Boney Kapoor: ನಮ್ಮ ಮದುವೆಗೂ ಮುನ್ನ ಜಾನ್ವಿ ಕಪೂರ್ ಜನಿಸಿರಲಿಲ್ಲ: ಬೋನಿ ಕಪೂರ್
ಅತಿಲೋಕ ಸುಂದರಿ, ಬಹುಭಾಷಾ ನಟಿ ಶ್ರೀದೇವಿ ಅವರ ಪತಿ ಬಾಲಿವುಡ್ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಇತ್ತೀಚೆಗೆ ಹಲವು ವಿಷಯಗಳನ್ನು ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತ್ನಿಯ ಸಾವು, ತಮ್ಮ ಮೇಲಿನ ಆಪಾದನೆ, ಜಾನ್ವಿ ಕಪೂರ್ ಜನನ, ತಮ್ಮ ಮದುವೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹಲವು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
1996 ರ ಜನವರಿಯಲ್ಲಿ ಶ್ರೀದೇವಿಯವರ ಗರ್ಭಧಾರಣೆಯು ಸ್ಪಷ್ಟವಾಗಿ ಕಾಣಿಸಿದ ಬಳಿಕ ತಿಂಗಳ ಬೋನಿ ಕಪೂರ್ ಅವರು ಎರಡನೇ ಮದುವೆಯನ್ನು ಘೋಷಿಸಿದ್ದರು. ಬಳಿಕ ಶಿರಡಿಯಲ್ಲಿ ನಟಿ ಶ್ರೀದೇವಿ ಅವರನ್ನು ವಿವಾಹವಾದರು. ಆದರೆ, ಮದುವೆಗೂ ಮುನ್ನವೇ ಅವರ ಮೊದಲ ಮಗಳು ಜಾನ್ವಿ ಕಪೂರ್ ಜನಿಸಿದ್ದರು ಎಂಬ ವದಂತಿಯಿದೆ. ಇದಕ್ಕೆ ಬೋನಿ ಕಪೂರ್ ಸ್ಪಷ್ಟನೆ ನೀಡಿದ್ದಾರೆ.

ಮದುವೆಗೂ ಮೊದಲೇ ಜನಿಸಿದ್ದರಾ ಜಾನ್ವಿ ಕಪೂರ್?
ಖ್ಯಾತ ನಿರ್ಮಾಪಕ ಬೋನಿ ಕಪೂರ್ ಯೂಟ್ಯೂಬರ್ ರೋಹನ್ ದುವಾ ಅವರಿಗೆ ನೀಡಿರುವ ಸಂದರ್ಶನವೊಂದರಲ್ಲಿ ಶ್ರೀದೇವಿ ಗರ್ಭಿಣಿಯಾಗಿದ್ದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಜಾನ್ವಿ ಕಪೂರ್ ತಮ್ಮ ಮದುವೆಗೂ ಮೊದಲೇ ಶ್ರೀದೇವಿಗೆ ಜನಿಸಿದ್ದಳು ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ.
ಜಾನ್ವಿ ಕಪೂರ್ ಮದುವೆಗೂ ಮೊದಲೇ ಜನಿಸಿದ್ದಾರೆ ಎಂಬ ವದಂತಿ
ಸಂದರ್ಶಕರು ದೇವಸ್ಥಾನದಲ್ಲಿ ನಡೆದ ಇಬ್ಬರ ಮದುವೆ ಬಗ್ಗೆ ಬೋನಿ ಕಪೂರ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, "ಶ್ರೀದೇವಿ ಜೊತೆಗೆ ನನ್ನ ಎರಡನೇ ಮದುವೆ ಶಿರಡಿಯಲ್ಲಿ ನಡೆಯಿತು. ನಾವು ಜೂನ್ 2 ರಂದು ಮದುವೆಯಾಗಿ, ಪ್ರತಿಜ್ಞೆ ವಿನಿಮಯ ಮಾಡಿಕೊಂಡೆವು. ಶಿರಡಿಯಲ್ಲಿಯೇ ನಾವು ಅಲ್ಲಿ ಒಂದು ರಾತ್ರಿ ಕಳೆದೆವು. ಇದೆಲ್ಲಾ ನಡೆದದ್ದು ಜನವರಿಯಲ್ಲಿ ಆಕೆ ಗರ್ಭಿಣಿ ಎಂಬುದು ಎಲ್ಲರಿಗೂ ಕಾಣಿಸಿತೊಡಗಿದ ಬಳಿಕ. ಆಗ ನಮಗೆ ಬೇರೆ ಆಯ್ಕೆ ಇರಲಿಲ್ಲ" ಎಂದಿದ್ದಾರೆ.

