'ನಾವು ಹೋದ್ವಿ ಎಂದು ಭಾವಿಸಿದ್ದೀರಾ...ಮತ್ತೆ ಬರ್ತೀವಿ..' ತಾಲಿಬಾನಿ ಹೇಳಿದ್ದ ಮಾತು ಬಿಚ್ಚಿಟ್ಟ ಬಾಲಿವುಡ್ ನಿರ್ದೇಶಕ
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಪ್ರಾರಂಭವಾಗಿದೆ. ಉಗ್ರರ ಆಳ್ವಿಕೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಉಗ್ರರು ಅಫ್ಘಾನಿಸ್ತಾನವನ್ನು ಕಬ್ಜ ಮಾಡುತ್ತಿದ್ದಂತೆ ಅಲ್ಲಿಂದ ಅನೇಕ ಮಂದಿಕಾಲ್ತಿದ್ದಾರೆ. ಸಾವಿರಾರು ಮಂದಿ ದೇಶ ತೊರೆದಿದ್ದಾರೆ. ಇತ್ತೀಚಿಗಷ್ಟೆ ಕಾಬೂಲ್ ವಿಮಾನ ನಿಲ್ದಾಣದ ಭೀಕರ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಮ್ಮೆಗೆ ಜಮಾಯಿಸಿದ್ದ ಜನ, ವಿಮಾನ ಏರಲು ಮುಗಿಬಿದ್ದ ಸಾವಿರಾರು ಮಂದಿಯನ್ನು ನೋಡಿ ಇಡೀ ದೇಶವೇ ಹೌಹಾರಿತ್ತು.
ತಾಲಿಬಾನಿಗಳು ತನಗೆ ಬೇಕಾದಹಾಗೆ ನಿಮಯಗಳನ್ನು ಮಾಡಿಕೊಂಡು ಆಡಳಿತ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರೆನ್ನದೇ ಬೀದಿ ಬೀದಿಗಳಲ್ಲಿ ಗುಂಡಿಟ್ಟು ಸಾಯಿಸುತ್ತಿದ್ದಾರೆ. ಮಹಿಳೆಯರ ಸ್ಥಿತಿ ಭೀಕರವಾಗಿದೆ. ಅಲ್ಲಿನ ಕೆಟ್ಟ ಪರಿಸ್ಥಿತಿಗೆ ಭಾರತದ ಅನೇಕ ಕಲಾವಿದರು ಪ್ರತಿಕ್ರಿಯೆ ನೀಡಿ ಅಲ್ಲಿನ ಜನರಿಗಾಗೆ ಪ್ರಾರ್ಥನೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ನಟಿ ಸ್ವರ ಭಾಸ್ಕರ್, ಕಂಗನಾ ರಣಾವತ್, ರಿಯಾ ಚಕ್ರವರ್ತಿ, ಅನುಷ್ಕಾ ಶರ್ಮಾ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದರು. ಇದೀಗ ಬಾಲಿವುಡ್ ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ತಾಲಿಬಾನಿಗಳ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ನಿರ್ದೇಶಕ ಕಬೀರ್ ಖಾನ್, "20 ವರ್ಷಗಳ ಬಳಿಕ ತಾಲಿಬಾನ್ ಸಂಘಟನೆ ಮತ್ತೆ ಮರಳಿರುವುದು ಅಚ್ಚರಿಯಾಗುತ್ತಿದೆ" ಎಂದಿದ್ದಾರೆ.

ಡಾಕ್ಯುಮೆಂಟರಿ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದ ಸಮಯದಲ್ಲಿ ನಡೆದ ಒಂದು ಘಟನೆಯನ್ನು ನಿರ್ದೇಶಕ ಕಬೀರ್ ಖಾನ್ ವಿವರಿಸಿದ್ದಾರೆ. "ನನ್ನ ಡಾಕ್ಯುಮೆಂಟರಿಯಿಂದ ಒಂದು ಸಣ್ಣ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. 2001ರಲ್ಲಿ ಕೆಲವು ತಾಲಿಬಾನ್ ಸದಸ್ಯರನ್ನು ಸಂದರ್ಶಿಸಿದ್ದೆ. ಒಬ್ಬ ಹಿರಿಯ ತಾಲಿಬಾನ್ ಸದಸ್ಯ ನೇರವಾಗಿ ನನ್ನ ಕ್ಯಾಮರಾ ನೋಡಿ, ನಾವು ಹೋಗಿದ್ದೇವೆ ಎಂದು ಭಾವಿಸಿದ್ದೀರಾ, ನಾವು ಹಿಂತಿರುಗುತ್ತೇವೆ ಎಂದು ಹೇಳಿದ್ದರು. ಆ ಮಾತು, ಅವರ ಆತ್ಮವಿಶ್ವಾಸ ನನ್ನಲ್ಲಿ ಭಯಹುಟ್ಟಿಸಿತ್ತು. ಈಗ ಆ ಹೇಳಿಕೆ ನೆನಪಿಸಿಕೊಂಡಾಗ ನನ್ನನ್ನು ಕಾಡುತ್ತಿದೆ" ಎಂದು ಹೇಳಿದ್ದಾರೆ.
