CCL 2026 Semifinal : ರೋಚಕ ಪಂದ್ಯದಲ್ಲಿ ಕೇರಳಗೆ ಮಣ್ಣು ಮುಕ್ಕಿಸಿದ ಬೆಂಗಾಲ್-ಫೈನಲ್ಗೆ 2024ರ ಚಾಂಪಿಯನ್ಸ್
2011ರಲ್ಲಿ ''ಸಿಸಿಎಲ್'' ಆರಂಭವಾಯ್ತು. ಅಲ್ಲಿಂದ ಇಲ್ಲಿಯವರೆಗೆ ''ಸಿಸಿಎಲ್'' ನಡೆದುಕೊಂಡು ಬಂದಿದೆ. ಈ 15 ವರ್ಷಗಳಲ್ಲಿ ಹಲವು ತಂಡಗಳು ಚಾಂಪಿಯನ್ ಆಗಿವೆ. ಆ ಪೈಕಿ ಮೊದಲ ''ಕರ್ನಾಟಕ ಬುಲ್ಡೋಜರ್ಸ್'' 2 ಬಾರಿ ಗೆದ್ದರೆ, ತೆಲುಗು ವಾರಿಯರ್ಸ್ 4 ಮತ್ತು ಚೆನ್ನೈ ಕಿಂಗ್ಸ್ 2 ಸೀಸನ್ನಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇನ್ನು 2024ರಲ್ಲಿ ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ತಲುಪಿತ್ತು. ಮತ್ತೊಂದು ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಕನಸು ಕಂಡಿತ್ತು.
ಆದರೆ 12 ರನ್ಗಳಿಂದ ಆ ಕನಸು ಭಗ್ನವಾಗಿತ್ತು. ಬೆಂಗಾಲ್ ಟೈಗರ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ರಣ ರೋಚಕ ಪಂದ್ಯದಲ್ಲಿ ಮಣಿಸಿತ್ತು. ಈ ಬಾರಿ ಕೂಡ ಎರಡು ವರ್ಷದ ಹಿಂದೆ ನಡೆದ ಫೈನಲ್ನಂತೆಯೇ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ಯಾಕೆಂದರೆ ಇಂದು (ಜನವರಿ 31 ) ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ 2024ರ ಚಾಂಪಿಯನ್ ಬೆಂಗಾಲ್ ಟೈಗರ್ಸ್ ಉನ್ನಿ ಮುಕುಂದನ್ ನೇತೃತ್ವದ ಕೇರಳ ಸ್ಟ್ರೈಕರ್ಸ್ ತಂಡವನ್ನು ಮಣ್ಣು ಮುಕ್ಕಿಸಿದೆ. ಎರಡನೇ ಬಾರಿ ಫೈನಲ್ ತಲುಪಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬೆಂಗಾಲ್ ತಂಡಕ್ಕೆ ಆರಂಭದಲ್ಲಿ ಉನ್ನಿ ಮುಕುಂದನ್ ಮತ್ತು ಅರ್ಜುನ್ ನಂದಕುಮಾರ್ ಕಾಡಿದರು. 33 ಎಸೆತಗಳಲ್ಲಿ ಮೂರು ಸಿಕ್ಸ್ ಮತ್ತು 2 ಬೌಂಡರಿಯನ್ನು ಬಾರಿಸಿದ ಉನ್ನಿ ಮುಕುಂದನ್ 41 ರನ್ಗಳಿಗೆ ಔಟಾದರೆ ಅರ್ಜುನ್ ನಂದಕುಮಾರ್ 41 ಬಾಲ್ಗಳಲ್ಲಿ 61 ರನ್ ಗಳಿಸಿದರು.
ಆದರೆ ಆ ನಂತರ ಬಂದ ಜಿನ್ ಪೌಲ್ ಶೂನ್ಯಕ್ಕೆ ಔಟಾದರು. ಆ ನಂತರ ಬಂದ ಮದನ್ ಮೋಹನ್ 28 ರನ್ ಗಳಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ ಕೇರಳ ಸ್ಟೈಕರ್ಸ್ ತಂಡ 177 ರನ್ ಗಳಿಸಿತು.
178ರನ್ಗಳ ಗುರಿಯನ್ನು ಬೆನ್ನತ್ತಿದ ಬೆಂಗಾಲ್ ಟೈಗರ್ಸ್ ಆರಂಭದಲ್ಲಿಯೇ ಇಂದ್ರಶೀಶ್ ರಾಯ್ ಅವರ ವಿಕೆಟ್ ಕಳೆದುಕೊಂಡಿತು. ಜಾಯ್ ಕುಮಾರ್ ಮುಖರ್ಜಿ 18ರನ್ಗಳಿಸಿ ಔಟಾದರು. ಹೀಗೆ ಆರಂಭದಲ್ಲಿಯೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬೆಂಗಾಲ್ ತಂಡಕ್ಕೆ ಜ್ಯಾಮಿ ಆಸರೆಯಾದರು. ಆಕರ್ಷಕ ಅರ್ಧ ಶತಕ ಬಾರಿಸಿದರು. ಬೆಂಗಾಲ್ ತಂಡದಲ್ಲಿ ಭರವಸೆ ಮೂಡಿಸಿದ್ದರು.

