ಮಹಿಳೆಗೆ ಕಿರುಕುಳದ ದೃಶ್ಯ ಇರುವ 'ಕಾಂತಾರ'ಗೆ ರಾಷ್ಟ್ರಪ್ರಶಸ್ತಿ ಕೊಟ್ಟಿದ್ದು ದುರಂತ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಈಗ ಪ್ರೀಕ್ವೆಲ್ ತಯಾರಾಗುತ್ತಿರುವುದು ಗೊತ್ತೇಯಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಎರಡು ವರ್ಷಗಳ ಹಿಂದೆ ಸಂಚಲನ ಸೃಷ್ಟಿಸಿತ್ತು. ಆರಂಭದಲ್ಲಿ ಬರೀ ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ತಾನಾಗಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು.
ಕಾಡು ಹಾಗೂ ಕಾಡಿನ ಜೊತೆಗೆ ಬೆರೆತ ಜನರ ಜೀವನದ ಕಥೆಯನ್ನು ಈ ಚಿತ್ರದಲ್ಲಿ ರಿಷಬ್ ಕಟ್ಟಿಕೊಟ್ಟಿದ್ದರು. ಇನ್ನು ಕರಾವಳಿ ದೈವಗಳ ಆರಾಧನೆಯನ್ನು ಕೂಡ ಚಿತ್ರದ ಕೇಂದ್ರಬಿಂದುವಾಗಿತ್ತು. ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಕಾಡುಬೆಟ್ಟು ಶಿವ ಹಾಗೂ ಲೀಲಾ ಲವ್ ಸ್ಟೋರಿ ಕೂಡ ಸಿನಿರಸಿಕರಿಗೆ ಇಷ್ಟವಾಗಿತ್ತು. ಇನ್ನು ಚಿತ್ರದ ಕೆಲ ದೃಶ್ಯಗಳ ಬಗ್ಗೆ ಬಾಲಿವುಡ್ ನಿರ್ಮಾಪಕ ನಿಖಿಲ್ ತನೇಜಾ ಚಕಾರ ಎತ್ತಿದ್ದಾರೆ.

'ಕಾಂತಾರ' ಚಿತ್ರದ ಆರಂಭದಲ್ಲಿ ಲೀಲಾಳನ್ನು ನೋಡಿ ಶಿವ ಪ್ರೀತಿಲಿ ಬೀಳುವುದು, ಆಕೆಯ ಹಿಂದೆ ಹಿಂದೆ ಸುತ್ತುವುದು, ಕೀಟಲೆ ಮಾಡುವುದು ಮಾಡುವುದು, ಆಕೆಯ ಸೊಂಟ ಗಿಲ್ಲುವುದು ದೃಶ್ಯ ಇದೆ. ಇದು ಮಹಿಳೆಗೆ ನೀಡುವ ಕಿರುಕುಳ ಅಲ್ಲದೇ ಮತ್ತೇನು? ಎಂದು ನಿಖಿಲ್ ಪ್ರಶ್ನಿಸಿದ್ದಾರೆ. ಇಂತಹ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ವಿರ್ಪಯಾಸ. ಯಾರೊಬ್ಬರೂ ಆ ದೃಶ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಲಿಲ್ ಯಾಕೆ? ಎಂದು ಕೇಳಿದ್ದಾರೆ.
ಯುವ ಮೀಡಿಯಾ ಕಂಪನಿಯ ಸ್ಥಾಪಕರು ಆಗಿರುವ ನಿಖಿಲ್ ತನೇಜಾ ಬಾಲಿವುಡ್ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಕೆಲ ಸಿನಿಮಾಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಲಿಲ್ಲಿ ಸಿಂಗ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಬರೀ 'ಕಾಂತಾರ' ಚಿತ್ರ ಮಾತ್ರವಲ್ಲ, 'ಅನಿಮಲ್' ಚಿತ್ರದಲ್ಲಿ ಕೂಡ ನಾಯಕ ಹುಚ್ಚಾಟವನ್ನು ವಿಜೃಂಬಿಸಿ ತೋರಿಸಿರುವುದು ಯಾವ ನ್ಯಾಯ ಎಂದು ನಿಖಿಲ್ ಪ್ರಶ್ನಿಸಿದ್ದಾರೆ.
