ಕೊನೆಯ ಸಿನಿಮಾ ಬಿಡುಗಡೆ ದಿನವೇ ಹಿರಿಯ ನಟ ಅರುಣ್ ನಿಧನ
ಹಿಂದಿ ಚಿತ್ರರಂಗದ ಹಿರಿಯ ನಟ ಅರುಣ್ ಬಾಲಿ ಇಂದು (ಅಕ್ಟೋಬರ್ 07) ಮುಂಜಾನೆ 4:30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಅರುಣ್ ಬಾಲಿ ನಿಧನದ ಸುದ್ದಿ ಹೊರಬಿದ್ದ ಕೆಲವೇ ಸಮಯದಲ್ಲಿ ವಿಂದು ಧಾರಾ ಸಿಂಗ್ ಸೇರಿದಂತೆ ಇನ್ನಿತರೆ ಕೆಲವು ಬಾಲಿವುಡ್ ನಟ-ನಟಿಯರು ಅರುಣ್ ಬಾಲಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ ಅವರು ನಟಿಸಿರುವ ಕೊನೆಯ ಸಿನಿಮಾ 'ಗುಡ್ಬೈ'ನ ಬಿಡುಗಡೆ ದಿನವೇ ಅವರು ಕೊನೆ ಉಸಿರೆಳೆದಿದ್ದಾರೆ.
ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಅನಾರೋಗ್ಯದಿಂದ ಅರುಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅರುಣ್ ಬಾಲಿ ಬಳಲುತ್ತಿದ್ದರು.

ಅರುಣ್ ಬಾಲಿ ಅನಾರೋಗ್ಯದ ಬಗ್ಗೆ ಮಾತನಾಡಿದ್ದ ನಟಿ ನೂಪುರ್, ''ನಾನು ಅರುಣ್ ಅವರೊಟ್ಟಿಗೆ ಒಮ್ಮೆ ಫೋನ್ನಲ್ಲಿ ಮಾತನಾಡುವಾಗ ಅವರ ಧ್ವನಿಯಲ್ಲಿ ಆಗಿದ್ದ ಬದಲಾವಣೆಗಳನ್ನು ಗಮನಿಸಿದೆ. ಅದನ್ನು ಅವರಿಗೆ ತಿಳಿಸಿ ಚಿಕಿತ್ಸೆ ಪಡೆಯುವಂತೆ ಹೇಳಿದ್ದೆ, ಬಳಿಕ ಅವರ ಪುತ್ರನನ್ನು ಸಂಪರ್ಕಿಸಲು ಯತ್ನಿಸಿ ವಿಫಲಳಾಗಿದ್ದೆ ಬಳಿಕ ಅವರ ಸಹನಟ, ಗೆಳೆಯ ರಾಜೀವ್ ಮೆನನ್ಗೆ ಕರೆ ಮಾಡಿ ವಿಷಯದ ಗಂಭೀರತೆ ಬಗ್ಗೆ ತಿಳಿಸಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದೆ'' ಎಂದಿದ್ದರು.
ನಟ ಅರುಣ್ ಅನ್ನು ಅವರ ಪುತ್ರ ಅಂಕುಶ್ ತ್ಯಜಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅವೆಲ್ಲವೂ ಸುಳ್ಳು ಎಂದು ಅಂಕುಶ್ ಮಾಧ್ಯಮಗಳ ಬಳಿ ಹೇಳಿದ್ದರು.
ಹಿಂದಿ ಸಿನಿಮಾ ಹಾಗೂ ಟಿವಿ ರಂಗದಲ್ಲಿ ಅರುಣ್ ಬಾಲಿ ಅವರದ್ದು ಜನಪ್ರಿಯ ಮುಖ. 1991 ರಲ್ಲಿ ಅಕ್ಷಯ್ ಕುಮಾರ್ ನಟನೆಯ 'ಸೌಗಂದ್' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಅರುಣ್, ಆ ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಜು ಬನ್ ಗಯಾ ಜಂಟಲ್ಮ್ಯಾನ್', 'ಸಬ್ಸೆ ಬಡಾ ಖಿಲಾಡಿ', 'ಸತ್ಯಾ', '3 ಇಡಿಯಟ್ಸ್', 'ರೆಡಿ', 'ಫಿಕ್ರೆ', 'ಬರ್ಫಿ', 'ಪಿಕೆ', 'ಭಾಗಿ', 'ಕೇದಾರ್ನಾಥ್', 'ಪಾಣಿಪತ್', 'ಸಾಮ್ರಾಟ್ ಪೃಥ್ವಿರಾಜ್', 'ಲಾಲ್ ಸಿಂಗ್ ಚಡ್ಡಾ' ಹಾಗೂ ನಿನ್ನೆಯಷ್ಟೆ ಇಂದಷ್ಟೆ ಬಿಡುಗಡೆ ಆಗಿರುವ 'ಗುಡ್ ಬೈ' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೇ ಅವರ ಕೊನೆಯ ಸಿನಿಮಾ.
ಸಿನಿಮಾ ಮಾತ್ರವೇ ಅಲ್ಲದೆ ಟಿವಿ ಧಾರಾವಾಹಿಗಳಲ್ಲಿಯೂ ಅರುಣ್ ಕಾಣಿಸಿಕೊಂಡಿದ್ದು, 'ಸ್ವಾಭಿಮಾನ್', 'ಆರೋಹಣ್', 'ನಿಕ್ಲಾ ಹೋಗಾ ಚಾಂದ್', 'ಕುಂಕುಮ್' ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಅರುಣ್.


Click it and Unblock the Notifications











