'ಇಂದು ಸರ್ಕಾರ್' ಚಿತ್ರದಲ್ಲಿ 14 ಸೀನ್ ಕಡಿತಕ್ಕೆ ಸಿಬಿಎಫ್ಸಿ ಸೂಚನೆ
ಚಲನಚಿತ್ರ ರಾಷ್ಟ್ರ ಪ್ರಶಸ್ತಿ ವಿಜೇತ ಮಧುರ್ ಭಂಡಾರ್ಕರ್ ಅವರ 'ಇಂದು ಸರ್ಕಾರ್' ಚಿತ್ರದಲ್ಲಿ 14 ಸೀನ್ ಗಳನ್ನು ತೆಗೆಯಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸೂಚಿಸಿದೆ.
ಮಧುರ್ ಭಂಡಾರ್ಕರ್ ನಿರ್ದೇಶನದ ಚಿತ್ರವು ಸೆನ್ಸಾರ್ ಗಾಗಿ ಪ್ರದರ್ಶನ ಪಡೆದಿದ್ದು, ಚಿತ್ರದಲ್ಲಿಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ 14 ಸೀನ್ ಗಳನ್ನು ತೆಗೆಯಲು ಸಿಬಿಎಫ್ಸಿ ಸೂಚಿಸಿದೆ. ಇದರಿಂದ ನನಗೆ ಭಯವಾಗಿದೆ, ಆದ್ದರಿಂದ ನಾನು ಪರಿಷ್ಕರಣಾ ಸಮಿತಿಗೆ(Revising Committee) ಹೋಗುತ್ತೇನೆ ಎಂದು ಮಧುರ್ ಭಂಡಾರ್ಕರ್ ರವರು ಟ್ವೀಟ್ ಮಾಡಿದ್ದಾರೆ.
'ಇಂದು ಸರ್ಕಾರ್' ಚಿತ್ರವು 1975 ರ ಇಂದಿರಾ ಗಾಂಧಿ ಸರ್ಕಾರದ ತುರ್ತು ಪರಿಸ್ಥಿತಿ ಆಧರಿತ ಚಿತ್ರಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ನೀಲ್ ನಿತಿನ್ ಮುಖೇಶ್, ಕೀರ್ತಿ ಕುಲ್ಹರಿ, ಸುಪ್ರಿಯಾ ವಿನೋದ್, ಅನುಪಮ್ ಖೇರ್ ಮತ್ತು ಟೊಟಾ ರಾಯ್ ಚೌಧರಿ ಅಭಿನಯಿಸಿದ್ದಾರೆ.

ಚಿತ್ರವು ಬಿಡುಗಡೆಗೆ ಮುನ್ನವೇ ಕಾಂಗ್ರೆಸ್ ವಕ್ತಾರರ ಕೋಪಕ್ಕೆ ಗುರಿಯಾಗಿದೆ. ಅಲ್ಲದೇ ಮುಂಬೈನ ಕಾಂಗ್ರೆಸ್ ಅಧ್ಯಕ್ಷರಾದ ಸಂಜಯ್ ನಿರುಪಮ್ ಅವರು ಚಿತ್ರ ಸೆನ್ಸಾರ್ ಆಗುವ ಮೊದಲೇ ನಮಗೆ ತೋರಿಸಿ ಎಂದು ಸಿಬಿಎಫ್ಸಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಅವರಿಗೆ ಪತ್ರ ಬರೆದಿದ್ದರು. ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಸೋಮವಾರ ಚಿತ್ರ ವಿತರಕರ ಸಂಘ ಮತ್ತು ಸಿನಿ ಗ್ರಾಹ್ ಸಂಚಲನ ಸಂಘಕ್ಕೆ ಚಿತ್ರ ಪ್ರದರ್ಶನ ಮಾಡದಂತೆ ಕೋರಿ ಪತ್ರ ಬರೆದಿದ್ದಾರೆ. ಒಂದು ವೇಳೆ ಚಿತ್ರ ರಿಲೀಸ್ ಆದಲ್ಲಿ ಪ್ರತಿಭಟನೆಯನ್ನು ಮಾಡುವ ಬಗ್ಗೆ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಧುರ್ ಭಂಡಾರ್ಕರ್ ನಿರ್ದೇಶನದ 'ಇಂದು ಸರ್ಕಾರ್' ಚಿತ್ರವು ಜುಲೈ 28 ಕ್ಕೆ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.


Click it and Unblock the Notifications











