ರಾಜ್ ಕುಂದ್ರಾ ಬಂಧನಕ್ಕೆ ನ್ಯಾಯಾಲಯದಲ್ಲಿ ಪೊಲೀಸರು ಕೊಟ್ಟ ಅಸಲಿ ಕಾರಣ
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ತಮ್ಮ ಬಂಧನ ಅಕ್ರಮ ಎಂದು ಉದ್ಯಮಿ ರಾಜ್ ಕುಂದ್ರಾ ಮತ್ತು ಆಪ್ತ ರಯನ್ ಥೋರ್ಪೆ ಬಾಂಬೆ ಹೈ ಕೊರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸೋಮವಾರ ಮುಕ್ತಾಯವಾಗಿದ್ದು, ಆದೇಶ ಕಾಯ್ದಿರಿಸಿದೆ.
ಫೆಬ್ರವರಿ ತಿಂಗಳಲ್ಲಿ ದಾಖಲಾಗಿದ್ದ ದೂರಿನ ಹಿನ್ನೆಲೆ ರಾಜ್ ಕುಂದ್ರಾ ಮತ್ತು ಸ್ನೇಹಿತರನ್ನು ಅರೆಸ್ಟ್ ಮಾಡಲಾಗಿದೆ. ಬಂಧನದ ಬಳಿಕವೂ ಶಿಲ್ಪಾ ಶೆಟ್ಟಿ ಪತಿ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 'ರಾಜ್ ಕುಂದ್ರಾ ಪ್ರಬಲ ವ್ಯಕ್ತಿಯಾಗಿದ್ದು, ಒಂದು ವೇಳೆ ಈ ಕೇಸ್ನಲ್ಲಿ ಜಾಮೀನು ನೀಡಿದರೂ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಹೆಚ್ಚಿದೆ' ಎಂದು ಪೊಲೀಸರ ಪರ ವಕೀಲರು ತಿಳಿಸಿದ್ದಾರೆ. ಪೊಲೀಸರ ಈ ಆರೋಪವನ್ನು ಕುಂದ್ರಾ ಪರ ವಕೀಲರು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ ಕುಂದ್ರಾ ಮತ್ತು ರಯನ್ ಥೋರ್ಪೆ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮ ಬಂಧನ ಅಕ್ರಮ ಎಂದು ಹೇಳಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ಬಂಧನಕ್ಕೂ ಮುಂಚೆ ಕಡ್ಡಾಯವಾಗಿ ನೋಟಿಸ್ ನೀಡಬೇಕೆಂದು ವಕೀಲರು ವಾದ ಮಂಡಿಸಿದ್ದಾರೆ. ರಾಜ್ ಕುಂದ್ರಾ ಮತ್ತು ಥೋರ್ಪೆ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಲಾಗಿದೆ. ಜೊತೆಗೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಬೇಕಾಗಿ ಹೈ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೇಳಲಾಗಿದೆ.
ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಜುಲೈ 20 ರಂದು ಕುಂದ್ರಾ ಸಂಸ್ಥೆಯಲ್ಲಿ ಐಟಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಥೋರ್ಪೆಯನ್ನು ಅರೆಸ್ಟ್ ಮಾಡಲಾಗಿತ್ತು. ಪ್ರಸ್ತುತ ಈ ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುಂದೆ ಓದಿ...

ರಾಜ್ ಕುಂದ್ರಾ ಬಂಧನಕ್ಕೆ ಅಸಲಿ ಕಾರಣ
''ಸೆಕ್ಷನ್ 41 ಎ ಅಡಿಯಲ್ಲಿ ರಾಜ್ ಕುಂದ್ರಾ ಮತ್ತು ಥೋರ್ಪೆ ಇಬ್ಬರಿಗೂ ಬಂಧನಕ್ಕೆ ಮುನ್ನ ನೋಟಿಸ್ ನೀಡಲಾಗಿದೆ. ಆದರೆ ಕುಂದ್ರಾ ನೋಟಿಸ್ ಸ್ವೀಕರಿಸಲು ನಿರಾಕರಿಸಿದರು, ಥೋರ್ಪೆ ತೆಗೆದುಕೊಂಡರು" ಪೊಲೀಸರ ಪರ ವಕೀಲ ಅರುಣ ಕಾಮತ್ ಪೈ ನ್ಯಾಯಮೂರ್ತಿ ಎ ಎಸ್ ಗಡ್ಕರಿ ಅವರ ಏಕೈಕ ಪೀಠಕ್ಕೆ ಮಾಹಿತಿ ನೀಡಿದ್ದಾರೆ. ''ಜುಲೈ 19 ರಂದು ಕುಂದ್ರಾ ಕಚೇರಿಯಲ್ಲಿ ನಡೆಸಿದ ಶೋಧದ ಸಮಯದಲ್ಲಿ ಅವರಿಬ್ಬರ ನಡವಳಿಕೆ ಪರಿಣಾಮ ಆರೋಪಿಗಳನ್ನು (ಕುಂದ್ರಾ ಮತ್ತು ಥೋರ್ಪೆ) ಬಂಧಿಸಲಾಗಿದೆ'' ಎಂದು ಕಾಮತ್ ಪೈ ವಾದಿಸಿದರು.

