'ಆಪರೇಷನ್ ಸಿಂಧೂರ್'; ಭಾರತ ಸೇನೆಯ ಕಾರ್ಯಾಚರಣೆಗೆ ಸಿನಿ ತಾರೆಯರ ಬಹುಪರಾಕ್
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಷನ್ ಸಿಂಧೂರ್' ಮೂಲಕ ತಿರುಗೇಟು ನೀಡಿದೆ. ಪಾಕಿಸ್ತಾನ ಹಾಗೂ ಪಿಒಕೆ ಒಳಗೆ ಇದ್ದ 9 ಉಗ್ರರ ನೆಲೆಗಳನ್ನು ಸೇನೆ ನಾಶಪಡಿಸಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ಕಾರ್ಯಚರಣೆ ನಡೆಸಿದೆ. ಸೇನೆಯ ನಡೆಗೆ ಭಾರತೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ ತಾರೆಯರು ಕೂಡ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅನುಪಮ್ ಖೇರ್ ಹಾಗೂ ರಿತೇಶ್ ದೇಶ್ಮುಖ್ ಸೇರಿದಂತೆ ಕೆಲವರು ಈಗಾಗಲೇ ಟ್ವೀಟ್ ಮಾಡಿದ್ದಾರೆ. "ಜೈ ಹಿಂದ್ ಕಿ ಸೇನಾ.. ಭಾರತ್ ಮಾತಾಕಿ ಜೈ..ಆಪರೇಷನ್ ಸಿಂಧೂರ್" ಎಂದು ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಟ್ವೀಟ್ ಮಾಡಿ "ಭಾರತ್ ಮಾತಾಕಿ ಜೈ.. ಆಪರೇಷನ್ ಸಿಂಧೂರ್" ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್ ಫಿಲ್ಮ್ ಮೇಕರ್ಸ್ ಮಧುರ್ ಭಂಡಾರ್ಕರ್ ಟ್ವೀಟ್ ಮಾಡಿ "ನಮ್ಮ ಸೇನೆ ಜೊತೆ ನಮ್ಮ ಪ್ರಾರ್ಥನೆ ಇರುತ್ತದೆ. ಒಂದು ರಾಷ್ಟ್ರ, ಒಟ್ಟಾಗಿ ನಾವು ನಿಲ್ಲುತ್ತೇವೆ. ಜೈ ಹಿಂದ್, ವಂದೇ ಮಾತರಂ" ಎಂದು ಪೋಸ್ಟ್ ಮಾಡಿದ್ದಾರೆ.
'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ಭಾರತೀಯ ರಕ್ಷಣ ಸಚಿವಾಲಯ ಖಚಿತಪಡಿಸಿತ್ತು. ಸೇನೆಯ ಕಾರ್ಯಾಚರಣೆಗೆ ಭಾರತೀಯರು ಜೈಕಾರ ಹಾಕುತ್ತಿದ್ದಾರೆ. ಭಾರತದ ದಾಳಿಯಲ್ಲಿ ಎಷ್ಟು ಜನ ಉಗ್ರರು ಪ್ರಾಣಬಿಟ್ಟಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಪಾಕ್ ಮಿಲಿಟರಿ ನೆಲೆಗಳಿಗೆ ಹಾನಿ ಆಗದಂತೆ ಬಹಳ ಸೀಮಿತ ವ್ಯಾಪ್ತಿಯಲ್ಲಿ ಹೆಚ್ಚು ಪರಿಣಾಮ ಆಗದಂತೆ ಭಾರತೀಯ ಸೇನೆ ಎಚ್ಚರಿಕೆ ವಹಿಸಿತ್ತು ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ(ಮೇ 6) 1.30ರ ಸುಮಾರಿಗೆ ಪಾಕ್ ಉಗ್ರ ನೆಲೆಗಳ ಮೇಲೆ ಸೇನೆ ಕ್ಷಿಪಣಿ ದಾಳಿ ಮಾಡಿತ್ತು. ಕೆಲ ಭಯೋತ್ಪಾದಕರು ಈ ದಾಳಿಯಲ್ಲಿ ಸತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಭಾರತ ಸೇನೆಯ ಈ ದಾಳಿಗೆ ಪಾಕಿಸ್ತಾನ ಕೂಡ ತಿರುಗೇಟು ನೀಡುವ ಎಚ್ಚರಿಕೆ ನೀಡಿದೆ.