'ಕಾಂತಾರ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಬಹಳ ಪವರ್ಫುಲ್ ಸಿನಿಮಾ ಅದು. ಆದರೆ 30-40 ನಿಮಿಷ ಚಿತ್ರದಲ್ಲಿ ಬೇರೆಯದ್ದೇ ಇಶ್ಯೂ ಇದೆ. ಚಿತ್ರದಲ್ಲಿ ನಾಯಕ ನಾಯಕಿಯನ್ನು ನೋಡ್ತಾನೆ. ಅದು ಪ್ರೀತಿ ಮತ್ತೇನೊ ಆಗಿರಬಹುದು. ಬಳಿಕ ಆಕೆಯನ್ನು ಗಿಲ್ಲುತ್ತಾನೆ. ನನಗೆ ಅನ್ನಿಸಿದ್ದು ಈ ಚಿತ್ರಕ್ಕೆ ಆ ದೃಶ್ಯ ಯಾಕೆ ಬೇಕಿತ್ತು? ಅದು ಮಹಿಳೆಗೆ ನೀಡುವ ಕಿರುಕುಳ ಅಲ್ಲದೇ ಮತ್ತೇನು?" ಎಂದು ನಿಖಿಲ್ ಕೇಳಿದ್ದಾರೆ.
ನಿಖಿಲ್ ತನೇಜಾ ಮಾತು ಮುಂದುವರೆಸಿ "ಕಾಂತಾರ ಸಿನಿಮಾ ಬಗ್ಗೆ ಬಂದ ವಿಮರ್ಶೆಗಳನ್ನು ನೋಡಿ ನಾನು ಸಿನಿಮಾ ನೋಡಿದೆ. ಆದರೆ ಯಾರೊಬ್ಬರು ಈ ವಿಚಾರದ ಬಗ್ಗೆ ಮಾತನಾಡಲಿಲ್ಲ. ಆತ ಆ ರೀತಿ ನಡೆದುಕೊಂಡಾಗ ಆಕೆ ಕಸಿವಿಸಿಯಿಂದ ದೂರ ಸರಿಯುತ್ತಾಳೆ. ಅದು ಲವ್ ಅಲ್ಲ. ಮಹಿಳೆಯರನ್ನು ಸಿನಿಮಾಗಳಲ್ಲಿ ಇದೇ ರೀತಿ ತೋರಿಸಲಾಗ್ತಿದೆ. ನನಗೆ ನಿಜಕ್ಕೂ ಇದು ಇಷ್ಟವಾಗಲಿಲ್ಲ" ಎಂದಿದ್ದಾರೆ. ನಿಖಿಲ್ ಹೇಳಿಕೆಗೆ ಕನ್ನಡ ಸಿನಿರಸಿಕರು ತಿರುಗೇಟು ನೀಡುತ್ತಿದ್ದಾರೆ. ಇದಕ್ಕಿಂತ ಬಾಲಿವುಡ್ ಸಿನಿಮಾಗಳಲ್ಲಿ ಕೆಟ್ಟ ಸನ್ನಿವೇಶಗಳಿವೆ ಅದರ ಬಗ್ಗೆ ಮಾತನಾಡಿ ಎನ್ನುತ್ತಿದ್ದಾರೆ.
ಕೆಲವರು 'ಅನಿಮಲ್' ಸಿನಿಮಾ ಉದಾಹರಿಸಿ ನಿಖಿಲ್ಗೆ ಟಾಂಗ್ ಕೊಡುತ್ತಿದ್ದಾರೆ. ಆದರೆ ಅದೇ ಸಂದರ್ಶನದಲ್ಲಿ 'ಅನಿಮಲ್' ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ. 'ಅನಿಮಲ್' ಚಿತ್ರದಲ್ಲಿ ಕೂಡ ಮಹಿಳೆಯನ್ನು ಇದೇ ರೀತಿ ಕೆಟ್ಟದಾಗಿ ತೋರಿಸಲಾಗಿತ್ತು. ಇಂತಹ ಸನ್ನಿವೇಶಕ್ಕೆ ಒಳ್ಳೆ ಮ್ಯೂಸಿಕ್ ಹಾಕಿ ಹೈಲೆಟ್ ಮಾಡಿ ತೋರಿಸಿದ್ದಾರೆ. ಈ ಮೂಲಕ ಏನು ಹೇಳಲು ಹೊರಟಿದ್ದಾರೆ ಎಂದು ನಿಖಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪಠಾಣ್' ಹಾಗೂ 'ಜವಾನ್' ಚಿತ್ರಗಳಲ್ಲಿರುವ ದೃಶ್ಯಗಳ ಬಗ್ಗೆಯೂ ಬೊಟ್ಟು ಮಾಡಿದ್ದಾರೆ.


Click it and Unblock the Notifications