ಸಾಕ್ಷ್ಯನಾಶವಾಗುತ್ತಿದ್ದರೂ ಸುಮ್ಮನಿರಲು ಸಾಧ್ಯವೇ?
"ಕುಂದ್ರಾ ಮತ್ತು ಥೋರ್ಪೆ ಕೆಲವು ವಾಟ್ಸಾಪ್ ಚಾಟ್ಗಳನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ. ಎಷ್ಟು ಡೇಟಾವನ್ನು ಡಿಲೀಟ್ ಮಾಡಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಅದನ್ನು ಹಿಂಪಡೆಯಲು ಪೊಲೀಸರು ಇನ್ನೂ ಪ್ರಯತ್ನಿಸುತ್ತಿದ್ದಾರೆ, ಇನ್ನು ತನಿಖೆಗೆ ಕುಂದ್ರಾ ಸರಿಯಾದ ರೀತಿಯಲ್ಲಿ ವರ್ತಿಸುತ್ತಿಲ್ಲ'' ಎಂದು ವಕೀಲ ಪೈ ಹೇಳಿದ್ದಾರೆ. ''ಆರೋಪಿತರು ಸಾಕ್ಷ್ಯವನ್ನು ನಾಶಪಡಿಸುತ್ತಿದ್ದರೆ, ತನಿಖಾ ಸಂಸ್ಥೆಯು ಮೂಕ ಪ್ರೇಕ್ಷಕರಾಗಬಹುದೇ?. ಹಾಗಾಗಿ, ಐಪಿಸಿ ಸೆಕ್ಷನ್ 201 (ಸಾಕ್ಷ್ಯ ನಾಶ) ರ ಹಿನ್ನೆಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ'' ಎಂದು ಅರುಣಾ ಕಾಮತ್ ಪೈ ನ್ಯಾಯಾಲಯಕ್ಕೆ ತಿಳಿಸಿದರು.

ಅಶ್ಲೀಲ ವಿಡಿಯೋ ಮತ್ತು ಸ್ಕ್ರಿಪ್ಟ್ ಸಿಕ್ಕಿವೆ
"ರಾಜ್ ಕುಂದ್ರಾ ಹಾಟ್ ಶಾಟ್ಸ್ ಆಪ್ನ ನಿರ್ವಾಹಕರಾಗಿದ್ದಾರೆ. ಶೋಧದ ಸಮಯದಲ್ಲಿ ಕುಂದ್ರಾ ಕಚೇರಿಯಿಂದ ಲ್ಯಾಪ್ಟ್ಯಾಪ್ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 68 ಅಶ್ಲೀಲ ವೀಡಿಯೊಗಳು, ಲೈಂಗಿಕ ವಿಷಯದ ಸ್ಕ್ರಿಪ್ಟ್ಗಳು, ಹಾಟ್ಶಾಟ್ಸ್ನ ಹಣಕಾಸು ಪ್ರೊಜೆಕ್ಷನ್, ಮಾರ್ಕೆಟಿಂಗ್ ಕೆಲಸಗಳ ಕಾಪಿ ಸಿಕ್ಕಿವೆ'' ಎಂದು ಪೈ ಹೇಳಿದರು.

ನೋಟಿಸ್ ನೀಡಿದ್ದರೂ ಸಮಯ ಕೊಟ್ಟಿಲ್ಲ
ಪೊಲೀಸರ ಈ ಎಲ್ಲಾ ಆರೋಪಗಳನ್ನು ಕುಂದ್ರಾ ಪರ ವಕೀಲರು ನಿರಾಕರಿಸಿದ್ದಾರೆ. ''ಥೋರ್ಪೆಗೆ 41 ಎ ಅಡಿಯಲ್ಲಿ ನೋಟಿಸ್ ನೀಡಿದ್ದರೂ, ಅದನ್ನು ಪಾಲಿಸಲು ಅಥವಾ ಅದಕ್ಕೆ ಪ್ರತಿಕ್ರಿಯಿಸಲು ಸಮಯ ನೀಡಿಲ್ಲ. ಅಷ್ಟರೊಳಗೆ ಬಂಧಿಸಲಾಗಿದೆ ಎಂದು ವಕೀಲ ಅಭಿನವ್ ಚಂದ್ರಚೂಡ್ ವಾದಿಸಿದರು. ಎರಡು ಕಡೆಯ ವಾದಗಳನ್ನು ಆಲಿಸಿರುವ ಹೈ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.


Click it and Unblock the Notifications