ಆಪರೇಷನ್ ಸಿಂಧೂರ್ ಕಾರ್ಯಚರಣೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. "ಹೋರಾಟಗಾರನ ಹೋರಾಟ ಶುರುವಾಗಿದೆ. ಮಿಷನ್ ಪೂರ್ಣಗೊಳ್ಳುವವರೆಗೆ ನಿಲ್ಲುವುದಿಲ್ಲ. ಇಡೀ ರಾಷ್ಟ್ರವು ನಿಮ್ಮೊಂದಿಗಿದೆ" ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿಶಾ ಅವರನ್ನು ರಜನಿಕಾಂತ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ತೆಲುಗು ನಟ ಚಿರಂಜೀವಿ ಟ್ವೀಟ್ ಮಾಡಿ "ಜೈ ಹಿಂದ್" ಎಂದು ಬರೆದು 'ಆಪರೇಷನ್ ಸಿಂಧೂರ್' ಫೋಟೊವನ್ನು ಚಿರು ಪೋಸ್ಟ್ ಮಾಡಿದ್ದಾರೆ. ತಮಿಳು ನಟಿ, ಬಿಜೆಪಿ ನಾಯಕಿ ಖುಷ್ಬೂ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಭಾರತ್ ಮಾತಾಜಿ ಜೈ.. ಜಸ್ಟೀವ್ಸ್ ಸರ್ವ್ಡ್.. ಜೈ ಹಿಂದ್" ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಜೊತೆಗೆ ಆನಂದ್ ಮಹಿಂದ್ರಾ ಸೇರಿ ಕೆಲವರು ಟ್ವೀಟ್ಗಳನ್ನು ರೀ-ಟ್ವೀಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಟ್ವೀಟ್ ಮಾಡಿ "ನ್ಯಾಯ ಸಿಗಲಿ.. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ. "ನಮ್ಮ ಭಾರತೀಯ ಸೇನೆಯ ಸುರಕ್ಷತೆ ಮತ್ತು ಬಲಕ್ಕಾಗಿ ಪ್ರಾರ್ಥಿಸೋಣ. ಆಪರೇಷನ್ ಸಿಂಧೂರ್" ಎಂದು ನಟ ಜ್ಯೂ. ಎನ್ಟಿಆರ್ ಟ್ವೀಟ್ ಮಾಡಿದ್ದಾರೆ. ತೆಲುಗಿನ ಮತ್ತೊಬ್ಬ ನಟ ವಿಶ್ವಕ್ ಸೇನ್ ಟ್ವೀಟ್ ಮಾಡಿ "ಕೆಲವೊಮ್ಮೆ ಅತ್ಯಂತ ಕಠಿಣ ಕಾರ್ಯಗಳು ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತವೆ. ಚುರುಕಾಗಿರಿ, ಗಮನಹರಿಸಿ. ಪ್ರತಿಯೊಂದು ನಡೆಯೂ ಮುಖ್ಯ. ಆಪರೇಷನ್ ಸಿಂಧೂರ್" ಎಂದು ಪೋಸ್ಟ್ ಮಾಡಿದ್ದಾರೆ.
ತಮಿಳು ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ತಮಿಳಿನಲ್ಲಿ ಟ್ವೀಟ್ ಮಾಡಿ 'ಆಪರೇಷನ್ ಸಿಂಧೂರ್' ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಭಾರತೀಯ ಸೇನೆಯ ಭದ್ರತಾ ಕಾರ್ಯಾಚರಣೆಗಳಿಗೆ ರಾಯಲ್ ಸೆಲ್ಯೂಟ್!" ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್ ನಟಿ, ಬಿಜೆಪಿ ಸಂಸದೆ "ಸಿಂಧೂರ್ ಕಾರ್ಯಾಚರಣೆ: ಭಯೋತ್ಪಾದನೆ ಬಗ್ಗೆ ಯಾವುದೇ ಸಹಿಷ್ಣುತೆ ಇಲ್ಲ. ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಎಂಬ ನಿಖರ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಕೆಲ ಕಲಾವಿದರು ತಡವಾಗಿ 'ಆಪರೇಷನ್ ಸಿಂಧೂರ್' ಬಗ್ಗೆ ರಿಯಾಕ್ಟ್ ಮಾಡುತ್ತಿದ್ದಾರೆ. "ನ್ಯಾಯ ಸಮವಾಗಿರುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ಇದು ನಾವು ಬೆಂಬಲಿಸುವ ಭಾರತ. ಮೇರಾ ಭಾರತ್ ಮಹಾನ್. ನಮ್ಮ ಯೋಧರಿಗೆ ಸೆಲ್ಯೂಟ್" ಎಂದು ತೆಲುಗು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. ತೆಲುಗು ನಟ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳ ಜೊತೆ ಬಹಿರಂಗವಾಗಿ ಮಾತನಾಡಿದ್ದಾರೆ.
"ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಪಾಕಿಸ್ತಾನದ ಉಗ್ರರು ಕೊಂದಿದ್ದರು. ಆ ಘಟನೆ ಬಳಿಕ ಪ್ರತೀಕಾರಕ್ಕಾಗಿ ಇಡೀ ದೇಶ ಕಾಯುತ್ತಿತ್ತು. ಕಳೆದ ರಾತ್ರಿ ಅದು ನಡೆದಿದೆ. ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ. ಪಾಕ್ ಪ್ರೇರಿತ ಉಗ್ರರ ದಾಳಿ ಪದೇ ಪದೆ ನಡೆಯುತ್ತಲೇ ಇದೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಇದು ಸರಿಯಾದ ಸಮಯವಾಗಿತ್ತು. ಭಾರತೀಯ ಸೇನೆ ಒಗ್ಗಟ್ಟಾಗಿ ಈ ದಾಳಿಯಲ್ಲಿ ಕೈ ಜೋಡಿಸಿದ್ದಾರೆ. ಅವರನ್ನು ಅಭಿನಂದಿಸಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲರೂ ಸೇನೆಯ ಬೆಂಬಲಕ್ಕೆ ನಿಲ್ಲಬೇಕು. ಪಾಕಿಸ್ತಾನದ ಇದರಿಂದ ಪಾಠ ಕಲಿಯಬೇಕು. ಉಗ್ರರನ್ನು ಬೆಳೆಸುವುದು ನಿಲ್ಲಿಸಬೇಕು. ಸೋಶಿಯಲ್ ಮೀಡಿಯಾದಲ್ಲಿ ಸೇನೆಯನ್ನು ಅವಮಾನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.
ತಮಿಳು ನಟ, ರಾಜಕೀಯ ಮುಖಂಡ ಕಮಲ್ ಹಾಸನ್ ಟ್ವೀಟ್ ಮಾಡಿ "ಹೆಮ್ಮೆಯ ಭಾರತವು ತನ್ನ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಹೇಡಿತನದ ಭಯೋತ್ಪಾದಕ ಕೃತ್ಯಗಳಿಂದ ವಿಭಜನೆಯಾಗದ ಬಲಿಷ್ಠ ರಾಷ್ಟ್ರದ ದೃಢನಿಶ್ಚಯದ ಪ್ರತಿಕ್ರಿಯೆ ಇದಾಗಿದೆ. ಭಾರತ ಸರ್ಕಾರ ಕೈಗೊಂಡ ನಿರ್ಣಾಯಕ ಮತ್ತು ಕಾರ್ಯತಂತ್ರದ ಮಿಲಿಟರಿ ಕ್ರಮವನ್ನು ನಾನು ಶ್ಲಾಘಿಸುತ್ತೇನೆ. ಜೈ ಹಿಂದ್" ಬರೆದುಕೊಂಡಿದ್ದಾರೆ.
"ನಮ್ಮ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಂತಿದೆ. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ, ನಿಮಗೆ ದೊಡ್ಡ ಸೆಲ್ಯೂಟ್. ಜೈ ಹಿಂದ್" ಎಂದು ನಟ, ನಿರ್ದೇಶಕ ಧನುಷ್ ಪೋಸ್ಟ್ ಮಾಡಿದ್ದಾರೆ. "ಇದು ಭಾರತೀಯ ಸೇನೆಯ ಮುಖ
ಜೈ ಹಿಂದ್" ಎಂದು ಶಿವಕಾರ್ತಿಕೇಯನ್ ಟ್ವೀಟ್ ಮಾಡಿದ್ದಾರೆ. ಕಳೆದ 'ಅಮರನ್' ಚಿತ್ರದಲ್ಲಿ ವೀರ ಸೈನಿಕನ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದರು. ಮೇಜರ್ ಮುಕುಂದನ್ ವರದರಾಜನ್ ಜೀವನಾಧರಿತ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಪಾಕ್ ನಟ ಫವಾದ್ ಖಾನ್ ನಟನೆಯ 'ಅಬೀರ್ ಗುಲಾಲ್' ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ "ನಿಷೇಧ ಹೇರಲು ಅದು ನೀಲಿ ಚಿತ್ರವೇ ಅಥವಾ ಮಕ್ಕಳ ದೌರ್ಜನ್ಯಕ್ಕೆ ಸಂಬಂಧಿಸಿದ ಚಿತ್ರವೇ? ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ. 'ಅಬೀರ್ ಗುಲಾಲ್' ಸಿನಿಮಾ ನಿಷೇಧಿಸುವ ಹಕ್ಕು ಸರ್ಕಾರಕ್ಕೆ ಇದೆಯೇ? ಜನ ಸಿನಿಮಾ ನೋಡಬೇಕೋ ಬಿಡಬೇಕೋ ನಿರ್ಧರಿಸುತ್ತಾರೆ" ಎಂದಿದ್ದರು. ಪ್ರಕಾಶ್ ರಾಜ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಆಪರೇಷನ್ ಸಿಂಧೂರ್ ದಾಳಿ ಬಗ್ಗೆ ಟ್ವೀಟ್ ಮಾಡಿ "ನಮ್ಮ ಭಾರತೀಯ ಸಶಸ್ತ್ರ ಪಡೆಗಳಿಗೆ ಸೆಲ್ಯೂಟ್.. ಭಾರತ ಎಂದಿಗೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ.. ಜೈಹಿಂದ್" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