ಆದರೆ..ಈ ಬಾರಿಯ ಸೀಸನ್ನಲ್ಲಿ ಇದೇ ಮೊದಲ ಬಾರಿ ಪಂದ್ಯವನ್ನು ಆಡುತ್ತಿರುವ ಮೊಹಮ್ಮದ್ ಪಂದ್ಯದ ಗತಿಯನ್ನು ಬದಲಿಸಿದರು. ನಾಲ್ಕು ಓವರ್ಗಳಲ್ಲಿ ಕೇವಲ ಹತ್ತು ರನ್ ಮಾತ್ರ ನೀಡಿ ಬಲಿಷ್ಠ ಜ್ಯಾಮಿಯ ವಿಕೆಟ್ ಪಡೆದರು. ಜ್ಯಾಮಿ ಔಟಾದ ನಂತರ ಕೇರಳ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತೆ ಎಂದು ಎಲ್ಲರು ಅಂದುಕೊಂಡಿದ್ದರು. ಆ ಅವಕಾಶ ಇತ್ತು ಕೂಡ.
ಆದರೆ.. ಆ ನಂತರ ಬಂದ ರಾಹುಲ್ ಮಜುಮದಾರ್ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದರು. ಸೋಲಿನ ಸುಳಿಯಿಂದ ಬೆಂಗಾಲ್ ತಂಡವನ್ನು ಪಾರು ಮಾಡಿದರು. ಕ್ರೀಸ್ಗೆ ಬರುತ್ತಿದ್ದಂತೆಯೇ ಆಕ್ರಮಣಕಾರಿ ಬ್ಯಾಟಿಂಗ್ ಆಡಲು ಶುರು ಮಾಡಿದ ರಾಹುಲ್ ಮಜುಮದಾರ್ 19ನೇ ಓವರ್ನಲ್ಲಿ ಮೂರು ಸಿಕ್ಸರ್ಗಳನ್ನು ಸಿಡಿಸಿದರು. ಪರಿಣಾಮ ಅಂತಿಮ ಓವರ್ನಲ್ಲಿ ಬೆಂಗಾಲ್ ತಂಡಕ್ಕೆ ಗೆಲ್ಲಲು 18 ರನ್ಗಳ ಅವಶ್ಯಕತೆ ಇತ್ತು. 20ನೇ ಓವರ್ನಲ್ಲಿ ಕೇರಳದ ಬೀನಿಶ್ ಅವರ ಮೇಲೆ ಕೂಡ ಸವಾರಿ ಮಾಡಿದ ರಾಹುಲ್ ಮಜುಮ್ದಾರ್ ಮತ್ತೆ ಮೂರು ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಬೆಂಗಾಲ್ ತಂಡವನ್ನು ಗೆಲ್ಲಿಸಿದರು.
ಕೊನೆಯ ಎರಡು ಓವರ್ ಹೊರತು ಪಡಿಸಿದರೆ ಕೇರಳದ ಬೌಲಿಂಗ್ ಚೆನ್ನಾಗಿತ್ತಾದರೂ ಫೀಲ್ಡಿಂಗ್ ಕಳಪೆಯಾಗಿತ್ತು. ಸೋಲಿಗೆ ಇದೇ ಪ್ರಮುಖವಾದ ಕಾರಣ. ಸದ್ಯ ಬೆಂಗಾಲ್ ಟೈಗರ್ಸ್ ಫೈನಲ್ ತಲುಪಿದ್ದು, ಕರ್ನಾಟಕ ಬುಲ್ಡೋಜರ್ಸ್ ಮತ್ತು ಚೆನ್ನೈ ಕಿಂಗ್ಸ್ ನಡುವೆ ಎರಡನೇ ಪಂದ್ಯ ಶುರುವಾಗಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ..? ಬೆಂಗಾಲ್ಗೆ ಫೈನಲ್ ನಲ್ಲಿ ಯಾರು ಎದುರಾಗುತ್ತಾರೆ ಎನ್ನುವುದಕ್ಕೆ ಉತ್ತರ ಕೆಲವೇ ಗಂಟೆಗಳಲ್ಲಿ ಸಿಗಲಿದೆ.


Click it and Unblock the Notifications











