#Boycott Kareena Kapoor; ಕರೀನಾರನ್ನು ಬಹಿಷ್ಕರಿಸುವಂತೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್
ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಟ್ವಿಟ್ಟರ್ ನಲ್ಲಿ ದಿಢೀರ್ ಟ್ರೆಂಡಿಂಗ್ ನಲ್ಲಿದ್ದಾರೆ. ಅದು ಒಳ್ಳೆಯ ವಿಚಾರಕ್ಕಲ್ಲ. ಕರೀನಾರನ್ನು ಬಹಿಷ್ಕರಿಸಿ ಎಂದು ನೆಟ್ಟಿಗರು ಟ್ರೆಂಡ್ ಮಾಡಿದ್ದಾರೆ. ಅಷ್ಟಕ್ಕೂ ಕರೀನಾ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಲು ಕಾರಣವಾಗಿದ್ದು ರಾಮಾಯಣದ ಸೀತೆ ಪಾತ್ರ. ತೆಲುಗಿನ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಅವರ ರಾಮಾಯಣ ಆಧಾರಿತ 'ಸೀತಾ' ಸಿನಿಮಾದಲ್ಲಿ ನಟಿಸಲು ಕರೀನಾಗೆ ಆಫರ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಆದರೆ ಕರೀನಾ ಸೀತೆಯಾಗಿ ನಟಿಸಲು ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಸೀತೆ ಪಾತ್ರದಲ್ಲಿ ಬಣ್ಣಹಚ್ಚಲು ಕರೀನಾ ಬರೋಬ್ಬರಿ 12 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಭಾರತದ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾದಲ್ಲಿ ನಟಿಸಲು ಕರೀನಾ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಕೇಳಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾದಿಂದ ಬಹಿಷ್ಕರಿಸುವಂತೆ ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ.

ಸೀತೆ ಪಾತ್ರಕ್ಕೆ 12 ಕೋಟಿ ರೂ. ಕೇಳುವ ಮೂಲಕ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ ಎಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ಇನ್ನು ಕೆಲವರು ಟ್ವೀಟ್ ಮಾಡಿ, ಇದು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಹೇಳುತ್ತಿದ್ದಾರೆ. ತೈಮೂರ್ ಅಲಿ ಖಾನ್ ತಾಯಿಯಾಗಿರುವ ಕರೀನಾ ಸೀತೆ ಪಾತ್ರ ಮಾಡಬಾರದು ಎಂದು ನೆಟ್ಟಿಗರು ರೊಚ್ಚಿಗೆದಿದ್ದಾರೆ.

ಹಿಂದೂ ದೇವರನ್ನು ಅಗೌರವಿಸುವ ನಟಿ ಈ ಪಾತ್ರವನ್ನು ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕರೀನಾ ಕಪೂರ್ ಸೀತೆ ಪಾತ್ರವನ್ನು ಮಾಡಲು ಅರ್ಹರಲ್ಲ, ಕರೀನಾರನ್ನು ಬಹಿಷ್ಕರಿಸಿ ಎಂದು ಟ್ವೀಟ್ ಮಾಡುವ ಮೂಲಕ ಟ್ರೆಂಡ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕಂಗನಾ ಈ ಪಾತ್ರಕ್ಕೆ ಉತ್ತಮ ಎಂದು ಸಲಹೆ ನೀಡುತ್ತಿದ್ದಾರೆ.

ನಿರ್ದೇಶಕ ಅಲೌಕಿಕ್ ದೇಸಾಯಿ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಸೀತಾ' ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸೀತೆ ಪಾತ್ರಕ್ಕೆ ಕರೀನಾ ಅವರನ್ನು ಸಂಪರ್ಕ ಮಾಡಿದೆಯಂತೆ ಸಿನಿಮಾತಂಡ. ಸೀತೆಯಾಗಲು ಉತ್ಸುಕರಾಗಿರುವ ಕರೀನಾ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಪೌರಾಣಿಕ ಪಾತ್ರವಾಗಿರುವುದರಿಂದ ಸಂಭಾವನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸೀತೆಯಾಗಿ ತೆರೆಮೇಲೆ ಮಿಂಚುತ್ತಾರಾ ಎಂದು ಕಾದುನೋಡಬೇಕು.


Click it and Unblock the Notifications











