ರಿಲೀಸ್ಗೂ ಮೊದಲೇ 'ಬ್ರಹ್ಮಾಸ್ತ್ರ' ಹೊಸ ದಾಖಲೆ? ಎಷ್ಟು ಸ್ಕ್ರೀನ್ಗಳಲ್ಲಿ ರಿಲೀಸ್ ಆಗ್ತಿದೆ ಗೊತ್ತಾ ಸಿನಿಮಾ?
ಅಯಾನ್ ಮುಖರ್ಜಿ ನಿರ್ದೇಶನದ ಫ್ಯಾಂಟಸಿ ಅಡ್ವೆಂಚರ್ 'ಬಹ್ಮಾಸ್ತ್ರ' ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ರಣ್ಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮುಂದಿನ ಶುಕ್ರವಾರ ವಿಶ್ವದಾದ್ಯಂತ ಏಕಕಾಲಕ್ಕೆ 8000ಕ್ಕೂ ಸ್ಕ್ರೀನ್ಗಳ ಮೇಲೆ 'ಬ್ರಹ್ಮಾಸ್ತ್ರ' ಅಪ್ಪಳಿಸಲಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ 'ಬ್ರಹ್ಮಾಸ್ತ್ರ'ವನ್ನೇ ನಂಬಿಕೊಂಡಿದೆ. ಯಾವುದೇ ದೊಡ್ಡ ಸಿನಿಮಾಗಳು ಇಲ್ಲದೇ ಮುಂಬೈನಲ್ಲಿ ಕೆಲ ಥಿಯೇಟರ್ಗಳ ಬಾಗಿಲು ಬಂದ್ ಆಗಿದೆ. ಸೆಪ್ಟೆಂಬರ್ 9ಕ್ಕೆ ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗಾಗಿ ಬಹುಕೋಟಿ ವೆಚ್ಚದ ಈ ಸಿನಿಮಾ ಮತ್ತೆ ಪ್ರೇಕ್ಷಕರನ್ನು ಥಿಯೇಟರ್ಗೆ ಕರೆದುಕೊಂಡು ಬರುವ ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಹಿಂದಿ ಮಾತ್ರವಲ್ಲದೇ ದಕ್ಷಿಣದ ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ.
ಎಸ್. ಎಸ್ ರಾಜಮೌಳಿ 'ಬ್ರಹ್ಮಾಸ್ತ್ರ' ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಚೆನ್ನೈ, ಹೈದರಾಬಾದ್ನಲ್ಲಿ ನಡೆದ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆ ಮೂಲಕ ದಕ್ಷಿಣ ಭಾರತದಲ್ಲೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಗಿಟ್ಟಿಸಿಕೊಳ್ಳುವ ಪ್ರಯತ್ನಗಳು ನಡೀತಿದೆ. 8 ವರ್ಷಗಳ ಹಿಂದೆ ಅನೌನ್ಸ್ ಆಗಿದ್ದ ಸಿನಿಮಾ ಕಾರಣಾಂತರಗಳಿಂದ ಶುರುವಾಗುವುದು ತಡವಾಗಿತ್ತು. ಕೊರೊನಾ ಹಾವಳಿಯಿಂದ ಮತ್ತಷ್ಟು ತಡವಾಗಿ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ.

ದಾಖಲೆಯ ಮಟ್ಟದಲ್ಲಿ ಸಿನಿಮಾ ರಿಲೀಸ್
ಬರೋಬ್ಬರಿ 8000 ಸ್ಕ್ರೀನ್ಗಳಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಭಾರತದ 5000 ಹಾಗೂ ವಿದೇಶಗಳ 3000 ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಇದು ಭಾರತದ ಮಟ್ಟಿಗೆ ಬಹಳ ದೊಡ್ಡಮಟ್ಟದ ಸಿನಿಮಾ ರಿಲೀಸ್ ಅಂತಲೇ ಹೇಳಬಹುದು. ಈ ವರ್ಷ ಯಾವುದೇ ದೊಡ್ಡ ಬಾಲಿವುಡ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿಲ್ಲ. ಆದರೆ 'ಬ್ರಹ್ಮಾಸ್ತ್ರ' ಸಿನಿಮಾ ನೋಡಲು ಪ್ರೇಕ್ಷಕರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕ್ರೇಜ್ಗೆ ತಕ್ಕಂತೆ ಸಿನಿಮಾ ರಿಲೀಸ್ ಮಾಡಿ ಬಾಕ್ಸಾಫೀಸ್ ದೋಚುವ ಪ್ರಯತ್ನ ಶುರುವಾಗಿದೆ.

