಾತ್ರೆ ಆರಂಭವಾಯಿತು. ಅಂತಿಮ ಯಾತ್ರೆಯ ವಾಹನದಲ್ಲಿ ಪಾರ್ಥೀವ ಶರೀರದ ಪಕ್ಕ ಬೋನಿ ಕಪೂರ್, ಅರ್ಜುನ್ ಕಪೂರ್, ಅನಿಲ್ ಕಪೂರ್, ಖುಷಿ ಕಪೂರ್, ಜಾಹ್ನವಿ ಕಪೂರ್ ಇದ್ದರು.

ಶ್ರೀದೇವಿ ಪಾರ್ಥೀವ ಶರೀರ ಮೆರವಣಿಗೆ
ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಿಂದ ಸುಮಾರು 6 ಕಿ.ಮೀ ದೂರ ಇರುವ ವಿಲೆ ಪಾರ್ಲೆ ಚಿತಾಗಾರದವರೆಗೆ ಅಂತಿಮ ಯಾತ್ರೆ ಸಾಗಿತು. ವಿಲೆ ಪಾರ್ಲೆಯ ಚಿತಾಗಾರದೊಳಗೆ ಕಪೂರ್ ಕುಟುಂಬಸ್ಥರು, ಆಪ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.

ವಿಲೆ ಪಾರ್ಲೆ ಚಿತಾಗಾರ ಮುಂದೆ ಜನಸಾಗರ
ಶ್ರೀದೇವಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ವಿಲೆ ಪಾರ್ಲೆ ಚಿತಾಗಾರದ ಮುಂದೆ ಜಮಾಯಿಸಿದ್ದರು. ಆದ್ರೆ, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿದ್ದರಿಂದ ಸಾರ್ವಜನಿಕರಿಗೆ ಚಿತಾಗಾರದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು. (ಫೋಟೋ ಕೃಪೆ: ಎ.ಎನ್.ಐ)

ಪಂಚಭೂತಗಳಲ್ಲಿ ಲೀನ
ಹಿಂದು ಸಂಪ್ರದಾಯದಂತೆ ಶ್ರೀದೇವಿ ಪಾರ್ಥೀವ ಶರೀರಕ್ಕೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.


Click it and Unblock the Notifications











