ಚಂದ್ರಯಾನ-3: ಇಸ್ರೋ ಐತಿಹಾಸಿಕ ಸಾಧನೆಗೆ ಸಿನಿಮಾ ತಾರೆಯರ ಅಭಿನಂದನೆ
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ -3 ಯೋಜನೆಯ ಅಂತಿಮ ಹಂತ ಯಶಸ್ವಿಯಾಗಿದೆ. ವಿಕ್ರಮ್ ಹಾಗೂ ರೋವರ್ ಚಂದ್ರನ ದಕ್ಷಿಣ ಧುವದಲ್ಲಿ ಸುರಕ್ಷಿತವಾಗಿ ಇಳಿದಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದರಲ್ಲೂ ಚಂದ್ರನ ಅಣ್ವೇಷಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ -3 ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಪ್ರಯಾಣಿಸಿ ವಿಕ್ರಮ್ ರೋವರ್ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇನ್ನು ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ 4ನೇ ದೇಶ ಭಾರತ ಎನಿಸಿದೆ. ಸಾಕಷ್ಟು ಕುತೂಹಲ, ಆತಂಕ, ನಿರೀಕ್ಷೆಗಳ ನಡುವೆ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಾವುದೇ ಸಮಸ್ಯೆ ಇಲ್ಲದೇ ಇಳಿದಿದೆ. ಚಂದ್ರನ ಮೇಲೆ ವಿಕ್ರಮ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿನ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಇನ್ನು ಚಂದ್ರನ ಮೇಲೆ ವಿಕ್ರಮ ಇಳಿದ ಕ್ಷಣಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸುತ್ತಿದ್ದ ಕೋಟ್ಯಾಂತರ ಭಾರತೀಯರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸಿನಿಮಾ ತಾರೆಯರು ಕೂಡ ಇಸ್ರೋದ ಈ ಐತಿಹಾಸಿಕ ಸಾಧನೆಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್, ರಾಜಮೌಳಿ, ರಾಮ್ಚರಣ್, ಜ್ಯೂ. ಎನ್ಟಿಆರ್ ಸೇರಿದಂತೆ ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ "ಕೋಟ್ಯಂತರ ಹೃದಯಗಳು ಇಸ್ರೋಗೆ ಧನ್ಯವಾದ ತಿಳಿಸುತ್ತಿವೆ. ನಾವು ಹೆಮ್ಮೆ ಪಡುವಂತೆ ನೀವು ಮಾಡಿದ್ದೀರಿ. ಭಾರತ ಇತಿಹಾಸ ನಿರ್ಮಿಸಿದ ಈ ಕ್ಷಣಗಳನ್ನು ವೀಕ್ಷಿಸಿದ ನಾನು ಅದೃಷ್ಟವಂತ. ಭಾರತ ಈಗ ಚಂದ್ರನ ಅಂಗಳದಲ್ಲಿದೆ. ನಾವು ಚಂದ್ರನ ಮೇಲಿದ್ದೇವೆ" ಎಂದಿದ್ದಾರೆ.

"ಚಂದ್ರನ ದಕ್ಷಿಣ ಧ್ರುವಕ್ಕೆ ಯಶಸ್ವಿ ಪ್ರಯಾಣ. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ನೈಪುಣ್ಯತೆಗೆ ಇದು ದೊಡ್ಡ ನಿದರ್ಶನ. ಇಸ್ರೋ ತಂಡಕ್ಕೆ ಅಭಿನಂದನೆ" ಎಂದು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
"ಚಂದ್ರನ ಮೇಲ್ಮೈ ಮೇಲೆ ವಿಕ್ರಂ ರೋವರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು" ಎಂದು ನಟ ಪ್ರಭಾಸ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಚಂದ್ರಯಾನ-3 ಬಗ್ಗೆ ಇತ್ತೀಚೆಗೆ ನಟ ಪ್ರಕಾಶ್ ರಾಜ್ ಮಾಡಿದ್ದ ಪೋಸ್ಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಪ್ರಕಾಶ್ ವಿರುದ್ಧ ಬಾಗಲಕೋಟೆಯಲ್ಲಿ ದೂರು ಸಹ ದಾಖಲಾಗಿತ್ತು. ಇದೀಗ ವಿಕ್ರಮ್ ರೋವರ್ ಚಂದ್ರನ ಮೇಲೆ ಇಳಿದ ಬಗ್ಗೆ ಬಹುಭಾಷಾ ನಟ ಸಂತಸ ವ್ಯಕ್ತಪಡಿಸಿದ್ದಾರೆ. "ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. ಧನ್ಯವಾದಗಳು ಇಸ್ರೋ ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು....ಸಂಭ್ರಮಿಸಲು .. ಇದು ದಾರಿಯಾಗಲಿ" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

"ಅಮೇರಿಕಾ, ರಷ್ಯಾ ಮತ್ತು ಚೀನಾದಂತಹ ಮಹಾಶಕ್ತಿಗಳು ಬೆರಗುಗಣ್ಣಿನಿಂದ ನೋಡುತ್ತಿರುವಾಗ, ಭಾರತವು ಈ ಅದ್ಭುತ ಸಾಧನೆಯಿಂದ ಜಗತ್ತನ್ನು ಬೆರಗುಗೊಳಿಸುತ್ತದೆ. ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸುವ ಮೂಲಕ ನಮ್ಮ ರಾಷ್ಟ್ರವು ತನ್ನ ಹೆಮ್ಮೆಯ ಗುರುತನ್ನು ಮುದ್ರೆಯೊತ್ತಿದೆ. ನಮ್ಮ ಇಸ್ರೋ ತಂದಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