'ಬ್ರಹ್ಮಾಸ್ತ್ರ' ಚಿತ್ರಕ್ಕೆ ಜ್ಯೂ. ಎನ್ಟಿಆರ್ ಬಲ
'ಬ್ರಹ್ಮಾಸ್ತ್ರ' ಸಿನಿಮಾ ಪ್ರಮೋಷನ್ ಭರದಿಂದ ಸಾಗಿದೆ. ಹೈದರಾಬಾದ್ನಲ್ಲಿ ಇಂದು ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಜ್ಯೂ. ಎನ್ಟಿಆರ್ನ ಆಹ್ವಾನಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಭದ್ರತೆ ನೆಪವೊಡ್ಡಿ ಅದ್ಧೂರಿ ಈವೆಂಟ್ ರದ್ದು ಮಾಡಲಾಗಿದೆ. ಆದರೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಾರಕ್ ಭಾಗಿಯಾಗಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

'ಬ್ರಹ್ಮಾಸ್ತ್ರ' ಸಿನಿಮಾ ಕಥೆಯೇನು?
ಅಷ್ಟಕ್ಕೂ ಈ 'ಬ್ರಹ್ಮಾಸ್ತ್ರ' ಸಿನಿಮಾ ಕತೆಯೇನು ಅನ್ನುವ ಕುತೂಹಲ ಮೂಡುವುದು ಸಹಜ. ಇದನ್ನು ಸ್ವತಃ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಹಿಂದು ಪುರಾಣಗಳನ್ನು ಆಧರಿಸಿ ಈ ಕತೆ ಸಿದ್ದಪಡಿಸಲಾಗಿದೆಯಂತೆ. ತಮ್ಮ ಇತಿಹಾಸ, ಪುರಾಣದಲ್ಲಿರುವ ಶಕ್ತಿಗಳನ್ನೆಲ್ಲಾ ಸೇರಿಸಿ ಅಸ್ತ್ರಾವರ್ಸ್ ಅನ್ನೋದನ್ನು ಕ್ರಿಯೇಟ್ ಮಾಡಿದ್ದಾರೆ. ಅಸ್ತ್ರಾವರ್ಸ್ ಅಂದರೆ ನಮ್ಮ ಶಾಸ್ತ್ರಗಳ ಪ್ರಕಾರ ಮನುಷ್ಯ ಸೃಷ್ಟಿಸಿಗೆ ಪಂಚಭೂತಗಳು ಕಾರಣ. ಅಂತಹ ಪಂಚಭೂತಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಶಕ್ತಿ ಬ್ರಹ್ಮಶಕ್ತಿ. 'ಬ್ರಹ್ಮಾಸ್ತ್ರ' ಕಥೆ ಈ ಬ್ರಹ್ಮಶಕ್ತಿಯಿಂದ ಹುಟ್ಟಿದ ಅಸ್ತ್ರಗಳ ಕುರಿತು ಹಾಗೂ ಅದನ್ನು ಬಳಸುವ ಸೂಪರ್ ಹೀರೋಗಳ ಕುರಿತಾಗಿದೆ. ಕೊಂಡಿದೆ. ಉದಾರಣೆಗೆ ವಾನರಾಸ್ತ್ರ. ಈ ಅಸ್ತ್ರಕ್ಕೆ ಕಿಂಗ್ಕಾಂಗ್ಗೆ ಇರುವಷ್ಟು ಶಕ್ತಿ ಇರುತ್ತದೆ. ಅದನ್ನು ಯಾರಾದರೂ ಧರಿಸಿದರೆ ಕಿಂಗ್ಕಾಂಗ್ ರೀತಿ ಅಬ್ಬರಿಸುತ್ತಾರೆ. ಇಂತಹ ಸಾಕಷ್ಟು ಅಸ್ತ್ರಗಳು, ಅದನ್ನು ಧರಿಸುವ ನಾಯಕರು ಚಿತ್ರದಲ್ಲಿದ್ದಾರೆ. ಆದರೆ ಇದೆಲ್ಲದರ ಎದುರು ಪ್ರೀತಿ ಬಂದರೆ ಏನಾಗುತ್ತದೆ ಎನ್ನುವುದು ಸಿನಿಮಾ ಕಥೆ.

'ಬ್ರಹ್ಮಾಸ್ತ್ರ' ಚಿತ್ರಕ್ಕೆ ಬಾಯ್ಕಾಟ್ ಭಯ
ಬಾಲಿವುಡ್ ಸಿನಿಮಾಗಳಿಗೆ ಈಗ ಬಾಯ್ಕಾಟ್ ಭಯ ಶುರುವಾಗಿದೆ. ಕಾರಣಾಂತರಗಳಿಂದ 'ಬ್ರಹ್ಮಾಸ್ತ್ರ' ಚಿತ್ರಕ್ಕೂ ಈ ಆತಂಕ ಶುರುವಾಗಿದೆ. ಆಲಿಯಾ ಭಟ್ ಹೇಳಿಕೆಗಳು, ಚಿತ್ರದ ದೃಶ್ಯವೊಂದರಲ್ಲಿ ರಣ್ಬೀರ್ ಕಪೂರ್ ಶೂ ಧರಿಸಿ ದೇವಸ್ಥಾನಕ್ಕೆ ಹೋಗುವ ದೃಶ್ಯ ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ. ಹಾಗಾಗಿ ಚಿತ್ರಕ್ಕೆ ಬಾಯ್ಕಾಟ್ ಟ್ರೆಂಡ್ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿದೆ.


Click it and Unblock the Notifications











