'ರಾಮಾಯಣ' ಚಿತ್ರದ ಯಶ್ ರಾವಣ ಪಾತ್ರದಲ್ಲಿ ಪ್ರಮುಖ ಬದಲಾವಣೆ; ಕಾರಣ ಏನು?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ವಾಲ್ಮೀಕಿ ರಾಮಾಯಣವನ್ನು ಇಡೀ ಪ್ರಪಂಚಕ್ಕೆ ಹೇಳುವ ಪ್ರಯತ್ನ ನಡೀತಿದೆ. 4000 ಕೋಟಿ ರೂ. ಬಜೆಟ್ನಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಎರಡು ಭಾಗಗಳಾಗಿ 'ರಾಮಾಯಣ' ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರದ ತಾರಾಗಣದಲ್ಲಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ದಶರಥನಾಗಿ ಅರುಣ್ ಗೋವಿಲ್, ಮಂಡೋದರಿಯಾಗಿ ಕಾಜಲ್ ಅಗರ್ವಾರ್ ನಟಿಸುತ್ತಿದ್ದಾರೆ.

ಇತ್ತೀಚೆಗೆ ಜಟಾಯು ಪಕ್ಷಿಯ ಹೋರಾಟದ ಕಥೆಯ ಸನ್ನಿವೇಶಗಳನ್ನು ಸೆರೆಹಿರಿಯಲಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮೊದಲ ಭಾಗದಲ್ಲಿ ಸೀತಾಪಹರಣದವರೆಗಿನ ರಾಮಾಯಣ ಕಥೆಯನ್ನು ಮಾತ್ರ ಹೇಳಲಾಗುತ್ತಿದೆ. ಹಾಗಾಗಿ ರಾವಣನಾಗಿ ಯಶ್ ಕೆಲವೇ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀತಾಪಹರಣದ ಸನ್ನಿವೇಶಕ್ಕೂ ಮುನ್ನ ರಾವಣನ ಹಿನ್ನೆಲೆಯನ್ನು ಹೇಳುವ ಒಂದಷ್ಟು ಸನ್ನಿವೇಶಗಳು ಕೂಡ ಚಿತ್ರದಲ್ಲಿ ಇರಲಿದೆ.
ಸದ್ಯ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಬೇರೆಯದ್ದೇ ಸ್ವರೂಪ ನೀಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ. ಸಾಮಾನ್ಯವಾಗಿ ರಾವಣ ಅಂದಾಕ್ಷಣ ದುಷ್ಟ, ರಾಕ್ಷಸ, ಸೀತೆಯನ್ನು ಅಪಹರಿಸಿ ಹಿಂಸಿಸಿದ ಎನ್ನುವುದು ಎಲ್ಲರಿಗೂ ಗೊತ್ತೇಯಿದೆ. ಆತ ಖಳನಾಗಿಯೇ ಎಲ್ಲರಿಗೂ ಗೊತ್ತಿದೆ. ಆದರೆ ಕೆಲವರು ಮಾತ್ರ ಆತನಲ್ಲಿದ್ದ ಒಳ್ಳೆಯ ಅಂಶಗಳ ಬಗ್ಗೆಯೂ ಮಾತನಾಡುತ್ತಾರೆ. ಕೆಲ ಕವಿಗಳು ರಾವಣ ಮಹಾನ್ ವಿದ್ವಾಂಸ, ಸೀತಾಪಹರಣ ಬಿಟ್ಟು ಬೇರೆ ಯಾವುದೇ ತಪ್ಪು ಮಾಡಲಿಲ್ಲ ಎಂದು ಹಾಡಿ ಹೊಗಳಿರುವುದು ಇದೆ. ರಾವಣನಿಗೆ ತಮ್ಮ ಕಾವ್ಯಗಳಲ್ಲಿ ಪ್ರತಿನಾಯಕನ ಸ್ಥಾನ ಕೊಟ್ಟಿದ್ದಾರೆ.

ಕನ್ನಡದ ಕವಿ ನಾಗಚಂದ್ರ ತನ್ನ 'ರಾಮಚಂದ್ರ ಚರಿತ ಪುರಾಣ' ಕಾವ್ಯದಲ್ಲಿ ರಾವಣನನ್ನು ಹೊಗಳಿದ್ದಾನೆ. ರಾವಣ ದುಷ್ಟನಲ್ಲ, ಆಕಸ್ಮಿಕವಾಗಿ ಸೀತೆಯನ್ನು ಕಂಡು ಆಕೆಯ ಮೇಲೆ ಮೋಹಗೊಂಡು ಕೊನೆಗೆ ಸತ್ತ ಎಂದು ಬರೆದಿದ್ದಾನೆ. "ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ"(ಅರ್ಥ ಸಮುದ್ರ ಕೂಡ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆ ಮೀರುತ್ತದೆ ಅಲ್ಲವೇ?) ಎಂದು ವಿಶ್ಲೇಷಿಸಿದ್ದಾರೆ.
ರಾಮಾಯಣ ಚಿತ್ರದ ಟೀಸರ್ ಬಿಡುಯಾದಾಗ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ "ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ" ಎಂದು ಬರೆದು ಚಿತ್ರಕ್ಕೆ ಶುಭ ಕೋರಿದ್ದರು. ಅದಕ್ಕೆ ಯಶ್ ಕೂಡ ಧನ್ಯವಾದ ತಿಳಿಸಿದ್ದರು. ಅಂದರೆ ನಾಗಚಂದ್ರ ತನ್ನ ಕಾವ್ಯದಲ್ಲಿ ರಾವಣನ ಪಾತ್ರವನ್ನು ನೋಡಿದಂತೆ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರ ಚಿತ್ರಿಸುತ್ತಿದ್ದಾರೆ ಎನ್ನಲಾಗ್ತಿದೆ.
ರಾಮಾಯಣ ಚಿತ್ರದಲ್ಲಿ ಅತಿಕಾಯನಾಗಿ ತಮಿಳು ನಟ ಹರೀಶ್ ಉತ್ತಮನ್ ಹಾಗೂ ಮಾರೀಚನಾಗಿ ಸೌರಬ್ ಸಚ್ದೇವ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ. ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದೇಶ ವಿದೇಶದ ಹಲವು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
2027ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ 'ರಾಮಾಯಣ' ಭಾಗ-2 ತೆರೆಗೆ ಬರಲಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ದುಬಾರಿ ಸಿನಿಮಾ ಇದಾಗಿದೆ. ಈಗಾಗಲೇ ಸಾಕಷ್ಟು ಬಾರಿ ಕೇಳಿರುವ, ಓದಿರುವ ಹಾಗೂ ಸಿನಿಮಾ, ನಾಟಕ, ಧಾರಾವಾಹಿ ರೂಪದಲ್ಲಿ ನೋಡಿರುವ ಕಥೆಯನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ನಡೀತಿದೆ. ಐಮ್ಯಾಕ್ಸ್ ವರ್ಷನ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಹಾಲಿವುಡ್ ಸಂಸ್ಥೆಗಳು ಸಿನಿಮಾ ವಿತರಣೆಗೆ ಕೈ ಜೋಡಿಸುತ್ತಿವೆ.


Click it and Unblock the Notifications