ನಿರ್ದೇಶಕ ಕಬೀರ್ ಖಾನ್ ಕಾಬೂಲ್ ಎಕ್ಸ್ ಪ್ರೆಸ್ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಮತ್ತು ಅರ್ಷದ್ ವಾರ್ಸಿ ನಟಿಸಿದ್ದರು. 2006ರಲ್ಲಿ ಬಿಡುಗಡೆಯಾಗಿದೆ.
ಅಫ್ಘಾನಿಸ್ತಾನದಲ್ಲಿರುವ ಸ್ನೇಹಿತರ ಬಗ್ಗೆ ಮಾತನಾಡಿರುವ ಕಬೀರ್ ಖಾನ್, "ನನ್ನ ಸ್ನೇಹಿತರು ಬಗ್ಗೆ ಚಿಂತೆಯಾಗುತ್ತಿದೆ. ಆದರೆ ಅವರಿಗಾಗಿ ಏನನ್ನು ಮಾಡಲು ಸಾಧ್ಯವಿಲ್ಲದ ಕಾರಣ ಅಸಹಾಯಕನಾಗಿದ್ದೇನೆ" ಎಂದು ಹೇಳಿದರು. ನನ್ನ ಸ್ನೇಹಿತರೊಬ್ಬರು ಮತ್ತು ನಟ ಬಶೀರ್ ಅವರ ಮನೆಯಿಂದ ಓಡಿಹೋಗಿ ಅವಿತುಕುಳಿತಿದ್ದಾರೆ. ಬಳಿಕ ಅವರ ಮನೆಯನ್ನು ತಾಲಿಬಾನಿಗಳು ದೋಚಿದ್ದಾರೆ.
ತಾಲಿಬಾನಿಗಳು ಸಿನಿಮಾರಂಗವನ್ನು ಬೆಳೆಯಲು ಬಿಡುತ್ತಾರೆಯೇ ಎಂಬ ಅನುಮಾನವಿದೆ. ಸ್ನೇಹಿತರಿಂದ ರಕ್ಷಿಸಿ ಎನ್ನುವ ಕರೆಗಳನ್ನು ಸ್ವೀಕರಿಸುತ್ತಿರುವುದಾಗಿ ಹೇಳಿದ್ದಾರೆ.
ಕಬೀರ್ ಖಾನ್ ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದ್ಭುತ ಸಿನಿಮಾಗಳನ್ನು ನೀಡಿರುವ ಕಬೀರ್ ಖಾನ್ ಭಜರಂಗಿ ಭೈಜಾನ್ ಸಿನಿಮಾ ನಿರ್ದೇಶನ ಮಾಡಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ಕಾಬೂಲ್ ಎಕ್ಸ್ ಪ್ರೆಸ್ ಸಿನಿಮಾ ಬಳಿಕ ಕಬೀರ್ ಖಾನ್, ಏಕ್ತಾ ಟೈಗರ್, ಭಜರಂಗಿ ಭೈಜಾನ್, ಫ್ಯಾಂಟಂ, ಟ್ಯೂಬ್ಲೈಟ್ ಸಿನಿಮಾಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಹೆಚ್ಚು ಸಿನಿಮಾಗಳನ್ನು ಮಾಡಿರುವ ಕಬೀರ್ ಖಾನ್ ಸದ್ಯ 83 ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ರೋಚಕ ಕ್ಷಣವನ್ನು 83 ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಬೀರ್ ಖಾನ್. ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟ ರಣ್ವೀರ್ ಸಿಂಗ್ ನಟಿಸಿದ್ದಾರೆ. ಪತ್ನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ತಡವಾಗುತ್ತಲೇ ಇದೆ.


Click it and Unblock the Notifications