ಇನ್ನು, "ನಮ್ಮ ಮದುವೆ ಜೂನ್ 2 ರಂದು ಶಿರಡಿಯಲ್ಲಿ ನಡೆಯಿತು. ಆದರೆ, ನಾವು 1997ರ ಜನವರಿಯಲ್ಲಿ ಸಾರ್ವಜನಿಕವಾಗಿ ಮದುವೆಯಾಗಿದ್ದೇವೆ. ಅದಕ್ಕಾಗಿಯೇ ಕೆಲವು ಲೇಖಕರು ಜಾನ್ವಿ ಕಪೂರ್ ಮದುವೆಗೆ ಮುಂಚೆಯೇ ಜನಿಸಿದ್ದಾರೆ ಎಂದು ಬರೆಯುತ್ತಾರೆ" ಎಂದು ಬೋನಿ ಕಪೂರ್ ಹೇಳಿದ್ದಾರೆ.
ಬೋನಿ ಕಪೂರ್ ಮತ್ತು ಶ್ರೀದೇವಿ ಮದುವೆ
ನಿರ್ಮಾಪಕ ಬೋನಿ ಕಪೂರ್ ಮತ್ತು ನಟಿ ಶ್ರೀದೇವಿಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು, ಶ್ರೀದೇವಿ ಅವರೊಂದಿಗಿನ ಮದುವೆಗೂ ಮೊದಲೇ ಬೋನಿ ಕಪೂರ್ ಅವರ ಮೊದಲ ಪತ್ನಿ ಸುನೀತಾ ಅವರಿಗೆ ಅರ್ಜುನ್ ಕಪೂರ್ ಮತ್ತು ಅಂಶುಲಾ ಕಪೂರ್ ಎಂಬ ಇನ್ನಿಬ್ಬರು ಮಕ್ಕಳಿದ್ದರು.
5 ವರ್ಷಗಳ ಹಿಂದೆ 2018 ರ ಫೆಬ್ರವರಿಯಲ್ಲಿ ನಟಿ ಶ್ರೀದೇವಿ ಕುಟುಂಬ ವಿವಾಹದಲ್ಲಿ ಭಾಗವಹಿಸಲು ಹೋಗಿ ದುಬೈ ಹೋಟೆಲ್ನ ಬಾತ್ಟಬ್ನಲ್ಲಿ ಆಕಸ್ಮಿಕವಾಗಿ ಮುಳುಗಿ ಹಠಾತ್ ಸಾವನ್ನಪ್ಪಿದರು. ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಿತ್ತು.
ಈ ಬಗ್ಗೆಯೂ ಮಾತನಾಡಿರುವ ಅವರು, ತಮ್ಮನ್ನು ಸುಮಾರು 24 ಅಥವಾ 48 ಗಂಟೆಗಳ ವಿಚಾರಣೆ ನಡೆಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ "ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ತರಹದ ವಿಚಾರಣೆ ಎದುರಿಸಿದೆ. ಕೊನೆಗೆ ಬಂದ ವರದಿಯಲ್ಲಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಸ್ಪಷ್ಟವಾಯಿತು. ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದರು. ನಮ್ಮ ಮದುವೆ ಬಳಿಕ ನನಗೆ ಈ ವಿಷಯ ತಿಳಿಯಿತು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದರು. ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಜಾಗ್ರತೆಯಿಂದ ಇರಲು ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ ಆಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ" ಎಂದು ಹೇಳಿದ್ದಾರೆ.


Click it and Unblock the Notifications











