ರಣ್ಬೀರ್, ಯಶ್ ನಟನೆಯ 'ರಾಮಾಯಣ- 1' ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!
ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ವಾಲ್ಮೀಕಿ ಬರೆದ ಕಾವ್ಯವನ್ನು ದೃಶ್ಯರೂಪದಲ್ಲಿ ತೆರೆಗೆ ತರಲಾಗುತ್ತಿದೆ. 4000 ಕೋಟಿ ರೂ. ಬಜೆಟ್ನಲ್ಲಿ ಏಕಕಾಲಕ್ಕೆ ದೇಶ ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. 2027ರ ಬೆಳಕಿನ ಹಬ್ಬಕ್ಕೆ 2ನೇ ಭಾಗ ತೆರೆಗಪ್ಪಳಿಸಲಿದೆ. ಜುಲೈನಲ್ಲಿ ಚಿತ್ರದ ಸಣ್ಣ ಗ್ಲಿಂಪ್ಸ್ ಬಂದಿತ್ತು. ರಾಮ-ರಾವಣರಾಗಿ ರಣ್ಬೀರ್, ಯಶ್ ಲುಕ್ ಅಷ್ಟೇನು ರಿವೀಲ್ ಆಗಿರಲಿಲ್ಲ. ಇದೆಲ್ಲದರ ನಡುವೆ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು ಮಾಡಿದ್ದಾರೆ. ಸಿಜಿ ಕೆಲಸಗಳು ಜಾಸ್ತಿ ಇದ್ದು ಅದಕ್ಕಾಗಿ ಹೆಚ್ಚಿನ ಸಮಯವನ್ನು ಚಿತ್ರತಂಡ ವ್ಯಯಿಸುತ್ತಿದೆ.

ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಲಕ್ಷ್ಮಣನಾಗಿ ರವಿದುವೆ, ಹನುಮಂತನಾಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್ವಾರ್, ದಶರಥನಾಗಿ ಅರುಣ್ ಗೋವಿಲ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ.
ಇದು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ. ಬರೋಬ್ಬರಿ 40 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಹಾಗಾಗಿ ವಿಶ್ವದ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಚಿತ್ರದ ಪ್ರಚಾರ ಕೆಲಸ ನಡೀತಿದೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಮುಂದಿನ ವರ್ಷ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ವೇದಿಕೆಯಲ್ಲಿ 'ರಾಮಾಯಣ' ಬಿಡುಗಡೆ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಮುಂದಿನ ವರ್ಷ ಜುಲೈ ಕೊನೆ ವಾರದಲ್ಲಿ ಈ ಈವೆಂಟ್ ನಡೆಯಲಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಮಾಡಿದ್ದರೂ ಲಿಪ್ಸಿಂಕ್ನಲ್ಲಿ ತಪ್ಪದಂತೆ ಮಾಡುವ ಪ್ರಯತ್ನ ನಡೀತಿದೆ. ಆಧುನಿಕ ತಂತ್ರಜ್ಞಾನ ಬಳಸಿ ಆ ಪಾತ್ರಧಾರಿಗಳು ಅದೇ ಭಾಷೆಯಲ್ಲಿ ಮಾತನಾಡಿರುವಂತೆ ಲಿಪ್ಸಿಂಕ್ ಮಾಡುವ ಲೆಕ್ಕಾಚಾರ ಇದು. ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡ್ತಿದ್ದು ಮುಂದೆ ಇದು ಚಿತ್ರರಂಗದಲ್ಲಿ ಹೊಸ ಕ್ರಾಂತಿ ಹುಟ್ಟಾಕುವ ಸಾಧ್ಯತೆಯಿದೆ.
ಲಿಪ್ ಸಿಂಕ್ ಎನ್ನುವುದು ಡಬ್ ಸಿನಿಮಾಗಳಿಗೆ ದೊಡ್ಡ ಹಿನ್ನಡೆಯಾಗಿದೆ. 'ರಾಮಾಯಣ' ಚಿತ್ರದಿಂದ ಈ ಸಮಸ್ಯೆ ಬಗೆಹರಿದರೆ ಮುಂದೆ ಎಲ್ಲಾ ಆ ಭಾಷೆಯ ಸಿನಿಮಾಗಳನ್ನು ಇದೇ ರೀತಿ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಸುಲಭವಾಗುತ್ತದೆ.
ಸೀತಾಪಹರಣ ಸನ್ನಿವೇಶದವರೆಗೆ 'ರಾಮಾಯಣ' ಚಿತ್ರದ ಮೊದಲ ಭಾಗದ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ರಾವಣನ ಹಿನ್ನೆಲೆಯ ಬಗ್ಗೆ ಒಂದಷ್ಟು ಕಥೆಗಳನ್ನು ಸೇರಿಸಲಾಗ್ತಿದೆ. ಚಿತ್ರದಲ್ಲಿ ರಾವಣನನ್ನು ಖಳನಾಯಕನಾಗಿ ಅಲ್ಲದೇ ಪ್ರತಿನಾಯಕನಾಗಿ ತೋರಿಸುವ ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ. ರಾವಣನಾಗಿ ನಟಿಸುವುದು ಮಾತ್ರವಲ್ಲ ಯಶ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.
ಮುಂದಿನ ವರ್ಷ ಆರಂಭದಲ್ಲಿ ಯಶ್ ನಿರ್ಮಿಸಿ ನಟಿಸಿರುವ 'ಟಾಕ್ಸಿಕ್' ಸಿನಿಮಾ ತೆರೆಗೆ ಬರ್ತಿದೆ, ವರ್ಷ್ ಕೊನೆಗೆ 'ರಾಮಾಯಣ' ದರ್ಶನವಾಗಲಿದೆ. ಈಗಾಗಲೇ ಕಾವ್ಯಗಳಲ್ಲಿ, ಸಿನಿಮಾ, ನಾಟಕಗಳಲ್ಲಿ ರಾಮಾಯಣ ಕಥೆ ಬಂದು ಹೋಗಿದೆ. ಒಂದೇ ಕತೆಯನ್ನು ಬೇರೆ ಬೇರೆ ರೀತಿ ಹೇಳುವ ಪ್ರಯತ್ನ ನಡೆದಿದೆ. ಅದೇ ಕಥೆಯನ್ನು ಈ ಬಾರಿ ವಿಶ್ವದಾದ್ಯಂತ ಇರುವ ಪ್ರೇಕ್ಷಕರಿಗೆ ದೊಡ್ಡಮಟ್ಟದಲ್ಲಿ ಹೇಳುವ ಸಾಹಸ ಮಾಡಲಾಗ್ತಿದೆ.


Click it and Unblock the Notifications











